ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಕಂದಮ್ಮ ಬಲಿ!

By Kannadaprabha NewsFirst Published Jul 17, 2020, 10:22 AM IST
Highlights

ಸಿಲಿಕಾನ್‌ ಸಿಟಿಯಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರ ನಿರ್ಲಕ್ಷ್ಯಕ್ಕೆ ಜಗತ್ತಿನ ಅರಿವೇ ಇಲ್ಲದ ಒಂದು ತಿಂಗಳ ಹಸುಗೂಸು ಬಲಿಯಾಗಿದೆ. ಕೊರೋನಾ ಸೋಂಕಿನ ನಡುವೆ ಮಾನವೀಯತೆ ಇಲ್ಲದೆ ವರ್ತಿಸುತ್ತಿರುವ ಖಾಸಗಿ ಆಸ್ಪತ್ರೆಗಳ ಮನಸ್ಥಿತಿಗೆ ಈ ಘಟನೆ ಸಾಕ್ಷಿಯಾಗಿದೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರು(ಜು.17): ಸಿಲಿಕಾನ್‌ ಸಿಟಿಯಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರ ನಿರ್ಲಕ್ಷ್ಯಕ್ಕೆ ಜಗತ್ತಿನ ಅರಿವೇ ಇಲ್ಲದ ಒಂದು ತಿಂಗಳ ಹಸುಗೂಸು ಬಲಿಯಾಗಿದೆ. ಕೊರೋನಾ ಸೋಂಕಿನ ನಡುವೆ ಮಾನವೀಯತೆ ಇಲ್ಲದೆ ವರ್ತಿಸುತ್ತಿರುವ ಖಾಸಗಿ ಆಸ್ಪತ್ರೆಗಳ ಮನಸ್ಥಿತಿಗೆ ಈ ಘಟನೆ ಸಾಕ್ಷಿಯಾಗಿದೆ ಎಂಬ ಆರೋಪ ಕೇಳಿಬಂದಿದೆ.

"

ಖಾಸಗಿ ಆಸ್ಪತ್ರೆಗಳ ಈ ವರ್ತನೆಗೆ ಬಲಿಯಾಗಿರುವುದು ಮಂಜುನಾಥನಗರದ ವೆಂಕಟೇಶ ಮತ್ತು ರಶ್ಮಿ ಅವರ ಕೂಸು. ಹೃದಯ ಸಮಸ್ಯೆಯಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಮಗುವನ್ನು ಉಳಿಸಿಕೊಡುವಂತೆ ಪೋಷಕರು ಕಾಲಿಗೆ ಬಿದ್ದು ಕಾಡಿ ಬೇಡಿದರೂ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಿಲ್ಲ!

ಇನ್ನು 6-7 ತಿಂಗಳಲ್ಲಿ ಕೊರೋನಾ ತಾರಕಕ್ಕೆ, ಎಚ್ಚರಿಕೆ ಅನಿವಾರ್ಯ: ಆರ್‌.ಅಶೋಕ್‌

ಭಾನುವಾರ ಬೆಳಗ್ಗೆ 10ರಿಂದ ಸೋಮವಾರ ಸಂಜೆವರೆಗೆ ಸತತ 38 ಗಂಟೆಗಳ ಕಾಲ 200 ಕಿ.ಮೀವರೆಗೆ ಒಟ್ಟು 8 ಆಸ್ಪತ್ರೆಗಳಿಗೆ ಅಲೆದಿದ್ದಾರೆ. ಕಡೆಯದಾಗಿ ಒಂಭತ್ತನೇ ಆಸ್ಪತ್ರೆಯಲ್ಲಿ ದಾಖಲಾತಿ ದೊರಕಿದೆ. ಆದರೆ, ಆ ವೇಳೆಗೆ ಕಂದಮ್ಮ ಉಸಿರು ಚೆಲ್ಲಿದೆ.

ಆಗಿದ್ದೇನು?:

ಮಗುವಿಗೆ ಭಾನುವಾರ ಬೆಳಗ್ಗೆ ಜ್ವರ ಕಾಣಿಸಿಕೊಂಡಿದೆ. ಪೋಷಕರು ತಕ್ಷಣ ಮಗುವನ್ನು ಕಾರ್ಡ್‌ ರಸ್ತೆಯಲ್ಲಿರುವ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದ್ದಾರೆ. ಆದರೆ, ಅಲ್ಲಿ ಮಗುವನ್ನು ದಾಖಲಿಸಿಕೊಂಡಿಲ್ಲ. ನಂತರ ಮಂಜುನಾಥ ಕ್ಲಿನಿಕ್‌, ಅಪೊಲೋ, ಜಯದೇವ, ಪೀಪಲ್‌ ಟ್ರೀ, ಎಂ.ಎಸ್‌.ರಾಮಯ್ಯ, ಕಾಡೇ ಆಸ್ಪತ್ರೆಗೆ ತೆರಳಿದ್ದಾರೆ.

‘ಬೆಡ್‌ ಸಮಸ್ಯೆ ಇದೆ. ಚಿಕಿತ್ಸೆ ನೀಡಲು ವೈದ್ಯರಿಲ್ಲ’ ಎಂಬ ಕಾರಣ ನೀಡಲಾಗಿದೆ. ‘ಕೊರೋನಾ ಪರೀಕ್ಷೆ ಮಾಡಿಸಿದ್ದೀರಾ?’ ಎಂದೆಲ್ಲ ಪ್ರಶ್ನಿಸಿದ್ದಾರೆಯೇ ಹೊರತು, ಎಲ್ಲಿಯೂ ಮಗುವನ್ನು ದಾಖಲಿಸಿಕೊಂಡಿಲ್ಲ.

2ನೇ ದಿನ ಕಟ್ಟು​ನಿಟ್ಟಿನ ಲಾಕ್‌ಡೌನ್: 9 ಜಿಲ್ಲೆಗಳಲ್ಲಿ ಬಂದೋಬಸ್ತ್ ಬಿಗಿ ಮಾಡಿದ ಪೊಲೀ​ಸರು

ಬಳಿಕ ಗೊರಗುಂಟೆಪಾಳ್ಯ ಸ್ಪರ್ಶ ಆಸ್ಪತ್ರೆ ಹೋಗಿದ್ದಾರೆ. ಅಲ್ಲಿ ಮಗು ದಾಖಲಿಸಿಕೊಂಡು 5 ಗಂಟೆಗಳ ಕಾಲ ಚಿಕಿತ್ಸೆ ನೀಡಿ, ‘ನಿಮ್ಮ ಮಗುವಿಗೆ ಏನೂ ಆಗಿಲ್ಲ. ಮನೆಗೆ ಕರೆದುಕೊಂಡು ಹೋಗಿ’ ಎಂದಿದ್ದಾರೆ. ದುರದೃಷ್ಟವಶಾತ್‌ ಮನೆಗೆ ಬಂದಾಗ ಮಗುವಿನಲ್ಲಿ ಚಲನೆಯೇ ಇಲ್ಲದಂತಾಗಿದೆ. ಭಯಗೊಂಡ ಪೋಷಕರು ಪುನಃ ಮಗುವನ್ನು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಯೂ ಬೆಡ್‌ಗಳ ಸಮಸ್ಯೆ ಮುಂದಿಟ್ಟು ವಾಪಸ್ಸು ಕಳಿಸಲಾಗಿದೆ. ಪೋಷಕರು ಕೈಯಲ್ಲಿ ಮಗು ಹಿಡಿದು ನಗರದ ಹತ್ತಾರು ಆಸ್ಪತ್ರೆಗಳನ್ನು ಅಲೆದರೂ ಸೂಕ್ತ ಚಿಕಿತ್ಸೆ ದೊರಕಿಲ್ಲ.

ಕೊನೆಗೆ ಮಾರತಹಳ್ಳಿಯ ರೈನ್‌ಬೋ ಆಸ್ಪತ್ರೆಯಲ್ಲಿ ಮಗು ದಾಖಲಿಸಿಕೊಂಡಿದ್ದಾರೆ. ಅಲ್ಲೂ ಎರಡರಿಂದ ಮೂರು ಗಂಟೆಗಳ ಕಾಲ ಚಿಕಿತ್ಸೆ ನೀಡಲಾಗಿದೆ. ಅಷ್ಟರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗುವಿನ ಉಸಿರು ನಿಂತಿದೆ.

ಸರಿಯಾದ ಸಮಯಕ್ಕೆ ಬಂದಿದ್ರೆ ಉಳೀತಿತ್ತು

‘ಮಗುವಿಗೆ ಯಾವುದೇ ಕೊರೋನಾ ಸಮಸ್ಯೆ ಇರಲಿಲ್ಲ, ಬ್ರೈನ್‌ ಸ್ಟ್ರೋಕ್ ಆಗಿತ್ತು. ಸಮಯಕ್ಕೆ ಸರಿಯಾಗಿ ಕರೆದುಕೊಂಡು ಬಂದಿದ್ದರೆ ಮಗು ಉಳಿಯುತ್ತಿತ್ತು’ ಎಂದು ರೈನ್‌ಬೋ ಆಸ್ಪತ್ರೆ ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಗುವಿನ ತಂದೆ ವೆಂಕಟೇಶ್‌, ‘ಕೊರೋನಾ ಹಿನ್ನೆಲೆ ಯಾವ ರೋಗಿಗಳಿಗೂ ಚಿಕಿತ್ಸೆ ದೊರೆಯುತ್ತಿಲ್ಲ. ನನ್ನ ಮಗುವಿಗಾದ ಪರಿಸ್ಥಿತಿ ಯಾರಿಗೂ ಬರಬಾರದು. ಕೆಲ ಖಾಸಗಿ ಆಸ್ಪತ್ರೆಗಳು ಬಡವರ ರಕ್ತ ಹೀರುತ್ತಿವೆ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಲ್ಲಿ ಮಾತ್ರ ಒಂದೇ ದಿನ 2 ಸಾವಿರಕ್ಕೂ ಹೆಚ್ಚು ಸೋಂಕು ಪತ್ತೆ, 70 ಸಾವು

ಒಟ್ಟಿನಲ್ಲಿ ಯಾವುದೇ ತಪ್ಪು ಮಾಡದ ಕಂದಮ್ಮ ವೈದ್ಯರು, ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಬಲಿಯಾಗಿದೆ. ಕೊರೋನಾ ಸೋಂಕಿನ ಸಂದಿಗ್ಧ ಸಂದರ್ಭದಲ್ಲಿ ವೇಳೆಯಲ್ಲಿ ಪ್ರಾಣ ಕಾಪಾಡಬೇಕಾದ ವೈದ್ಯರು, ಸಿಬ್ಬಂದಿಯಲ್ಲಿ ಮಾನವೀಯತೆ ಮರೆಯಾಗಿರುವುದು ಮತೊಮ್ಮೆ ಸಾಬೀತಾದಂತಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

click me!