ಅರುಣಾಚಲ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಭಾರತೀಯ ಸೇನೆಯ ಇಬ್ಬರು ಯೋಧರು ನಾಪತ್ತೆ

By Suvarna NewsFirst Published Jun 11, 2022, 11:58 PM IST
Highlights

ಅರುಣಾಚಲ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಇಬ್ಬರು ಯೋಧರು 14 ದಿನಗಳಿಂದ ನಾಪತ್ತೆಯಾಗಿದ್ದಾರೆ. ಸೈನಿಕರೊಬ್ಬರ ಪತ್ನಿ ಭಾರತೀಯ ಸೇನೆಯಿಂದ ಈ ಬಗ್ಗೆ ಉತ್ತರವನ್ನು ಕೋರಿದ್ದಾರೆ.

ಅರುಣಾಚಲ ಪ್ರದೇಶ (ಜೂ. 11): ಅರುಣಾಚಲ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಭಾರತೀಯ ಸೇನೆಯ ಇಬ್ಬರು ಯೋಧರು ಕಳೆದ 14 ದಿನಗಳಿಂದ ನಾಪತ್ತೆಯಾಗಿದ್ದಾರೆ. ಉತ್ತರಾಖಂಡದ ಇಬ್ಬರು 7 ನೇ ಗರ್ವಾಲ್ ರೈಫಲ್ಸ್ ಯೋಧರನ್ನು ಹರೇಂದ್ರ ನೇಗಿ ಮತ್ತು ಪ್ರಕಾಶ್ ಸಿಂಗ್ ರಾಣಾ ಎಂದು ಗುರುತಿಸಲಾಗಿದ್ದು, ಮೇ 28 ರಂದು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. 

ನದಿಯಲ್ಲಿ ಮುಳುಗಿರುವ ಶಂಕೆ: "ಮೇ 29 ರಂದು ಸೇನಾ ಅಧಿಕಾರಿಗಳು ತಮಗೆ ಕರೆ ಮಾಡಿ ಪತಿ ಮೇ 28 ರಂದು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ" ಎಂದು ಪ್ರಕಾಶ್ ಸಿಂಗ್ ರಾಣಾ ಅವರ ಪತ್ನಿ ಮಮತಾ ರಾಣಾ ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಜೂನ್ 9 ರಂದು ಎರಡನೇ ಫೋನ್ ಕರೆ ಬಂದಿದ್ದು ಇಬ್ಬರೂ ಸೈನಿಕರು ನದಿಯಲ್ಲಿ ಮುಳುಗಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಅವರು ನನಗೆ ಹೇಳಿದರು ಎಂದು ಮಮತಾ ತಿಳಿಸಿದ್ದಾರೆ.

Latest Videos

ಮಮತಾ ಮತ್ತು ಅವರ ಇಬ್ಬರು ಅಪ್ರಾಪ್ತ ಮಕ್ಕಳಾದ ಅನುಜ್ (10) ಮತ್ತು ಅನಾಮಿಕಾ (7) ಪ್ರಕಾಶ್ ಅವರ ಮಾತಿಗಾಗಿ 14 ದಿನಗಳಿಂದ ಕಾಯುತ್ತಿದ್ದಾರೆ. ಆದರೆ, ಸೇನಾ ಅಧಿಕಾರಿಗಳು ಮಮತಾ ಅವರ ಫೋನ್ ಕರೆಗಳಿಗೆ ಉತ್ತರಿಸಿಲ್ಲ ಅಥವಾ ಈ ವಿಷಯದ ಬಗ್ಗೆ ಹೇಳಿಕೆಯನ್ನು ನೀಡಿಲ್ಲ. 

ಇದನ್ನೂ ಓದಿ: ಪತ್ನಿ ಸೀಮಂತಕ್ಕೆ ಬಂದಿದ್ದ ಯೋಧ ಅಪಘಾತದಲ್ಲಿ ದುರ್ಮರಣ!

ಸೇನೆ ಮಾಹಿತಿ ನೀಡಲಿ: ಹರೇಂದ್ರ ನೇಗಿ ಅವರ ಪತ್ನಿ ಪೂನಂ ನೇಗಿ, ಇಬ್ಬರು ಸೈನಿಕರು ನದಿಯ ಬಳಿ ಹೋಗಿದ್ದು ಯಾರಿಗೂ ತಿಳಿದಿಲ್ಲ ಎಂದು ನಂಬಲು ನನಗೆ ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ಅಲ್ಲಿ ಏನಾಗಿದೆ ಎಂಬುದನ್ನು ಸೇನೆಯು ವಿವರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.ಹರೇಂದ್ರ ನೇಗಿ ಮತ್ತು ಅವರ ಪತ್ನಿ ಪೂನಂ ನೇಗಿ ಅವರಿಗೆ ಒಂದು ವರ್ಷದ ಮಗುವಿದ್ದು, ಮದುವೆಯಾಗಿ ಕೇವಲ ಮೂರು ವರ್ಷಗಳಾಗಿವೆ. 

ಈ ನಡುವೆ ಸಹಸ್‌ಪುರದ ಬಿಜೆಪಿ ಶಾಸಕ ಸಹದೇವ್ ಸಿಂಗ್ ಪುಂಡೀರ್ ಶುಕ್ರವಾರ ಪ್ರಕಾಶ್ ಸಿಂಗ್ ರಾಣಾ ಅವರ ಕುಟುಂಬವನ್ನು ಅವರ ಸೈನಿಕ ಕಾಲೋನಿ ನಿವಾಸದಲ್ಲಿ ಭೇಟಿಯಾಗಿದ್ದಾರೆ. "ನಾನು ಈ ಬಗ್ಗೆ ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಏನಾದರೂ ಮಾಡಲಾಗುವುದು ಎಂದು ಅವರು ನನಗೆ ಭರವಸೆ ನೀಡಿದ್ದಾರೆ" ಎಂದು ಪುಂಡೀರ್ ಹೇಳಿದ್ದಾರೆ. ಅಲ್ಲದೇ ನಾಪತ್ತೆಯಾಗಿರುವ ಯೋಧರ ವಿವರಗಳನ್ನು ಕೇಂದ್ರ ಸಚಿವರಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಲಡಾಖ್‌ನಲ್ಲಿ ಭಾರೀ ರಸ್ತೆ ಅಪಘಾತ, ನದಿಗುರುಳಿದ 26 ಯೋಧರಿದ್ದ ಸೇನಾ ವಾಹನ, 7 ಸಾವು!

click me!