Waqf Bill 2025ರ ಬಗ್ಗೆ ಚರ್ಚಿಸದ ರಾಗಾ, ಪ್ರಿಯಾಂಕಾ ವಿರುದ್ಧಕೇರಳ ಮುಸ್ಲಿಂ ಪತ್ರಿಕೆ ಕಿಡಿ!

ವಕ್ಫ್ ಮಸೂದೆ ತಿದ್ದುಪಡಿ ಚರ್ಚೆಯಲ್ಲಿ ಭಾಗವಹಿಸದ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ 'ಸುಪ್ರಭಾತಂ' ಪತ್ರಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ನಾಯಕರ ಗೈರುಹಾಜರಿಯು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.


ತಿರುವನಂತಪುರಂ (ಏ.5): ಸಂಸತ್ತಿನಲ್ಲಿ ವಕ್ಫ್ ಮಸೂದೆ ತಿದ್ದುಪಡಿ ವಿಧೇಯಕದ ಮೇಲಿನ ಚರ್ಚೆಯಲ್ಲಿ ಭಾಗವಹಿಸದ ಕೇರಳದ ವಯನಾಡು ಕ್ಷೇತ್ರದ ಪ್ರಸ್ತುತ ಸಂಸದೆ ಪ್ರಿಯಾಂಕಾ ಗಾಂಧಿ ಹಾಗೂ ಇದೇ ಕ್ಷೇತ್ರವನ್ನು ಮೊದಲು ಪ್ರತಿನಿಧಿಸಿದ್ದ ಮಾಜಿ ಸಂಸದ ರಾಹುಲ್ ಗಾಂಧಿ ಅವರ ವಿರುದ್ಧ ಸ್ಥಳೀಯ ಪತ್ರಿಕೆಯೊಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ವಿಷಯವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ವಿಶೇಷವಾಗಿ ಮುಸ್ಲಿಂ ಸಮುದಾಯದ ಮುಖವಾಣಿಯಾಗಿ ಪರಿಗಣಿತವಾಗಿರುವ 'ಸುಪ್ರಭಾತಂ' ಪತ್ರಿಕೆಯ ಸಂಪಾದಕೀಯದಲ್ಲಿ ಈ ಇಬ್ಬರು ಪ್ರಮುಖ ಕಾಂಗ್ರೆಸ್ ನಾಯಕರನ್ನು ತರಾ ಸಾರಿದೆ.

ಪತ್ರಿಕೆಯ ಸಂಪಾದಕೀಯದಲ್ಲಿ ಹೇಳಿರುವ ಪ್ರಕಾರ, ವಯನಾಡು ಕ್ಷೇತ್ರದ ಜನರು ತಮ್ಮ ಸಂಸದೆ ಪ್ರಿಯಾಂಕಾ ಗಾಂಧಿ ಅವರಿಂದ ದೊಡ್ಡ ನಿರೀಕ್ಷೆಗಳನ್ನು ಹೊಂದಿದ್ದರು. ಆದರೆ, ಅವರು ಪಕ್ಷದ ವಿಪ್ ಆದೇಶವನ್ನು ಉಲ್ಲಂಘಿಸಿ, ಸಂಸತ್ತಿನಲ್ಲಿ ನಡೆದ ವಕ್ಫ್ ಮಸೂದೆ ತಿದ್ದುಪಡಿ ವಿಧೇಯಕದ ಚರ್ಚೆಯಲ್ಲಿ ಭಾಗವಹಿಸದೆ ಗೈರು ಹಾಜರಾಗಿದ್ದರು. ಇದು ಅವರ ರಾಜಕೀಯ ಜೀವನದಲ್ಲಿ ಒಂದು ಕಳಂಕವಾಗಿ ಉಳಿಯಲಿದೆ. ಈ ಮಹತ್ವದ ಮಸೂದೆಯ ಚರ್ಚೆ ಸಂದರ್ಭದಲ್ಲಿ ಅವರು ಎಲ್ಲಿದ್ದರು ಎಂಬ ಪ್ರಶ್ನೆ ಶಾಶ್ವತವಾಗಿ ಕಾಡುತ್ತದೆ.

Latest Videos

ಇದನ್ನೂ ಓದಿ:  ವಕ್ಫ್‌ ಹಗರಣ ವರದಿ ಮಾಡಿದ್ದ ಅನ್ವರ್‌ ಮಾಣಿಪ್ಪಾಡಿಗೆ ಬೆದರಿಕೆ

 

ಅಲ್ಲದೆ, ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರ ಬಗ್ಗೆಯೂ ಪತ್ರಿಕೆ ಆಕ್ಷೇಪ ವ್ಯಕ್ತಪಡಿಸಿದೆ. 'ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವಂತಹ ಈ ಮಸೂದೆಯ ಬಗ್ಗೆ ರಾಹುಲ್ ಗಾಂಧಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಅಥವಾ ಚರ್ಚೆಯಲ್ಲಿ ಭಾಗವಹಿಸಲಿಲ್ಲ. ಇದು ಅವರ ನಾಯಕತ್ವದ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ,' ಎಂದು ಸಂಪಾದಕೀಯದಲ್ಲಿ ತಿಳಿಸಲಾಗಿದೆ.

ವಕ್ಫ್ ಮಸೂದೆ ತಿದ್ದುಪಡಿ ವಿಧೇಯಕವು ಮುಸ್ಲಿಂ ಸಮುದಾಯದ ಆಸ್ತಿ ನಿರ್ವಹಣೆಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳನ್ನು ತರುವ ಗುರಿಯನ್ನು ಹೊಂದಿದ್ದು, ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರ ಗೈರುಹಾಜರಿ ಸಮುದಾಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಪತ್ರಿಕೆ ವಿಶ್ಲೇಷಿಸಿದೆ. ಈ ಘಟನೆಯು ವಯನಾಡು ಕ್ಷೇತ್ರದ ಜನಪ್ರತಿನಿಧಿಗಳ ಬದ್ಧತೆಯ ಕುರಿತು ಚರ್ಚೆಗೆ ದಾರಿ ಮಾಡಿಕೊಟ್ಟಿದೆ ಎಂದು ಸ್ಥಳೀಯ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Waqf Amendment Bill 2025: ಮೋದಿ ಜಿಂದಾಬಾದ್: ಸಂತ್ರಸ್ತ ಕೇರಳ ಕೈಸ್ತರ ಘೋಷಣೆ

ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಈ ಟೀಕೆಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಈ ವಿವಾದವು ಕೇರಳದ ರಾಜಕೀಯ ವಲಯದಲ್ಲಿ ಮತ್ತು ಕಾಂಗ್ರೆಸ್ ಪಕ್ಷದ ಒಳಗೆ ಹೊಸ ಚರ್ಚೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಅವರಿಂದ ಯಾವುದೇ ಸ್ಪಷ್ಟನೆ ಬರುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

click me!