ಗಡಿಯಲ್ಲಿ BSF ಯೋಧರು ಬಿರಿಯಾನಿ ತಿಂದು ಮಲಗಿದ್ದಾರಾ? ಬಾಂಗ್ಲಾ ನುಸುಳುವಿಕೆ ಆರೋಪಕ್ಕೆ ಒವೈಸ್ ಕೆಂಡ!

By Suvarna NewsFirst Published Oct 22, 2022, 4:18 PM IST
Highlights

ಬಾಂಗ್ಲಾದೇಶದಿಂದ ಒಳನುಸುಳುವಿಕೆ ಹೆಚ್ಚಾಗುತ್ತಿದೆ ಅನ್ನೋ ಆರೋಪ ಹಲವು ವರ್ಷಗಳಿಂದ ಕೇಳಿಬರುತ್ತಿದೆ.  ಇದೀಗ ಅಸಾದುದ್ದೀನ್ ಓವೈಸಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಮುಸ್ಲಿಮ್ ಜನಸಂಖ್ಯೆ ನಿಯಂತ್ರಿಸಲು ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ. ಇಷ್ಟೇ ಅಲ್ಲ ಗಡಿಯಲ್ಲಿನ ಯೋಧರನ್ನೇ ಒವೈಸಿ ಪ್ರಶ್ನಿಸಿದ್ದಾರೆ.

ನವದೆಹಲಿ(ಅ.22): ಭಾರತದಲ್ಲಿ ಜನಸಂಖ್ಯಾ ಅಸಮತೋಲನ ಹೆಚ್ಚಾಗುತ್ತಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದರು. ಇತ್ತೀಚೆಗೆ ಮತ್ತೊರ್ವ ಆರ್‌ಎಸ್‌ಎಸ್ ನಾಯಕ ದತ್ತಾತ್ರೆಯ ಹೊಸಬಾಳೆ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ. ಇದೇ ವೇಳೆ ಬಾಂಗ್ಲಾದೇಶದಿಂದ ಭಾರತಕ್ಕೆ ಒಳನುಸುಳುವಿಕೆ ಹೆಚ್ಚಾಗುತ್ತಿದೆ. ಇದು ಕೂಡ ಜನಸಂಖ್ಯಾ ಅಸಮತೋಲನಕ್ಕೆ ಕಾರಣವಾಗಿದೆ ಎಂದಿದ್ದಾರೆ. ಈ ಮಾತಿಗೆ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೆರಳಿ ಕೆಂಡವಾಗಿದ್ದಾರೆ. ಮುಸ್ಲಿಮರ ಸಂಖ್ಯೆ ನಿಯಂತ್ರಿಸಲು ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ. ಬಾಂಗ್ಲಾದೇಶದಿಂದ ಒಳನುಸುಳುತ್ತಿದ್ದಾರೆ ಅಂದರೆ ಗಡಿಯಲ್ಲಿ ಬಿಎಸ್‌ಎಫ್ ಜವಾನರು ಬಿರಿಯಾನಿ ತಿಂದು ಮಲಗಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಇದೀಗ ವಿವಾದಕ್ಕೆ ಕಾರಣಾಗಿದೆ.

ಗಡಿಯಲ್ಲಿ ಯೋಧರು ಹದ್ದಿನ ಕಣ್ಣಿಟ್ಟಿದ್ದರೆ ಒಳನುಸುಳುವಿಕೆ ಹೇಗೆ ಸಾಧ್ಯ? ಒಂದ ದೇಶದಿಂದ ಮತ್ತೊಂದು ದೇಶಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ಜನರು ಆಗಮಿಸಲು ಸಾಧ್ಯವೇ? ಹೀಗಾಗುತ್ತಿದೆ ಅಂದರೆ ಯೋಧರು ಮಲಗಿದ್ದಾರೆ ಎಂದರ್ಥ ಎಂದು ಒವೈಸಿ ಹೇಳಿದ್ದಾರೆ. 

 

ನಮ್ಮ ಹಿಜಾಬ್‌, ಗಡ್ಡ ಕೊನೆಗೆ ನಾವು ಆಡುವ ಕ್ರಿಕೆಟ್‌ ಬಗ್ಗೆಯೂ ನಿಮಗೆ ದ್ವೇಷವಿದೆ: ಓವೈಸಿ!

ಅತಿ ಹೆಚ್ಚು ಕಾಂಡೋಂ ಬಳಕೆ ಮುಸ್ಲಿಮರಿಂದ: ಒವೈಸಿ
ಸಮುದಾಯ ಆಧರಿತ ಜನಸಂಖ್ಯಾ ಅಸಮತೋಲನವನ್ನು ಕಡೆಗಣಿಸಬಾರದು. ಇಂಥ ಅಸಮತೋಲನವು ಭೌಗೋಳಿಕ ಗಡಿಗಳನ್ನೇ ಬದಲಿಸಬಹುದು’ ಎಂಬ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ಹೇಳಿಕೆಯನ್ನು ಎಐಎಂಐಎಂ ಪಕ್ಷದ ನಾಯಕ ಅಸಾದುದ್ದೀನ್‌ ಒವೈಸಿ ತೀವ್ರವಾಗಿ ಖಂಡಿಸಿದ್ದಾರೆ. ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿಲ್ಲ. ಈ ಬಗ್ಗೆ ಯಾವುದೇ ಆತಂಕಕ್ಕೆ ಒಳಗಾಗಬೇಡಿ. ನಮ್ಮ ಜನಸಂಖ್ಯೆ ಕುಸಿತವಾಗುತ್ತಿದೆ. ಮುಸ್ಲಿಂ ಸಮುದಾಯದಲ್ಲಿ ಮಕ್ಕಳ ಜನನ ಪ್ರಮಾಣ ಕುಂಠಿತವಾಗುತ್ತಿದೆ. ಎರಡು ಮಕ್ಕಳ ನಡುವೆ ಯಾರು ಹೆಚ್ಚು ಅಂತರ ಕಾಪಾಡಿಕೊಳ್ಳುತ್ತಿದ್ದಾರೆ ಎಂಬುದು ನಿಮಗೆ ಗೊತ್ತೇ? ಯಾರು ಹೆಚ್ಚಾಗಿ ಕಾಂಡೋಂ ಬಳಸುತ್ತಾರೆ ಗೊತ್ತೇ? ನಿಮ್ಮ ಗಮನಕ್ಕಿರಲಿ ಎಂದು ಒವೈಸಿ ತಿರುಗೇಟು ನೀಡಿದ್ದರು.

 

ನಮ್ ಮಕ್ಳು ಹಿಜಾಬ್ ಹಾಕ್ತಾರೆ ನೀವು ಬಿಕಿನಿ ಹಾಕ್ಕೊಳ್ಳಿ, ಬಿಜೆಪಿ ವಿರುದ್ಧ ಓವೈಸಿ ವಾಗ್ದಾಳಿ!

ಜನಸಂಖ್ಯಾ ನಿಯಂತ್ರಣಕ್ಕೆ ದೇಶಾದ್ಯಂತ ಕೂಗು
ಭಾರತ ಜನಸಂಖ್ಯೆ ವಿಶ್ವದಲ್ಲೇ ನಂ.1 ಆಗಲಿದೆ ಎಂಬ ವಿಶ್ವಸಂಸ್ಥೆಯ ವರದಿಯ ಬೆನ್ನಲ್ಲೇ ದೇಶಾದ್ಯಂತ ಜನಸಂಖ್ಯೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಮತ್ತೆ ಪ್ರತಿಧ್ವನಿಸಿದೆ. ಎಲ್ಲಾ ಪಕ್ಷಗಳು ಒಂದಾಗಿ ಜನಸಂಖ್ಯೆ ನಿಯಂತ್ರಣದ ಅರಿವು ಮೂಡಿಸಬೇಕು ಎಂದು ಬಿಜೆಪಿ ಕರೆ ನೀಡಿದೆ.

ಜನಸಂಖ್ಯೆ ನಿಯಂತ್ರಣದ ಬಗ್ಗೆ ಪಕ್ಷಾತೀತವಾಗಿ ಸಾಮಾನ್ಯ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಎಲ್ಲರೂ ಈ ನಿಟ್ಟಿನಲ್ಲಿ ಒಗ್ಗೂಡಿ ಒಂದೇ ದಿಕ್ಕಿನಲ್ಲಿ ಪ್ರಯಾಣಿಸಬೇಕು. ದೇಶದಲ್ಲಿ ಉಂಟಾಗಿರುವ ಜನಸಂಖ್ಯಾ ಸ್ಫೋಟ ಎಂಬ ಭೂತ ಭಾರತ ವಿಶ್ವಗುರುವಾಗುವುದನ್ನು ತಡೆಯುತ್ತಿದೆ. ನಾವು ಈ ವಿಷಯವನ್ನು ಧರ್ಮ, ಜಾತಿ ಆಧರಿಸಿ ನೋಡಬಾರದು. ಒಂದು ದೇಶದ ಸಮಸ್ಯೆಯಾಗಿ ನೋಡಬೇಕು ಎಂದು ಬಿಜೆಪಿ ಹೇಳಿದೆ. ದೇಶದಲ್ಲಿ ಜನಸಂಖ್ಯಾ ಅಸಮತೋಲನ ಉಂಟಾಗಲು ಬಿಡಬಾರದು. ಕುಟುಂಬ ನಿಯಂತ್ರಣ, ಜನಸಂಖ್ಯಾ ಸ್ಥಿರೀಕರಣ ವಿಷಯಗಳು ಕಡ್ಡಾಯವಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

click me!