
ನವದೆಹಲಿ (ಆ.26) ಬೆಂಗಳೂರಿನ ಕಂಟೆಂಟ್ ಮಾರ್ಕೆಟಿಂಗ್ ಕಂಪನಿಯೊಂದರ ಸಿಇಒ ಆಗಿರುವ ಅನುರಾಧಾ ತಿವಾರಿ ಎಂಬುವರು ‘ಬ್ರಾಹ್ಮಿನ್ ಜೀನ್ಸ್’ (ಬ್ರಾಹ್ಮಣ ವಂಶವಾಹಿ) ಎಂದು ‘ಎಕ್ಸ್’ನಲ್ಲಿ (ಟ್ವೀಟರ್) ತಮ್ಮದೊಂದು ಫೋಟೋ ಪೋಸ್ಟ್ ಮಾಡಿರುವುದು ಇಂಟರ್ನೆಟ್ ಲೋಕದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಈ ಪೋಸ್ಟ್ 55 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, ಸಾವಿರಾರು ಲೈಕ್, ರೀಪೋಸ್ಟ್ ಮತ್ತು ಕಮೆಂಟ್ಗಳನ್ನು ಆಕರ್ಷಿಸಿದೆ. ‘ಬ್ರಾಹ್ಮಣರಾಗಿರುವುದಕ್ಕೆ ಹೆಮ್ಮೆ ಪಡಬೇಕು’ ಎಂಬರ್ಥದ ಈ ಪೋಸ್ಟ್ಗೆ ಸಾವಿರಾರು ಜನರು ಬೆಂಬಲ ವ್ಯಕ್ತಪಡಿಸಿದ್ದರೆ, ಇದು ‘ಜಾತಿವಾದಿ ಮನಸ್ಥಿತಿಯನ್ನು ತೋರುವ ಪೋಸ್ಟ್’ ಎಂದು ಅಷ್ಟೇ ಸಂಖ್ಯೆಯ ಜನರು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ.
ತಮ್ಮ ‘ಬ್ರಾಹ್ಮಿನ್ಜೀನ್ಸ್’ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಇನ್ನೊಂದು ಪೋಸ್ಟ್ ಮಾಡಿರುವ ಅನುರಾಧಾ, ಯಾವುದೇ ಮೀಸಲಾತಿ ಹಾಗೂ ಉಚಿತಗಳನ್ನು ಪಡೆಯದೆ ಕಷ್ಟಪಟ್ಟು ಮೇಲೆ ಬಂದ ನಮ್ಮ ಸಮುದಾಯದವರು ತಾವು ಬ್ರಾಹ್ಮಣರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದು ಸಮರ್ಥಿಸಿಕೊಂಡಿದ್ದಾರೆ.
ಅನೇಕರು ಈಕೆಯ ಪೋಸ್ಟನ್ನು ಶೇರ್ ಮಾಡಿ, ತಾವು ಜನಿವಾರ ಹಾಕಿಕೊಂಡಿರುವ ಅಥವಾ ಬ್ರಾಹ್ಮಣರೆಂದು ಬಿಂಬಿಸಿಕೊಳ್ಳುವ ಫೋಟೋಗಳನ್ನು ಪೋಸ್ಟ್ ಮಾಡಿ ಬೆಂಬಲ ಸೂಚಿಸಿದ್ದಾರೆ.
‘ಬ್ರಾಹ್ಮಣ ಎಂಬ ಒಂದು ಪದ ಹೇಳಿದ ಕೂಡಲೇ ಕೀಳರಿಮೆಯುಳ್ಳ ಜೀವಿಗಳೆಲ್ಲ ತಮ್ಮಲ್ಲಿರುವ ನಿಜವಾದ ಜಾತಿವಾದಿ ಮನಸ್ಥಿತಿಯನ್ನು ಹೊರಹಾಕುತ್ತಿವೆ. ನಾವು ಮೀಸಲಾತಿ, ಉಚಿತ ಯಾವುದನ್ನೂ ಪಡೆಯುವುದಿಲ್ಲ. ಎಲ್ಲವನ್ನೂ ಕಷ್ಟಪಟ್ಟು ಗಳಿಸಿದ್ದೇವೆ. ನಮ್ಮದು ಹೆಮ್ಮೆಯ ಪರಂಪರೆಯೆಂದು ಹೇಳಿಕೊಳ್ಳಲು ನಮಗೆ ಎಲ್ಲಾ ಹಕ್ಕಿದೆ. ಡೀಲ್ ವಿತ್ ಇಟ್’ ಎಂದು ತಿವಾರಿ ಇನ್ನೊಂದು ಪೋಸ್ಟ್ ಮಾಡಿದ್ದಾರೆ.
‘ಬ್ರಾಹ್ಮಣರು ಇಂದು ತಮ್ಮ ಪೂರ್ಣ ಹೆಸರು ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಅಷ್ಟೊಂದು ದ್ವೇಷವನ್ನು ನಮ್ಮ ವಿರುದ್ಧ ಹರಡಲಾಗಿದೆ. ಸಾಮಾಜಿಕ ನ್ಯಾಯ ಹೋರಾಟಗಾರರು ಹಾಗೂ ರಾಜಕಾರಣಿಗಳು ನಮ್ಮನ್ನು ವಿಲನ್ಗಳನ್ನಾಗಿ ಮಾಡಿದ್ದಾರೆ. ನಾವು ಯಾರಿಗೂ ತೊಂದರೆ ಮಾಡಿಲ್ಲ. ನಮಗೆ ಸರ್ಕಾರದಿಂದ ಯಾವ ಸಹಾಯವೂ ಸಿಗುವುದಿಲ್ಲ. ಕಷ್ಟಪಟ್ಟು ಕೆಲಸ ಮಾಡಿ ಮೇಲೆ ಬಂದಿದ್ದೇವೆ. ಹಾಗಿರುವಾಗ ನಮ್ಮ ಜಾತಿಯ ಬಗ್ಗೆ ನಾವೇಕೆ ನಾಚಿಕೆ ಪಡಬೇಕು’ ಎಂದು ತಿವಾರಿ ಇನ್ನೂ ಒಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ