'ಮಾಫಿಯಾದವರನ್ನ ಹೂತುಹಾಕ್ತೇನೆ..' ಯುಪಿ ವಿಧಾನಸಭೆಯಲ್ಲಿ 'ಉಗ್ರಂ ವೀರಂ' ಆದ ಯೋಗಿ ಆದಿತ್ಯನಾಥ್‌!

By Santosh NaikFirst Published Feb 25, 2023, 4:06 PM IST
Highlights

2005ರಲ್ಲಿ ಬಿಎಸ್‌ಪಿ ಶಾಸಕನ ಕೊಲೆ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಯಾಗಿದ್ದ ಉಮೇಶ್‌ ಪಾಲ್‌ ಅವರ ಕೊಲೆ ಪ್ರಕರಣದ ಕುರಿತು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಗುಡುಗಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಮಾಫಿಯಾದವರನ್ನು ಮಣ್ಣಲ್ಲಿ ಹೂತುಹಾಕ್ತೇನೆ ಎಂದು ಎಚ್ಚರಿಸಿದ್ದಾರೆ.

ನವದೆಹಲಿ (ಫೆ.25): ಸಾಮಾನ್ಯವಾಗಿ ತಮ್ಮ ಶಾಂತ ಸ್ವಭಾವ ಹಾಗೂ ನಗುಮೊಖದಲ್ಲಿಯೇ ಕಾಣುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಶುಕ್ರವಾರ ಉಗ್ರಸ್ವರೂಪಿಯಾಗಿದ್ದರು. ಉತ್ತರ ಪ್ರದೇಶ ವಿಧಾನಸಭೆಯ ಅಧಿವೇಶನದಲ್ಲಿ ಮಾತನಾಡಿದ ಅವರು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಅವರ ಟೀಕೆ ಹಾಗೂ ಆರೋಪಗಳಿಗೆ ಉಗ್ರ ರೂಪದಲ್ಲಿ ಉತ್ತರ ನೀಡಿದರು. 2005ರಲ್ಲಿ ಬಹುಜನ ಸಮಾಜವಾದಿ ಪಕ್ಷದ ಶಾಸಕನ ಕೊಲೆ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಯಾಗಿದ್ದ ಉಮೇಶ್‌ ಪಾಲ್‌ರನ್ನು ಇತ್ತೀಚೆಗೆ ಕೊಲೆ ಮಾಡಲಾಗಿತ್ತು. ಈ ಕುರಿತು ವಿಧಾನಸಭೆಯಲ್ಲಿ ಸರ್ಕಾರವನ್ನು ಟೀಕಿಸಿದ ಅಖಿಲೇಶ್‌ ಯಾದವ್‌ಗೆ ಉಗ್ರ ರೀತಿಯಲ್ಲಿಯೇ ಉತ್ತರ ನೀಡಿದ ಯೋಗಿ ಆದಿತ್ಯನಾಥ್‌, 'ಮಾಫಿಯೋಂ ಕೋ ಮಿಟ್ಟಿ ಮೇ ಮಲಾ ದೇಂಗೆ.. (ಮಾಫಿಯಾದವರನ್ನು ಮಣ್ಣಲ್ಲಿ ಹೂತು ಹಾಕ್ತೇನೆ)' ಎಂದು ಅಬ್ಬರಿಸಿದರು. ಇದೇ ವೇಳೆ ಅಂಡರ್‌ವರ್ಲ್ಡ್‌, ಮಾಫಿಯಾದ ವಿರುದ್ಧ ತಮ್ಮ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸುತ್ತಿದೆ ಎಂದು ಪುನರುಚ್ಛರಿಸಿದರು. ಇನ್ನೊಂದೆಡೆ ಸಮಾಜವಾದಿ ಪಕ್ಷ (ಎಸ್‌ಪಿ) ಅಪರಾಧಿಗಳು, ರೌಡಿಗಳು ಹಾಗೂ ಕ್ರಿಮಿನಲ್‌ ಹಿನ್ನಲೆ ಹೊಂದಿರುವವರನ್ನು ಪೋಷಣೆ ಮಾಡುವಲ್ಲಿ ನಿರತವಾಗಿದೆ ಎಂದು ಹೇಳಿದ್ದಾರೆ.

माफियाओं को मिट्टी में मिला देंगे... pic.twitter.com/GgrXXRa5li

— Yogi Adityanath (@myogiadityanath)


ಪ್ರಯಾಗ್‌ರಾಜ್ ಘಟನೆಯ ಬಗ್ಗೆ ಸರ್ಕಾರ ಶೂನ್ಯ ಸಹಿಷ್ಣುತೆಯ ನೀತಿಯ ಆಧಾರದ ಮೇಲೆ ಕೆಲಸ ಮಾಡುತ್ತಿದೆ. ಆದರೆ, ಈ ಘಟನೆಯಲ್ಲಿ ಭಾಗಿಯಾಗಿರುವ ಕ್ರಿಮಿನಲ್‌ ವ್ಯಕ್ತಿಯನ್ನು ಸಮಾಜವಾದಿ ಪಕ್ಷವೇ ಪೋಷಣೆ ಮಾಡುತ್ತಿದೆ. ಅವರನ್ನು ಸಂಸದರನ್ನಾಗಿ ಮಾಡಿದ್ದು ಎಸ್‌ಪಿ. ನೀವೇನೇ ಮಾಡಿಕೊಳ್ಳಿ ಆದರೆ, ಈ ಮಾಫಿಯಾದವರನ್ನು ನಾವು ಬಿಡೋ ಮಾತೇ ಇಲ್ಲ ಎಂದು ಅಬ್ಬರಿಸಿದ್ದಾರೆ.

ಈ ನಡುವೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌, ಗ್ಯಾಂಗ್‌ವಾರ್‌ನಂಥ ಪರಿಸ್ಥಿತಿಗಳನ್ನು ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎನ್ನುವುದು ಇತ್ತೀಚಿನ ಘಟನೆಗಳನ್ನು ನೋಡಿದರೆ ಗೊತ್ತಾಗುತ್ತದೆ. ರಾಜ್ಯದಲ್ಲಿ ಮಾಫಿಯಾ ವ್ಯವಹಾರಗಳು ಹೆಚ್ಚಾಗಿವೆ. ಯಾವುದೇ ಅಂಜಿಕೆಯಿಲ್ಲದೆ ನಡು ಹಗಲಿನಲ್ಲಿಯೇ ಗುಂಡು ಹಾರಿಸಲಾಗುತ್ತದೆ. ಇದು ರಾಮರಾಜ್ಯವೇ? ಪೊಲೀಸರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇದಕ್ಕೆ ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ.

ಈ ಕೃತ್ಯ ಎಸಗಿದ ಮಾಫಿಯಾ ಇಂದು ರಾಜ್ಯದಿಂದ ತಲೆಮರೆಸಿಕೊಂಡಿದೆ, ಮಾಫಿಯಾ ಯಾರೇ ಇರಲಿ, ರಾಜ್ಯದಲ್ಲಿ ‘ಮಾಫಿಯಾ ರಾಜ್’ ನಡೆಯಲು ನಮ್ಮ ಸರ್ಕಾರ ಬಿಡುವುದಿಲ್ಲ ಎಂದು ಯುಪಿ ಸಿಎಂ ಹೇಳಿದ್ದಾರೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನಿವಾಸದ ಬಳಿ ಬಾಂಬ್, ಬೆದರಿಕೆ ಕರೆಯಿಂದ ಹೆಚ್ಚಿದ ಆತಂಕ!

ಹಾಡುಹಗಲಲ್ಲೇ ಪ್ರತ್ಯಕ್ಷದರ್ಶಿಯ ಕೊಲೆ: 2005ರಲ್ಲಿ ನಡೆದ ಬಿಎಸ್‌ಪಿ ಶಾಸಕ ರಾಜು ಪಾಲ್‌ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್‌ ಪಾಲ್‌  ಅವರನ್ನು ಶುಕ್ರವಾರ ಪ್ರಯಾಗ್‌ರಾಜ್‌ನಲ್ಲಿರುವ ಅವರ ನಿವಾಸದ ಹೊರಗೆ ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪಾಲ್ ತನ್ನ ಮನೆಯ ಮುಂದೆ ತನ್ನ ವಾಹನದಿಂದ ಇಳಿದ ತಕ್ಷಣ ದಾಳಿಕೋರರು ದಾಳಿ ಮಾಡಿದರು. ಗುಂಡೇಟಿನ ದಾಳಿಯಲ್ಲಿ ಅಂಗರಕ್ಷಕರಿಗೂ ಗುಂಡು ತಗುಲಿದೆ. ಗುಂಡು ತಗುಲಿ ಗಂಭೀರ ಗಾಯಗೊಂಡಿದ್ದ ಉಮೇಶ್‌ ಪಾಲ್‌ ಚಿಕಿತ್ಸೆ ಫಲಕಾರಿಯಾಗದೆ ಆಅಸ್ಪತ್ರೆಯಲ್ಲಿ ಸಾವು ಕಂಡಿದ್ದರು. ತೀವ್ರವಾಗಿ ಗಾಯಗೊಂಡ ಉಮೇಶ್ ಪಾಲ್ ಅವರನ್ನು ಸ್ವರೂಪ್ ರಾಣಿ ನೆಹರು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Besharam Rang ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದೇನು?

ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಂಸದನ ಪುತ್ರನೊಂದಿಗೆ 14 ಮಂದಿಯನ್ನು ಪ್ರಯಾಗ್‌ರಾಜ್‌ ಪೊಲೀಸರು ಬಂಧಿಸಿದ್ದಾರೆ. 2005ರಲ್ಲಿ  ಮಾಜಿ ಸಂಸದ ಅತೀಕ್ ಅಹ್ಮದ್ ಅವರ ಕಿರಿಯ ಸಹೋದರ ಖಾಲಿದ್ ಅಜೀಂ ಅವರನ್ನು ಸೋಲಿಸುವ ಮೂಲಕ ಅಲಹಾಬಾದ್ (ಪಶ್ಚಿಮ) ವಿಧಾನಸಭಾ ಸ್ಥಾನವನ್ನು ರಾಜು ಪಾಲ್‌ ಗೆದ್ದಿದ್ದರು. ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿಯೇ ಗೆಲುವು ಕಂಡಿದ್ದ ರಾಜು ಪಾಲ್‌, ನಂತರ ಕೆಲವೇ ತಿಂಗಳಲ್ಲಿ ಕೊಲೆಯಾಗಿದ್ದರು.

click me!