ಪಟ್ಟಕ್ಕಾಗಿ ನಡೆಯಿತು ರೌಡಿಶೀಟರ್‌ ಕೊಲೆ : 12 ಆರೋಪಿಗಳ ಮಂದಿ ಅರೆಸ್ಟ್

By Kannadaprabha NewsFirst Published Dec 16, 2020, 10:57 AM IST
Highlights

ರೌಡಿ ಪಟ್ಟಕ್ಕಾಗಿ ನಡೆದಿತ್ತು ಕೊಲೆ. ಈ ಪ್ರಕರಣಕ್ಕೆ ಇದೀಗ 12 ಮಂದಿ ಅರೆಸ್ಟ್ ಆಗಿದ್ದಾರೆ. 

 ಚನ್ನರಾಯಪಟ್ಟಣ (ಡಿ.16):  ತಾಲೂಕಿನ ಹಿರೀಸಾವೆ ಹೊಬಳಿಯ ಕಮರವಳ್ಳಿ ಗ್ರಾಮದ ತೋಟದ ಮನೆಯಲ್ಲಿ ಡಿ.8ರಂದು ರಾತ್ರಿ ರೌಡಿಶೀಟರ್‌ ಲಿಂಗರಾಜನನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ 12 ಮಂದಿ ಆರೋಪಿಗಳನ್ನು ಬಂಧಿಸಿರುವ ಚನ್ನರಾಯಪಟ್ಟಣ ಪೊಲೀಸರು ಕೃತ್ಯಕ್ಕೆ ಬಳಸಲಾಗಿದ್ದ 9 ಲಾಂಗ್‌, ಒಂದು ಸುತ್ತಿಗೆ, ಎರಡು ಕಾರುಗಳು, ಒಂದು ಬೈಕ್‌ ಹಾಗೂ ಎರಡು ಹೆಲ್ಮೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಮನಗರ ಟೌನ್‌ ನಿವಾಸಿ ಮೋಹನ್‌(32), ಬೆಂಗಳೂರು 8ನೇ ಮೈಲಿ ನಿವಾಸಿ ನಂಜಪ್ಪ(35), ತಿಲಕನಗರ ನಿವಾಸಿ ಗ್ರೇಸ್‌ ವಾಲ್ಟರ್‌(30), ಅಯ್ಯಪ್ಪ ಲೇಔಟ್‌ನ ಪ್ರದೀಪ್‌(26), ಆಡುಗೋಡಿ ನಿವಾಸಿ ನವೀನ್‌ಕುಮಾರ್‌(28), ಜಯನಗರ ನಿವಾಸಿ ಸುನೀಲ್‌ಕುಮಾರ್‌(30), ಬನಶಂಕರಿ ನಿವಾಸಿ ರಮೇಶ್‌(29), ವಿನಾಯಕನಗರ ನಿವಾಸಿ ಪಾರ್ಥಿಬನ್‌(28), ಜೆ.ಪಿ.ನಗರ ನಿವಾಸಿ ಕಣ್ಣನ್‌(26), ಆಡುಗೋಡಿ ನಿವಾಸಿ ಸುರೇಶ್‌(30), ಬನಶಂಕರಿ ನಿವಾಸಿ ಮನೋಹರ್‌(28) ಹಾಗೂ ಚನ್ನರಾಯಪಟ್ಟಣ ತಾಲೂಕಿನ ಕಮರವಳ್ಳಿ ಗ್ರಾಮದ ಸುದೀಪ(20) ಬಂಧಿತರು.

ಮಹಿಳೆಗೆ ಮಚ್ಚಿನಿಂದ ತಲೆಗೆ ಹೊಡೆದು ಮಾಂಗಲ್ಯ ಸರ ಕಸಿದು ಪರಾರಿ ...

ಇನ್ನು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ 16 ಮಂದಿ ಪೈಕಿ 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದಂತೆ ಬೆಂಗಳೂರು ವಿಲ್ಸನ್‌ ಗಾರ್ಡನ್‌ ನಿವಾಸಿ ನಾಗಾರಜ್‌(34), ಜೆ.ಪಿ.ನಗರ ನಿವಾಸಿ ವೇಲು(27), ಚನ್ನಪಟ್ಟಣದ ದರ್ಶನ್‌(30) ಹಾಗೂ ಚನ್ನರಾಯಪಟ್ಟಣ ತಾಲೂಕಿನ ಚೋಳಂಬಳ್ಳಿ ಗ್ರಾಮದ ಮಂಜುನಾಥ್‌(18) ತಲೆಮರೆಸಿಕೊಂಡಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಎಸ್ಪಿ ಆರ್‌.ಶ್ರೀನಿವಾಸ್‌ಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿ ಮೋಹನ್‌ 4 ಪ್ರಕರಣಗಳು ಸೇರಿದಂತೆ ನಂಜಪ್ಪ, ನಾಗರಾಜ್‌, ನವೀನ್‌, ಪ್ರದೀಪ, ಸುನೀಲ್‌, ಪಾರ್ಥಿಬನ್‌, ಕಣ್ಣನ್‌, ವೇಲು ಹಾಗೂ ಸುರೇಶ್‌ ಬೆಂಗಳೂರಿನಲ್ಲಿ ನಡೆದಿರುವ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಇವರ ವಿರುದ್ಧ ಹಲವು ಠಾಣೆಗಳಲ್ಲಿ ದೂರು ದಾಖಲಾಗಿರುತ್ತವೆ.

ಆರೋಗಳ ಬೆನ್ನತ್ತಿದ್ದ ಖಾಕಿ ಪಡೆ:

ಎಸ್ಪಿ ಆರ್‌.ಶ್ರೀನಿವಾಸ್‌ಗೌಡ ಅವರ ಮಾರ್ಗದರ್ಶನದಲ್ಲಿ ಚನ್ನರಾಯಪಟ್ಟಣ ವೃತ್ತ, ನುಗ್ಗೇಹಳ್ಳಿ ಹಾಗೂ ಹಿರೀಸಾವೆ ಠಾಣೆಯ ಪಿಎಸ್‌ಐಗಳ ನೇತ್ರತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಿಕೊಂಡು ಪ್ರಕರಣದ ಬೆನ್ನತ್ತಿದ ಪೊಲೀಸರು ಕೊಲೆ ನಡೆದ ತೋಟದ ಮನೆಯ ಸುತ್ತಮುತ್ತಲ ಪ್ರದೇಶದಲ್ಲಿ ಕೃತ್ಯಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿ ಮೊದಲು ನಂಜಪ್ಪನನ್ನು ಬಂಧಿ​ಸಿ ವಿಚಾರಣೆ ನಡೆಸಿದಾಗ ಪ್ರಕರಣದ ಸಂಪೂರ್ಣ ಮಾಹಿತಿ ಬೆಳಕಿಗೆ ಬಂದಿದೆ.

ಎಸ್ಪಿ ಆರ್‌.ಶ್ರಿನಿವಾಸ್‌ಗೌಡ, ಎಎಸ್ಪಿ ನಂದಿನಿ, ಡಿವೈಎಸ್ಪಿ ಬಿ.ಬಿ.ಲಕ್ಷೆ ್ಮೕಗೌಡ ಮಾರ್ಗದರ್ಶನದೊಂದಿಗೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೃತ್ತ ನಿರೀಕ್ಷಕ ಬಿ.ಜೆ.ಕುಮಾರ್‌, ಹಿರೀಸಾವೆ ಠಾಣೆಯ ಪಿಎಸ್‌ಐ ಎಂ.ಶ್ರೀನಿವಾಸ್‌, ನುಗ್ಗೇಹಳ್ಳಿ ಠಾಣೆ ಪಿಎಸ್‌ಐ ಧನಂಜಯ್‌, ವೃತ್ತ ಕಚೇರಿ ಎಎಸ್‌ಐ ಕುಮಾರಸ್ವಾಮಿ, ಎಎಸ್‌ಐ ಪ್ರಕಾಶ್‌, ಎಎಸ್‌ಐ ಲೋಕೇಶ್‌, ಸಿಬ್ಬಂದಿ ಜವರೇಗೌಡ, ಮಹೇಶ್‌, ಜಯಪ್ರಕಾಶ್‌, ಹರೀಶ್‌, ಪ್ರವೀಣ್‌, ಷಫಿ ಉರ್‌ ರೆಹಮಾನ್‌, ಚಂದೇಶ್‌, ಧರಣೀಶ್‌, ಲೋಕೇಶ್‌, ಸುಭಾಷ್‌ಚಂದ್ರ, ಯೋಗೇಶ್‌, ವೀರಭದ್ರೇಗೌಡ, ಮಂಜುನಾಥ್‌, ವಾಹನ ಚಾಲಕರಾದ ನೇತ್ರೇಶ್‌, ಪರಮೇಶ್‌ ಅವರನ್ನು ಅಭಿನಂದಿಸಲಾಯಿತು.

ರೌಡಿ ಪಟ್ಟಕ್ಕಾಗಿ ಹತ್ಯೆ

ಬೆಂಗಳೂರಿನ ಶಾಂತಿನಗರದಲ್ಲಿ ರಿಯಲ್‌ ಎಸ್ಟೇಟ್‌ ದಂಧೆ ಹಾಗೂ ವಿವಿಧ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಲಿಂಗರಾಜ್‌ ಹಾಗೂ ಅದೇ ಏರಿಯಾದ ನಾಗರಾಜ್‌ ನಡುವೆ ನಗರದಲ್ಲಿ ರೌಡಿಸಂನ ಖ್ಯಾತಿ, ಪಟ್ಟಇಟ್ಟುಕೊಳ್ಳುವ ಸಲುವಾಗಿ ಪೈಪೋಟಿ ನಡೆಯುತ್ತಿತ್ತು.

ನಾಗರಾಜನನ್ನು ಮುಗಿಸಲು ಲಿಂಗರಾಜ್‌ ಸ್ಕೆಚ್‌ ಹಾಕಿದ್ದ ಬಗ್ಗೆ ತಿಳಿದ ನಾಗರಾಜ್‌ ಲಿಂಗರಾಜನನ್ನೇ ಮುಗಿಸಲು ಬೆಂಗಳೂರಿನ ಬನ್ನೇರುಘಟ್ಟರಸ್ತೆಯಲ್ಲಿರುವ ಮೀನಾಕ್ಷಿ ಮಾಲ್‌ನಲ್ಲಿ ಸೇರಿ ಸಂಚು ರೂಪಿಸಿದ್ದ. ಅಂದುಕೊಂಡಂತೆಯೇ ಡಿ.8ರಂದು ರಾತ್ರಿ 9.45ರ ಸುಮಾರಿನಲ್ಲಿ ಒಂದು ಬೈಕ್‌ ಹಾಗೂ ಎರಡು ಕಾರುಗಳಲ್ಲಿ ತಾಲೂಕಿನ ಕಮರವಳ್ಳಿಗೆ ಆರೋಪಿಗಳೆಲ್ಲ ಬಂದಿದ್ದಾರೆ.

ಈ ವೇಳೆ ರೌಡಿಶೀಟರ್‌ ಲಿಂಗರಾಜನು ತೋಟದ ಮನೆಯಲ್ಲಿ ಮಲಗಿರುವ ಬಗ್ಗೆ ಸ್ಥಳೀಯವಾಗಿ ಕೈಜೋಡಿಸಿದ್ದವರಿಂದ ಖಚಿತಪಡಿಸಿಕೊಂಡ ಆರೋಪಿಗಳು, ಮನೆ ಬಾಗಿಲನ್ನು ಒಡೆದು ಒಳ ನುಗ್ಗಿ ಮದ್ಯದ ಮತ್ತಿನಲ್ಲಿ ಮಲಗಿದ್ದ ಲಿಂಗರಾಜನ ಮೇಲೆ ಮಚ್ಚುಗಳಿಂದ ಹಲ್ಲೆ ನಡೆಸಿ ಸುತ್ತಿಗೆಯಿಂದ ತಲೆಯನ್ನು ಜಜ್ಜಿ ಹತ್ಯೆ ಮಾಡಿ ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ಹಾಗೂ ಫೂಟೇಜ್‌ ಬಾಕ್ಸ್‌ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದರು

click me!