
ನವದೆಹಲಿ (ಜೂ.07): ಈ ಬಾರಿ ಕೇಂದ್ರದಲ್ಲಿ ರಚನೆಯಾಗಲಿರುವ ಸಮ್ಮಿಶ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರ ಪಾಲಿಗೆ ತಂತಿಯ ಮೇಲಿನ ನಡಿಗೆಯಾಗಬಹುದು ಎಂಬ ವಿಶ್ಲೇಷಣೆಗಳ ನಡುವೆಯೇ, ಹಿಂದಿನ ಮೋದಿ ಸರ್ಕಾರದ ಪ್ರಮುಖ ಯೋಜನೆಯೊಂದಕ್ಕೆ ಮೈತ್ರಿಕೂಟದ ಪಕ್ಷಗಳಿಂದ ಅಪಸ್ವರ ಕೇಳಿಬಂದಿದೆ. ಹೊಸ ಸರ್ಕಾರ ರಚನೆಯಲ್ಲಿ ಅತ್ಯಂತ ಪ್ರಮುಖವಾಗಿರುವ ಜೆಡಿಯು ಮತ್ತು ಎಲ್ಜೆಪಿ ಪಕ್ಷಗಳು ಸರ್ಕಾರ ರಚನೆಗೆ ಮುನ್ನವೇ ಅಗ್ನಿವೀರ್ ಯೋಜನೆ ಬಗ್ಗೆ ಕ್ಯಾತೆ ತೆಗೆದಿವೆ.
ಸೇನೆಗೆ ಯೋಧರನ್ನು ಅಲ್ಪಾವಧಿಗೆ ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಬಹುಚರ್ಚಿತ ಅಗ್ನಿವೀರ್ ಯೋಜನೆಗೆ ಸಮಾಜದ ಹಲವು ವಲಯಗಳಲ್ಲಿ ವಿರೋಧವಿದೆ. ಹೀಗಾಗಿ ಯೋಜನೆ ಕುರಿತು ಪುನರ್ ಪರಿಶೀಲನೆ ನಡೆಸುವುದು ಸೂಕ್ತ. ಯೋಜನೆಯಲ್ಲಿ ಏನೇನು ಲೋಪದೋಷ ಇದೆ ಎಂದು ಪರಿಶೀಲಿಸಿ ಅವುಗಳನ್ನು ಸರಿಪಡಿಸಬೇಕು ಎಂದು ಜೆಡಿಯು ನಾಯಕ ಕೆ.ಸಿ.ತ್ಯಾಗಿ ಮತ್ತು ಎಲ್ಜೆಪಿ ನಾಯಕ ಚಿರಾಗ್ ಪಾಸ್ವಾನ್ ಹೇಳಿದ್ದಾರೆ. ಅಲ್ಲದೆ ಇಂಡಿಯಾ ಮೈತ್ರಿಕೂಟ ಬಹುವಾಗಿ ಪ್ರತಿಪಾದಿಸಿದ್ದ ಜಾತಿಗಣತಿಗೆ ಬೆಂಬಲವಿದೆ ಎಂದು ಉಭಯ ಪಕ್ಷಗಳು ಹೇಳಿವೆ.
ಚನ್ನಪಟ್ಟಣಕ್ಕೆ ಡಿಕೆಸು ನಿಲ್ಲಿಸುವ ಚಿಂತನೆಯಿಲ್ಲ: ಡಿ.ಕೆ.ಶಿವಕುಮಾರ್
ವಿಶೇಷವೆಂದರೆ, ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಅಗ್ನಿವೀರ್ ಯೋಜನೆ ರದ್ದು ಮತ್ತು ದೇಶವ್ಯಾಪಿ ಜಾತಿಗಣತಿ ಪರ ಇದೆ. ಇನ್ನೊಂದೆಡೆ ಬಿಜೆಪಿ ಈ ಅಗ್ನಿವೀರ್ ಪರ ಮತ್ತು ಜಾತಿ ಗಣತಿಗೆ ವಿರುದ್ಧವಿತ್ತು. ಅದರ ಬೆನ್ನಲ್ಲೇ ಇದೀಗ ಎನ್ಡಿಎ ಕೂಟದ ಎರಡು ಪಕ್ಷಗಳು ವಿಪಕ್ಷಗಳ ಅಜೆಂಡಾವನ್ನು ಬೆಂಬಲಿಸಿ ಮಾತನಾಡಿವೆ.ಇದೇ ವೇಳೆ ಬಿಜೆಪಿಯ ಇತರೆ ಪ್ರಮುಖ ವಿಷಯಗಳಾದ ಏಕರೂಪ ನಾಗರಿಕ ಸಂಹಿತೆ ಮತ್ತು ಒಂದು ದೇಶ, ಒಂದು ಚುನಾವಣೆ ಯೋಜನೆಗಳ ಕುರಿತು ನಮಗೆ ಯಾವುದೇ ಆಕ್ಷೇಪ ಇಲ್ಲ ಎಂದು ತ್ಯಾಗಿ ಹೇಳಿದ್ದಾರೆ.ಜೆಡಿಯು ಈಗಾಗಲೇ ಲೋಕಸಭೆಯ ಸ್ಪೀಕರ್ ಸ್ಥಾನ, ಕೃಷಿ, ಗ್ರಾಮೀಣಾಭಿವೃದ್ಧಿ, ರೈಲ್ವೆ, ಹಣಕಾಸು ಖಾತೆಗೆ ಮತ್ತು ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯಕ್ಕೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ