ಕಲಬುರಗಿ: 50 ಸಾವಿರ ಲಂಬಾಣಿ ಮಹಿಳೆಯರಿಂದ ಸಾಂಪ್ರದಾಯಿಕವಾಗಿ ಮೋದಿಗೆ ಸ್ವಾಗತ

By Kannadaprabha NewsFirst Published Jan 18, 2023, 10:00 PM IST
Highlights

ಮೋದಿಯವರು ಆಗಮಿಸುತ್ತಿರುವ ಈ ಹೊತ್ತಲ್ಲಿ ಹರ್‌ ಘರ್‌ ಬಿಜೆಪಿ ಝಂಡಾ ಎಂಬ ಅಭಿಯಾನ ಶುರು ಮಾಡಲಾಗಿದ್ದು 2.50 ಲಕ್ಷ ಧ್ವಜಗಳನ್ನು ಸುತ್ತಮುತ್ತಲಿನ ಊರು, ತಾಂಡಾಗಳಲ್ಲಿರುವ ಮನೆಗಳ ಮೇಲೆ ಹಾರಿಸಲಾಗುತ್ತಿದೆ.

ಕಲಬುರಗಿ(ಜ.18):  ರಾಷ್ಟ್ರಕೂಟರ ರಾಜಧಾನಿಯಾಗಿ ಮೆರೆದಂತಹ ನೆಲ, ಅಮೋಘವರ್ಷ ನೃಪತುಂಗ ಅರಸನ ಕರ್ಮಭೂಮಿ, ಕನ್ನಡದ ಮೊದಲ ಗ್ರಂಥ ಕವಿರಾಜಮಾರ್ಗ ರಚನೆಯಾದ ತಾಣ, ತೊಗರಿ ಕಣಜ, ಸುಣ್ಣದ ಕಲ್ಲಿನ ಕಾಶಿ, ಕಾಗಿಣಾ ತೀರ ಮಳಖೇಡಕ್ಕೆ ಜ.19ರಂದು ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಭವ್ಯ ಸ್ವಾಗತ ಕೋರಲು ಸ್ಥಳೀಯವಾಗಿ ಬಿಜೆಪಿಯಲ್ಲಿ ಭರದ ಸಿದ್ಧತೆಗಳು ಸಾಗಿವೆ. ಮೋದಿಯವರು ಅಂದು 51,900 ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸದರಿ ಕಾರ್ಯಕ್ರಮದಲ್ಲಿ ಯಾವುದೇ ಲೋಪಗಳು ಆಗದಂತೆ ಹಾಗೂ ಅಲ್ಲಿಗೆ ಬರುವ 1 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಭೋಜನ ಇತ್ಯಾದಿ ವ್ಯವಸ್ಥೆಗಾಗಿ ಈಗಾಗಲೇ ಕಳೆದ 1 ವಾರದಿಂದ 5 ಸಾವಿರ ಬಿಎಪಿ ಕಾರ್ಯಕರ್ತರು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಹರ್‌ ಘರ್‌ ಬಿಜೆಪಿ ಝಂಡಾ:

ಇದಲ್ಲದೆ ಮಳಖೇಡ ಬಳಿ 1 ಕಿಮೀ ಅಂತರದಲ್ಲಿ 60 ಎಕರೆಯಲ್ಲಿ ಭವ್ಯ ವೇದಿಕೆಯೂ ಸಿದ್ಧವಾಗುತ್ತಿದೆ. ಈ ಹಂತದಲ್ಲಿ ಮೋದಿಯವರು ಕಲಬುರಗಿ ಏರ್‌ಪೋರ್ಚ್‌ನಿಂದ ಯಾದಗಿರಿ ಜಿಲ್ಲೆಯಲ್ಲಿ ಮೊದೊಲ ಸಮಾರಂಭ ಮುಗಿಸಿ ಅಲ್ಲಿಂದ ನೇರವಾಗಿ ಹೆಲಿಕಾಪ್ಟರ್‌ ಮೂಲಕ ಮಳಖೇಡಕ್ಕೆ ಆಗಮಿಸುತ್ತಿದ್ದಾರೆ. ಮ.2.10 ನಿಮಿಷಕ್ಕೆ ಅವರು ಇರುವ ಹೆಲಿಕಾಪ್ಟರ್‌ ಮಳಖೇಡಕ್ಕೆ ಬರಲಿದೆ.

1.2 ಲಕ್ಷ ಅಲೆಮಾರಿಗಳಿಗೆ ಕಾಯಂ ಸೂರು: ಜ.19ಕ್ಕೆ ಮೋದಿ ಹಕ್ಕುಪತ್ರ

ಮೋದಿಯವರು ಆಗಮಿಸುತ್ತಿರುವ ಈ ಹೊತ್ತಲ್ಲಿ ಹರ್‌ ಘರ್‌ ಬಿಜೆಪಿ ಝಂಡಾ ಎಂಬ ಅಭಿಯಾನ ಶುರು ಮಾಡಲಾಗಿದ್ದು 2.50 ಲಕ್ಷ ಧ್ವಜಗಳನ್ನು ಸುತ್ತಮುತ್ತಲಿನ ಊರು, ತಾಂಡಾಗಳಲ್ಲಿರುವ ಮನೆಗಳ ಮೇಲೆ ಹಾರಿಸಲಾಗುತ್ತಿದೆ.
ಈ ಹಂತದಲ್ಲಿ ಅಕ್ಕಪಕ್ಕದ ಚಿತ್ತಾಪುರ, ಸೇಡಂ, ಕಲಬುರಗಿ ತಾಲೂಕಿನ 50 ಸಾವಿರ ಯುವಕರು ಬೈಕ್‌ ಮೂಲಕ ಹಿಂದೆ ಒಬ್ಬರನ್ನು ಕುಳ್ಳಿರಿಸಿಕೊಂಡು 1 ಲಕ್ಷದಷ್ಟುಸಂಖ್ಯೆಯೆಲ್ಲಿ ಮೋದಿಯವರನ್ನು ಶಿಸ್ತಿನಿಂದ ಸ್ವಾಗತಸಲು ಸಜ್ಜಾಗಿದ್ದಾರೆ. ಇದಲ್ಲದೆ ದಾರಿಯುದ್ದಕ್ಕೂ ಮೋದಿಯವರಿಗೆ ಪುಷ್ಪವೃಷ್ಟಿಯಿಂದ ಸ್ವಾಗತ ಕೋರಲಾಗುತ್ತಿದೆ.

ಸಾಂಪ್ರದಾಯಿಕ ಸ್ವಾಗತ:

ಮೋದಿಯವರನ್ನು ಮಳಖೇಡದಲ್ಲಿನ ಐತಿಹಾಸಿಕ ಸಮಾರಂಭಕ್ಕೆ ಸ್ವಾಗತಿಸಲು 50 ಸಾವಿರ ಲಂಬಾಣಿ ಮಹಿಳೆರು ತಮ್ಮ ಸಂಸ್ಕೃತಿಯ ಸಾಂಪ್ರದಾಯಿಕ ಉಡುಪಿನಲ್ಲಿ ಬರಲಿದ್ದಾರೆ. ಜೊತೆಗೆ ನೂರಾರು ಬಂಜಾರಾ ಕಲಾ ತಂಡಗಳನ್ನು ಆಹ್ವಾನಿಸಲಾಗಿದ್ದು ಅವರೆಲ್ಲರೂ ತಮ್ಮ ಸಾಂಪ್ರದಾಯಿಕ ಕಲೆಗಳ ಮೂಲಕ ಮೋದಿಯವರನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಇದಲ್ಲದೆ ವಕೀಲರು, ವೈದ್ಯರು, ಸಮಾಜ ಸೇವಕರು, ಉದ್ಯಮಿಗಳು ಸೇರಿದಂತೆ ಸಮಾಜದ ವಿವಿಧ ವೃತ್ತಿಗಳಲ್ಲಿರುವ 20 ಸಾವಿರಕ್ಕೂ ಹೆಚ್ಚು ಗಣ್ಯರನ್ನು ವೈಯಕ್ತಿಕವಾಗಿ ಬಿಜೆಪಿ ಕಾರ್ಯಕರ್ತರು ಆಹ್ವಾನ ನೀಡಿ ಅವರೆಲ್ಲರಿಗೂ ಮೋದಿಯವರ ಮಾತು ಆಲಿಸುವ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ. ಸಮಾರಂಭಕ್ಕೆ ಫಲಾನುಭವಿಗಳನ್ನು ಕರೆತರಲು 2,500 ಬಸ್‌, 4 ಸಾವಿರ ಕಾರ್‌, ಇತರೆ ವಾಹನ ಬಳಸಲಾಗುತ್ತಿದೆ. ಎಲ್ಲರಿಗೂ ಸಮಾರಂಭ ಸ್ಥಳಧಲ್ಲೇ ಭೋಜನಕ್ಕೂ ವ್ಯವಸ್ಥೆ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಮಳಖೇಡಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭರದ ಸಿದ್ಧತೆಗಳು ಅಲ್ಲಿ ಸಾಗಿವೆ. ಅವರನ್ನು ವ್ಯವಸ್ಥಿತವಾದಂತಹ ಹಾಗೂ ಬಲು ಶಿಸ್ತಿನಿಂದ ತರಹೇವಾರಿ ವಿಧಗಳಲ್ಲಿ, ಸಾಂಪ್ರದಾಯಿಕ, ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ರಾಷ್ಟ್ರಕೂಟರ ನೆಲಕ್ಕೆ ಸ್ವಾಗತ ನೀಡುತ್ತೇವೆ. ಮೋದಿಯವರ ಆಗಮನದಿಂದ ಈ ಬಾಗದಲ್ಲಿ ಬಿಜೆಪಿ ವರ್ಚಸ್ಸು ಸಹಜವಾಗಿಯೇ ಹೆಚ್ಚಲಿದೆ. ಜೊತೆಗೇ ಐತಿಹಾಸಿಕವಾಗಿಯೂ ಮಹತ್ವದ್ದಾಗಿರುವ ಈ ನೆಲದಲ್ಲಿ ಮೋದಿ ಹವಾ ಇನ್ನೂ ಹೆಚ್ಚು ಬೀಸಲಿದೆ. ಮೋದಿಯವರ ಆಗಮನ ಬರೀ ಚುನಾವಣೆ ದೃಷ್ಟಿಕೋನಲ್ಲಿ ನೋಡೋದು ಬೇಡ. ರಾಷ್ಟ್ರಭಕ್ತಿ, ದೇಶಪ್ರೇಮ ಬೆಳೆಸುವ ದಿಶೆಯಲ್ಲಿಯೂ ಮೋದಿಯರ ಈ ಭೇಟಿ ಪರಿಗಣಿಸಬೇಕು ಅಂತ ಸೇಡಂ ಬಿಜೆಪಿ ಶಾಸಕ ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌ ತಿಳಿಸಿದ್ದಾರೆ. 

click me!