ನಿರುದ್ಯೋಗಿಗಳಿಗೆ ಇಲ್ಲಿದೆ ಸುವರ್ಣಾವಕಾಶ: ಬೃಹತ್ ಉದ್ಯೋಗ ಮೇಳ

By Kannadaprabha NewsFirst Published Feb 15, 2020, 12:30 PM IST
Highlights

ಫೆ.22,23ರಂದು ಹಾವೇರಿ ಜಿಲ್ಲಾಮಟ್ಟದ ಉದ್ಯೋಗ ಮೇಳ| 1152 ಅಭ್ಯರ್ಥಿಗಳ ನೋಂದಣಿ: ಗೃಹ ಸಚಿವ ಬಸವರಾಜ ಬೊಮ್ಮಾಯಿ|ಎಸ್‌ಎಸ್‌ಎಲ್‌ಸಿ, ಪಿಯುಸಿ, ವಿವಿಧ ಪದವಿ, ಐಟಿಐ, ಡಿಪ್ಲೊಮಾ ಸೇರಿದಂತೆ ವೃತ್ತಿಪರ ಕೋರ್ಸ್‌ ಪೂರೈಸಿರುವ ಅಭ್ಯರ್ಥಿಗಳಿಗೂ ಉದ್ಯೋಗಾವಕಾಶ|

ಹಾವೇರಿ[ಫೆ.15]: ಜಿಲ್ಲಾಡಳಿತ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಫೆ. 22 ಮತ್ತು 23ರಂದು ನಗರದ ಹುಕ್ಕೇರಿಮಠ ಶಿವಲಿಂಗೇಶ್ವರ ಮಹಿಳಾ ಮಹಾ ವಿದ್ಯಾಲಯದ ಆವರಣದಲ್ಲಿ ಎರಡು ದಿನಗಳ ಜಿಲ್ಲಾಮಟ್ಟದ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಉದ್ಯೋಗ ಮೇಳಕ್ಕೆ ಐದು ಸಾವಿರ ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಹೊಂದಿದ್ದು, ಈ ವರೆಗೆ 1152 ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

'ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ನೀತಿ ಜಾರಿ'

ಪರಿಶಿಷ್ಟಜಾತಿ 102, ಪರಿಶಿಷ್ಟ ಪಂಗಡ 80, ಅಲ್ಪ ಸಂಖ್ಯಾತರು 102 ಹಾಗೂ ಹಿಂದುಳಿದ ವರ್ಗ 549, ಸಾಮಾನ್ಯ 319 ಒಟ್ಟು 1152 ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 862 ಪುರುಷರು ಹಾಗೂ 289 ಮಹಿಳಾ ಅಭ್ಯರ್ಥಿಗಳು ಉದ್ಯೋಗ ಅಪೇಕ್ಷೆ ಹೊಂದಿ ನೋಂದಾಯಿಸಿಕೊಂಡಿದ್ದಾರೆ. ಮೇಳದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ವಿವಿಧ ಪದವಿ, ಐಟಿಐ, ಡಿಪ್ಲೊಮಾ ಸೇರಿದಂತೆ ವೃತ್ತಿಪರ ಕೋರ್ಸ್‌ಗಳನ್ನು ಪೂರೈಸಿರುವ ಅಭ್ಯರ್ಥಿಗಳಿಗೂ ಉದ್ಯೋಗಾವಕಾಶಗಳು ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ಕೌಶಲ್ಯ ಕೇಂದ್ರಗಳಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳನ್ನು ಸಹ ಆಹ್ವಾನಿಸಲಾಗಿದೆ. 80ರಿಂದ 100 ಉದ್ಯೋಗದಾತರ ನಿರೀಕ್ಷೆಯಿದ್ದು ಇದರಲ್ಲಿ 37 ಉದ್ಯೋಗದಾತರು 2361 ಹುದ್ದೆಗಳು ಖಾಲಿ ಇರುವ ಬಗ್ಗೆ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಬೇರೆ ಉದ್ಯೋಗದಲ್ಲಿ ನಿರತರಾಗಿ ಕೆಲ ಅವಧಿಯಲ್ಲಿ ಪಾರ್ಟ್‌ಟೈಮ್‌ ಆಗಿ ಕೆಲಸಮಾಡಲು ಇಚ್ಛಿಸುವವರಿಗೆ ಅಗತ್ಯವಾದ ಉದ್ಯೋಗವನ್ನು ಗುರುತಿಸಲು ಕ್ರಮವಹಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. 

ಉದ್ಯೋಗ ಏಕೆ ಬದಲಿಸ್ತಿದೀರಾ ಎಂಬ ಪ್ರಶ್ನೆಗೆ ಏನುತ್ತರಿಸಬೇಕು?

ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ಕುರಿತು 9 ನಗರ ಸ್ಥಳೀಯ ಸಂಸ್ಥೆಗಳಲ್ಲಿ, 19 ಹೋಬಳಿ ಮಟ್ಟದಲ್ಲಿ ಹಾಗೂ ಕರ್ನಾಟಕ ಒನ್‌ ಕೇಂದ್ರಗಳಲ್ಲಿ ನೋಂದಣಿ ಕೇಂದ್ರಗಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆಯ ಎಲ್ಲ ನಿರುದ್ಯೋಗ ಯುವಕ, ಯುವತಿಯರು ಹಾಗೂ ಉದ್ಯೋಗದಾತರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳಲು ಕೋರಲಾಗಿದೆ. ಹುಕ್ಕೇರಿಮಠದ ಕಾಲೇಜು ಆವರಣದಲ್ಲಿ ವಿವಿಧ ವಿಭಾಗಗಳನ್ನು ತೆರೆದು ಸಂದರ್ಶನಕ್ಕೆ ಅವಕಾಶ ಮಾಡಿಕೊಡಲು ಪ್ರತ್ಯೇಕ ವಿಭಾಗಗಳನ್ನು ತೆರೆಯಲಾಗುವುದು. ಮೇಳಕ್ಕೆ  25 ಲಕ್ಷ ಅನುದಾನ ನಿಗದಿಪಡಿಸಿದ್ದು 12.50 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದ ಸಚಿವರು, ಮಾಹಿತಿಗೆ ಹಾವೇರಿ ಜಿಲ್ಲಾಡಳಿತ ಭವನದ ಜಿಲ್ಲಾ ಕೌಶಲ್ಯ ಮಿಷನ್‌ (08375-249291) ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಈ ವೇಳೆ ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಜಿಪಂ ಸಿಇಒ ರಮೇಶ ದೇಸಾಯಿ ಇದ್ದರು.

 ಈ ಕ್ಷಣದ ಪ್ರಮುಖ ಸುದ್ದಿಗಳು

"

click me!