
ನವದೆಹಲಿ: ನರೇಂದ್ರ ಮೋದಿಯೇ ನಮ್ಮ ಸಂಸದೀಯ ನಾಯಕ ಎಂದು ಎನ್ಡಿಎ (NDA) ಘೋಷಣೆ ಮಾಡಿಕೊಂಡಿದ್ದು, ಜೂನ್ 8ರಂದು ಸರ್ಕಾರ ರಚನೆ ಮಾಡಲು ಮುಂದಾಗಿದೆ. ಇತ್ತ ಐಎನ್ಡಿಐಎ ಒಕ್ಕೂಟ (INDIA Bloc) ತನ್ನ ಮಿತ್ರ ಪಕ್ಷಗಳ ಜೊತೆಯಲ್ಲಿ ಸಭೆ ಮಾಡಿದೆ. ಈ ಸಭೆ ಬಳಿಕ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Congress President Mallikarjun Kharge), ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಪರೋಕ್ಷವಾಗಿ ತಾವು ಸರ್ಕಾರ ರಚನೆ ಮಾಡುವ ಪ್ರಯತ್ನದಿಂದ ಹಿಂದೆ ಸರಿಯುವ ಸುಳಿವನ್ನು ಪರೋಕ್ಷವಾಗಿ ನೀಡಿದ್ದಾರಾ ಎಂಬ ಚರ್ಚೆಗಳು ಶುರುವಾಗಿವೆ. ನರೇಂದ್ರ ಮೋದಿ (Narendra Modi) ನೇತೃತ್ವದ ಬಿಜೆಪಿಯ ಸರ್ವಾಧಿಕಾರ ಆಡಳಿತದ ವಿರುದ್ಧ ನಮ್ಮ ಐಎನ್ಡಿಐಎ ಒಕ್ಕೂಟದ ಹೋರಾಟ ಮುಂದುವರಿಯಲಿದೆ ಎಂದು ಹೇಳಿಕೆ ನೀಡಿದ್ದಾರೆ. ತಾವು ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವ ಸುಳಿವು ನೀಡಿದ್ದಾರೆ ಎನ್ನಲಾಗುತ್ತಿದೆ.
ಐಎನ್ಡಿಐಎ ಕೂಟದಿಂದ ನಿರ್ಧಾರ ಪ್ರಕಟ
ಇಂದಿನ ರಾಜಕೀಯ ಸ್ಥಿತಿಗತಿ ಮತ್ತು ಅಂಕಿ ಅಂಶಗಳ ಬಗ್ಗೆ ಸುಮಾರು ಎರಡು ಗಂಟೆಗಳ ಕಾಲ ನಾವೆಲ್ಲರೂ ಸುದೀರ್ಘವಾಗಿ ಚರ್ಚೆ ನಡೆಸಿದ್ದೇವೆ. ನಾವೆಲ್ಲರೂ ಒಂದಾಗಿ ಒಂದು ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ನಮ್ಮ ಮೈತ್ರಿಕೂಟಕ್ಕೆ ಬೆಂಬಲ ನೀಡಿದ ದೇಶದ ಜನರಿಗೆ ಎಲ್ಲರ ಪರವಾಗಿ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಬಿಜೆಪಿಯ ದ್ವೇಷ ಮತ್ತು ಭ್ರಷ್ಟಾಚಾರದ ರಾಜಕಾರಣಕ್ಕೆ ದೇಶದ ಜನತೆ ತಕ್ಕ ಉತ್ತರ ನೀಡಿದ್ದಾರೆ. ಹಣದುಬ್ಬರ, ನಿರುದ್ಯೋಗ, ಬಂಡವಾಳ ಕ್ರೋಢೀಕರಣ, ಸಂವಿಧಾನ ರಕ್ಷಿಸಲು ಹಾಗೂ ಪ್ರಜಾಪ್ರಭುತ್ವ ರಕ್ಷಣೆಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಸರ್ವಾಧಿಕಾರ ಆಡಳಿತದ ವಿರುದ್ಧ ನಮ್ಮ ಐಎನ್ಡಿಐಎ ಒಕ್ಕೂಟದ ಹೋರಾಟ ಮುಂದುವರಿಯಲಿದೆ ಎಂದು ಹೇಳಿಕೆ ನೀಡಿದ್ದಾರೆ.
'ಯಾರ್ ಬರ್ತೀರೋ ಬನ್ನಿ..' ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗೆ ಇಂಡಿ ಮೈತ್ರಿಗೆ ಸ್ವಾಗತ ಎಂದ ಖರ್ಗೆ!
ಭವಿಷ್ಯದಲ್ಲಿ ಬಿಜೆಪಿ ಆಡಳಿತ ನಡೆಸಬಾರದು ಎಂದು ಜನತೆ ನಿರ್ಧರಿಸಿದ್ದಾರೆ. ಈ ಎಲ್ಲಾ ವಿಷಯ ಗಮನದಲ್ಲಿಟ್ಟುಕೊಂಡು ಜನರ ಆಶೋತ್ತರಗಳನ್ನು ಈಡೇರಿಸಲು ಸೂಕ್ತಕ್ರಮಕೈಗೊಳ್ಳುತ್ತೇವೆ. ಇದು ನಮ್ಮ ನಿರ್ಧಾರವಾಗಿದ್ದು, ನಾವು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಭರವಸೆಯ ಮಾತುಗಳನ್ನಾಡಿದರು.
ಸಂಖ್ಯಾ ಬಲಾಬಲ ಹೀಗಿದೆ
ಐಎನ್ಡಿಐಎ ಬ್ಲಾಕ್ಗೆ 234 ಸ್ಥಾನಗಳನ್ನು ಗೆದ್ದಿದೆ. ಎನ್ಡಿಎ 292 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ನಿತೀಶ್ ಕುಮಾರ್ ಮತ್ತು ಎನ್ ಚಂದ್ರಬಾಬು ನಾಯ್ಡು ಎನ್ಡಿಎ ಸಭೆಯಲ್ಲಿ ಭಾಗಿಯಾಗಿದ್ದು, ತಮ್ಮ ಬೆಂಬಲವನ್ನು ಬಿಜೆಪಿಗೆ ಘೋಷಿಸಿದ್ದಾರೆ. ಇತ್ತ ಐಎನ್ಡಿಐಎ ಇಬ್ಬರು ನಾಯಕರನ್ನು ಸಂಪರ್ಕಿಸಿತ್ತು ಎಂದು ವರದಿಯಾಗಿದೆ. ತಲಾ ಒಂದು ಮತ್ತು ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಸಂಸದರ ಬೆಂಬಲವನ್ನು ಸಹ ಬಿಜೆಪಿ ಕೇಳಿದೆಯಂತೆ. ಹಾಗಾಗಿ ಎನ್ಡಿಎ ಕೂಟ ಬಲ ಮತ್ತಷ್ಟು ಹೆಚ್ಚಾಗಬಹುದು ಎಂಬ ರಾಜಕೀಯ ವಿಶ್ಲೇಷಣೆಗಳು ಕೇಳಿ ಬಂದಿವೆ.
ನಾಡಿದ್ದು ಮೋದಿ 3.0 ಪ್ರಮಾಣ?: ಬಿಜೆಪಿಗೆ ಟಿಡಿಪಿ, ಜೆಡಿಯು ಬೆಂಬಲ ಘೋಷಣೆ
18ನೇ ಲೋಕಸಭಾ ಚುನಾವಣೆಯಲ್ಲಿ 240 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ (BJP) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ (Congress) 99 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದು, ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಲು ಪ್ರಯತ್ನಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ