
ತಿರುವನಂತಪುರಂ: ಕೇವಲ 10 ತಿಂಗಳ ಮಗುವೊಂದು ಅಂಗಾಗ ದಾನ ಮಾಡುವ ಮೂಲಕ 4 ಜನರಿಗೆ ಜೀವ ದಾನ ಮಾಡಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದೆ. ಹೌದು ಕೇರಳದ ಅಲಿನ್ ಶೆರಿನ್ ಅಬ್ರಹಾಂ ಎಂಬ 10 ತಿಂಗಳ ಮಗು ಈಗ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆ ಮಗುವಿನ ಅಂಗಾಂಗಗಳು ಮಗು ಸೇರಿದಂತೆ 4 ಜನರಿಗೆ ಹೊಸ ಜೀವನ ನೀಡಲಿವೆ. ಈ ಮಗು ರಸ್ತೆ ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿತ್ತು. ಮಗುವನ್ನು ಕಳೆದುಕೊಂಡ ನೋವಿನ ಹೊರತಾಗಿಯೂ ಅವರ ಕುಟುಂಬದವರು ಮಗುವಿನ ಅಂಗಾಂಗಗಳನ್ನು ದಾನ ಮಾಡಲು ಮುಂದಾದರು. . ಅಲಿನ್ ಶೆರಿನ್ ಅಬ್ರಹಾಂ, ಮಲ್ಲಪ್ಪಳ್ಳಿಯ ವಾಲುಮನ್ನಿಯ ಅರುಣ್ ಅಬ್ರಹಾಂ ಮತ್ತು ಶೆರಿನ್ ಜಾನ್ ಅವರ ಏಕೈಕ ಪುತ್ರಿ.
ಫೆಬ್ರವರಿ 5 ರಂದು ಕೊಟ್ಟಾಯಂನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅಲಿನ್ ಅವರಿದ್ದ ಕಾರು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು .ಈ ದುರಂತದಲ್ಲಿ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಮಗುವಿನ ಮೂತ್ರಪಿಂಡವನ್ನು ಹತ್ತು ವರ್ಷದ ಬಾಲಕಿ ಶ್ರೇಯಾಗೆ ಕಸಿ ಮಾಡಲಾಗುತ್ತಿದೆ. ಶ್ರೇಯಾ ಅವರು ಮೂತ್ರಪಿಂಡದ ವೈಫಲ್ಯದಿಂದ ಕಳೆದೊಂದು ವರ್ಷದಿಂದ ಡಯಾಲಿಸೀಸ್ಗೆ ಒಳಗಾಗುತ್ತಿದ್ದರು. ಈಗ ಅಲಿನ್ ಅವರು ಅಂಗಾಂಗ ದಾನದಿಂದ ಅವರಿಗೆ ಜೀವದಾನ ಆಗಿದೆ.
ಅಂಗಾಂಗ ದಾನ ಪ್ರಕ್ರಿಯೆಯನ್ನು ಸರ್ಕಾರಿ ವ್ಯವಸ್ಥೆ K-SOTTO ಮೂಲಕ ನಡೆಸಲಾಯಿತು. ವರದಿಯ ಪ್ರಕಾರ, ಅಲಿನ್ ಅವರ ಹೃದಯ ಕವಾಟವನ್ನು ತಿರುವನಂತಪುರದ ಶ್ರೀ ಚಿತ್ರ ಸಂಸ್ಥೆಗೆ, ಅವರ ಯಕೃತ್ತನ್ನು KIMS ಆಸ್ಪತ್ರೆಗೆ ಮತ್ತು ಅವರ ಮೂತ್ರಪಿಂಡಗಳನ್ನು ತಿರುವನಂತಪುರಂ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯ್ತು. ಅವರ ಕಣ್ಣುಗಳನ್ನು ಸಹ ನೇತ್ರ ಬ್ಯಾಂಕ್ಗೆ ದಾನ ಮಾಡಲಾಗಿದೆ. ಹಾಗೆಯೇ ತಿರುವನಂತಪುರದ ಆರು ತಿಂಗಳ ಬಾಲಕಿಗೆ ಅಲಿನ್ ಅವರ ಯಕೃತ್ತು ಮಾಡಲಾಯ್ತು.
ಅಂಗಾಂಗಗಳನ್ನು ಹೊತ್ತ ಆಂಬ್ಯುಲೆನ್ಸ್ ಕೊಚ್ಚಿಯ ಅಮೃತ ಆಸ್ಪತ್ರೆಯಿಂದ ತಿರುವನಂತಪುರಕ್ಕೆ ಸಂಜೆ 7.12 ಕ್ಕೆ ಹೊರಟಿತು. ಎಡಪಳ್ಳಿ-ವೈಟ್ಟಿಲ-ತ್ರಿಪುನಿತುರ-ತಲಯೋಲಪರಂಬ-ಚೆಂಗನ್ನೂರು-ಕಳಕೂಟ್ಟಂ ಮೂಲಕ ಸಾಗಿದ ಆಂಬುಲೆನ್ಸ್ಗೆ ದಾರಿಯುದ್ದಕ್ಕೂ ಪೊಲೀಸರು ದಾರಿ ಮಾಡಿಕೊಟ್ಟರು.
ಮತ್ತೊಂದೆಡೆ ಮರಣೋತ್ತರ ಪರೀಕ್ಷೆಯ ನಂತರ ಅಲಿನ್ ಅವರ ಮೃತದೇಹವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು ರಾತ್ರಿ ಕೊಚ್ಚಿಯಿಂದ ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತರಲಾದ ಮೃತದೇಹವನ್ನು ವಿಧಿವಿಜ್ಞಾನ ವಿಭಾಗದ ಸಹಾಯಕ ಪ್ರಧ್ಯಾಪಕ ಡಾ. ಕೆ. ರೋಹಿತ್ ನೇತೃತ್ವದಲ್ಲಿ ನಡೆಸಲಾಯಿತು. ರಾತ್ರಿ 12:30 ರ ಸುಮಾರಿಗೆ ಮೃತದೇಹವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಅಲಿನ್ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 3.30 ಕ್ಕೆ ಮಲ್ಲಪ್ಪಳ್ಳಿಯ ನೆಡುಂಗಡಪಲ್ಲಿಯಲ್ಲಿರುವ ಸೇಂಟ್ ಥಾಮಸ್ ಸಿಎಸ್ಐ ಚರ್ಚ್ ಸ್ಮಶಾನದಲ್ಲಿ ನಡೆದಿದೆ.
ಕೇರಳದಲ್ಲಿ ಈ ಘಟನೆ ಸಂಚಲನ ಸೃಷ್ಟಿಸಿದ್ದು, ಅನೇಕರು ಭಾವುಕರಾಗಿದ್ದಾರೆ. ತಮ್ಮ ಪುಟ್ಟ ಮಗುವಿನ ಸಾವಿನ ಸಮಯದಲ್ಲೂ ಬೇರೆಯವರ ಬಗ್ಗೆ ಯೋಚನೆ ಮಾಡಿ ಮಗುವಿನ ಅಂಗಾಂಗ ದಾನ ಮಾಡಿದ ಪೋಷಕರ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ