Council Election Karnataka : ಕೊನೆಗೆ ಕಣಕ್ಕೆ ಧುಮುಕಿದ್ದ ಜೆಡಿಎಸ್ ನಿಂದ ಕಾಂಗ್ರೆಸ್‌ಗೆ ನಡುಕ

By Kannadaprabha NewsFirst Published Dec 13, 2021, 12:14 PM IST
Highlights
  • ಎಂಎಲ್‌ಸಿ ಚುನಾವಣೆ: ಈ ಬಾರಿ ಬಾಜಿ ಕಟ್ಟುವವರೇ ಇಲ್ಲ!
  •  ಮತದಾನದ ಬಳಿಕವೂ ಗುಟ್ಟು ಬಿಡದ ಮತದಾರ
  • ಬಿಜೆಪಿ ಕೈ ತಪ್ಪಿದ ಜೆಡಿಎಸ್‌ ಮತಗಳು

ಕೋಲಾರ (ಡಿ.13):  ಸ್ಥಳೀಯ ಸಂಸ್ಥೆಗಳಿಂದ ಶುಕ್ರವಾರ ವಿಧಾನ ಪರಿಷತ್‌ಗೆ (MLC Election) ಕೋಲಾರ - ಚಿಕ್ಕಬಳ್ಳಾಪುರ (Kolar - Chikkaballapura ) ಜಿಲ್ಲೆಗಳಿಂದ ನಡೆದ ಚುನಾವಣೆಯಲ್ಲಿ (Election) ಮತ ಚಲಾವಣೆ ಮಾಡಿರುವ ಮತದಾರರು ಬಾಯಿ ಬಿಡದೇ ಇರುವುದರಿಂದ ಅಭ್ಯರ್ಥಿಗಳಲ್ಲಿ ಆತಂಕ ಉಂಟಾಗಿದೆ. ಯಾವುದೇ ಸಾರ್ವತ್ರಿಕ ಚುನಾವಣೆ ನಡೆದ ಒಂದೆರಡು ದಿನಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಗೆಲುವಿಗಾಗಿ ಬಾಜಿಗಳ ಭರಾಟೆ ಇರುತ್ತಿತ್ತು. ಆದರೆ ಈ ಚುನಾವಣೆಯಲ್ಲಿ ಮತದಾನ ಮುಗಿದು ಎರಡು ದಿನ ಕಳೆದರೂ ಯಾವುದೇ ಅಭ್ಯರ್ಥಿಯ ಪರ ಬಾಜಿ ಕಟ್ಟಲು ಯಾರೂ ಮುಂದೆ ಬರುತ್ತಿಲ್ಲ. ಇದೂ ಸಹ ಅಭ್ಯರ್ಥಿಗಳನ್ನು ಮತ್ತಷ್ಟು ಕಂಗೆಡಿಸಿದೆ.

ಬಿಜೆಪಿ (BJP) ಮತ್ತು ಜೆಡಿಎಸ್‌ (JDS) ಹೊಂದಾಣಿಕೆಯಾಗುತ್ತದೆ ಎಂದು ಕೊನೆ ಗಳಿಗೆಯ ತನಕ ನಿರೀಕ್ಷಿಸಲಾಗಿತ್ತು. ಆದರೆ ಜೆಡಿಎಸ್‌  ಚುನಾವಣಾ ಕಣಕ್ಕೆ ಧುಮುಕಿ ತಮ್ಮ ಪಕ್ಷದ ಮತದಾರರನ್ನು ಭದ್ರಪಡಿಸಿ ಕೊಂಡಿತಲ್ಲದೆ ಕಾಂಗ್ರೆಸ್‌ (congress) ಒಳ ಏಟಿನ ಮತಗಳನ್ನು ಸೆಳೆಯಲು ಮುಂದಾಗಿದ್ದರಿಂದ ಕಾಂಗ್ರೆಸ್‌ ಅಭ್ಯರ್ಥಿಗೆ ನಡುಕ ಶುರುವಾಗಿದೆ. ಏನೇ ಆದರೂ ಚಿಂತಾಮಣಿ (Chintamani) ಮಾಜಿ ಶಾಸಕ ಹಾಗು ಮುಳಬಾಗಲಿನ ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ (Kottur Manjunath) ಕಾಂಗ್ರೆಸ್‌ ಅಭ್ಯರ್ಥಿ ಪರ ಕೆಲಸ ಮಾಡಿರುವುದರಿಂದ ಹಾಗು ಬಿಜೆಪಿ ಪ್ರಬಲ ಪೈಪೋಟಿ ನಡೆಸಿರುವುದರಿಂದ ನಮ್ಮ ಗೆಲವು ನಿಶ್ಚಿತ ಎನ್ನುತ್ತಿದ್ದಾರೆ.

ಬಿಜೆಪಿಗೆ ಜೆಡಿಎಸ್‌ ಮತ ಸಿಗಲೇ ಇಲ್ಲ : ಎರಡೂ ಜಿಲ್ಲೆಗಳಲ್ಲಿ ಮತದಾರರಲ್ಲಿ ಮೂರನೇ ಸ್ಥಾನದಲ್ಲಿದ್ದ ಬಿಜೆಪಿ (BJP) ಅಬ್ಬರದ ಪ್ರಚಾರದೊಂದಿಗೆ ಒಂದು ವಾರದಿಂದಲೇ ಮತದಾರರಿಗೆ ಎಲ್ಲಾ ಆಸೆ ಅಮಿಷಗಳನ್ನು ಒಡ್ಡಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ (Congress) ಮತಗಳನ್ನು ತಮ್ಮ ಅಭ್ಯರ್ಥಿಗೆ ಹಾಕಿಸಲು ಎಲ್ಲಾ ರೀತಿಯ ಕಸರತ್ತುಗಳನ್ನು ಮಾಡಿತು. ಜೆಡಿಎಸ್‌ ಮತಗಳು ನಮಗೆ ಬರುತ್ತವೆ ಎಂದು ಹೇಳಿಕೊಳ್ಳುತ್ತಿದ್ದ ಬಿಜೆಪಿ ಕೊನೆ ಗಳಿಗೆಯಲ್ಲಿ ಜೆಡಿಎಸ್‌ ಪ್ರಚಾರದ ಅಖಾಡಕ್ಕೆ ಧುಮುಕಿ ಎಲ್ಲರಿಗಿಂತಲೂ ಒಂದು ಕೈ ಮುಂದೆ ಎನ್ನುವ ರೀತಿಯಲ್ಲಿ ಮತದಾರರನ್ನು ನೋಡಿಕೊಂಡ ಪರಿಣಾಮವಾಗಿ ಮೂರೂ ಅಭ್ಯರ್ಥಿಗಳ ಗೆಲುವಿನ ಬಗ್ಗೆ ಮತದಾರ ಸ್ಪಷ್ಟ ನಿಲುವು ತಾಳಲಿಲ್ಲ.

ಮೂರೂ ಪಕ್ಷಗಳ ಅಭ್ಯರ್ಥಿಗಳ ಗೆಲುವು ಕಬ್ಬಿಣದ ಕಡಲೆಯಾಗಿದ್ದು, ಮತ ಎಣಿಕೆ (Counting) ಡಿ. 14 ರಂದು ನಡೆಯಲಿರುವುದರಿಂದ ಬಾಜು ಕಟ್ಟುವವರಿಗೆ ಒಂದು ದಿನ ಮಾತ್ರ ಬಾಕಿಯಿದೆ. ಆದರೆ ಮತದಾರರ ಸ್ವಷ್ಟ ನಿಲುವು ಸಿಗದೇ ಇರುವುದರಿಂದ ಬಾಜು ಕಟ್ಟುವವರು ಮುಂದೆ ಬರುತ್ತಿಲ್ಲ.

ಮತದಾರನಿಗೆ ಲಾಭ : ಮೂರೂ ಪಕ್ಷಗಳ ಕಡೆಯಿಂದ ಹಣ ಪಡೆದಿರುವ ಮತದಾರರು ಮೂವರಿಗೂ ನಿಮಗೆ ಮತ (Voting) ಚಲಾಯಿಸಿದ್ದೇನೆ ಎಂದು ಹೇಳುತ್ತಿದ್ದಾನೆ. ಪಕ್ಷದ ಮುಖಂಡರು ಮತದಾರರನ್ನು ಎಷ್ಟೇ ಹಿಡಿದಿಟ್ಟು ಕೊಂಡಿದ್ದರೂ ಸಹ ಮೂರೂ ಕಡೆಯಿಂದಲೂ ಆಮಿಷಗಳಿಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಎರಡೂ ಜಿಲ್ಲೆಗಳಲ್ಲಿ (District) ಮೂರೂ ಅಭ್ಯರ್ಥಿಗಳಿಂದಲೂ ಸುಮಾರು 100 ಕೋಟಿಯಷ್ಟು ಹಣವನ್ನು (Money) ಮತದಾರರಿಗೆ ಸೇರಿದಂತೆ ಚುನಾವಣೆಗೆ ಖರ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ.

  • ಸ್ಥಳೀಯ ಸಂಸ್ಥೆಗಳಿಂದ ಶುಕ್ರವಾರ ವಿಧಾನ ಪರಿಷತ್‌ಗೆ ಕೋಲಾರ - ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ನಡೆದ ಚುನಾವಣೆ
  • ಚಲಾವಣೆ ಮಾಡಿರುವ ಮತದಾರರು ಬಾಯಿ ಬಿಡದೇ ಇರುವುದರಿಂದ ಅಭ್ಯರ್ಥಿಗಳಲ್ಲಿ ಆತಂಕ 
  • ಎಂಎಲ್‌ಸಿ ಚುನಾವಣೆ: ಈ ಬಾರಿ ಬಾಜಿ ಕಟ್ಟುವವರೇ ಇಲ್ಲ!
  •  ಮತದಾನದ ಬಳಿಕವೂ ಗುಟ್ಟು ಬಿಡದ ಮತದಾರ
  • ಬಿಜೆಪಿ ಕೈ ತಪ್ಪಿದ ಜೆಡಿಎಸ್‌ ಮತಗಳು  - ಆತಂಕದಲ್ಲಿ ಅಭ್ಯರ್ಥಿಗಳು
click me!