
ಮುಂಬೈ (ನ.25) : ‘ನಾವು ರಕ್ತ ಕೊಡಲು ಸಿದ್ಧರಿದ್ದೇವೆ. ಆದರೆ ಮಹಾರಾಷ್ಟ್ರದ ಜತ್ ತಾಲೂಕಿನ ಒಂದಿಂಚು ಜಾಗವನ್ನೂ ಬಿಟ್ಟುಕೊಡುವುದಿಲ್ಲ. ಮಹಾರಾಷ್ಟ್ರದ ಸಾರ್ವಭೌಮತೆ ಮತ್ತು ಏಕತೆಯನ್ನು ಸದಾ ಕಾಪಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದ್ದಾರೆ. ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಗ್ರಾಮಗಳು ಕರ್ನಾಟಕಕ್ಕೆ ಸೇರಬೇಕು ಎಂದು ಹೇಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಈ ಮಾತುಗಳನ್ನಾಡಿದರು.
ಇದೇ ವೇಳೆ, ‘ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಕೋರ್ಟಿನಲ್ಲಿದೆ. ಇದರ ನಡುವೆ ಈ ಕುರಿತಾಗಿ ಎರಡೂ ರಾಜ್ಯಗಳ ರಾಜ್ಯಪಾಲರ ನಡುವೆ ಮಾತುಕತೆಗಳೂ ಸಹ ನಡೆದಿವೆ. ಈ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ಸಿದ್ಧವಾಗಿದೆ. ಮಧ್ಯಸ್ಥಿಕೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಇಚ್ಛೆ ನಮ್ಮದು. ವಿವಾದ ಬೆಳೆಸಿ ಜಟಿಲ ಮಾಡಲು ಇಷ್ಟವಿಲ್ಲ’ ಎಂದು ನುಡಿದರು.
ಗಡಿ ವಿವಾದ ಕುರಿತು ಮುಂದಿನ ವಾರ ಸರ್ವಪಕ್ಷ ಸಭೆ: ಸಿಎಂ ಬೊಮ್ಮಾಯಿ
‘ಜತ್ ತಾಲೂಕಿನಲ್ಲಿರುವ ಗ್ರಾಮಗಳ ಬೇಡಿಕೆ 2012ರಿಂದಲೂ ಇದೆ. ಆ ಸಮಯದಲ್ಲಿ ಈ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇತ್ತು. ಹೀಗಾಗಿ ಅವು ಕರ್ನಾಟಕ ಸೇರುವ ಎಚ್ಚರಿಕೆ ನೀಡಿದ್ದವು. ಆದರೆ ಇದಾದ ಬಳಿಕ ನಾವು ಈ ಸಮಸ್ಯೆಯನ್ನು ಪರಿಹರಿಸಲು ಯುದ್ಧೋಪಾದಿಯಲ್ಲಿ ಬಹಳಷ್ಟುಯೋಜನೆಗಳನ್ನು ಕೈಗೊಂಡಿದ್ದೇವೆ. ನೀರಾವರಿ ಸೇರಿದಂತೆ ಹಲವು ಯೋಜನೆಗಳನ್ನು ನಾವು ಜಾರಿ ಮಾಡಿದ್ದೇವೆ. ಈಗ ಪ್ರತ್ಯೇಕತೆ ಬೇಡಿಕೆ ಇಲ್ಲ. ಕೇವಲ ನೀರಿನ ಕಾರಣಕ್ಕೆ ಯಾವ ಗ್ರಾಮವೂ ಕರ್ನಾಟಕದ ಪಾಲಾಗುವುದಕ್ಕೆ ನಾವು ಬಿಡುವುದಿಲ್ಲ’ ಎಂದರು.
ಜತ್ನ ನೀರಿನ ಸಮಸ್ಯೆ ಈಗ ಬಗೆಹರಿಸಿದ್ದೇವೆ
ನೀರಿನ ಸಮಸ್ಯೆ ಇದ್ದುದರಿಂದ ಜತ್ ತಾಲೂಕಿನ ಕೆಲ ಗ್ರಾಮಗಳು 2012ರಲ್ಲಿ ಕರ್ನಾಟಕ ಸೇರುವ ಎಚ್ಚರಿಕೆ ನೀಡಿದ್ದವು. ನಂತರ ಸಮಸ್ಯೆ ಬಗೆಹರಿಸಿದ್ದೇವೆ. ಈಗ ಪ್ರತ್ಯೇಕತೆ ಬೇಡಿಕೆ ಇಲ್ಲ. ಕೇವಲ ನೀರಿನ ಕಾರಣಕ್ಕೆ ಯಾವ ಗ್ರಾಮವೂ ಕರ್ನಾಟಕದ ಪಾಲಾಗಲು ನಾವು ಬಿಡುವುದಿಲ್ಲ.
- ಏಕನಾಥ್ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ