ಮತ್ತೆ 71 ಸಾವಿರ ಮಂದಿಗೆ ಉದ್ಯೋಗ: ನೇಮಕ ಪತ್ರ ವಿತರಣೆಗೆ ಮೋದಿ ಚಾಲನೆ

By Kannadaprabha NewsFirst Published Apr 14, 2023, 8:28 AM IST
Highlights

ಸರ್ಕಾರ ಆಯೋಜಿಸುವ ಉದ್ಯೋಗ ಮೇಳದಡಿ ಹೊಸದಾಗಿ ನೇಮಕಗೊಂಡ 71 ಸಾವಿರ ಉದ್ಯೋಗಿಗಳಿಗೆ ನೇಮಕ ಪತ್ರವನ್ನು ಗುರುವಾರ ವಿತರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವರ್ಚುವಲ್‌ ಆಗಿ ನೇಮಕಾತಿ ಪತ್ರ ವಿತರಣೆಗೆ ಚಾಲನೆ ನೀಡಿದರು. 

ನವದೆಹಲಿ: ಸರ್ಕಾರ ಆಯೋಜಿಸುವ ಉದ್ಯೋಗ ಮೇಳದಡಿ ಹೊಸದಾಗಿ ನೇಮಕಗೊಂಡ 71 ಸಾವಿರ ಉದ್ಯೋಗಿಗಳಿಗೆ ನೇಮಕ ಪತ್ರವನ್ನು ಗುರುವಾರ ವಿತರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವರ್ಚುವಲ್‌ ಆಗಿ ನೇಮಕಾತಿ ಪತ್ರ ವಿತರಣೆಗೆ ಚಾಲನೆ ನೀಡಿದರು. ಈ ಮೂಲಕ ಈ ಯೋಜನೆಯಡಿ ನೇಮಕಗೊಂಡವರ ಸಂಖ್ಯೆ 2,48,596ಕ್ಕೆ ಏರಿದೆ. ಇದಕ್ಕೂ ಮೊದಲು 75 ಸಾವಿರಕ್ಕೂ ಹೆಚ್ಚು ಮಂದಿ ಹಾಗೂ ಕಳೆದ ತಿಂಗಳು 71 ಸಾವಿರ ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿತ್ತು.

ನೇಮಕಾತಿ ಪತ್ರ (appointments letter) ವಿತರಣೆಯ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ನವ ಭಾರತ ಹೊಸ ನೀತಿಗಳು ಮತ್ತು ಯೋಜನೆಗಳತ್ತ ಸಾಗುತ್ತಿದೆ. ನಮ್ಮ ಸರ್ಕಾರ ತಂತ್ರಜ್ಞಾನ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಉತ್ತಮವಾದ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು. ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಮುದ್ರಾ ಯೋಜನೆಯಡಿ ಸಾಲ ನೀಡುತ್ತಿರುವುದರಿಂದ ಹೊಸ ಉದ್ಯಮಿಗಳ ಸಂಖ್ಯೆ 8 ಕೋಟಿಯನ್ನು ದಾಟಿದೆ. ನಮ್ಮ ಸರ್ಕಾರ ಹೊಸ ಅವಕಾಶಗಳಿಗೆ ಬಾಗಿಲನ್ನು ತೆರೆದಿದೆ. ಆದರೆ, ತಮ್ಮನ್ನು ತಾವು ಪ್ರಮುಖ ಆರ್ಥಿಕ ತಜ್ಞರು ಎಂದು ಕೆಲವರು ಹೇಳಿಕೊಳ್ಳುತ್ತಾರೆ. ಅವರು ಯೋಜನೆ ಟೀಕಿಸುತ್ತಾರೆ. ಅವರಿಗೆ ಜನಸಾಮಾನ್ಯರ ಶಕ್ತಿ ಗೊತ್ತಿಲ್ಲ; ಎಂದು ಟೀಕಿಸಿದರು. ಈ ಮೂಲಕ ಇತ್ತೀಚೆಗೆ ಮುದ್ರಾ ಯೋಜನೆಯನ್ನು ಟೀಕಿಸಿದ್ದ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ (P chidambaram) ವಿರುದ್ಧ ಅವರ ಹೆಸರನ್ನು ಉಲ್ಲೇಖಿಸದೇ ವಾಗ್ದಾಳಿ ನಡೆಸಿದರು.

ಸಿಆರ್‌ಪಿಎಫ್‌ ನೇಮಕಾತಿ ಪರೀಕ್ಷೆಗೆ ಕನ್ನಡ ಇಲ್ಲ: ಸಿದ್ದರಾಮಯ್ಯ, ಎಚ್‌ಡಿಕೆ ಆಕ್ರೋಶ

ಮೋದಿ ಅವರಿಗೆ ಆಡಳಿತ ತಮಾಷೆ- ಖರ್ಗೆ ಟೀಕೆ:

ಉದ್ಯೋಗ ನೀಡುವ ಹೆಸರಿನಲ್ಲಿ ಪ್ರಧಾನಿ ಮೋದಿ ಮತ್ತೊಮ್ಮೆ 71 ಸಾವಿರ ಮಂದಿಗೆ ನೇಮಕಾತಿ ಪತ್ರ ನೀಡಿದ್ದಾರೆ. ಇದರಲ್ಲಿ 50 ಸಾವಿರ ನೇಮಕಾತಿ ರೈಲ್ವೆಯಲ್ಲೇ ಆಗಿದೆ. ಭಾರತೀಯ ರೈಲ್ವೆಯಲ್ಲಿ ಇನ್ನೂ 3 ಲಕ್ಷ ಉದ್ಯೋಗಗಳು ಖಾಲಿ ಇವೆ. ಇತರ ಸಚಿವಾಲಯದಲ್ಲಿ 30 ಲಕ್ಷ ಉದ್ಯೋಗ ಖಾಲಿ ಇದೆ. ಆದರೆ 10 ವರ್ಷಗಳ ಮೋದಿ ಸರ್ಕಾರಕ್ಕೆ ಹೋಲಿಸಿದರೆ ಉದ್ಯೋಗ ನೀಡಿರುವ ಪ್ರಮಾಣ ತುಂಬಾ ಕಡಿಮೆ ಇದೆ. ಮೋದಿ ಅವರಿಗೆ ಆಡಳಿತ ಎಂಬುದು ದೊಡ್ಡ ತಮಾಷೆಯಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ಬೆಂಗಳೂರು: 4 ವರ್ಷದಲ್ಲಿ ಬಿಬಿಎಂಪಿ ಮಾರ್ಷಲ್‌ಗಳು ದುಪ್ಪಟ್ಟು..!

click me!