ಆನೆಗಳು ಸಾಮಾನ್ಯವಾಗಿ ಸಾಧು ಪ್ರಾಣಿಗಳು ತಮ್ಮಷ್ಟಕ್ಕೆ ತಾವಿರುವ ಇವುಗಳು ಕೆಣಕದ ಹೊರತು ತಾವಾಗಿಯೇ ಯಾರ ಮೇಲೂ ದಾಳಿ ಮಾಡಲು ಮುಂದಾಗುವುದಿಲ್ಲ. ಆದರೆ ಕೆಣಕಲು ಬಂದರೆ ಮಾತ್ರ ಸುಮ್ಮನೆ ಬಿಡುವುದಿಲ್ಲ. ಇದು ಗೊತ್ತಿದ್ದೂ ಕೂಡ ಕೆಲವು ಪುಂಡಾಟಿಕೆಯ ಹುಡುಗರು ಆನೆಗಳನ್ನು ಕೆಣಕಲು ಹೋಗಿದ್ದಲ್ಲದೇ ಅವುಗಳ ಮುಂದೆ ಸೆಲ್ಫಿ ತೆಗೆದುಕೊಂಡು ಕಿತಾಪತಿ ಮಾಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಡುಪ್ರಾಣಿಗಳನ್ನು ಕೆಣಕಿದ ಹುಡುಗರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಈ ವಿಡಿಯೋವನ್ನು ಭಾರತೀಯ ಆಡಳಿತ ಸೇವೆಗಳ (ಐಎಎಸ್) ಅಧಿಕಾರಿ ಸುಪ್ರಿಯಾ ಸಾಹು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಕಾಣಿಸುವಂತೆ ಕೆಂಪು ಕಾರೊಂದನ್ನು ಆನೆಗಳು ಬರುತ್ತಿದ್ದ ದಾರಿಯಲ್ಲಿ ರಿವರ್ಸ್ ತಿರುಗಿಸಿದ ಯುವಕರು ಆನೆಗಳ ಮುಂದೆ ಸೆಲ್ಪಿ ತೆಗೆದುಕೊಳ್ಳುತ್ತಾರೆ. ಕೇವಲ ಸೆಲ್ಫಿ ತೆಗೆದುಕೊಂಡಿದ್ದಲ್ಲದೇ ಜೋರಾಗಿ ಬೊಬ್ಬೆ ಹಾಕುತ್ತಾ ಅವುಗಳನ್ನು ಕೆರಳಿಸಲು ನೋಡುತ್ತಾರೆ. ಈ ವೇಳೆ ಆನೆಗಳು ಒಮ್ಮೆ ಇವರನ್ನು ಓಡಿಸಿದಂತೆ ವೇಗವಾಗಿ ಬಂದು ಹೆದರಿಸಿ ಅರ್ಧದಲ್ಲಿ ತಿರುಗಿ ಹೋಗಿ ಸುಮ್ಮನಾಗುತ್ತವೆ. ಒಂದು ವೇಳೆ ಸೀದಾ ಓಡಿಸಿಕೊಂಡು ಬಂದಿದ್ದಾರೆ ಯುವಕರಿಗೆ ಅದು ಅವರ ಕೊನೆಯ ಸೆಲ್ಪಿ ಆಗಿರುತ್ತಿತ್ತು. ಆದರೆ ಆನೆಗಳು ಸಂಯಮ ತೋರಿದ್ದರಿಂದ ಅನಾಹುತವೊಂದು ತಪ್ಪಿದ್ದಂತಾಗಿದೆ. ಈ ವೇಳೆ ಕಾರಿನಲ್ಲಿದ್ದ ಕೆಲ ಯುವತಿಯರು ಈ ಯುವಕರನ್ನು ಬನ್ನಿ ಬನ್ನಿ ಎಂದು ಕರೆಯುವುದನ್ನು ಕೇಳಬಹುದು.
ಈ ವಿಡಿಯೋ ಶೇರ್ ಮಾಡಿದ ಅಧಿಕಾರಿ ಸುಪ್ರಿಯಾ ಸಾಹು, ವನ್ಯಜೀವಿಗಳೊಂದಿಗೆ ಸೆಲ್ಫಿ ಕ್ರೇಜ್ ಮಾರಣಾಂತಿಕವಾಗಬಹುದು. ಈ ಸೌಮ್ಯವಾಗಿರುವ ದೈತ್ಯ ಪ್ರಾಣಿಗಳು, ಜನರ ನಡವಳಿಕೆಯನ್ನು ಕ್ಷಮಿಸಲು ಆಯ್ಕೆ ಮಾಡಿಕೊಂಡಿರುವುದು ಈ ಜನರ ಅದೃಷ್ಟ. ಇಲ್ಲದಿದ್ದರೆ, ಜನರಿಗೆ ಪಾಠ ಕಲಿಸಲು ಶಕ್ತಿಶಾಲಿ ಆನೆಗಳಿಗೆ ಹೆಚ್ಚು ಸಮಯ ಬೇಕಾಗುವುದಿಲ್ಲ ಎಂದು ಐಎಎಸ್ ಅಧಿಕಾರಿ ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು 65,000 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಅಲ್ಲದೇ ಇದು ನೆಟ್ಟಿಗರನ್ನು ಕೆರಳಿಸಿದೆ. ಪ್ರಾಣಿಗಳೊಂದಿಗೆ ಅಶಿಸ್ತಿನಿಂದ ವರ್ತಿಸಿದ ಈ ಜನರ ಗುಂಪಿಗೆ ಭಾರಿ ದಂಡ ವಿಧಿಸಬೇಕು ಎಂದು ವಿಡಿಯೋ ನೋಡಿದವರೊಬ್ಬರು ಹೇಳಿದ್ದಾರೆ.
ಸಾಮಾನ್ಯ ಜ್ಞಾನವು ಇತ್ತೀಚೆಗೆ ಅತೀ ಅಪರೂಪವಾಗಿದೆ. ಕೆಲವೊಮ್ಮೆ ಜನರು ಅದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದಾರೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮಗದೊಬ್ಬರು ಈ ಮೂರ್ಖ ಹುಚ್ಚಾಟದ ಜನರಿಗೆ ದಂಡ ವಿಧಿಸಬೇಕು. ನಾವು ವನ್ಯಜೀವಿ ವಲಯವನ್ನು ಗೌರವಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇವರು ಆನೆಗಳಿಗೆ ತೊಂದರೆ ಮಾಡಿದರು. ಅವುಗಳು ಆಕ್ರಮಣ ಮಾಡಲು ಬರದೇ ಇದ್ದ ಕಾರಣ ಅಪಾಯಕಾರಿ ಎಂಬುದು ಅದೃಷ್ಟವಾಗಿ ಬದಲಾಯಿತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಜಗತ್ತಿನಲ್ಲಿ ಯಾರಿಗಿದೆ ಈ ರೀತಿಯ Z++++ ಭದ್ರತೆ: ಆನೆ ಹಿಂಡಿನ ವಿಡಿಯೋ ನೋಡಿ
ಪ್ರಾಣಿಗಳ ವಿನಮ್ರತೆ ಮತ್ತು ಸಭ್ಯತೆಯನ್ನು ಯಾವಾಗಲೂ ಲಘುವಾಗಿ ತೆಗೆದುಕೊಳ್ಳಲಾಗುತ್ತದೆ. ನಾವು ಅವರ ಪ್ರದೇಶದಲ್ಲಿ ಅವರ ಜೀವನ ಮತ್ತು ಖಾಸಗಿತನವನ್ನು ಗೌರವಿಸುವುದಿಲ್ಲ. ನಾಚಿಕೆಗೇಡು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಸುಮ್ಮನೆ ಅವುಗಳ ಮುಂದೆ ಹುಚ್ಚಾಟವಾಡಲಾಗುತ್ತದೆ ಮತ್ತು ನಂತರ ಯಾವುದೇ ಹಾನಿಗೆ ನಾವು ಕಾಡು ಪ್ರಾಣಿಗಳನ್ನು ದೂಷಿಸುತ್ತೇವೆ ಎಂದು ಮಗದೊಬ್ಬರು ಹೇಳಿದ್ದಾರೆ. ಸುಪ್ರಿಯಾ ಸಾಹು ಅವರು ಪ್ರಾಣಿಗಳ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ. ಈ ಹಿಂದೆಯೂ ಜನರು ಪ್ರಾಣಿಗಳನ್ನು ಕೆಣಕುತ್ತಿರುವ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ತಮ್ಮ ಆವಾಸಸ್ಥಾನದಲ್ಲಿದ್ದ ತಮ್ಮ ಮರಿಗಳೊಂದಿಗೆ ಇದ್ದ ಆನೆಗಳನ್ನು ಕಾರುಗಳಲ್ಲಿದ್ದ ಜನ ಸುತ್ತುವರಿದಿದ್ದು, ಈ ವೇಳೆ ಅವುಗಳು ಸಿಟ್ಟುಗೊಂಡಿದ್ದವು.
ಅಬ್ಬಾ ಏನ್ ಸೆಕೆ: ದಣಿವಾರಿಸಲು ಕೆಸರಿನ ಸ್ನಾನ ಮಾಡುತ್ತಿರುವ ಗಜಪಡೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ