
ನವದೆಹಲಿ (ಜ.27): ಉತ್ತರ ಪ್ರದೇಶದಲ್ಲಿ ಜ್ಞಾನವಾಪಿ ಹೋರಾಟ ಇನ್ನಷ್ಟು ತೀವ್ರವಾಗುವ ಲಕ್ಷಣ ಕಂಡಿದೆ. ಅದಕ್ಕೆ ಕಾರಣ ಎಎಸ್ಐ ಅಂದರೆ, ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಸಮೀಕ್ಷಾ ವರದಿ. ವಾರಣಾಸಿ ಕೋರ್ಟ್ ಸಮೀಕ್ಷಾ ವರದಿಯನ್ನು ಎರಡೂ ಕಡೆಯವರಿಗೆ ನೀಡುವ ಮೂಲಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗ ಮಾಡುವ ನಿರ್ಧಾರ ಮಾಡಿತ್ತು. ಅದರಂತೆ ಬಹಿರಂಗವಾದ ವರದಿಯಲ್ಲಿ ಜ್ಞಾನವಾಪಿಯಲ್ಲಿ ಹಿಂದೆ ಮಂದಿರವಿತ್ತು. 17ನೇ ಶತಮಾನದಲ್ಲಿ ಔರಂಗಜೇಬ ಅದನ್ನು ಒಡೆದು ಅಲ್ಲಿ ಮಸೀದಿ ನಿರ್ಮಾಣ ಮಾಡಿದ್ದ ಎಂದು ತಿಳಿಸಿದೆ. ಅದರೊಂದಿಗೆ ಮಸೀದಿಯ ಸಂಕೀರ್ಣದ ಒಳಗಿರುವ ಹಿಂದೂ ದೇವರ ಚಿತ್ರಗಳು ಹಾಗೂ ವಿವಿಧ ಭಾಷೆಗಳಲ್ಲಿರುವ ಶಿಲಾ ಶಾಸನಗಳನ್ನೂ ಎಎಸ್ಐ ಪತ್ತೆ ಮಾಡಿದೆ. ತೆಲುಗು, ದೇವನಾಗರಿ ಹಾಗೂ ಕನ್ನಡ ಭಾಷೆಯ ಶಿಲಾ ಶಾಸನಗಳು ಅಲ್ಲಿ ಪತ್ತೆಯಾಗಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ತಿಳಿಸಿದ್ದರು. ಅದರೊಂದಿಗೆ ಉತ್ತರ ಪ್ರದೇಶದ ಜ್ಞಾನವಾಪಿಗೆ ಕನ್ನಡದ ನಂಟಿನ ಬಗ್ಗೆ ಅಚ್ಚರಿಯ ವ್ಯಕ್ತವಾಗಿದೆ. 17ನೇ ಶತಮಾನದಲ್ಲಿಯೇ ಕನ್ನಡ ಎಲ್ಲಿಯವರೆಗೆ ವ್ಯಾಪಿಸಿತ್ತು ಎನ್ನುವ ವಿಚಾರ ಇದರಲ್ಲಿ ಗೊತ್ತಾಗಿದೆ.
ಜ್ಞಾನವಾಪಿ ಮಸೀದಿ ಗೋಡೆ ಮೇಲೆ ಕನ್ನಡದ ಶಿಲಾ ಶಾಸನಗಳು ಪತ್ತೆಯಾಗಿದೆ. ಇದು ಹಿಂದೆ ಮಂದಿರವಾಗಿತ್ತು ಎನ್ನುವುದಕ್ಕೆ ಪುರಾತತ್ವ ಸರ್ವೆ ಇಲಾಖೆ ವೈಜ್ಞಾನಿಕ ಸಾಕ್ಷ್ಯವನ್ನು ಕೊಟ್ಟಿದೆ. ಕನ್ನಡ ಮಾತ್ರವಲ್ಲದೆ ತೆಲುಗು ಹಾಗೂ ದೇವ ನಾಗರಿ ಭಾಷೆಗಳ ಶಿಲಾ ಶಾಸನ ಗೋಡೆಗಳ ಮೇಲೆ ಪತ್ತೆಯಾಗಿದೆ. ಜ್ಞಾನವಾಪಿಯಲ್ಲಿ ಒಟ್ಟು 34 ಶಿಲಾ ಶಾಸನಗಳು ಪತ್ತೆಯಾಗಿದೆ ಎಂದು ಪುರಾತತ್ವ ಇಲಾಖೆ ತಿಳಿಸಿದೆ.
ಕನ್ನಡದ ಶಾಸನದಲ್ಲಿ ಇದ್ದಿದ್ದೇನು?: ಪುರಾತತ್ವ ಇಲಾಖೆ ಪತ್ತೆ ಮಾಡಿರುವ ಕನ್ನಡದ ಶಾಸನದಲ್ಲಿ 'ದೊಡ್ಡರಸಯ್ಯನ ನರಸಂಣಭಿಂನಹ' ಎಂಬ ಬರಹ ಪತ್ತೆಯಾಗಿದೆ. ಬಹುಶಃ ಇದು ದೇವಾಲಯಕ್ಕಾಗಿ ಕೊಡುಗೆ ನೀಡಿದ್ದವರ ಇಬ್ಬರ ವೈಯಕ್ತಿಕ ಹೆಸರಾಗಿದ್ದರಿಬಹುದು. ಅಂದಾಜಿನ ಪ್ರಕಾರ 16ನೇ ಶತಮಾನದಲ್ಲಿ ಇದನ್ನು ಕೆತ್ತಲಾಗಿದೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ. ಮಸೀದಿಯಲ್ಲಿ ಕನ್ನಡದ ಬರಹವಿರೋ ಫೋಟೋ ಕೂಡ ಬಿಡುಗಡಡೆ ಮಾಡಲಾಗಿದೆ.
ಕಲ್ಲಿನ ಮೇಲೆ ರಾಮ, ಶ್ರೀ, ಸ್ವಸ್ತಿಕ್ ಬರಹವೂ ಪತ್ತೆಯಾಗಿದೆ. ಜನಾರ್ದನ, ರುದ್ರ ಹಾಗೂ ಉಮೇಶ್ವರನ ಹೆಸರನ್ನೂ ಎಎಸ್ಐ ಪತ್ತೆ ಮಾಡಿದೆ. 17ನೇ ಶತಮಾನದಲ್ಲಿ ಇಲ್ಲಿ ಆದಿ ವಿಶ್ವೇಶ್ವರನ ದೇಗುಲ ಇತ್ತು. ಇದು ದೇಗುಲವೇ ಆಗಿತ್ತು ಅನ್ನೋದಕ್ಕೆ ಇದೀಗ ವೈಜ್ಞಾನಿಕ ಸಾಕ್ಷ್ಯ ಸಿಕ್ಕಿದೆ. ಮಸೀದಿಯಲ್ಲಿ ಸಾಕಷ್ಟು ಹಿಂದೂ ದೇವತೆಗಳ ಮೂರ್ತಿ ಪತ್ತೆಯಾಗಿದೆ. ಕಾಶಿಯ ಜ್ಞಾನವಾಪಿ ಮಸೀದಿಯಲ್ಲಿ ಎಎಸ್ಐ ವೈಜ್ಞಾನಿಕ ಸರ್ವೇ ನಡೆಸಿತ್ತು.
ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳ ಕುರುಹು: ಮಸೀದಿಯಲ್ಲಿ ಹಿಂದುಗಳ ಕುರುಹು ಸಿಕ್ಕಿದ್ದು, ಎತ್ತರ 6.5 ಸೆಂ.ಮೀ.. ವ್ಯಾಸ 3.5 ಸೆಂಟಿ ಮೀಟರ್ ಎತ್ತರದ ಶಿವಲಿಂಗ ಪತ್ತೆಯಾಗಿದೆ. ಮಸೀದಿಯ ಪಶ್ಚಿಮ ಭಾಗದಲ್ಲಿ ಇದು ಪತ್ತೆಯಾಗಿದೆ. ಮೂರ್ತಿ ಮೇಲಿನ ಭಾಗ ಧ್ವಂಸಗೊಂಡಿದೆ ಎಂದು ತಿಳಿಸಿದೆ. ಅದರೊಂದಿಗೆ ಗಣಪತಿ, ಆಂಜನೇಯ, ಹಿಂದೂದೇವತೆ, ನಂದಿ, ಶ್ರೀಕೃಷ್ಣ ಚಿತ್ರಗಳು ಪತ್ತೆಯಾಗಿದೆ.
ಜ್ಞಾನವಾಪಿ ಮಸೀದಿ ನಿರ್ಮಾಣಕ್ಕೂ ಮುನ್ನ ಅಲ್ಲಿ ಮಂದಿರವಿತ್ತು: ಎಎಸ್ಐ ವರದಿಯಲ್ಲಿ ಬಹಿರಂಗ!
ಕಲ್ಲಿನ ಶ್ರೀಕೃಷ್ಣನ ಹೋಲುವ ಶಿಲ್ಪಕಲೆ ಕೂಡ ಸಿಕ್ಕಿದೆ. ಇದರ ತಲೆ, ಕೈ, ಕಾಲು ಮುರಿದಿರುವ ಆಕೃತಿ ಪತ್ತೆಯಾಗಿದೆ. ಅದರೊಂದಿಗೆ ಗೋಡೆಗಳಲ್ಲಿ ಶ್ರೀರಾಮ ಬರಹಗಳೂ ಪತ್ತೆಯಾಗಿದ್ದು 2 ಹಿಂದೂ ದೇವರ ನಾಣ್ಯಗಳು ಕೂಡ ಸಿಕ್ಕಿವೆ.
ಗ್ಯಾನವಾಪಿ ಮಸೀದಿ ಸಮೀಕ್ಷಾ ವರದಿ ಸಾರ್ವಜನಿಕಗೊಳಿಸಲು ಕೋರ್ಟ್ ಅನುಮತಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ