
ಪ್ರಾಣಿಗಳು ಮಾತನಾಡಲು ಬರದೇ ಹೋದರೂ ಬುದ್ಧಿವಂತಿಕೆಯಲ್ಲಿ ಮನುಷ್ಯರಿಗಿಂತ ಏನು ಕಡಿಮೆ ಇಲ್ಲ ಎಂದು ಹಲವು ಸಂದರ್ಭಗಳಲ್ಲಿ ಸಾಬೀತುಪಡಿಸಿವೆ. ಇದಕ್ಕೆ ವೈರಲ್ ಆಗಿರುವ ಪ್ರಾಣಿಗಳ ಹಲವು ವೀಡಿಯೋಗಳೇ ಸಾಕ್ಷಿ. ಅದೇ ರಿತಿ ಇಲ್ಲೊಂದು ಆನೆ ಸೋಲಾರ್ ಬೇಲಿಯನ್ನು ತನಗೆ ಕರೆಂಟ್ ಶಾಕ್ ಹೊಡೆಯದಂತೆ ಹೇಗೆ ಕೆಳಗೆ ಬೀಳಿಸಿ ದಾಟಿ ಹೋಗುತ್ತಿದೆ ನೋಡಿ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕಾಡಂಚಿನ ಗ್ರಾಮಗಳಲ್ಲಿ ಜನರು ಹಾಗೂ ಕಾಡುಪ್ರಾಣಿಗಳ ಸಂಘರ್ಷ ಇವತ್ತು ನಿನ್ನೆಯದಲ್ಲ, ನಗರೀಕರಣ ಹೆಚ್ಚಾಗುತ್ತಿದ್ದಂತೆ ಕಾಡುಪ್ರಾಣಿಗಳು ತಮ್ಮ ಆವಾಸಸ್ಥಾನ ಕಳೆದುಕೊಂಡು ನಾಡಿನತ್ತ ದಾಂಗುಡಿ ಇಡುತ್ತಿವೆ. ಜೊತೆಗೆ ರೈತರು ಬೆಳೆದ ಬೆಳೆಗಳನ್ನು ಹಾಳು ಮಾಡುತ್ತಿವೆ. ಇದೇ ಕಾರಣಕ್ಕೆ ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ತೋಟದಲ್ಲಿ ಸೋಲಾರ್ ಬೇಲಿ ಹಾಕುತ್ತಾರೆ. ಆದರೆ ಆನೆಯೊಂದು ನೀವು ಸೋಲಾರ್ ಬೇಲಿಯಾದ್ರೂ ಹಾಕಿ ಇನ್ನೇನೋ ಮಾಡಿ ಅದ್ಯಾವುದಕ್ಕೂ ನಾ ಕ್ಯಾರೇ ಮಾಡಲ್ಲ, ನಾನು ನಿಮ್ಮಗಿಂತಲೂ ಭಲೇ ಬುದ್ಧಿವಂತ ಅಂತ ಸಾಧಿಸಿ ತೋರಿಸಿದೆ. ಅದರ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬುದ್ಧಿವಂತರಾದ ಮನುಷ್ಯರಿಗೆ ಗೊತ್ತು, ಸೋಲಾರ್ ಬೇಲಿ ಮುಟ್ಟಿದ್ರೆ ಶಾಕ್ ಹೊಡಿಯುತ್ತೆ ಅಂತ. ಆದ್ರೆ ಆನೆಗೆ ಗೊತ್ತಾ? ಹೌದು ಗೊತ್ತು ಅಂತಿದೆ ಈ ಆನೆ. ವೀಡಿಯೋದಲ್ಲಿ ಆನೆಯೊಂದು ಸೋಲಾರ್ ಬೇಲಿಯನ್ನು ತನಗೆ ಶಾಕ್ ಹೊಡೆಯದಂತೆ ಬಹಳ ನಾಜೂಕಾಗಿ ಬಾಗಿಸಿ ಕೆಳಗೆ ಹಾಕಿ ಅದರ ಮೇಲಿಂದ ದಾಟಿ ಹೋಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗಜೇಂದ್ರನ ಬುದ್ಧಿವಂತಿಕೆಗೆ ನೋಡುಗರು ಅಚ್ಚರಿ ಪಡುತ್ತಿದ್ದಾರೆ.
ವೈರಲ್ ಆದ ವೀಡಿಯೋದಲ್ಲಿ ಆನೆಯೊಂದು ನಿಧಾನವಾಗಿ ಸೋಲಾರ್ ಕರೆಂಟ್ ಲೈನ್ ಇರುವ ಕಂಬವನ್ನು ಮುಂಭಾಗದ ಕಾಲಿನಿಂದ ತುಳಿದು ಕೆಳಗೆ ಬೀಳಿಸಿದೆ. ಮೊದಲಿಗೆ ಕರೆಂಟ್ ಹರಿಯುತ್ತಿರುವ ಕಂಬಿಗೆ ತನ್ನ ಸೊಂಡಿಲು ತಾಗದಂತೆ ಕೇವಲ ಕಂಬವನ್ನು ಸೊಂಡಿಲಿನಿಂದ ತಳ್ಳಿದೆ ಬಳಿಕ ಮುಂಭಾಗದ ಕಾಲಿನಿಂದ ತುಳಿದು ಸಂಪೂರ್ಣವಾಗಿ ಅಡ್ಡ ಮಲಗಿಸಿದೆ. ಬಳಿಕ ಆನೆ ನಿಧಾನವಾಗಿ ಅದನ್ನು ಸೊಂಡಿಲಿನಿಂದ ಎಳೆದು ಉಲ್ಟಾ ಮಗುಚಿ ಕೆಳಗೆ ಹಾಕಿದ್ದು, ಕೇವಲ ಕೆಲ ನಿಮಿಸದಲ್ಲಿ ಸೋಲಾರ್ ಬೇಲಿ ನೆಲಸಮವಾಗಿದೆ. ಇದಾದ ನಂತರ ಕರೆಂಟ್ ವಯರ್ಗಳು ತನ್ನ ದೇಹಕ್ಕೆ ತಾಕದಂತೆ ಅವುಗಳನ್ನು ದಾಟಿ ಮುಂದೆ ಹೋಗಿದೆ. ಈ ಸಂಪೂರ್ಣ ದೃಶ್ಯಾವಳಿ ಕ್ಯಾಮರಾದಲ್ಲಿ ಸರೆ ಆಗಿದ್ದು, ಇದೀಗ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಭಾರತದ ಅರಣ್ಯ ಸೇವೆಯ ಅಧಿಕಾರಿ ಪರ್ವಿನ್ ಕಸ್ವಾನ್ ಅವರು ಈ ವೀಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ಹಂಚಿಕೊಂಡ ಅವರು ಈ ಆನೆ ಭೌತಶಾಸ್ತ್ರದಲ್ಲಿ ಪ್ರವೀಣ. ಅದು ಎಷ್ಟು ಬುದ್ಧಿವಂತಿಕೆಯಿಂದ ವಿದ್ಯುತ್ ಬೇಲಿಯನ್ನು ತಟಸ್ಥಗೊಳಿಸಿದೆ ಎಂಬುದನ್ನು ನೋಡಿ ವಿಡಿಯೋ
ನಾವು ಅಂತಹ ಅನೇಕ ಘಟನೆಗಳನ್ನು ದಾಖಲಿಸಿದ್ದೇವೆ, ಶೀಘ್ರದಲ್ಲೇ ಅಧ್ಯಯನವನ್ನು ಪ್ರಕಟಿಸಲಾಗುವುದು ಎಂದು ಅವರು ಬರೆದುಕೊಂಡಿದ್ದಾರೆ. ವೀಡಿಯೋ ನೋಡಿದ ಅನೇಕರು ಆನೆಯ ಬುದ್ಧಿವಂತಿಕೆಗೆ ಬೆರಗಾಗಿದ್ದಾರೆ. ಈ ಆನೆ ಬುದ್ಧಿವವಂತಿಕೆಯಲ್ಲಿ ಎಲ್ಲರನ್ನು ಹಿಂದಿಕ್ಕಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಎಲ್ಲಾ ಕರೆಂಟ್ ತಂತಿಗಳು ಸಮತಟ್ಟಾಗಿವೆ ಎಂದು ಖಚಿತಪಡಿಸಿಕೊಳ್ಳಲು ನಾನಾದರೂ ಅದನ್ನು ತಲೆಕೆಳಗಾಗಿ ಮಾಡುತ್ತಿರಲಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಹೋ ದೇವರೆ ಈತ ಎಷ್ಟು ಬುದ್ಧಿವಂತ, ಇಂತಹ ಬುದ್ಧಿವಂತಿಕೆಯನ್ನು ಇವನಿಗೆ ಕಲಿಸಿದ್ದು ಯಾರು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಇದು ಯಾವ ಪ್ರದೇಶದಲ್ಲಿ ಸೆರೆಯಾದ ದೃಶ್ಯ ಎಂಬ ಬಗ್ಗೆ ಮಾಹಿತಿ ಇಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ