ವಿಶ್ವದ ಎತ್ತರದ ಚಾಮುಂಡೇಶ್ವರಿ ಪಂಚಲೋಹ ವಿಗ್ರಹ ಉದ್ಘಾಟನೆ

By Kannadaprabha NewsFirst Published Aug 9, 2021, 7:56 AM IST
Highlights
  •  ವಿಶ್ವದ ಅತಿ ಎತ್ತರದ ಚಾಮುಂಡೇಶ್ವರಿ ಪಂಚಲೋಹದ ವಿಗ್ರಹ ಲೋಕಾರ್ಪಣೆ
  • 60 ಅಡಿ ಎತ್ತರವಿದ್ದು, 35 ಸಾವಿರ ಕೆ.ಜಿ. ತೂಕವಿದೆ. ಚಿನ್ನ, ಬೆಳ್ಳಿ, ಕಂಚು, ತಾಮ್ರ, ಕಬ್ಬಿಣ ಸೇರಿಸಿ ನಿರ್ಮಾಣ

 ಚನ್ನಪಟ್ಟಣ (ಆ.09):  ವಿಶ್ವದ ಅತಿ ಎತ್ತರದ ಚಾಮುಂಡೇಶ್ವರಿ ಪಂಚಲೋಹದ ವಿಗ್ರಹವನ್ನು ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ಭಾನುವಾರ ಲೋಕಾರ್ಪಣೆ ಮಾಡಲಾಯಿತು. ಈ ಸಂಬಂಧ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. 18 ಭುಜಗಳುಳ್ಳ ಸೌಮ್ಯರೂಪದ ಚಾಮುಂಡೇಶ್ವರಿಯ ಪಂಚಲೋಹದ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ವಿಗ್ರಹ 60 ಅಡಿ ಎತ್ತರವಿದ್ದು, 35 ಸಾವಿರ ಕೆ.ಜಿ. ತೂಕವಿದೆ. ಚಿನ್ನ, ಬೆಳ್ಳಿ, ಕಂಚು, ತಾಮ್ರ, ಕಬ್ಬಿಣ ಸೇರಿಸಿ ನಿರ್ಮಾಣ ಮಾಡಲಾಗಿದೆ. 18 ಭುಜಗಳು 18 ಶಕ್ತಿಪೀಠಗಳನ್ನು ಸೂಚಿಸುತ್ತವೆ ಎಂದು ಧರ್ಮದರ್ಶಿಗಳು ತಿಳಿಸಿದ್ದಾರೆ.

ವಿಶ್ವದ ಅತಿ ಎತ್ತರದ ಶ್ರೀಚಾಮುಂಡೇಶ್ವರಿ ಪಂಚಲೋಹದ ವಿಗ್ರಹ ಎಂಬ ಖ್ಯಾತಿಗೆ ಒಳಗಾಗಿರುವ ತಾಲೂಕಿನ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ಹಾಗೂ ಬಸವಪ್ಪ ಪುಣ್ಯ ಕ್ಷೇತ್ರದಲ್ಲಿ ಭಾನುವಾರ ಲೋಕಾರ್ಪಣೆಗೊಂಡಿತು.

ನಾಟಕ ಮಾಡುವಾಗ ಪಾತ್ರಧಾರಿಯ ಮೇಲೆ ಚಾಮುಂಡೇಶ್ವರಿ ಅವಾಹನೆ.?

ಅನಾವರಣ ಕಾರ್ಯಕ್ರಮದ ಅಂಗವಾಗಿ ಶನಿವಾರದಿಂದಲೇ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಭೀಮನಅಮಾವಾಸ್ಯೆ ಪ್ರಯುಕ್ತ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಾನುವಾರ ಬೆಳಗಿನ ಜಾವ 2 ರಿಂದಲೇ ತಾಯಿಚಾಮುಂಡೇಶ್ವರಿಗೆ ರುದ್ರಾಭಿಷೇಕ, ಶ್ರೀ ಚಕ್ರಕ್ಕೆಚಕ್ರಾಭಿಷೇಕದ ಜೊತೆಗೆ ಮಹಾ ಮಂಗಳಾರತಿ ನಡೆಯಿತು.

ನಂತರ ಕ್ಷೇತ್ರದ ಬನ್ನಿ ಮಂಟಪದಿಂದ ಹಲವು ಜಾನಪದ ಕಲಾತಂಡಗಳ ಮೆರವಣಿಗೆಯಲ್ಲಿ 108 ಹಾಲರಭಿಗಳನ್ನು ತಂದು ಕ್ಷೇತ್ರಪಾಲಕ ಜೀವಂತ ಬಸವಣ್ಣನಿಗೆ ಕ್ಷೀರಾಭಿಷೇಕ ನಡೆಸಲಾಯಿತು. ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಭಕ್ತರು ದೇವಿಯ ವಿಗ್ರಹ ಲೋಕಾರ್ಪಣೆಗೆ ಸಾಕ್ಷಿಯಾದರು.

ವಿಶ್ವಖ್ಯಾತಿ: ಕ್ಷೇತ್ರದಲ್ಲಿ ನಿರ್ಮಾಣವಾಗಿರುವ 18 ಭುಜಗಳುಳ್ಳ ಸೌಮ್ಯರೂಪದತಾಯಿ ಚಾಮುಂಡೇಶ್ವರಿಯ ಪಂಚಲೋಹ ವಿಗ್ರಹ 60 ಅಡಿ ಎತ್ತರದ 35 ಸಾವಿರ ಕೆ.ಜಿ ತೂಕವಿದೆ. ಈ ವಿಗ್ರಹ ವಿಶ್ವದ ಅತಿಎತ್ತರದ ಪಂಚಲೋಹ ವಿಗ್ರಹ ಎಂಬ ಖ್ಯಾತಿ ಪಡೆದಿದ್ದು, ಚಿನ್ನ, ಬೆಳ್ಳಿ, ಕಂಚು, ತಾಮ್ರ ಮತ್ತು ಕಬ್ಬಿಣ ಸೇರಿಸಿ ನಿರ್ಮಾಣ ಮಾಡಲಾಗಿದೆ. ಕ್ಷೇತ್ರದಲ್ಲಿ ನಿರ್ಮಾಣವಾಗಿರುವ ದೇವಿಗೆ 18 ಭುಜಗಳಿದ್ದು, ಇದು ದೇವಿಯ 18 ಶಕ್ತಿಪೀಠಗಳನ್ನು ಸೂಚಿಸುತ್ತದೆ. ದೇವಿಯ ವಿಗ್ರಹ ಸೌಮ್ಯರೂಪದಿಂದ ಕೂಡಿದೆ. ಇಡೀ ವಿಗ್ರಹಕ್ಕೆ ಸ್ವರ್ಣಲೇಪನ ಮಾಡಲಾಗಿದೆ.

ಈ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಕ್ಷೇತ್ರದ ಧರ್ಮದರ್ಶಿ ಹಾಗೂ ವಿಗ್ರಹ ನಿರ್ಮಾಣದ ಪ್ರಮುಖ ರೂವಾರಿ ಡಾ.ಮಲ್ಲೇಶ್‌ಗುರೂಜೀ, ನಮ್ಮ ಧರ್ಮಗಳಲ್ಲಿ ಉಲ್ಲೇಖಿಸಿರುವ ಶಿಲ್ಪಶಾಸ್ತ್ರಕ್ಕೆ ಅನುಗುಣವಾಗಿ ದೇವಿಯ ವಿಗ್ರಹವನ್ನು ನಿರ್ಮಿಸಲಾಗಿದೆ. ಮಳೆ ಗಾಳಿ ಸೇರಿದಂತೆ ಎಂತಹುದೇ ಪ್ರಾಕೃತಿಕ ವೈಪರಿತ್ಯಗಳಿಗೂ ದೇವಿಯ ವಿಗ್ರಹಕ್ಕೆ ಯಾವುದೇ ದಕ್ಕೆಯಾಗದ ತಂತ್ರಜ್ಞಾನವನ್ನು ಬಳಸಲಾಗಿದೆ ಎಂದರು.

click me!