Women s Reservation Defeat: ವಿಪಕ್ಷಗಳಿಗೆ ಮಹಿಳಾ ವಿರೋಧಿ ಹಣೆಪಟ್ಟಿ, ಕಾಂಗ್ರೆಸ್ಸನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿಗೆ ರಾಜಕೀಯ ಅಸ್ತ್ರ?

Kannadaprabha News   | Kannada Prabha
Published : Apr 18, 2026, 06:22 AM IST
Women s Reservation Defeat Opposition Branded Anti Women A Political Weapon for BJP to Corner Congress rav

ಸಾರಾಂಶ

ಲೋಕಸಭೆಯಲ್ಲಿ ಮಹಿಳಾ ಮೀಸಲು ಮಸೂದೆಯು ಸೋಲು ಕಂಡಿದೆ. ಈ ಸೋಲನ್ನು ಮುಂಬರುವ ಚುನಾವಣೆಗಳಲ್ಲಿ ರಾಜಕೀಯ ಅಸ್ತ್ರವಾಗಿ ಬಳಸಲು ಬಿಜೆಪಿ ಸಜ್ಜಾಗಿದ್ದರೆ, ವಿಪಕ್ಷಗಳು ಇದನ್ನು ಸಂವಿಧಾನಕ್ಕೆ ಸಂದ ಜಯವೆಂದು ಸಂಭ್ರಮಿಸುತ್ತಿವೆ. ಈ ಬೆಳವಣಿಗೆಯ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ  ವಾಕ್ಸಮರಕ್ಕೆ ಕಾರಣವಾಗಿದೆ.

ನವದೆಹಲಿ (ಏ.18): ಮಹಿಳಾ ಮೀಸಲು ಮಸೂದೆಯ ಸೋಲನ್ನು ಬಿಜೆಪಿ, ಪ್ರತಿಪಕ್ಷಗಳ ವಿರುದ್ಧ ಮುಂಬರುವ 2 ವಿಧಾನಸಭೆ ಚುನಾವಣೆಗಳಲ್ಲಿ ಹಾಗೂ ಮುಂದಿನ ದಿನಗಳಲ್ಲಿ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ.

ಸರ್ಕಾರಕ್ಕೆ ಈ ಸೋಲು ಪೂರ್ಣವಾಗಿ ಅಂದಾಜಿತ್ತು. ಎನ್‌ಡಿಎ ಬಳಿ ಸುಮಾರು 293 ಸಂಸದರಿದ್ದರೂ, ಸಂವಿಧಾನ ತಿದ್ದುಪಡಿ ಮಸೂದೆಗೆ ಬೇಕಾದ 2/3ರಷ್ಟು ಬಹುಮತ (ಸುಮಾರು 360 ಮತಗಳು) ಸಿಗುವುದು ಕಷ್ಟ ಎಂದು ಸರ್ಕಾರಕ್ಕೆ ಗೊತ್ತಿತ್ತು. ವಿರೋಧ ಪಕ್ಷಗಳು ಕ್ಷೇತ್ರ ಮರುವಿಂಗಡಣೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದುದರಿಂದ ಮಸೂದೆ ಸೋಲುತ್ತದೆ ಎಂದು ಮುಂಚಿತವಾಗಿಯೇ ಲೆಕ್ಕ ಹಾಕಲಾಗಿತ್ತು. ಆದರೆ ಸರ್ಕಾರ ಉದ್ದೇಶಪೂರ್ವಕವಾಗಿ ಈ ಮಸೂದೆಯನ್ನು ಮುಂದುವರಿಸಿತು. ಈ ಸೋಲನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಸಾಧ್ಯತೆಯಿದೆ ಎಂಬ ರಾಜಕೀಯ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ಇದೇ ಏ.23ಕ್ಕೆ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿದೆ. ಇದೇ ವೇಳೆ ಸರ್ಕಾರದ ಮಹತ್ವದ ನಿರ್ಣಯಕ್ಕೆ ಸೋಲಾಗಿರುವುದರಿಂದ, ‘ನಾವು ಮಹಿಳೆಯರಿಗೆ ಶೇ.33 ಮೀಸಲು ನೀಡಲು ಸಿದ್ಧರಾಗಿದ್ದೆವು. ಆದರೆ ವಿಪಕ್ಷಗಳು ಮಹಿಳಾ ಸಬಲೀಕರಣಕ್ಕೆ ತಡೆ ಹಾಕಿದರು’ ಎಂದು ಎನ್‌ಡಿಎ ವ್ಯಾಪಕ ಪ್ರಚಾರ ನಡೆಸುವ ನಿರೀಕ್ಷೆಯಿದೆ. ವಿಪಕ್ಷಗಳನ್ನು ‘ಮಹಿಳಾ ವಿರೋಧಿ’ ಎಂದು ಚಿತ್ರಿಸಿ, ಮಹಿಳಾ ಮತದಾರರ ಮನ ಗೆಲ್ಲುವ ತಂತ್ರಗಾರಿಕೆ ಕಾಣುತ್ತಿದೆ.

ವಿಪಕ್ಷಗಳ ವಿರುದ್ಧ ಬಿಜೆಪಿಗರ ಪ್ರತಿಭಟನೆ

ಲೋಕಸಭೆಯಲ್ಲಿ ಮಹಿಳಾ ಮೀಸಲು ಮಸೂದೆಗೆ ಸೋಲುಂಟಾದ ಬೆನ್ನಲ್ಲೇ ಎನ್‌ಡಿಎ ಸಂಸದರು ಸಂಸತ್‌ನ ಹೊರಗೆ ಮತ್ತು ಸದನದ ಒಳಗೆ ತೀವ್ರ ಪ್ರತಿಭಟನೆ ನಡೆಸಿದರು. ಬಿಜೆಪಿ ಮಹಿಳಾ ಸಂಸದರು ‘ವಿಪಕ್ಷಗಳು ಮಹಿಳೆಯರನ್ನು ಮತ್ತೆ ವಂಚಿಸಿವೆ’, ‘ನಾವು ಮಹಿಳೆಯರ ಹಕ್ಕಿಗಾಗಿ ಹೋರಾಡುತ್ತೇವೆ’ ಎಂಬ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಇದೇ ವೇಳೆ, ಕೇಂದ್ರ ಸಚಿವ ಅಮಿತ್‌ ಶಾ ಹಾಗೂ ಕಿರಣ್‌ ರಿಜಿಜು ಪ್ರತಿಪಕ್ಷಗಳ ವಿರುದ್ಧ ಭಾರಿ ವಾಗ್ದಾಳಿ ನಡೆಸಿದ್ದಾರೆ.

ಶಾ ಹೇಳಿದ್ದೇನು?:

‘ಮಹಿಳೆಯರಿಗೆ 33 ಪ್ರತಿಶತ ಮೀಸಲಾತಿ ನೀಡುವ ಮಸೂದೆಯ ಸೋಲನ್ನು ವಿಪಕ್ಷಗಳು ಆಚರಿಸುವುದು ಖಂಡನೀಯ, ಕಲ್ಪನೆಗೂ ಮೀರಿದ ಕೃತ್ಯ. ಲೋಕಸಭೆಯಲ್ಲಿ ಮಹಿಳಾ ಕೋಟಾ ಕುರಿತ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತು ಎಸ್‌ಪಿ ಅವಕಾಶ ನೀಡಲಿಲ್ಲ. ಈಗ ಮಹಿಳೆಯರಿಗೆ ಶಾಸಕಾಂಗಗಳಲ್ಲಿ ಶೇ. 33 ರಷ್ಟು ಮೀಸಲಾತಿ ಸಿಗುವುದಿಲ್ಲ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಇದನ್ನು ಮೊದಲ ಬಾರಿಗೆ ಅಲ್ಲ, ಪದೇ ಪದೇ ಮಾಡಿವೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಮನಃಸ್ಥಿತಿ ಮಹಿಳೆಯರ ಹಿತಾಸಕ್ತಿ ಅಥವಾ ದೇಶದ ಹಿತಾಸಕ್ತಿಯ ಪರ ಇಲ್ಲ ಎಂದು ಅಮಿತ್‌ ಶಾ ಕಿಡಿಕಾರಿದ್ದಾರೆ.

ಹೋರಾಟ ಮುಂದುವರಿಯುತ್ತದೆ- ರಿಜಿಜು:

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು, ‘ವಿಪಕ್ಷಗಳು ಮಹಿಳೆಯರನ್ನು ಗೌರವಿಸುವ ಐತಿಹಾಸಿಕ ಅವಕಾಶವನ್ನು ಕಳೆದುಕೊಂಡಿವೆ. ಮೋದಿ ಸರ್ಕಾರ ಮಹಿಳೆಯರಿಗೆ ಹಕ್ಕು ನೀಡುವ ಹೋರಾಟವನ್ನು ಮುಂದುವರಿಸುತ್ತದೆ. ಮಹಿಳಾ ಮೀಸಲಾತಿಯನ್ನು ಖಂಡಿತ ಜಾರಿಗೆ ತರುತ್ತೇವೆ’ ಎಂದಿದ್ದಾರೆ.

ಶಿವಸೇನೆ ನಾಯಕಿ ಚತುರ್ವೇದಿ ವಿಭಿನ್ನ ನಿಲುವು:

ಮಹಿಳಾ ಮೀಸಲಾತಿ ಮಸೂದೆ ಸೋಲು ಕಂಡಿದ್ದಕ್ಕೆ ಶಿವಸೇನೆ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ತಮ್ಮ ಪಕ್ಷದ ನಿಲುವಿಗಿಂತ ಭಿನ್ನವಾದ ಪ್ರತಿಕ್ರಿಯೆ ನೀಡಿದ್ದಾರೆ. ‘ಇಂದು ಭಾರತದ ಮಹಿಳೆಯರಿಗೆ ದುಃಖದ ದಿನ. ಸಂಸತ್ ಅಥವಾ ಶಾಸನಸಭೆಯಲ್ಲಿ ತಮ್ಮನ್ನು ಕಾಣುವ ಕನಸು ಹೊಂದಿದ್ದ ಮಹಿಳೆಯರಿಗೆ ಇದು ದುಃಖಕರ’ ಎಂದು ಟ್ವೀಟ್‌ ಮಾಡಿದ್ದಾರೆ. ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಮಸೂದೆಯನ್ನು ವಿರೋಧಿಸಿದ್ದರು.

ಮಹಿಳಾ ಮೀಸಲಾತಿ ಸೋಲಿಗೆ ವಿಪಕ್ಷಗಳ ಸಂಭ್ರಮ

ಸಂಸತ್‌ನಲ್ಲಿ ಬಹು ನಿರೀಕ್ಷಿತ ಮಹಿಳಾ ಮೀಸಲಾತಿಗೆ ಸೋಲಾಗಿರುವುದನ್ನು ವಿಪಕ್ಷಗಳು ಸಂಭ್ರಮಿಸಿವೆ. ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಸೇರಿ ಹಲವರು ಇದಕ್ಕೆ ಸಂತಸ ವ್ಯಕ್ತಪಡಿಸಿದ್ದು ‘ಇದು ವಿಪಕ್ಷಗಳಿಗೆ ಸಂದ ಜಯ’ ಎಂದಿದ್ದಾರೆ.

ಮಸೂದೆಗೆ ಸೋಲಾದ ಬಳಿಕ ಸಂಸತ್‌ ಆವರಣದಲ್ಲಿ ಈ ಬಗ್ಗೆ ಮಾತನಾಡಿದ ರಾಹುಲ್‌ ಗಾಂಧಿ, ‘ನಾನು ಹೇಳಿದಂತೆ ಈ ಮಸೂದೆ ಸಂವಿಧಾನದ ಮೇಲಿನ ದಾಳಿ ಮತ್ತು ನಾವು ಅದನ್ನು ಸೋಲಿಸಿದ್ದೇವೆ. ಇದು ಮಹಿಳಾ ಮೀಸಲಾತಿ ಬಿಲ್ ಅಲ್ಲ. ಬದಲಾಗಿ ಭಾರತದ ಚುನಾವಣಾ ವ್ಯವಸ್ಥೆ ಎಂದು ಹೇಳಿದ್ದೆವು. ಅದನ್ನು ನಾವು ನಿಲ್ಲಿಸಿದ್ದೇವೆ. ಇಡೀ ವಿಪಕ್ಷಗಳು ಇದಕ್ಕೆ ಬೆಂಬಲಿಸಿವೆ’ ಎಂದಿದ್ದಾರೆ.

ಇದರ ಜತೆಗೆ ‘ತಿದ್ದುಪಡಿ ಬಿಲ್‌ ಮುರಿದು ಬಿದ್ದಿದೆ. ಆದರೆ ಮಹಿಳೆಯರ ಹೆಸರಿನಲ್ಲಿ ಸಂವಿಧಾನ ಮುರಿಯಲು ಅಸಂವಿಧಾನಿಕ ತಂತ್ರ ಬಳಸಿದರು. ಭಾರತ ಅದನ್ನು ನೋಡಿದೆ. ಇಂಡಿಯಾ ಕೂಡ ಅದನ್ನು ನಿಲ್ಲಿಸಿದೆ’ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ ಮೋದಿ ಸರ್ಕಾರ ಮಹಿಳಾ ಮೀಸಲಾತಿಯನ್ನು ಮಂಡಿಸಿದ ರೀತಿ ಅದನ್ನು ಅಂಗೀಕರಿಸಲು ಅಸಾಧ್ಯವಾಗಿತ್ತು. ನಾವು ಇದನ್ನು ಎಂದಿಗೂ ಒಪ್ಪಲು ಸಾಧ್ಯವಿಲ್ಲ. ಇದು ದೇಶದ ಪ್ರಜಾಪ್ರಭುತ್ವ ಮತ್ತು ಅದರ ಸಮಗ್ರತೆಗೆ ಸಿಕ್ಕ ದೊಡ್ಡ ಗೆಲುವು’ ಎಂದಿದ್ದಾರೆ.

ಸ್ಟಾಲಿನ್‌ ಸಂತಸ:

ಮಹಿಳಾ ಮೀಸಲಾತಿ ಮಸೂದೆ ಸೋಲಿನ ಜತೆಗೆ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಕೇಂದ್ರ ಹಿಂದಕ್ಕೆ ಪಡೆದಿರುವುದಕ್ಕೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಸಂತಸ ವ್ಯಕ್ತಪಡಿಸಿದ್ದಾರೆ. ಮರುವಿಂಗಡಣೆ ಮಸೂದೆ ಪ್ರತಿಯನ್ನು ಸುಡುತ್ತಿರುವ ಫೋಟೋವನ್ನು ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ‘ತಮಿಳುನಾಡು ದೆಹಲಿಯನ್ನು ಸೋಲಿಸಿದೆ’ ಎಂದು ಬರೆದುಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ನಂಗೂ ಮೋದಿಗೂ ಹೆಂಡತಿ ಸಮಸ್ಯೆ ಇಲ್ಲ': ರಾಹುಲ್ ಗಾಂಧಿ | ಪ್ರಿಯಾಂಕಾ ನೋಡಿ ಕಲಿಯಿರಿ ಎಂದ ಶಾ
IPL 2026 Winner: ಈ ಬಾರಿ RCB ಕಪ್‌ ಗೆಲ್ಲತ್ತಾ?: ಟ್ಯಾರೋ ರೀಡರ್‌ ಭವಿಷ್ಯ ಕೇಳಿ ದಿಗ್ಭ್ರಮೆಗೊಂಡ ಕನ್ನಡಿಗರು!