ವಿಶ್ವ ಬ್ಯಾಂಕ್‌ ಅಧ್ಯಕ್ಷೀಯ ಅಭ್ಯರ್ಥಿ Ajay Banga ಕೋವಿಡ್‌ ಪಾಸಿಟಿವ್‌, ಭಾರತದ ಸಭೆಗಳು ರದ್ದು!

By Santosh NaikFirst Published Mar 24, 2023, 11:09 AM IST
Highlights

ಹಣಕಾಸು ಸಚಿವಾಲಯದ ಹೇಳಿಕೆಯ ಪ್ರಕಾರ, ಅಜಯ್ ಬಂಗಾ ಅವರು ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗುವುದಿಲ್ಲ. ಅವರು ಕ್ವಾರಂಟೈನ್‌ನಲ್ಲಿದ್ದಾರೆ ಎಂದು ತಿಳಿಸಿದೆ.
 

ನವದೆಹಲಿ (ಮಾ.24): ಅಮೆರಿಕದಿಂದ ವಿಶ್ವ ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸುಗೊಂಡಿರುವ ಭಾರತೀಯ ಮೂಲಕ ಅಜಯ್‌ ಬಂಗಾ ಕೋವಿಡ್‌ ಪಾಸಿಟಿವ್‌ ಆಗಿದ್ದಾರೆ. ಇದರ ಬೆನ್ನಲ್ಲಿಯೇ ಅವರ ಎರಡು ದಿನಗಳ ಭಾರತ ಭೇಟಿಯ ಎಲ್ಲಾ ಸಭೆಗಳು ಈ ಹಿನ್ನೆಲೆಯಲ್ಲಿ ರದ್ದಾಗಿವೆ. ಬಂಗಾಗೆ ಕೊರೋನಾ ಪಾಸಿಟಿವ್‌ ಆಗಿರುವ ಕಾರಣ ಸದ್ಯ ಐಸೋಲೇಷನ್‌ನಲ್ಲಿದ್ದಾರೆ. ಬಂಗಾ ಅವರು ಮಾರ್ಚ್‌ 23 ಹಾಗೂ 24ರ ಭಾರತ ಪ್ರವಾಸದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಿ ಸಭೆ ನಡೆಸಬೇಕಿತ್ತು. ಕಳೆದ ಎರಡು ವಾರದಲ್ಲಿ ಭಾರತದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಏರಿಕೆ ಆಗುತ್ತಿವೆ. ಬುಧವಾರ ಕೇಂದ್ರ ಆರೋಗ್ಯ ಇಲಾಖೆ ನೀಡಿದ ಮಾಹಿತಿಯ ಪ್ರಕಾರ 1134 ಹೊಸ ಕರೋನಾವೈರಸ್‌ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 7026ಕ್ಕೆ ಏರಿದೆ. ಬಂಗಾ ಅವರಿಗೆ ಕೊರೋನಾ ಪಾಸಿಟಿವ್‌ ಆಗಿರುವ ಕುರಿತು ಹಣಕಾಸು ಇಲಾಖೆ ಹೇಳಿಕೆಯನ್ನು ನೀಡಿದ್ದು, ಬಂಗಾ ಸದ್ಯ ಕ್ವಾರಂಟೈನ್‌ ಆಗಿರುವ ಕಾರಣ ನಿರ್ಮಲಾ ಸೀತಾರಾಮನ್‌ ಅವರೊಂದಿಗೆ ಸಭೆ ಸಾಧ್ಯವಾಗಿಲ್ಲ ಎಂದು ತಿಳಿಸಿದೆ.

ಎಂದಿನ ಪರೀಕ್ಷೆಯ ವೇಳೆ, ಅಜಯ್‌ ಬಂಗಾ ಅವರು ಕೋವಿಡ್‌-19ಗೆ ಪಾಸಿಟಿವ್‌ ಆಗಿರುವುದು ಕಂಡು ಬಂದಿದೆ. ಆದರೆ, ಅವರಲ್ಲಿ ಯಾವುದೇ ಕೋವಿಡ್‌ ಸಂಬಂಧಿತ ಲಕ್ಷಣಗಳು ಕಾಣುತ್ತಿಲ್ಲ. ಸ್ಥಳೀಯ ಮಾನದಂಡಗಳನ್ನು ಅವರು ಪಾಲನೆ ಮಾಡುತ್ತಿದ್ದು, ಐಸೋಲೇಷನ್‌ಗೆ ಒಳಗಾಗಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Ajay Banga: ವಿಶ್ವಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ಅಜಯ್‌ ಬಂಗಾ ಹೆಸರು ಶಿಫಾರಸು ಮಾಡಿದ ಬಿಡೆನ್‌

ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡುವುದರ ಜೊತೆಗೆ, ಬಂಗಾ ಅವರು ಮಾರ್ಚ್ 23 ರಿಂದ 24 ರ ಎರಡು ದಿನಗಳ ಭೇಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಉನ್ನತ ಅಧಿಕಾರಿಗಳನ್ನು ಭೇಟಿಯಾಗುವ ಸಭೆ ನಿಗದಿಯಾಗಿತ್ತು. ಬಂಗಾ ಅವರ ನವದೆಹಲಿ ಭೇಟಿ, ವಿಶ್ವ ಬ್ಯಾಂಕ್‌ ಉನ್ನತ ಸ್ಥಾನಕ್ಕೆ ತಮ್ಮ ಉಮೇದುವಾರಿಕೆಗೆ ಬೆಂಬಲವನ್ನು ಪಡೆಯಲು ಯುರೋಪ್‌, ಲ್ಯಾಟಿನ್‌ ಅಮೆರಿಕಾ ಮತ್ತು ಏಷ್ಯಾ ಪ್ರವಾಸದ ಭಾಗವಾಗಿತ್ತು. ಮೂರು ವಾರಗಳ ಪ್ರವಾಸದಲ್ಲಿ ನವದೆಹಲಿಯ ಭೇಟಿ ಕೊನೆಯ ತಾಣವಾಗಿತ್ತು.

ಭಾರತದ ಜಿಡಿಪಿ ಪ್ರಗತಿ ಮುನ್ಸೂಚನೆ 'ಪಾಸಿಟಿವ್‌' ಆಗಿ ಪರಿಷ್ಕರಿಸಿದ ವಿಶ್ವಬ್ಯಾಂಕ್‌

ಬುಧವಾರ ಹೇಳಿಕೆಯಲ್ಲಿ, ಯುಎಸ್ ಖಜಾನೆ ಇಲಾಖೆ, “ಭಾರತದಲ್ಲಿರುವಾಗ, ಬಂಗಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿಯಾಗಲಿದ್ದಾರೆ. "ಈ ಚರ್ಚೆಗಳು ಭಾರತದ ಅಭಿವೃದ್ಧಿ ಆದ್ಯತೆಗಳು, ವಿಶ್ವ ಬ್ಯಾಂಕ್ ಮತ್ತು ಜಾಗತಿಕ ಆರ್ಥಿಕ ಅಭಿವೃದ್ಧಿ ಸವಾಲುಗಳ ಮೇಲೆ ಕೇಂದ್ರೀಕರಿಸುತ್ತವೆ" ಎಂದು ಅದು ಹೇಳಿತ್ತು.

click me!