
ನವದೆಹಲಿ (ಅ.3): ಚೆನ್ನೈ ಕಸ್ಟಮ್ಸ್ ಅಧಿಕಾರಿಗಳ "ನಿರಂತರ ಕಿರುಕುಳ"ವನ್ನು ಉಲ್ಲೇಖಿಸಿ, ಅಕ್ಟೋಬರ್ 1 ರಿಂದ ಭಾರತದಲ್ಲಿನ ಎಲ್ಲಾ ಆಮದು-ರಫ್ತು ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿರುವುದಾಗಿ ಘೋಷಿಸಿದ ವಿನ್ಟ್ರಾಕ್ ಇಂಕ್ ಆರೋಪಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿದೆ. ಎಲೆಕ್ಟ್ರಾನಿಕ್ ಗ್ಯಾಜೆಟ್ಗಳು, ಆರೋಗ್ಯ ರಕ್ಷಣೆ ಮತ್ತು ಜೀವನಶೈಲಿ ಉತ್ಪನ್ನಗಳ ಆಮದುದಾರರಾದ ವಿನ್ಟ್ರಾಕ್ ಇಂಕ್ ಬುಧವಾರ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡುವ ಮೂಲಕ ಭಾರತದಲ್ಲಿ ತನ್ನ ಕಾರ್ಯಾಚರಣೆ ನಿಲ್ಲಿಸಿರುವುದಾಗಿ ತಿಳಿಸಿದೆ. ಚೆನ್ನೈನ ಕಸ್ಟಮ್ಸ್ ಅಧಿಕಾರಿಗಳ ಲಂಚದ ಪ್ರಯತ್ನವನ್ನು ಬಹಿರಂಗ ಮಾಡಿದ್ದೆವು. ಈಗ ಈ ಅಧಿಕಾರಿಗಳು ಕಂಪನಿಯ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಆರೋಪ ಮಾಡಿದೆ.
"ಈ ವರ್ಷ ಎರಡು ಬಾರಿ ಅವರ ಲಂಚದ ಪದ್ಧತಿಗಳನ್ನು ಬಹಿರಂಗಪಡಿಸಿದ ನಂತರ, ಅವರು ಪ್ರತೀಕಾರ ತೀರಿಸಿಕೊಂಡರು, ನಮ್ಮ ಕಾರ್ಯಾಚರಣೆಗಳನ್ನು ಪರಿಣಾಮಕಾರಿಯಾಗಿ ದುರ್ಬಲಗೊಳಿಸಿದರು ಮತ್ತು ಭಾರತದಲ್ಲಿ ನಮ್ಮ ವ್ಯವಹಾರವನ್ನು ನಾಶಪಡಿಸಿದರು" ಎಂದು ಕಂಪನಿಯು ಎಕ್ಸ್ನಲ್ಲಿ ಬರೆದುಕೊಂಡಿದೆ. "ಈ ಕಷ್ಟದ ಸಮಯದಲ್ಲಿ ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ನಾವು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ." ಎಂದು ಬೇಸರದಲ್ಲಿ ಬರೆದಿದೆ.
ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು, ಹಣಕಾಸು ಸಚಿವಾಲಯವು ಗುರುವಾರ ಕಂದಾಯ ಇಲಾಖೆಗೆ (DoR) ನ್ಯಾಯಯುತ ಮತ್ತು ಪಾರದರ್ಶಕ ತನಿಖೆ ನಡೆಸುವಂತೆ ನಿರ್ದೇಶಿಸಿದೆ ಎಂದು ಹೇಳಿದೆ. "ವಿವರವಾದ ವಾಸ್ತವಿಕ ವಿಚಾರಣೆ ನಡೆಸಲು, ಸಂಬಂಧಪಟ್ಟ ಪಕ್ಷಗಳು, ಅಧಿಕಾರಿಗಳನ್ನು ಕೇಳಲು ಮತ್ತು ಎಲ್ಲಾ ಸಂಬಂಧಿತ ದಾಖಲೆ ಪುರಾವೆಗಳನ್ನು ಕೂಲಂಕಷವಾಗಿ ಪರಿಶೀಲಿಸಲು DoR ನ ಹಿರಿಯ ಅಧಿಕಾರಿಯನ್ನು ನಿಯೋಜಿಸಲಾಗಿದೆ" ಎಂದು ಸಚಿವಾಲಯ ಎಕ್ಸ್ ಪೋಸ್ಟ್ನಲ್ಲಿ ಬರೆದಿದೆ.
ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಉತ್ತೇಜಿಸಲು ಹಣಕಾಸು ಸಚಿವಾಲಯವು ತನ್ನ ವಿಶಾಲ ಬದ್ಧತೆಯನ್ನು ಪುನರುಚ್ಚರಿಸಿತು. ತೆರಿಗೆದಾರರ ಚಾರ್ಟರ್ ಪರಿಚಯ, ಫೇಸ್ಲೆಸ್ ಕಸ್ಟಮ್ಸ್ ಕಾರ್ಯವಿಧಾನಗಳು ಮತ್ತು ವಿವಾದ ಪರಿಹಾರಕ್ಕಾಗಿ ಮೇಲ್ಮನವಿ ಸಂಸ್ಥೆಗಳಂತಹ ಇತ್ತೀಚಿನ ಸುಧಾರಣೆಗಳನ್ನು ಅದು ಉಲ್ಲೇಖಿಸಿತು.
ಉದ್ಯಮಿ ಪ್ರವೀಣ್ ಗಣೇಶನ್ ಸ್ಥಾಪಿಸಿದ ವಿನ್ಟ್ರಾಕ್, ತನ್ನ ಹೇಳಿಕೆಯಲ್ಲಿ, ಕಂಪನಿಯು ಲಂಚ ಕೇಳುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ಆರೋಪಿಸಿದ ನಂತರ ಕಸ್ಟಮ್ಸ್ ಅಧಿಕಾರಿಗಳ ಕಿರುಕುಳ ತೀವ್ರಗೊಂಡಿದೆ ಎಂದು ಹೇಳಿಕೊಂಡಿದೆ. ನಿರ್ದಿಷ್ಟ ಅಧಿಕಾರಿಗಳು ಸುಲಿಗೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸಂಸ್ಥೆ ಆರೋಪಿಸಿದೆ ಮತ್ತು ತನ್ನ ದೂರಿನಲ್ಲಿ ವ್ಯಕ್ತಿಗಳನ್ನು ಸಹ ಹೆಸರಿಸಿದೆ.
ಕಂಪನಿಯ ಪ್ರಕಾರ, ಸುಮಾರು 6,993 ರೂ. ಮೌಲ್ಯದ ಒಂದು ಸಾಗಣೆಯನ್ನು 2.10 ಲಕ್ಷ ರೂ. ಲಂಚ ನೀಡಿದ ನಂತರವೇ ತೆರವುಗೊಳಿಸಲಾಯಿತು. ಲಂಚದ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಡಿಸ್ಕೌಂಟ್ ಕೂಡ ನೀಡುತ್ತಿದ್ದರು ಎಂದು ಗಣೇಶನ್ ಆರೋಪಿಸಿದ್ದರು. ಈ ವರ್ಷದ ಆರಂಭದಲ್ಲಿ ಈ ಪದ್ಧತಿಗಳನ್ನು ಬಹಿರಂಗಪಡಿಸಿದ ನಂತರ, ಉದ್ದೇಶಪೂರ್ವಕ ವಿಳಂಬ, ಸಾಗಣೆಯನ್ನು ತಡೆಹಿಡಿಯುವುದು ಮತ್ತು ನಿಯಂತ್ರಕ ಅನುಸರಣೆಯ ನೆಪದಲ್ಲಿ ಹೆಚ್ಚಿದ ಪರಿಶೀಲನೆಯ ರೂಪದಲ್ಲಿ ಪ್ರತೀಕಾರವನ್ನು ಅನುಸರಿಸಲಾಯಿತು ಎಂದು ಕಂಪನಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ