
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಕವಿದಿದ್ದು, ರಜೆಯಲ್ಲಿರುವ ಸೈನಿಕರೆಲ್ಲರಿಗೂ ಹಿಂದಿರುಗುವಂತೆ ಸೇನೆಯಿಂದ ಸೂಚನೆ ದೊರೆತಿದೆ. ಸೇನೆಯಿಂದ ಸೂಚನೆ ಸಿಗುತ್ತಲೇ ಸೈನಿಕರು ಗಡಿಯತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದ ಸೈನಿಕನ ಬಳಿ ರೈಲ್ವೆ ಟಿಕೆಟ್ ಪರಿಶೀಲಕ ಲಂಚ ಕೇಳಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಭಾರತೀಯ ರೈಲ್ವೆಗೆ ದೂರು ನೀಡಲಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾಲ್ಲಿ ವೈರಲ್ ಆಗಿದ್ದು, ಲಂಚ ಕೇಳಿದ ಟಿಟಿಇ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ವಿಡಿಯೋ ವೈರಲ್ ಬೆನ್ನಲ್ಲೇ ಲಂಚ ಕೇಳಿದ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಗ್ವಾಲಿಯರ್ ನಿವಾಸಿಯಾಗಿರುವ ವಿನೋದ್ ಕುಮಾರ್ ದುಬೆ ಎಂಬವರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೇನೆಯಿಂದ ಕರೆ ಬಂದ ಹಿನ್ನೆಲೆ ತುರ್ತಾಗಿ ಪ್ರಯಾಣ ಬೆಳೆಸಿದ್ದರು. ವಿನೋದ್ ಕುಮಾರ್ ದುವೆ ಗ್ವಾಲಿಯರ್ನಿಂದ ಜಮ್ಮುವಿಗೆ ತೆರಳಲು ಮಾಲ್ವಾ ಎಕ್ಸ್ಪ್ರೆಸ್ ಮೂಲಕ ಪ್ರಯಾಣ ಬೆಳೆಸಿದ್ದರು. ದಿಢೀರ್ ಪ್ರಯಾಣ ಆಗಿದ್ದರಿಂದ ಸಾಮಾನ್ಯ ಟಿಕೆಟ್ ಪಡೆದುಕೊಂಡು ವಿನೋದ್ ಕುಮಾರ್ ದುವೆ ಪ್ರಯಾಣ ಆರಂಭಿಸಿದ್ದರು. ಎಕ್ಸ್ ಖಾತೆಯಲ್ಲಿ ವಿನೋದ್ ಕುಮಾರ್ ದುಬೆ ತಾವು ಸೇನೆಯಲ್ಲಿ ಸುಬೇದಾರ್ ಗಿ ಸೇವೆ ಸಲ್ಲಿಸುತ್ತಿರೋದಾಗಿ ಹೇಳಿದ್ದಾರೆ.
ಸೇನೆಯ ಗುರುತಿನ ಚೀಟಿ ತೋರಿಸಿ ಪರಿಸ್ಥಿತಿ ವಿವರಿಸಿದ್ದ ಸೈನಿಕ
ಮಾಲ್ವಾ ಎಕ್ಸ್ಪ್ರೆಸ್ ಸೋನಿಪತ್ ಮತ್ತು ಪಾಣಿಪತ್ ನಡುವೆ ತಲುಪಿದಾಗ ವಿನೋದ್ ಕುಮಾರ್ ದುಬೆಯವರ ಬಳಿ ಬಂದ ಟಿಟಿಇ ದಲ್ಜೀತ್ ಸಿಂಗ್ ಟಿಕೆಟ್ ಕೇಳಿದ್ದಾರೆ. ಈ ವೇಳೆ ವಿನೋದ್ ಕುಮಾರ್ ದುಬೆ, ತನ್ನ ಜನರಲ್ ಕೋಚ್ ಟಿಕೆಟ್ ಮತ್ತು ಸೇನೆಯ ಗುರುತಿನ ಚೀಟಿಯನ್ನು ತೋರಿಸಿದ್ದಾರೆ. ಸೇನೆಯಿಂದ ತುರ್ತು ಕರೆ ಬಂದ ಹಿನ್ನೆಲೆ ಅನಿವಾರ್ಯವಾಗಿ ಈ ಟಿಕೆಟ್ ಪಡೆಯಲಾಗಿದೆ ಎಂದು ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಇದಕ್ಕೆ ದಲ್ಜೀತ್ ಸಿಂಗ್, ದಂಡ ಪಾವತಿಸಿ ಅಥವಾ ಜನರಲ್ ಕೋಚ್ಗೆ ತೆರಳುವಂತೆ ಹೇಳಿದ್ದಾರೆ.
ಅಗ್ನಿವೀರ್ನಿಂದ 150 ರೂಪಾಯಿ ಲಂಚ
ಇದೇ ಪೋಸ್ಟ್ ನಲ್ಲಿ ಟಿಟಿಇ ವಿರುದ್ಧ ವಿನೋದ್ ಕುಮಾರ್ ದುಬೆ ಲಂಚದ ಆರೋಪವನ್ನು ಮಾಡಿದ್ದಾರೆ. ತಮ್ಮೊಂದಿಗೆ ಪ್ರಯಾಣಿಸುತ್ತಿರುವ ಅಗ್ನಿವೀರ್ ಜಹೀರ್ ಖಾನ್ ಬಳಿ 150 ರೂಪಾಯಿ ಲಂಚ ಪಡೆದುಕೊಂಡಿದ್ದಾರೆ. ಹಣ ಸ್ವೀಕರಿಸಿದ ನಂತರ ಟಿಕೆಟ್ ಅಥವಾ ರಶೀದಿ ನೀಡಬೇಕು. ಆದ್ರೆ ಟಿಟಿಇ ಜನರಲ್ ಟಿಕೆಟ್ ಮೇಲೆ ಏನೋ ಬರೆದು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ತಾವು ಸೈನಿಕ, ತುರ್ತಾಗಿ ಗಡಿಗೆ ಹೋಗಬೇಕೆಂದು ಹೇಳಿದರೂ ಟಿಟಿಇ ಜೈಲಿಗೆ ಕಳುಹಿಸುವ ಬೆದರಿಕೆಯನ್ನು ಹಾಕಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ಸೆರೆ ಹಿಡಿದಿರುವ ವಿನೋದ್ ಕುಮಾರ್ ದುಬೆ, ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಭಾರತೀಯ ರೈಲ್ವೆಗೆ ದೂರು ನೀಡಿದ್ದರು. ವಿನೋದ್ ಕುಮಾರ್ ದುಬೆ ಅವರು ನೀಡಿದ ದೂರಿನ ಮೇರೆಗೆ ಟಿಟಿಇ ದಿಲ್ಜೀತ್ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ.
ಸುಬೇದಾರ್ ವಿನೋದ್ ಕುಮಾರ್ ದುಬೆ ಗ್ವಾಲಿಯರ್ ನಿವಾಸಿಯಾಗಿದ್ದು, 25 ದಿನಗಳ ರಜೆಯ ಮೇಲೆ ಮನೆಗೆ ಬಂದಿದ್ದರು. ಅವರು ಮೇ 12 ರಂದು ಕರ್ತವ್ಯಕ್ಕೆ ಹಿಂದಿರುಗಬೇಕಾಗಿತ್ತು. ಇದಕ್ಕಾಗಿ ಅವರು ನಿಯಮಗಳ ಪ್ರಕಾರ ಮೀಸಲಾತಿ ಟಿಕೆಟ್ಗಳನ್ನು ಕಾಯ್ದಿರಿಸಿದ್ದರು, ಆದರೆ ಇದ್ದಕ್ಕಿದ್ದಂತೆ ಭಾರತ-ಪಾಕಿಸ್ತಾನ ಉದ್ವಿಗ್ನತೆಯಿಂದಾಗಿ, ಅವರ ರಜಾದಿನಗಳನ್ನು ರದ್ದುಗೊಳಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಹೇಳಿತ್ತು. ಮೇ 9 ರಂದು ಅವರನ್ನು ಹೊರಡುವಂತೆ ಆದೇಶಿಸಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ