ವಿವೇಕಾನಂದರ 1893ರ ಚಿಕಾಗೋ ಭಾಷಣಕ್ಕೆ 128 ವರ್ಷ: 9/11ರ ದಾಳಿಗಳಿಗೂ ಪರಿಹಾರಗಳಿವೆ ಎಂದ ಮೋದಿ!

By Suvarna NewsFirst Published Sep 11, 2021, 4:04 PM IST
Highlights

* ವಿವೇಕಾನಂದರ 1893ರ ಚಿಕಾಗೋ ಐತಿಹಾಸಿಕ ಭಾಷಣ ಸ್ಮರಿಸಿದ ಮೋದಿ

* ವಿವೇಕಾನಂದರ ಭಾಷಣದಲ್ಲಿ 9/11ರ ದಾಳಿಗಳಿಗೂ ಪರಿಹಾರಗಳಿವೆ ಎಂದ ಪಿಎಂ

* ಮಹಾಪುರುಷನಿಗೆ ನಮನ ಎಂದ ಎಚ್‌ಡಿಕೆ

ನವದೆಹಲಿ(ಸೆ.11): ಪ್ರಧಾನಿ ನರೇಂದ್ರ ಮೋದಿ 1893 ರಲ್ಲಿ ಅಮೆರಿಕದ ಚಿಕಾಗೋ ನಗರದಲ್ಲಿ ನಡೆದ ವಿಶ್ವ ಧರ್ಮ ಸಂಸತ್‌ನಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ್ದ ಐತಿಹಾಸಿಕ ಭಾಷಣವನ್ನು ಸ್ಮರಿಸಿದ್ದಾರೆ. ಈ ಬಗ್ಗೆ ಉಲ್ಲೇಖಿಸಿರುವ ಪಿಎಂ ಮೋದಿ ಸಮೃದ್ಧ, ನ್ಯಾಯನಿಷ್ಠ ಹಾಗೂ ಬಹುಸಂಸ್ಕೃತಿಯನ್ನು ಒಳಗೊಂಡಿರುವ ಜಗತ್ತನ್ನು ಸೃಷ್ಟಿಸುವ ಸಾಮರ್ಥ್ಯ ವಿವೇಕಾನಂದರ ಚಿಕಾಗೋ ಭಾಷಣಕ್ಕಿದೆ ಎಂದಿದ್ದಾರೆ.

ಅಹ್ಮದಾಬಾದ್ ನ ಸರ್ದಾರ್ ಧಾಮ್ ಭವನವನ್ನು ಉದ್ಘಾಟಿಸಿ ಮಾತನಾಡಿರುವ ಅವರು, 9/11 ದಿನ ಇದು. ವಿಶ್ವದ ಇತಿಹಾಸದಲ್ಲಿ ಮಾನವೀಯತೆಯ ಮೇಲೆ ನಡೆದ ದಾಳಿ ಎಂದೇ ಈ ದಿನವನ್ನು ನೆನಪಿಸಿಕೊಳ್ಳಲಾಗುತ್ತದೆ. ಆದರೆ, ಇದೇ ದಿನಾಂಕ ಮಾನವೀಯ ಮೌಲ್ಯಗಳ ಬಗ್ಗೆಯೂ ನಮಗೆ ಪಾಠ ಕಲಿಸಿದೆ. ಭಾಷಣದಲ್ಲಿ ವಿವೇಕಾನಂದ ಅವರು ಮಾನವೀಯತೆ ಮೌಲ್ಯಗಳ ಬಗ್ಗೆ ಇಡೀ ವಿಶ್ವಕ್ಕೆ ಪಾಠ ಹೇಳಿದ್ದರು. 1893ರಲ್ಲಿ ಇದೇ ದಿನ ಸ್ವಾಮಿ ವಿವೇಕಾನಂದ ಅವರು ಚಿಕಾಗೋದಲ್ಲಿ ಐಸಿಹಾಸಿಕ ಭಾಷಣ ಮಾಡಿದ ದಿನ ಎಂದು ಹೇಳಿದ್ದಾರೆ. 

Recalling Swami Vivekananda’s iconic 1893 speech at Chicago, which beautifully demonstrated the salience of Indian culture. The spirit of his speech has the potential to create a more just, prosperous and inclusive planet. https://t.co/1iz7OgAWm3

— Narendra Modi (@narendramodi)

ಈ ಬಗ್ಗೆ ಟ್ವೀಟ್ ಮಾಡಿರುವ ನರೇಂದ್ರ ಮೋದಿ 'ಸ್ವಾಮಿ ವಿವೇಕಾನಂದರ 1893ರ ಚಿಕಾಗೋ ಭಾಷಣವು ಭಾರತೀಯ ಸಂಸ್ಕೃತಿಯ ಉತ್ಕೃಷ್ಟತೆಯನ್ನು ಸುಂದರವಾಗಿ ಪ್ರದರ್ಶಿಸಿತ್ತು. ಅವರ ಭಾಷಣವು ಸಮೃದ್ಧ, ನ್ಯಾಯನಿಷ್ಠ ಹಾಗೂ ಬಹುಸಂಸ್ಕೃತಿಯನ್ನು ಒಳಗೊಂಡಿರುವ ಜಗತ್ತನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ವಿವೇನಂದರ ಭಾಷಣ ಹಿಂದೂ ಧರ್ಮ, ಭಾರತೀಯ ಸಂಸ್ಕೃತಿಯ ಬಗ್ಗೆ ಸುದೀರ್ಘವಾಗಿ ಸಾರಿದೆ. ಇದೇ ಕಾರಣದಿಂದ ಈ ಭಾಷಣ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಅವರ ಅಂದಿನ ಆ ಭಾಷಣವೂ ಈಗಲೂ ಪ್ರತಿಧ್ವನಿಸುತ್ತಿದೆ ಎಂದಿದ್ದಾರೆ. 

ನಮ್ಮೆಲ್ಲರ ಆತ್ಮಪ್ರಜ್ಞೆಯಾದ ಸ್ವಾಮಿ ವಿವೇಕಾನಂದರಿಗೆ ಶಿರ ಸಾಷ್ಟಾಂಗ ನಮಸ್ಕಾರಗಳು ಹಾಗೂ ನಾವೆಲ್ಲರೂ ಆ ಮಹಾಪುರುಷನ ಹೆಜ್ಜೆಗಳಲ್ಲಿ ಮುನ್ನಡೆಯೋಣ. (3/3)

— H D Kumaraswamy (@hd_kumaraswamy)

ಇತ್ತ ಕರ್ನಾಟಕ ಮಾಜಿ ಸಿಎಂ ಕೂಡಾ ಈ ಬಗ್ಗೆ ಟ್ವೀಟ್ ಮಾಡಿದ್ದು, ಮಹಾಪುರುಷನಿಗೆ ನಮನ ಸಲ್ಲಿಸಿದ್ದಾರೆ. ಅವರು ತಮ್ಮ ಟ್ವೀಟ್‌ನಲ್ಲಿ 1893ರ ಸೆಪ್ಟೆಂಬರ್ 11ರಂದು ಅಮೇರಿಕಾದ ಚಿಕಾಗೊ ನಗರದಲ್ಲಿ ನಡೆದ ಧರ್ಮ ಸಂಸತ್‌ನಲ್ಲಿ  ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ತಮ್ಮ ಐತಿಹಾಸಿಕ ಭಾಷಣ ಮಾಡಿ ಇಂದಿಗೆ 128 ವರ್ಷಗಳು. ವಿಭಿನ್ನ ಜಾತಿ, ಮತಗಳ ಮಾನವ ಸಂಕುಲವನ್ನು ಒಂದೇ ಗೂಡಿನಲ್ಲಿ ಪೋಷಿಸುತ್ತಿರುವ ಭಾರತವನ್ನು ಪ್ರತಿನಿಧಿಸಿದ್ದ ವಿವೇಕಾನಂದರ ಅಂದಿನ ನುಡಿಮುತ್ತುಗಳು ಭಾರತೀಯರಲ್ಲಿ ಸ್ವಾಭಿಮಾನ, ಸಹಿಷ್ಣುತೆಯ ಪ್ರಜ್ಞೆಯನ್ನು ಬಡಿದೆಬ್ಬಿಸಿದ್ದವು. ನಮ್ಮೆಲ್ಲರ ಆತ್ಮಪ್ರಜ್ಞೆಯಾದ ಸ್ವಾಮಿ ವಿವೇಕಾನಂದರಿಗೆ ಶಿರ ಸಾಷ್ಟಾಂಗ ನಮಸ್ಕಾರಗಳು ಹಾಗೂ ನಾವೆಲ್ಲರೂ ಆ ಮಹಾಪುರುಷನ ಹೆಜ್ಜೆಗಳಲ್ಲಿ ಮುನ್ನಡೆಯೋಣ ಎಂದಿದ್ದಾರೆ.

click me!