ಅಮೆರಿಕದ ಯಂತ್ರ ತುಂಡಾಗಿ ಕಾರ್ಯಾಚರಣೆ ಸ್ಥಗಿತ: ಕಾರ್ಮಿಕರ ರಕ್ಷಣೆಗೆ ಇಂದಿನಿಂದ ಮನುಷ್ಯರಿಂದಲೇ ಅಗೆತ!

By Anusha KbFirst Published Nov 26, 2023, 7:21 AM IST
Highlights

ಉತ್ತರಾಖಂಡದ ಸಿಲ್‌ಕ್ಯಾರಾ ಬೆಟ್ಟದಲ್ಲಿ ಸುರಂಗದೊಳಗೆ ಕಾರ್ಮಿಕರನ್ನು ಹೊರತೆಗೆಯಲು ಪೈಪ್‌ ಅಳವಡಿಸುವುದಕ್ಕೆ ಸುರಂಗ ಕೊರೆಯುತ್ತಿದ್ದ ಅಮೆರಿಕದ ಆಗರ್‌ ಯಂತ್ರದ ಬ್ಲೇಡ್‌ಗಳು ಲೋಹದ ಗರ್ಡರ್‌ಗೆ ತಗುಲಿ ಶುಕ್ರವಾರ ಸಂಜೆ ತುಂಡಾಗಿವೆ. ಹೀಗಾಗಿ ಆಗರ್‌ ಯಂತ್ರ ನಿಷ್ಪ್ರಯೋಜಕವಾಗಿದ್ದು, ರಕ್ಷಣಾ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ.

ಉತ್ತರಕಾಶಿ: ಉತ್ತರಾಖಂಡದ ಸಿಲ್‌ಕ್ಯಾರಾ ಬೆಟ್ಟದಲ್ಲಿ ಸುರಂಗದೊಳಗೆ 14 ದಿನಗಳಿಂದ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ನಡೆಸುತ್ತಿರುವ ಹರಸಾಹಸಕ್ಕೆ ಈವರೆಗಿನ ಅತ್ಯಂತ ಕಠಿಣ ಸವಾಲು ಈಗ ಎದುರಾಗಿದೆ. ಕಾರ್ಮಿಕರನ್ನು ಹೊರತೆಗೆಯಲು ಪೈಪ್‌ ಅಳವಡಿಸುವುದಕ್ಕೆ ಸುರಂಗ ಕೊರೆಯುತ್ತಿದ್ದ ಅಮೆರಿಕದ ಆಗರ್‌ ಯಂತ್ರದ ಬ್ಲೇಡ್‌ಗಳು ಲೋಹದ ಗರ್ಡರ್‌ಗೆ ತಗುಲಿ ಶುಕ್ರವಾರ ಸಂಜೆ ತುಂಡಾಗಿವೆ. ಹೀಗಾಗಿ ಆಗರ್‌ ಯಂತ್ರ ನಿಷ್ಪ್ರಯೋಜಕವಾಗಿದ್ದು, ರಕ್ಷಣಾ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ.

ಹೀಗಾಗಿ ಇನ್ನು 2 ಆಯ್ಕೆಗಳು ರಕ್ಷಣಾ ತಂಡಗಳ ಮುಂದಿವೆ. ಮೊದಲನೆಯದಾಗಿ ಈಗ ಅಡ್ಡಲಾಗಿ ಸುರಂಗ ಕೊರೆದು ಕಾರ್ಮಿಕರು ಇರುವ ಸ್ಥಳ ತಲುಪಲು ಇನ್ನು 10-12 ಮೀ. ಬಾಕಿ ಇದ್ದು, ಮನುಷ್ಕರು ಕೈಗಳಿಂದಲೇ ಸುರಂಗ ಕೊರೆಯಬೇಕು. ಎರಡನೆಯದಾಗಿ ಗುಡ್ದದ ಮೇಲಿಂದ 86 ಮೀ.ನಷ್ಟು ಲಂಬವಾಗಿ ರಂಧ್ರ ಕೊರೆದು ಕಾರ್ಮಿಕರು ಇರುವ ಸ್ಥಳ ತಲುಪಬೇಕು. ಹೀಗಾಗಿ ಕಾರ್ಮಿಕರ ರಕ್ಷಣೆಗೆ ಇನ್ನೂ ಕೆಲವು ದಿನ ಅಥವಾ ಕೆಲವು ವಾರಗಳೇ ಬೇಕಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಮಸ್ಯೆ ಏನು?:

ಕಾರ್ಮಿಕರು ಸುರಂಗದ ದ್ವಾರದಿಂದ 57 ಮೀಟರ್‌ ಒಳಗೆ ಸಿಲುಕಿದ್ದಾರೆ. ಆ ಪೈಕಿ 45 ಮೀಟರ್‌ವರೆಗೆ ಅಗೆದು ರಕ್ಷಣಾ ಪೈಪ್‌ ಅಳವಡಿಸಲಾಗಿತ್ತು. ಪೂರ್ತಿ ಕೊರೆದಾದ ಮೇಲೆ ರಕ್ಷಣಾ ಪೈಪ್‌ನೊಳಗೆ ಸ್ಟ್ರೆಚರ್‌ ಮೇಲೆ ಕಾರ್ಮಿಕರನ್ನು ಮಲಗಿಸಿ ಹೊರಗೆಳೆಯುವ ಯೋಜನೆ ರೂಪಿಸಲಾಗಿತ್ತು. ಹೀಗಾಗಿ 45 ಮೀ.ನಿಂದ ಮುಂದೆ ಕೊರೆಯಲು ಶುಕ್ರವಾರ ಸಂಜೆ ಅಮೆರಿಕದ ಆಗರ್‌ ಯಂತ್ರದ ಮೂಲಕ ಕಾರ್ಯಾಚರಣೆ ಆರಂಭಿಸಲಾಗಿತ್ತು. ಆದರೆ ಕೆಲಸ ಆರಂಭಿಸಿದ ಕೆಲವೇ ಸಮಯದಲ್ಲಿ ಅದರ ಬ್ಲೇಡ್‌ ತುಂಡಾಗಿ ಪೈಪ್‌ನೊಳಗೆ ಸಿಲುಕಿದೆ. ಸುಮಾರು 30 ಮೀಟರ್‌ ಉದ್ದದ ಯಂತ್ರವೀಗ ಪೈಪ್‌ನೊಳಗೆ ಸಿಲುಕಿದ್ದು, ಅದರಲ್ಲಿ 21.5 ಮೀ.ನಷ್ಟು ಭಾಗವನ್ನು ಹೊರಗೆ ತೆಗೆಯಲಾಗಿದೆ. ಇನ್ನುಳಿದ ಭಾಗವನ್ನು ಹೊರತೆಗೆಯಲು ಹೈದರಾಬಾದ್‌ನಿಂದ ಕಟರ್‌ ತರಿಸಲಾಗಿದೆ. ಅದು ಶನಿವಾರ ಸಂಜೆ ಸಿಲ್‌ಕ್ಯಾರಾ ತಲುಪಿದ್ದು, ಭಾನುವಾರದ ಬೆಳಗಿನ ಹೊತ್ತಿಗೆ ಅಮೆರಿಕದ ಆಗರ್‌ ಯಂತ್ರದ ಅವಶೇಷವನ್ನು ಪೂರ್ತಿ ತೆಗೆಯುವ ನಿರೀಕ್ಷೆಯಿದೆ.

ಸುರಂಗ ಕುಸಿದು ಒಳಗೆ ಸಿಲುಕಿದ 40 ಕಾರ್ಮಿಕರು: ಯಮುನೋತ್ರಿಗೆ ಸಂಪರ್ಕ ಕಲ್ಪಿಸುವ ಸುರಂಗ

ಬಳಿಕ ಮನುಷ್ಯರಿಂದ ಅಡ್ಡ ಸುರಂಗ ಕೊರೆತ ಆರಂಭವಾಗಬಹುದು. ಅಥವಾ ಇದನ್ನು ನಿಲ್ಲಿಸಿ ಬೆಟ್ಟದ ಮೇಲಿನಿಂದ ಲಂಬವಾಗಿ ರಕ್ಷಣಾ ಸುರಂಗ ಕೊರೆತ ಆರಂಭವಾಗಬಹುದು. ಬಾರ್ಡರ್‌ ರೋಡ್‌ ಆರ್ಗನೈಸೇಷನ್‌ನ ಸುಮಾರು 20 ಯೋಧರು ಇದನ್ನು ಕೈಗಳಿಂದಲೇ ಕೊರೆಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಸ್ಥಳದಲ್ಲೇ ಇದ್ದು ರಕ್ಷಣಾ ಕಾರ್ಯದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಕ್ರಿಸ್‌ಮಸ್ ವೇಳೆ ರಕ್ಷಣೆ ಆಗಬಹುದು: ಡಿಕ್ಸ್

ಉತ್ತರಕಾಶಿ: ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ಯಾವುದೇ ಕಾಲಮಿತಿ ಹಾಕಿಕೊಳ್ಳಲು ಆಗದು ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ಹೇಳಿದ್ದಾರೆ. ಇನ್ನು ವಿದೇಶಿ ಸುರಂಗ ತಜ್ಞ ಅರ್ನಾಲ್ಡ್‌ ಡಿಕ್ಸ್‌, ‘ಕ್ರಿಸ್‌ಮಸ್‌ ವೇಳೆ ಕಾರ್ಮಿಕರ ರಕ್ಷಣೆ ಸಾಕಾರ ಆಗಬಹುದು’ ಎಂದಿದ್ದಾರೆ.

ಅಂತಿಮ ಹಂತದಲ್ಲಿ ಮತ್ತೆ ಎದುರಾದ ವಿಘ್ನ, ಸುರಂಗದ ಕಾರ್ಮಿಕರ ರಕ್ಷಣಾ ಕಾರ್ಯ ಮತ್ತೆ ಸ್ಥಗಿತ!

click me!