UP Elections : ಗೋರಖ್ ಪುರದಲ್ಲಿ ಯೋಗಿ ಆದಿತ್ಯನಾಥ್ ವಿರುದ್ಧ ಚಂದ್ರಶೇಖರ್ ಆಜಾದ್ ಸ್ಪರ್ಧೆ!

Suvarna News   | Asianet News
Published : Jan 20, 2022, 01:00 PM ISTUpdated : Jan 20, 2022, 01:36 PM IST
UP Elections : ಗೋರಖ್ ಪುರದಲ್ಲಿ ಯೋಗಿ ಆದಿತ್ಯನಾಥ್ ವಿರುದ್ಧ ಚಂದ್ರಶೇಖರ್ ಆಜಾದ್ ಸ್ಪರ್ಧೆ!

ಸಾರಾಂಶ

ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಗೋರಖ್ ಪುರ ಸದರ್ ಕ್ಷೇತ್ರದಿಂದ ಸ್ಪರ್ಧೆ ಇದೇ ಕ್ಷೇತ್ರದಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಪರ್ಧೆ ಮಾಡಲಿದ್ದಾರೆ  

ಲಖನೌ (ಜ.20): ಮಹತ್ವದ ಬೆಳವಣಿಗೆಯಲ್ಲಿ ಉತ್ತರ ಪ್ರದೇಶದಲ್ಲಿ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Chief Minister Yogi Adityanath) ಸ್ಪರ್ಧೆ ಮಾಡಲಿರುವ ಗೋರಖ್ ಪುರ ಸದರ್ (Gorakhpur ) ಕ್ಷೇತ್ರದಿಂದ ಅವರ ಮೊದಲ ಎದುರಾಳಿ ಘೋಷಣೆಯಾಗಿದೆ. ಭೀಮ್ ಆರ್ಮಿ  ಮುಖ್ಯಸ್ಥ ಚಂದ್ರಶೇಖರ್ ಆಜಾದ್ (Bhim Army chief Chandrashekhar Azad), ಗೋರಖ್ ಪುರ ಸದರ್ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಖಚಿತವಾಗಿದ್ದು, ಆಜಾದ್ ಸಮಾಜ ಪಕ್ಷ ಟ್ವಿಟರ್ ನಲ್ಲಿ ಇದರ ಅಧಿಕೃತ ಘೋಷಣೆ ಮಾಡಿದೆ.

ಫೆಬ್ರವರಿ-ಮಾರ್ಚ್ ನಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೂ, ಆ ಕ್ಷೇತ್ರದಿಂದ ತಾವು ಸ್ಪರ್ಧಿಸುವುದಾಗಿ ಚಂದ್ರಶೇಖರ್ ಆಜಾದ್ ಘೋಷಣೆ ಮಾಡಿದ್ದರು. ಈ ನಡುವೆ ಬಿಜೆಪಿ ಕೂಡ, ಯೋಗಿ ಆದಿತ್ಯನಾಥ್ ಅವರ ಸ್ವಕ್ಷೇತ್ರ ಗೋರಖ್ ಪುರ ಸದರ್ ನಿಂದಲೇ ವಿಧಾನಸಭೆ ಚುನಾವಣೆ ಟಿಕೆಟ್ ನೀಡಿದ ಕೆಲ ದಿನಗಳ ಬೆನ್ನಲ್ಲಿಯೇ ಚಂದ್ರಶೇಖರ್ ಆಜಾದ್ ತಾವು ಕೂಡ ಇದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದನ್ನು ಅಧಿಕೃತಗೊಳಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಮೊದಲ ಬಾರಿಗೆ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ, ಈ ಕ್ಷೇತ್ರದಲ್ಲಿ ಅವರ ಪ್ರಮುಖ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ನಾಯಕ ಆಗಿರಲಿದ್ದು, ಎಸ್ ಪಿಯಿಂದ ಈ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡಲಿದ್ದಾರೆ ಎನ್ನುವುದು ಅಂತಿಮವಾಗಿಲ್ಲ.

"ಆಜಾದ್ ಸಮಾಜ ಪಕ್ಷದ (Azad Samaj Party)ರಾಷ್ಟ್ರೀಯ ಅಧ್ಯಕ್ಷ ಕಾಶಿರಾಮ್ ಈ ನಿರ್ಧಾರ ಮಾಡಿದ್ದು,  ಚಂದ್ರ ಶೇಖರ್ ಆಜಾದ್ ಅವರು ಗೋರಖ್‌ಪುರ ಸದರ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ" ಎಂದು ಪಕ್ಷವು ಟ್ವೀಟ್ ಮಾಡಿದೆ. ಅದರೊಂದಿಗೆ ಪ್ರಕಟಣೆಯನ್ನೂ ಹಂಚಿಕೊಂಡಿದೆ.
 


34 ವರ್ಷದ ಚಂದ್ರಶೇಖರ್ ಆಜಾದ್, 2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi)ವಿರುದ್ಧ  ವಾರಣಸಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ ನಂತರ ಹಿಂದೆ ಸರಿದಿದ್ದರು. ಆ ಸಮಯದಲ್ಲಿ ತನಗೆ ಯಾವುದೇ ಪಕ್ಷವಿಲ್ಲದ ಕಾರಣ ಮಾಯಾವತಿ ಅವರ ಪಕ್ಷ ಮತ್ತು ಕಾಂಗ್ರೆಸ್‌ಗೆ ಬೆಂಬಲ ನೀಡುವುದು ಉತ್ತಮ ಎಂದು ಅನಿಸಿದ್ದರಿಂದ ಚುನಾವಣೆಯಿಂದ ಹಿಂದೆ ಸರಿದಿದ್ದೆ ಎಂದು ತಿಳಿಸಿದ್ದರು. ಈಗ ತಮ್ಮದೇ ಪಕ್ಷ ಇರುವ ಕಾರಣ ಯೋಗಿ ಆದಿತ್ಯನಾಥ್ ವಿರುದ್ಧ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ. "ಯುಪಿ ವಿಧಾನಸಭೆಯಲ್ಲಿ ಸ್ಥಾನ ಗೆಲ್ಲುವುದು ನನಗೆ ಮುಖ್ಯವಲ್ಲ. ಯೋಗಿ ಆದಿತ್ಯನಾಥ್ ಅವರು ವಿಧಾನಸಭೆಗೆ ಬರಬಾರದು ಎನ್ನುವುದು ನನ್ನ ಉದ್ದೇಶ. ಹಾಗಾಗಿ ಅವರು ಎಲ್ಲಿ ಸ್ಪರ್ಧಿಸಿದರೂ ನಾನು ಸ್ಪರ್ಧಿಸುತ್ತೇನೆ" ಎಂದು ಅವರು ಕಳೆದ ವರ್ಷ ಹೇಳಿದ್ದರು.

UP Elections: ಯುಪಿ ಯಾರ ತೆಕ್ಕೆಗೆ? ಮತ್ತೊಂದು ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ
ಇನ್ನು ಗೋರಖ್ ಪುರ ಕ್ಷೇತ್ರ ಹಾಗೂ ಪೂರ್ವ ಉತ್ತರ ಪ್ರದೇಶದಲ್ಲಿ ಭೀಮ್ ಆರ್ಮಿ ಮುಖ್ಯಸ್ಥರಿಗಾಗಲಿ, ಅಥವಾ ಅವರ ಪಕ್ಷಕ್ಕಾಗಲಿ ಯಾವುದೇ ನೆಲೆಯಿಲ್ಲ. 1989ರಂದಲೂ ಈ ಕ್ಷೇತ್ರ ಬಿಜೆಪಿಯ ಬಳಿಯಲ್ಲಿಯೇ ಇದ್ದು, ಒಮ್ಮೆ ಮಾತ್ರ ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದ ಅಭ್ಯರ್ಥಿ ಜಯಿಸಿದ್ದರು. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಮಾತುಕತೆಯಲ್ಲಿ ಒಪ್ಪಂದ ಏರ್ಪಡದ ಕಾರಣ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ (Samajwadi Party) ಜೊತೆ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷ ತಿಳಿಸಿತ್ತು. ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 25 ಸೀಟುಗಳನ್ನು ನೀಡುವ ಭರವಸೆಯನ್ನು ಸಮಾಜವಾದಿ ಪಕ್ಷ ನೀಡಿತ್ತು. ತನ್ನ ಮಾದಿಗೆ ನಿಲ್ಲದ ಸಮಾಜವಾದಿ ಪಕ್ಷದಿಂದ ತಮಗೆ ಮೋಸವಾಗಿದೆ ಎಂದು ಚಂದ್ರಶೇಖರ್ ಆಜಾದ್ ಹೇಳಿದ್ದರು. ಇನ್ನೊಂದೆಡೆ ಅಖಿಲೇಶ್ ಯಾದವ್(Akhilesh Yadav ),  ಮೈತ್ರಿ ಮಾಡಿಕೊಂಡಲ್ಲಿ ಆಜಾದ್ ಸಮಾಜ ಪಕ್ಷಕ್ಕೆ ಎರಡು ಸ್ಥಾನಗಳನ್ನು ಮೀಸಲಿಡುವುದಾಗಿ ತಿಳಿಸಿದ್ದರು. ಆದರೆ, ಇದಕ್ಕೆ ಭೀಮ್ ಆರ್ಮಿ ಮುಖ್ಯಸ್ಥರು ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದರು. 

UP Elections 2022: ಹಿಂದುಳಿದ ವರ್ಗವನ್ನು ಸೆಳೆಯಲು ಅಖಿಲೇಶ್ ತಂತ್ರ, ಯೋಗಿಗೆ ಸವಾಲು.?
ಚಂದ್ರಶೇಖರ್ ಆಜಾದ್ ನೇತೃತ್ವದ ಭೀಮ್ ಆರ್ಮಿ ಮೇ 2017 ರಲ್ಲಿ ದಲಿತರು ಮತ್ತು ಮೇಲ್ವರ್ಗದ ಠಾಕೂರರ ನಡುವೆ ಸಹರಾನ್‌ಪುರದಲ್ಲಿ ಘರ್ಷಣೆಯ ಸಮಯದಲ್ಲಿ ಸಾಕಷ್ಟು ಪ್ರಸಿದ್ಧಿಗೆ ಬಂದಿದ್ದರು. ಘರ್ಷಣೆಯ ನಂತರ ಚಂದ್ರಶೇಖರ್ ಆಜಾದ್ ಅವರನ್ನು ಬಂಧಿಸಲಾಯಿತು. ಅಲಹಾಬಾದ್ ಹೈಕೋರ್ಟ್ ಅವರಿಗೆ ಜಾಮೀನು ನೀಡಿದ್ದರೂ, ಉತ್ತರ ಪ್ರದೇಶ ಪೊಲೀಸರು ಅವರನ್ನು ಕಠಿಣ ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್ಎಸ್ಎ) ಅಡಿಯಲ್ಲಿ ಬಂಧಿಸಲಾಗಿತ್ತು. 16 ತಿಂಗಳ ಜೈಲಿನಲ್ಲಿದ್ದ ನಂತರ 2018ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೊಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ
ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್