
ರಾಜತಾಂತ್ರಿಕ, ಆರ್ಥಿಕ, ಸೇನಾ ಬಲ ಬಳಸಿ ಜನಸಾಮಾನ್ಯರ ರಕ್ಷಣೆ
ನವದೆಹಲಿ (ಏ.4): ತೈಲಭರಿತ ಮಧ್ಯಪ್ರಾಚ್ಯವು ರಣರಂಗವಾಗಿರುವ ಮತ್ತು ಇಂಧನವು ಸಾಗಿ ಬರಬೇಕಿದ್ದ ಹೋರ್ಮುಜ್ ಜಲಸಂಧಿ ಬಂದ್ ಆಗಿರುವ ಕಾರಣ ಅನೇಕ ರಾಷ್ಟ್ರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹಲವು ಪಟ್ಟು ಹೆಚ್ಚಾಗಿದ್ದರೂ ಭಾರತದಲ್ಲಿ ಮಾತ್ರ ಅವುಗಳ ದರದಲ್ಲಿ ಬಹುತೇಕ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.
ದೇಶದ ತೈಲ ಬೇಡಿಕೆಯ ಶೇ.80, ಎಲ್ಪಿಜಿಯ ಶೇ.60ಕ್ಕೆ ವಿದೇಶದಿಂದ ಆಮದಾಗುತ್ತದೆ. ಇದರಲ್ಲಿ ಶೇ.90ರಷ್ಟು ಸಾಗಿಬರುವುದು ಹೋರ್ಮುಜ್ ಮೂಲಕ. ಅದರ ಮೇಲೆ ಇರಾನ್ ನಿರ್ಬಂಧ ವಿಧಿಸಿರುವ ಕಾರಣ ದೇಶದಲ್ಲಿ ತೈಲಾನಿಲದ ಕೊರತೆ ಕೊಂಚ ಮಟ್ಟಿಗೆ ಕಂಡುಬರುತ್ತಿದೆಯಾದರೂ ಅದರ ಬೆಲೆ ಏರಿಕೆ ಆಗದಂತೆ ಕಾಯ್ದಿರಿಸಿಕೊಳ್ಳಲಾಗಿದೆ.
ಈ ಸಂಕಷ್ಟದ ಸಮಯದಲ್ಲಿ ಭಾರತವು ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲಷ್ಟೇ ಅವಲಂಬಿತವಾಗುವ ಬದಲು, ಅನ್ಯ ದೇಶಗಳಿಂದ ಅದನ್ನು ತರಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದೆ. ಇದರ ಭಾಗವಾಗಿ ಅಮೆರಿಕ, ರಷ್ಯಾದಿಂದ ಆಮದು ಪ್ರಮಾಣವನ್ನು ಹೆಚ್ಚಿಸಿದೆ. ಅತ್ತ ಆಫ್ರಿಕಾ ಖಂಡದಿಂದ ತರಿಸಿಕೊಳ್ಳುವುದು ದುಬಾರಿಯಾದರೂ, ನೈಜೀರಿಯಾ ಮತ್ತು ಅಂಗೋಲಾದಿಂದ ಅಟ್ಲಾಂಟಿಕ್ ಸಾಗರದ ಮೂಲಕ ಇಂಧನ ತರಿಸಿಕೊಳ್ಳಲಾಯಿತು.
ಇಸ್ರೇಲ್ ಮತ್ತು ಅಮೆರಿಕ ಜತೆಗೆ ಭಾರತ ಉತ್ತಮ ಬಾಂಧವ್ಯ ಹೊಂದಿರುವ ಹೊರತಾಗಿಯೂ ಹೋರ್ಮುಜ್ ಮೂಲಕ ತನ್ನ 6 ನೌಕೆಗಳನ್ನು ತರಲು ಭಾರತ ಅನುಸರಿಸಿದ್ದು ರಾಜತಾಂತ್ರಿಕ ಮಾರ್ಗ. ಒಂದು ಕಡೆ ಭಾರತವು ಇರಾನ್ ಜತೆ ನಿರಂತರ ಸಂಪರ್ಕದಲ್ಲಿದ್ದರೆ, ಇತ್ತ ಯುದ್ಧನೌಕೆಗಳು ತೈಲ ಹೊತ್ತ ಹಡಗುಗಳಿಗೆ ಬೆಂಗಾವಲು ನೀಡಿ ಹೋರ್ಮುಜ್ ದಾಟಿಸಿದ್ದವು.
ಒಂದು ಕಡೆ 2 ತಿಂಗಳಿಗಾಗುವಷ್ಟು ಇಂಧನವನ್ನು ಶೇಖರಿಸಿಟ್ಟುಕೊಂಡಿರುವ ಭಾರತವು, ದೇಶೀಯವಾಗಿಯೂ ಎಲ್ಪಿಜಿ ಉತ್ಪಾದನೆಯನ್ನು ಶೇ.28ರಷ್ಟು ಹೆಚ್ಚಿಸಿದೆ. ಅತ್ತ ಒಟ್ಟು 2.9 ಲಕ್ಷ ಮನೆಗಳಿಗೆ ಪಿಎನ್ಜಿ ಸಂಪರ್ಕ ಕಲ್ಪಿಸಲಾಗಿದೆ.
ಆರ್ಥಿಕ ನೆರವು:
ಯುದ್ಧ ಆರಂಭದ ಬಳಿಕ ಕಚ್ಚಾತೈಲದ ಬೆಲೆಯಲ್ಲಿ ಶೇ.70ರಷ್ಟು ಏರಿಕೆಯಾಗಿದೆ. ಆದರೆ ಆಮದು ಸುಂಕ ಕಡಿತ ಮಾಡುವ ಮೂಲಕ ತೈಲ ಕಂಪನಿಗಳ ಮೇಲಿನ ಹೊರೆಯನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿತು. ಜೊತೆಗೆ ಈ ಹಿಂದೆ ತೈಲ ಬೆಲೆ ಇಳಿಕೆಯಾದಾಗ ತೈಲ ಕಂಪನಿಗಳು ಮಾಡಿಕೊಂಡಿದ್ದ 40000 ಕೋಟಿ ರು. ಲಾಭವನ್ನು ಇದೀಗ ಬಳಸುವ ಮೂಲಕ ತೈಲ ಕಂಪನಿಗಳು ದರ ಹೆಚ್ಚಳ ಮಾಡದಂತೆ ನೋಡಿಕೊಂಡಿತು. ಅಲ್ಲದೆ ಸರ್ಕಾರ ಕೂಡಾ ತೈಲ ಕಂಪನಿಗಳಿಗೆ 30000 ಕೋಟಿ ರು. ನೀಡುವ ಮೂಲಕ ಜನತೆಗೆ ಹೊರೆ ವರ್ಗಾವಣೆ ಆಗದಂತೆ ನೋಡಿಕೊಂಡಿತು.
ಬೇರೆ ದೇಶದ ಸ್ಥಿತಿ ಹೇಗಿದೆ?:
ಬ್ರೆಂಟ್ ತೈಲದ ಬೆಲೆಯಲ್ಲಿ ಶೇ.70ರಷ್ಟು ಏರಿಕೆ ಆಗಿದ್ದು, ಪ್ರತಿ ಬ್ಯಾರಲ್ಗೆ 70 ಡಾಲರ್ ಇದ್ದ ದರವೀಗ 120 ಡಾಲರ್ ಆಗಿದೆ. ಆಫ್ರಿಕನ್ ದೇಶಗಳಲ್ಲಿ ಇಂಧನದ ಬೆಲೆಯಲ್ಲಿ ಶೇ.30ರಿಂದ 50ರಷ್ಟು ಹೆಚ್ಚಾಗಿದ್ದು, ಐರೋಪ್ಯ ದೇಶಗಳಲ್ಲಿ ಅನಿಲದ ಬೆಲೆ ಶೇ.50ರಷ್ಟು ಹೆಚ್ಚಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ