
ಧನಾಬಾದ್: ವಿಚಿತ್ರ ಪ್ರಕರಣವೊಂದರಲ್ಲಿ ಪೊಲೀಸರು ಜಪ್ತಿ ಮಾಡಿದ್ದ ಮಾದಕ ವಸ್ತಗಳಲ್ಲಿ 19 ಕೆಜಿ ನಾಪತ್ತೆಯಾಗಿದ್ದು, ಇವುಗಳನ್ನು ಇಲಿಗಳು ಕದ್ದೊಯ್ದಿವೆ ಎಂದು ಪೊಲೀಸರು ಸಮಾಜಾಯಿಷಿ ನೀಡಿದ್ದಾರೆ. ಪ್ರಕರಣವೊಂದರಲ್ಲಿ ಜಪ್ತಿ ಮಾಡಲಾಗಿದ್ದ ಮಾದಕ ವಸ್ತುಗಳು ನಾಪತ್ತೆಯಾಗಿದ್ದು, ಇದರಲ್ಲಿ 10 ಕೆಜಿ ಕ್ಯಾನಬಿಸ್( ಭಾಂಗ್) ಹಾಗೂ 9 ಕೆಜಿ ಮರಿಜುವಾನಾ (ಗಾಂಜಾ)ವನ್ನು ಇಲ್ಲಿಗಳು ಎತ್ತಿಕೊಂಡು ಹೋಗಿವೆ ಎಂದು ಪೊಲೀಸರು ಕೋರ್ಟ್ ಮುಂದೆ ಹೇಳಿದ್ದಾರೆ. ಉತ್ತರ ಪ್ರದೇಶದ ಧನಬಾದ್ನಲ್ಲಿ ಈ ಘಟನೆ ನಡೆದಿದೆ.
ಒಟ್ಟು 19 ಕೆಜಿ ಮಾದಕ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಅವರಿಂದ ಮಾದಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಈ ಮಾದಕವಸ್ತುಗಳನ್ನು ಕೋರ್ಟ್ ಮುಂದೆ ಹಾಜರುಪಡಿಸುವ ಮೊದಲೇ ಅವು ನಾಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಜೈ ಪ್ರಕಾಶ್ ಪ್ರಸಾದ್ ಎಂಬುವವರು ಈ ವಿಚಾರವನ್ನು ಧನಾಬಾದ್ ಜಿಲ್ಲಾ ಜಡ್ಜ್ ರಾಮ್ ಶರ್ಮಾ ಮುಂದೆ ಹೇಳಿದ್ದಾರೆ.
2018ರ ಡಿಸೆಂಬರ್ 18ರಂದು ಶಂಭು ಪ್ರಸಾದ್ ಅಗರ್ವಾಲ್ ಹಾಗೂ ಇವರ ಪುತ್ರನ ವಿರುದ್ಧ ಮಾದಕ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ವಶಕ್ಕೆ ಪಡೆಯಲಾಗಿದ್ದ ಮಾದಕ ವಸ್ತುಗಳನ್ನು ರಾಜ್ಗಂಜ್ ಪೊಲೀಸ್ ಠಾಣೆಯ ಸ್ಟೋರ್ ರೂಮ್ನಲ್ಲಿ ಇಡಲಾಗಿತ್ತು. ಆದರೆ ಈಗ ಅದನ್ನು ಇಲಿಗಳು ತಿಂದಿವೆ ಎಂದು ಪೊಲೀಸರು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲ ಅಭಯ್ ಭಟ್ ಪ್ರತಿಕ್ರಿಯಿಸಿದ್ದು, ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಎದ್ದು ತೋರುತ್ತಿದೆ. ಪೊಲೀಸ್ ಠಾಣೆಯ ಸ್ಟೋರ್ ಹೌಸ್ನಲ್ಲಿ ಹಲವು ಪ್ರಕರಣಗಳ ಸಾಕ್ಷ್ಯಗಳನ್ನು ಸಂಗ್ರಹಿಸಿಡಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಸಾಕ್ಷ್ಯ ನಾಶವಾಗಿರುವುದರಿಂದ ಇದು ಆರೋಪಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ