ಮಹಾರಾಷ್ಟ್ರದ ಹೆದ್ದಾರಿಯಲ್ಲಿ ಬಿದಿರು ಬಳಸಿ ಹೆದ್ದಾರಿಯಲ್ಲಿ ತಡೆಗೋಡೆ!

By Kannadaprabha NewsFirst Published Mar 5, 2023, 7:27 AM IST
Highlights

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಇದೇ ಮೊದಲ ಬಾರಿಗೆ ಗುಣಮಟ್ಟದ ಬಿದಿರು ಬಳಸಿ ಹೆದ್ದಾರಿ ಪಕ್ಕದಲ್ಲಿ ತಡೆಗೋಡೆ ಅಳವಡಿಸಿದೆ. ‘ಇಂಥ ಪ್ರಯತ್ನ ವಿಶ್ವದಲ್ಲೇ ಮೊದಲು.

ನಾಗಪುರ: ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳ ಅಕ್ಕಪಕ್ಕ ಪ್ರಾಣಿಗಳು ರಸ್ತೆಗಿಳಿಯದಂತೆ ತಡೆಯಲು ಮತ್ತು ವಾಹನಗಳು ಡಿಕ್ಕಿ ಹೊಡೆದಾಗ ದೊಡ್ಡ ಪ್ರಮಾಣದ ಅನಾಹುತ ತಪ್ಪಿಸಲು ಉಕ್ಕಿನ ತಡೆಗೋಡೆ ಹಾಕುವುದು ಸಾಮಾನ್ಯ. ಆದರೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಇದೇ ಮೊದಲ ಬಾರಿಗೆ ಗುಣಮಟ್ಟದ ಬಿದಿರು ಬಳಸಿ ಹೆದ್ದಾರಿ ಪಕ್ಕದಲ್ಲಿ ತಡೆಗೋಡೆ ಅಳವಡಿಸಿದೆ. ‘ಇಂಥ ಪ್ರಯತ್ನ ವಿಶ್ವದಲ್ಲೇ ಮೊದಲು. ಇದು ಆತ್ಮನಿರ್ಭರ ಭಾರತದ ಕನಸಿಗೆ ಮತ್ತಷ್ಟು ನೀರೆರೆಯಲಿದೆ’ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ (Nitin Gadkari ಶನಿವಾರ ಹೇಳಿದ್ದಾರೆ. ಅಲ್ಲದೆ, ಇದರ ಸಾಮರ್ಥ್ಯದ ದ್ಯೋತಕವಾಗಿ ‘ಬಾಹುಬಲಿ’ ಎಂದು ಕರೆದಿದ್ದಾರೆ.

ಎಲ್ಲಿ ಅಳವಡಿಕೆ?:

ಮಹಾರಾಷ್ಟ್ರದ ಚಂದ್ರಾಪುರ (Chandrapur) ಮತ್ತು ಯವತ್ಮಾಳ್‌ (Yavatnal ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಬರುವ ವಾಣಿ-ವರೋರಾ ಹೆದ್ದಾರಿಯಲ್ಲಿ ಸುಮಾರು 200 ಮೀಟರ್‌ ಉದ್ದಕ್ಕೆ ಈ ಬಿದಿರು ತಡೆಗೋಡೆ ಅಳವಡಿಸಲಾಗಿದೆ. ಇದು ಉಕ್ಕಿಗೆ ಪರ್ಯಾಯವಾಗಿ ಇರುವುದರ ಜೊತೆಗೆ ಪರಿಸರ ಸ್ನೇಹಿಯಾಗಿದೆ.

ರಸ್ತೆ ಎಷ್ಟು ಕೆಟ್ಟದಾಗಿದೆ ಅಂದ್ರೆ ನಾನು ರೈಲಿನಲ್ಲಿ ಪ್ರಯಾಣಿಸ್ತಿದ್ದೇನೆ: ಗಡ್ಕರಿಗೆ ತಮಿಳುನಾಡು ಸಿಎಂ ಪತ್ರ

ಇದಕ್ಕಿದೆ ಹೆಚ್ಚಿನ ಸಾಮರ್ಥ್ಯ:

ಸಾಮಾನ್ಯವಾಗಿ ಉಕ್ಕಿನ ತಡೆಗೋಡೆಗೆ ಹೆಚ್ಚು ಶಕ್ತಿ ಎಂಬುದು ಬಹುತೇಕರ ಭಾವನೆ. ಆದರೆ ಬಿದಿರು (Bamboo) ತಡೆಗೋಡೆಯನ್ನು ಅದಕ್ಕಿಂತ ಶಕ್ತಿಶಾಲಿ ಮಾಡಲು ವಿಶೇಷವಾಗಿ ಸಂಸ್ಕರಿಸಲಾಗಿದೆ. ಬಂಬೂಸಾ ಬಲ್ಕೋವಾ ಎಂಬ ಜಾತಿಗೆ ಸೇರಿದ ಬಿದಿರನ್ನು ಕ್ರಿಯೋಸೋಟ್‌ ಎಣ್ಣೆಯಿಂದ ಆರೈಕೆ ಮಾಡಲಾಗಿದೆ. ಬಳಿಕ ಹೆಚ್ಚಿನ ಸಾಂದ್ರತೆ ಹೊಂದಿರುವ ಪಾಲಿ ಈಥೈಲೀನ್‌ ಅನ್ನು ಇದಕ್ಕೆ ಬಳಿಯಲಾಗಿದೆ. ಈ ಮೂಲಕ ಅದನ್ನು ಹೆಚ್ಚು ಶಕ್ತಿಯುತವಾಗುವಂತೆ ಮಾಡಲಾಗಿದೆ.

ಪರೀಕ್ಷೆಯಲ್ಲಿ ಪಾಸ್‌

ಈ ತಡೆಗೋಡೆ ಇಂದೋರ್‌ನ ಪೀತಂಪುರದಲ್ಲಿರುವ ರಾಷ್ಟ್ರೀಯ ವಾಹನ ಪರೀಕ್ಷಾ ಕೇಂದ್ರದಲ್ಲಿ ಕಠಿಣ ಪರೀಕ್ಷೆಗೆ ಒಳಪಟ್ಟಿದೆ ಮತ್ತು ರೂರ್ಕಿಯಲ್ಲಿರುವ (Rurkee) ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ ಮೂಲಕ ಅಗ್ನಿ ನಿರೋಧಕದಲ್ಲಿ ಮೊದಲ ದರ್ಜೆ ಎಂಬ ಮನ್ನಣೆಗೂ ಪಾತ್ರವಾಗಿದೆ. ಜೊತೆಗೆ ಭಾರತೀಯ ರಸ್ತೆ ಕಾಂಗ್ರೆಸ್‌ನಿಂದಲೂ ಮನ್ನಣೆ ಪಡೆದುಕೊಂಡಿದೆ.

Business Ideas : ಮನೆ ಸೌಂದರ್ಯ ಹೆಚ್ಚಿಸುವ ಬಿದಿರು ಆದಾಯದ ಮೂಲ

ಹೆಚ್ಚಿನ ಮರು ಮಾರಾಟ ಮೌಲ್ಯ

ಇಂಥ ಬಂಬೂ ತಡೆಗೋಡೆಗಳ ಮರು ಮಾರಾಟ ಮೌಲ್ಯ ಶೇ.50-70ರಷ್ಟಿದ್ದರೆ, ಇಂಥದ್ದೇ ತಡೆಗೋಡೆಗೆ ಬಳಸುವ ಉಕ್ಕಿನ ಮರು ಮಾರಾಟ ಮೌಲ್ಯ ಶೇ.30-50ರಷ್ಟುಎಂದು ಗಡ್ಕರಿ ಹೇಳಿದ್ದಾರೆ.

ಪರಿಸರ ಸ್ನೇಹಿ

ಬಿದಿರನ್ನು ಹೆಚ್ಚಾಗಿ ವಾಣಿಜ್ಯಿಕ ಉದ್ದೇಶಕ್ಕೇ ಬೆಳೆಸಲಾಗುತ್ತದೆ. ಆದರೆ ಕಬ್ಬಿಣದ ಅದಿರು ತೆಗೆಯಲು ಸಾಕಷ್ಟು ಶ್ರಮ ಬೇಕು ಹಾಗೂ ಗಣಿಗಾರಿಕೆ ಪರಿಸರಕ್ಕೆ ಮಾರಕ ಕೂಡ. ಹೀಗಾಗಿ, ‘ಬಿದಿರು ಬಳಸಿ ಇಂಥ ತಡೆಗೋಡೆ ನಿಮಾರ್ಣವು ಪರಿಸರ ಸ್ನೇಹಿ ಹಾಗೂ ಉಕ್ಕಿಗೆ ಪರ್ಯಾಯ. ಗ್ರಾಮೀಣ ಭಾಗದ ಕೃಷಿ ಸ್ನೇಹಿ ಕೈಗಾರಿಕೆಗೆ ನೆರವು ನೀಡುತ್ತದೆ’ ಎಂದು ಗಡ್ಕರಿ ಹೇಳಿದ್ದಾರೆ.

1386 ಕಿ.ಮೀ ದೂರದ ದೇಶದ ಅತೀ ಉದ್ದದ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ ವೇ ನೋಟ!

click me!