Covid 19 Spike: ಮಂಡ್ಯದ ಒಂದೇ ಶಾಲೆಯ 20 ಮಕ್ಕಳಿಗೆ ಕೊರೋನಾ: ಸ್ಕೂಲ್ ಸೀಲ್ ಡೌನ್!

By Suvarna NewsFirst Published Jan 15, 2022, 3:07 PM IST
Highlights

*ಕರ್ನಾಟಕದಲ್ಲಿ ಕೊರೋನಾ ಪ್ರಕರಣ ಏರಿಕೆ
*ಮಂಡ್ಯದ ಒಂದೇ ಶಾಲೆಯ 20 ಮಕ್ಕಳಿಗೆ ಕೋವಿಡ್‌
*ಪೋಷಕರೊಂದಿಗೆ ಓಂ ಶಕ್ತಿ  ತೆರಳಿದ್ದ  ವಿದ್ಯಾರ್ಥಿ 

ಮಂಡ್ಯ (ಜ. 15): ಕರ್ನಾಟಕದ (Karnataka) ಬಹುತೇಕ ಜಿಲ್ಲೆಗಳಲ್ಲಿ ಮಹಾಮಾರಿ ಕೊರೋನಾ ವೈರಸ್ (Coronavirus) ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮಂಡ್ಯದ ಒಂದೇ ಶಾಲೆಯ 20 ಮಕ್ಕಳಿಗೆ ಕೊರೊನಾ ತಗುಲಿದ್ದು ಈಗ ಆತಂಕಕ್ಕೆ ಎಡೆ ಮಾಡಿದೆ. ಮಂಡ್ಯ (Mandya) ಜಿಲ್ಲೆ ಮಳವಳ್ಳಿ ತಾಲೂಕಿನಲ್ಲಿರುವ  ಶಿವನಸಮುದ್ರದ ಸರ್ಕಾರಿ ಶಾಲೆಯ 20 ಮಕ್ಕಳಿಗೆ ಕೊರೊನಾ ಪಾಸಿಟಿವ್‌ ಬಂದಿದೆ.  ಶಾಲೆಯ 20 ವಿದ್ಯಾರ್ಥಿಗಳು, ಓರ್ವ ಅಡುಗೆ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. 

ತಮಿಳುನಾಡಿನ(Tamil Nadu) ಓಂ ಶಕ್ತಿ ಧಾರ್ಮಿಕ ಪ್ರವಾಸಕ್ಕೆಂದು  ಪೋಷಕರೊಂದಿಗೆ  ಓರ್ವ ವಿದ್ಯಾರ್ಥಿ ತೆರಳಿ ವಾಪಾಸಾಗಿದ್ದ. ಹಿನ್ನೆಲೆ.ಶಾಲೆಯ ಎಲ್ಲಾ ಮಕ್ಕಳಿಗೂ  ಕೊವಿಡ್ ಟೆಸ್ಟ್ ಮಾಡಲಾಗಿತ್ತು. ಟೆಸ್ಟ್ ವೇಳೆ 20 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಮುಂಜಾಗೃತಾ ಕ್ರಮವಾಗಿ ಶಾಲೆಗೆ ಸ್ಯಾನಿಟೈಜ್ ಸಿಂಪಡಿಸಿ, ಮೂರು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ. ಸೋಂಕಿತ ಮಕ್ಕಳಿಗೆ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದೇ ಶಾಲೆಯ 20 ಮಕ್ಕಳಿಗೆ ಹಾಗೂ ಶಾಲೆಯ ಓರ್ವ ಅಡುಗೆ ಸಿಬ್ಬಂದಿಗೆ ಕೊರೊನಾ ತಗುಲಿರುವ ಹಿನ್ನಲೆ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.

ಕರ್ನಾಟಕದಲ್ಲಿ ಕೊರೋನಾ ಏರಿಕೆ

ಶುಕ್ರವಾರ ರಾಜ್ಯದಲ್ಲಿ 28,723 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಲ್ಲದೇ 14 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.ಈ ಮೂಲಕ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಒಟ್ಟು ಸಂಖ್ಯೆ 31,53,247ಕ್ಕೆ ಏರಿಕೆಯಾಗಿದೆ. ಈ ಪೈಕಿ ಇದುವರೆಗೆ ಒಟ್ಟು 29,73,470 ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.  ರಾಜ್ಯದಲ್ಲಿ ಪಾಸಿಟಿವಿಟಿ ದರ  12.98ರಷ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: Karnataka Lockdown ಕರ್ನಾಟಕ ಲಾಕ್‌ಡೌನ್ ಆಗುತ್ತಾ? ಮೋದಿ ಸಭೆ ಬಳಿಕ ಸ್ಪಷ್ಟನೆ ಕೊಟ್ಟ ಆರೋಗ್ಯ ಸಚಿವ

ಬೆಂಗಳೂರಿನಲ್ಲಿ 20,121 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 1695 ಜನರು ಚೇತರಿಸಿಕೊಂಡಿದ್ದಾರೆ. ಏಳು ಮಂದಿ ಸಾವನ್ನಪ್ಪಿದ್ದಾರೆ. ನಗರದಲ್ಲಿ ಪ್ರಸ್ತುತ 1,09,312 ಸಕ್ರಿಯ ಪ್ರಕರಣಗಳಿವೆ. ಈವರೆಗೆ ನಗರದಲ್ಲಿ ಒಟ್ಟು 13,73,452 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,47,696 ಜನರು ಚೇತರಿಸಿಕೊಂಡಿದ್ದಾರೆ. ಶುಕ್ರವಾರ 2,21,205 ಮಂದಿಯನ್ನು ಕೊರೋನಾ ಟೆಸ್ಟ್‌ಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್  ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

2ನೇ ವಾರದ ವೀಕೆಂಡ್‌ ಕರ್ಫ್ಯೂ ಆರಂಭ

ರಾಜ್ಯದಲ್ಲಿ ಸತತ ಎರಡನೇ ವಾರವೂ ವೀಕೆಂಡ್‌ ಕರ್ಫ್ಯೂ ಜಾರಿಯಾಗಿದ್ದು, ಸೋಮವಾರ ಬೆಳಿಗ್ಗೆ 5 ಗಂಟೆವರೆಗೂ ತುರ್ತು ಸಂದರ್ಭ ಹೊರತುಪಡಿಸಿ ಇತರೆ ಎಲ್ಲಾ ಚಟುವಟಿಕೆಗಳಿಗೆ ನಿರ್ಬಂಧವಿರಲಿದೆ. ಕೊರೋನಾ ಸೋಂಕು ಹತೋಟಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ತಿಂಗಳಾಂತ್ಯದವರೆಗೂ ನಿತ್ಯ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದಲ್ಲಿ ದಿನಪೂರ್ತಿ (ಸತತ 55 ಗಂಟೆ) ಕರ್ಫ್ಯೂ ಜಾರಿಗೊಳಿಸುತ್ತಿದೆ. ಈಗಾಗಲೇ ಕಳೆದ ಒಂಬತ್ತು ದಿನಗಳಿಂದ (ಜ.6) ರಾತ್ರಿ ಕಫ್ರ್ಯೂ ಮತ್ತು ಕಳೆದ ವಾರಾಂತ್ಯದಲ್ಲಿ ಕರ್ಫ್ಯೂವಿತ್ತು. ಕಳೆದ ವಾರ ಮೊದಲ ವಾರಾಂತ್ಯದ ಕಫ್ರ್ಯೂ ಹಿನ್ನೆಲೆ ಪೊಲೀಸರು ಒಂದಿಷ್ಟುವಿನಾಯ್ತಿಗಳನ್ನು ನೀಡಿದ್ದರು. 

ಇದನ್ನೂ ಓದಿ: Weekend Curfew: ಕ್ಯಾರೇ ಎನ್ನದ ಬಳ್ಳಾರಿ ಜನ, ಎಪಿಎಂಸಿ ಮಾರುಕಟ್ಟೆಯಲ್ಲಿ ಜನ ಜಾತ್ರೆ!

ಆದರೆ, ಈ ವಾರ ಕೊರೋನಾ ಸೋಂಕು ಹೊಸ ಪ್ರಕರಣಗಳು 30 ಸಾವಿರ ಆಸುಪಾಸಿಗೆ ಹೆಚ್ಚಳವಾಗಿದೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗಳು, ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಹೀಗಾಗಿ, ಮತ್ತಷ್ಟುಬಿಗಿ ನಿಯಮ ಜಾರಿಗೊಳಿಸಲು ಪೊಲೀಸ್‌ ಇಲಾಖೆ ಮುಂದಾಗಿದೆ. ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದಂತೆ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ.

click me!