ರಾಜೀನಾಮೆ ಶಾಕ್ ಬಳಿಕ ಮನಬಿಚ್ಚಿ ಮಾತನಾಡಿದ ಸಿಎಂ ವಿಜಯ್ ರೂಪಾನಿ!

By Suvarna NewsFirst Published Sep 11, 2021, 5:56 PM IST
Highlights
  • ಗುಜರಾತ್ ಸಿಎಂ ವಿಜಯ್ ರೂಪಾನಿ ದಿಢೀರ್ ರಾಜೀನಾಮೆ
  • ಗುಜರಾತ್‌ನಲ್ಲಿ ರಾಜಕೀಯ ಬೆಳವಣಿಗೆ, ಮೊದಲ ವಿಕೆಟ್ ಪತನ ಎಂದ ಪ್ರತಿಪಕ್ಷ
  • ಶಾಕಿಂಗ್ ರಾಜೀನಾಮೆ ಬಳಿಕ ರೂಪಾನಿ ಮಾಧ್ಯಮಕ್ಕೆ ಪ್ರತಿಕ್ರಿಯೆ

ಗುಜರಾತ್(ಸೆ.11):  ಪ್ರಧಾನಿ ನರೇಂದ್ರ ಮೋದಿ ಭದ್ರ ಕೋಟೆ ಗುಜರಾತ್‌ನಲ್ಲಿ ಮತ್ತೊಂದು ಬಾರಿ ರಾಜಕೀಯ ಬೆಳವಣಿಗೆಯಾಗಿದೆ. ಹೈಕಮಾಂಡ್ ಆದೇಶದಂತೆ ಮುಖ್ಯಮಂತ್ರಿ ವಿಜಯ್ ರೂಪಾನಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದಿಢೀರ್ ಬೆಳವಣಿಗೆ ಸ್ವತಃ ವಿಜಯ್ ರೂಪಾನಿಗೂ ಅಚ್ಚರಿ ತಂದಿದೆ. ರಾಜೀನಾಮೆ ಬಳಿಕ ರೂಪಾನಿ ಮನಬಿಚ್ಚಿ ಮಾತನಾಡಿದ್ದಾರೆ. 

ಮೋದಿ ತವರಲ್ಲಿ ರಾಜಕೀಯ ಬೆಳವಣಿಗೆ; ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ!

ಬಿಜೆಪಿ ಪಕ್ಷದ ನಿಯಮ ಹಾಗೂ ಶಿಸ್ತಿನಂತೆ ನಡೆದುಕೊಂಡಿದ್ದೇನೆ. ಗುಜರಾತ್‌ ಅಭಿವೃದ್ಧಿ ಹೊಸ ನಾಯಕತ್ವದಡಿಯಲ್ಲಿ ಮುಂದುವರಿಯಲಿದೆ. ಹೊಸ ನಾಯಕ, ಹೊಸ ಆಲೋಚನೆ, ಹೊಸ ಉತ್ಸಾಹದೊಂದಿದೆ ಗುಜರಾತ್ ಮುನ್ನಡೆಯಲಿದೆ.  ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಾಜೀನಾಮೆ ನೀಡಿದ್ದೇನೆ ಎಂದು ರೂಪಾನಿ ಹೇಳಿದ್ದಾರೆ.

ಪಕ್ಷ ಕಾರ್ಯಕರ್ತನಾಗಿದ್ದ ನನಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಅಧಿಕಾರ ನೀಡಿದ ನನ್ನ ಪಕ್ಷಕ್ಕೆ ಸದಾ ಚಿರಋಣಿಯಾಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನ, ಪ್ರೋತ್ಸಾಹ, ಬೆಂಬಲದಿಂದ ಆಡಳಿತ ನಡೆಸಿದ್ದೇನೆ. ಪಕ್ಷ ಹೇಳುವ ಜವಾಬ್ದಾರಿ ನಿರ್ವಹಿಸಲು ನನ್ನಂತ ಪ್ರತಿಯೊಬ್ಬ ಕಾರ್ಯಕರ್ತ ಸಜ್ಜಾಗಿದ್ದಾನೆ. ಅದರಂತೆ ನಡೆದುಕೊಂಡಿದ್ದೇನೆ ಎಂದು ರೂಪಾನಿ ಹೇಳಿದ್ದಾರೆ.

ಹಿಂದೂ ಹೆಣ್ಮಕ್ಕಳ ತಂಟೆಗೆ ಬಂದ್ರೆ ಹುಷಾರ್, ಗೋಹಂತಕರಿಗೂ ನೆಮ್ಮದಿ ಇಲ್ಲ: ಗುಡುಗಿದ ಸಿಎಂ!

ಸಿಎಂ ಸ್ಥಾನದಿಂದ ರಾಜೀನಾಮೆ ನೀಡಿದ್ದೇನೆ. ಇದೀಗ ಹೊಸ ಜವಾಬ್ದಾರಿ ನೀಡಿದರೆ ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತೇನೆ. ಮೋದಿ ಸಲಹೆ, ಪಕ್ಷದ ಸೂಚನೆಯಂತೆ ಮುನ್ನಡೆಯುತ್ತೇನೆ ಎಂದು ವಿಜಯ್ ರೂಪಾನಿ ಹೇಳಿದ್ದಾರೆ.

 ಮೋದಿ ಪ್ರಧಾನಿಯಾದ ಬಳಿಕ ಇದೀಗ ಗುಜರಾತ್ 3ನೇ ಸಿಎಂ ಕಾಣುತ್ತಿದೆ. ಆನಂದಿ ಬೆನ್ ಪಟೇಲ್ ರಾಜೀನಾಮೆ ಬಳಿಕ ವಿಜಯ ರೂಪಾನಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ರೂಪಾನಿ ಕೂಡ ರಾಜೀನಾಮೆ ನೀಡಿದ್ದಾರೆ. 

ಮುಂದಿನ ಮುಖ್ಯಮಂತ್ರಿ ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ. ರೂಪಾನಿ ರಾಜೀನಾಮೆ ಹಿಂದೆ ಮುಂಬರುವ ವಿಧಾನಾ ಸಭಾ ಚುನಾವಣೆ ಲೆಕ್ಕಾಚಾರ ಅಡಗಿದೆ ಅನ್ನೋ ಮಾತುಗಳು ಜೋರಾಗಿ ಕೇಳಿಬರುತ್ತಿದೆ.  ಜೈನ ಸಮುದಾಯಕ್ಕೆ ಸೇರಿದ ರೂಪಾನಿ ಗುಜರಾತ್‌ನಲ್ಲಿ ಕೇವಲ 2 ಶೇಕಡಾ ಜನಸಂಖ್ಯೆಯನ್ನು ಪ್ರತಿನಿಧಿಸುತ್ತಾರೆ. ಗುಜರಾತ್‌ನಲ್ಲಿ ಮುಂಬರುವ ಚುನಾವಣೆ ಗೆಲ್ಲಲು ಪ್ರಮುಖ ಸಮುದಾಯವಾಗಿರುವ ಪಟೇಲ್ ಸಮುದಾಯಕ್ಕೆ ಸಿಎಂ ಸ್ಥಾನ ನೀಡಿದರೆ ಮಾತ್ರ ಸಾಧ್ಯ ಅನ್ನೋದು ರಾಜಕೀಯ ಲೆಕ್ಕಾಚಾರವಾಗಿದೆ.

click me!