Uttarakhand Rains: ಉತ್ತರಾಖಂಡ, ಮೇಘಸ್ಫೋಟಕ್ಕೆ 42 ಜನ ಬಲಿ!

By Kannadaprabha NewsFirst Published Oct 20, 2021, 7:34 AM IST
Highlights

* ಉತ್ತರಾಖಂಡದಲ್ಲಿ ಭಾರಿ ಮಳೆ: ಉಕ್ಕೇರಿದ ನದಿಗಳು

* ಕೊಚ್ಚಿಹೋದ ರಸ್ತೆ, ಸೇತುವೆ, ರೈಲು ಹಳಿ

* ಭೂಕುಸಿತಕ್ಕೆ ಹಲವರು ಬಲಿಯಾಗಿರುವ ಶಂಕೆ

* ರಕ್ಷಣಾ ಕಾರ್ಯಕ್ಕೆ 3 ಹೆಲಿಕಾಪ್ಟರ್‌ ಕಳಿಸಿದ ಕೇಂದ್ರ

ಡೆಹ್ರಾಡೂನ್‌/ನೈನಿತಾಲ್‌(ಅ.20): ಉತ್ತರಾಖಂಡದಲ್ಲಿ(Uttarakhand) ಕಳೆದ 3 ದಿನಗಳಿಂದ ಸುರಿಯುತ್ತಿರುವ ಮಹಾಮಳೆಯು ಮಂಗಳವಾರ ದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ. ನೈನಿತಾಲ್‌(nainital) ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮೇಘಸ್ಫೋಟ(Cloudburst) ಸಂಭವಿಸಿದ್ದು, ಮಳೆ ಸಂಬಂಧಿ ಘಟನೆಗಳಲ್ಲಿ 42 ಜನರು ಸಾವಿಗೀಡಾಗಿದ್ದಾರೆ. ಪಕ್ಕದ ಉತ್ತರ ಪ್ರದೇಶದಲ್ಲೂ(Uttar Pradesh) 4 ಜನ ಅಸುನೀಗಿದ್ದಾರೆ.

ಭಾರೀ ಮಳೆಯಿಂದ ನೈನಿತಾಲ್‌ ಹಾಗೂ ಅನೇಕ ನಗರಗಳು, ಗ್ರಾಮಗಳಲ್ಲಿ ಪ್ರವಾಹದ(Flood) ಸ್ಥಿತಿ ಸೃಷ್ಟಿಯಾಗಿದೆ. ಮಳೆಯ ಹೊಡೆತಕ್ಕೆ ಭೂಕುಸಿತಗಳು(Landslides) ಸಂಭವಿಸುತ್ತಿವೆ. ಹೀಗಾಗಿ ಅನೇಕ ಮನೆ-ಕಟ್ಟಡಗಳು ಧರಶಾಯಿಯಾಗಿವೆ. ರಾಮಗಂಗಾ, ಕೋಸಿ, ಚಂದ್ರಭಾಗಾ, ಗೌಲಾ, ಚಲ್ತಿ ಸೇರಿದಂತೆ ಅನೇಕ ನದಿಗಳು ಉಕ್ಕೇರಿವೆ. ಹೀಗಾಗಿ ಅವಶೇಷಗಳಲ್ಲಿ ಹಾಗೂ ಪ್ರವಾಹದಲ್ಲಿ ಸಿಲುಕಿ ಸಾವನ್ನಪ್ಪುವವರ ಸಂಖ್ಯೆ ಇನ್ನಷ್ಟುಏರಿಕೆ ಆಗುವ ಆತಂಕವಿದೆ. ಪ್ರವಾಹದಿಂದ ತೊಂದರೆಗೆ ಒಳಗಾದವರ ದೃಶ್ಯಗಳು ಮನಕಲಕುವಂತಿವೆ.

"

ಈ ನಡುವೆ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ(Pushkar Singh Dhami) ಅವರಿಗೆ ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಪ್ರವಾಹ ಪರಿಸ್ಥಿತಿ ಕುರಿತಾಗಿ ಮಾಹಿತಿ ಪಡೆದ್ದು, ರಕ್ಷಣಾ ಕಾರ್ಯಗಳಿಗೆ ಕೇಂದ್ರದಿಂದ ಸಕಲ ನೆರವು ಘೋಷಿಸಿದ್ದಾರೆ. ಇದರ ಬೆನ್ನಲ್ಲೇ 3 ಸೇನಾ ಹೆಲಿಕಾಪ್ಟರ್‌ಗಳು ರಾಜ್ಯಕ್ಕೆ ಧಾವಿಸಿವೆ. 15 ಎನ್‌ಡಿಆರ್‌ಎಫ್‌ ತಂಡಗಳು 300 ಜನರನ್ನು ರಕ್ಷಿಸಿವೆ. ಧಾಮಿ ಅವರು ಸಂಪುಟದ ಸಚಿವರೊಂದಿಗೆ ಪ್ರವಾಹ ಸ್ಥಳಗಳ ವೈಮಾನಿಕ ಸಮೀಕ್ಷೆ ಹಾಗೂ ಹಾನಿಯಾದ ರಸ್ತೆ, ಹೆದ್ದಾರಿಗಳ ಪರಿಶೀಲನೆ ನಡೆಸಿದ್ದಾರೆ ಹಾಗೂ ಮೃತರ ಕುಟುಂಬಗಳಿಗೆ 4 ಲಕ್ಷ ಹಾಗೂ ಮನೆ ಕಳೆದುಕೊಂಡವರಿಗೆ 1.9 ಲಕ್ಷ ರು. ಪರಿಹಾರ ಪ್ರಕಟಿಸಿದ್ದಾರೆ.

ಸಂಪರ್ಕ ಕಡಿದುಕೊಂಡ ನೈನಿತಾಲ್‌:

ನೈನಿತಾಲ್‌ನಲ್ಲಿ ಮೇಘಸ್ಫೋಟ ಸಂಭವಿಸಿದೆ. ಸರಣಿ ಭೂಕುಸಿತದ ಪರಿಣಾಮ ನೈನಿತಾಲ್‌ ಜಿಲ್ಲೆಯು ರಾಜ್ಯದ ಇತರೆ ಪ್ರದೇಶಗಳಿಂದ ಸಂಪರ್ಕವನ್ನೇ ಕಡಿದುಕೊಂಡಿದೆ. ಈ ಜಿಲ್ಲೆಯೊಂದರಲ್ಲೇ 28 ಜನ ಅಸುನೀಗಿದ್ದಾರೆ. ಇನ್ನು ಚಮೋಲಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಗುಡ್ಡ ಕುಸಿದುಬಿದ್ದಿರುವ ಕಾರಣ ಬದ್ರಿನಾಥ ಹೆದ್ದಾರಿ ಬಂದ್‌ ಆಗಿದೆ.

ರಾಮಗಢದ ತಲ್ಲಾ ಸೇರಿದಂತೆ ಉತ್ತರಾಖಂಡದ ಬಹುಭಾಗಗಳು ಮಳೆ ನೀರಿನಲ್ಲಿ ಮುಳುಗಿ ಹೋಗಿವೆ. ನೈನಿತಾಲ್‌ ಸೇರಿದಂತೆ ಇತರ ಪ್ರದೇಶಗಳಲ್ಲಿ ರಸ್ತೆ, ಬೀದಿಗಳು, ಸೇತುವೆಗಳು ಮತ್ತು ರೈಲ್ವೆ ಹಳಿಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ. ಮಳೆಗೆ ಬೆಚ್ಚಿಬಿದ್ದಿರುವ ಜನ ಸಾಮಾನ್ಯರು ತಮ್ಮ ಮನೆಗಳ ಮಹಡಿಗಳನ್ನು ಹತ್ತಿ ನೆರವು ನೀಡುವಂತೆ ಕಿರುಚಾಡುತ್ತಿದ್ದಾರೆ. ಕಾರ್ಬೆಟ್‌ ನ್ಯಾಷನಲ್‌ ಪಾರ್ಕ್ನ ಪಾರ್ಕಿಂಗ್‌ ಸ್ಥಳವು ಕೋಸಿ ನದಿ ಪ್ರವಾಹದಿಂದ ಜಲಾವೃತವಾಗಿದೆ.

ಚಾರ್‌ಧಾಮ ಯಾತ್ರಿಕರು ಸುರಕ್ಷಿತ:

ಚಾರ್‌ಧಾಮ್‌ ಯಾತ್ರೆ ಕೈಗೊಂಡಿರುವ ಯಾತ್ರಾರ್ಥಿಗಳು ಹರಿದ್ವಾರ, ರಿಷಿಕೇಶ್‌, ಶ್ರೀನಗರ, ತೆಹ್ರಿ, ಉತ್ತರಕಾಶಿ, ರುದ್ರಪ್ರಯಾಗ್‌, ಗುಪ್ತಕಾಶಿ, ಉಖಿಮಠ, ಕರ್ಣಪ್ರಯಾಗ್‌, ಜೋಶಿಮಠ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸುರಕ್ಷಿತವಾಗಿ ತಂಗಿದ್ದು, ಮಳೆ ನಿಯಂತ್ರಣಕ್ಕೆ ಬರುವವರೆಗೆ ಅವರು ಇದ್ದಲ್ಲೇ ಇರಬೇಕು ಎಂದು ಮುಖ್ಯಮಂತ್ರಿ ಕೋರಿದ್ದಾರೆ.

ಹೆಲಿಕಾಪ್ಟರ್‌, ದೋಣಿಗಳಲ್ಲಿ ರಕ್ಷಣೆ:

ಸಂಕಷ್ಟದಲ್ಲಿ ಸಿಲುಕಿರುವವರ ರಕ್ಷಣೆಗಾಗಿ 3 ಸೇನಾ ಹೆಲಿಕಾಪ್ಟರ್‌ಗಳು ಉತ್ತರಾಖಂಡಕ್ಕೆ ಆಗಮಿಸಿವೆ. ಮನೆಗಳು, ರಸ್ತೆಗಳು ಮತ್ತು ಭಾರೀ ಭೂಕುಸಿತದ ಅತಿಹೆಚ್ಚು ಸಾವು-ನೋವು ಕಂಡಿರುವ ನೈನಿತಾಲ್‌ನಲ್ಲಿ ಎರಡು ಸೇನಾ ಹೆಲಿಕಾಪ್ಟರ್‌ಗಳು ಕಾರಾರ‍ಯಚರಣೆ ನಡೆಸುತ್ತಿವೆ. ಗಢವಾಲ್‌ ಪ್ರಾಂತ್ಯದಲ್ಲಿ ಮತ್ತೊಂದು ಹೆಲಿಕಾಪ್ಟರ್‌ ರಕ್ಷಣಾ ಕಾರಾರ‍ಯಚರಣೆಗೆ ನೆರವಾಗಲಿದೆ.

click me!