ಹುಲಿಯೊಂದು ವಾಹನ ಸಂದಣಿಯಿದ್ದ ರಸ್ತೆ ಮೇಲೆ ಬಂದಿದ್ದು, ಈ ವೇಳೆ ಟ್ರಾಫಿಕ್ ಪೊಲೀಸ್ ಒಬ್ಬರು ವಾಹನಗಳನ್ನು ನಿಲ್ಲಿಸಿ ಹುಲಿ ರಸ್ತೆ ದಾಟಲು ಸಹಾಯ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಂಹ ಹುಲಿ ಮುಂತಾದ ಮಾಂಸಹಾರಿ ವನ್ಯಜೀವಿಗಳು ತಮ್ಮ ಆವಾಸಸ್ಥಾನದಲ್ಲಿ ವಾಸಿಸುವುದು ಅವುಗಳಿಗೂ ಕ್ಷೇಮ ಮಾನವರಾದ ನಮಗೂ ಕ್ಷೇಮ. ಆದರೆ ಅವುಗಳ ಆವಾಸ ಸ್ಥಾನಗಳನ್ನು ನಾವು ಬಹುತೇಕ ನಗರೀಕರಣದ ಹೆಸರಿನಲ್ಲಿ ನಾಶ ಮಾಡಿದ ಪರಿಣಾಮ ಅವುಗಳು ಆಗಾಗ ನಾಡಿನತ್ತ ದಾಂಗುಡಿ ಇಟ್ಟು ಮಾನವ ಪ್ರಾಣಿ ಸಂಘರ್ಷಕ್ಕೆ ಕಾರಣವಾಗುತ್ತವೆ. ನೈಸರ್ಗಿಕವಾದ ಪ್ರಕೃತಿಯ ಸಮತೋಲನಕ್ಕೆ ಸಹಜವಾಗಿ ಪ್ರಾಣಿಗಳ ಆವಾಸ ಸ್ಥಾನವನ್ನು ಗೌರವಿಸುವುದು ಮನುಷ್ಯರ ಕರ್ತವ್ಯ. ಅದೇ ರೀತಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಒಬ್ಬರು ಹುಲಿಯೊಂದಕ್ಕೆ ಸುಗಮವಾಗಿ ರಸ್ತೆ ದಾಟಲು ನೆರವಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಹೀಗೆ ಹುಲಿ ರಸ್ತೆ ದಾಟಲು ನೆರವಾದ ಟ್ರಾಫಿಕ್ ಪೊಲೀಸ್ ಪೇದೆಯ ಕಾರ್ಯವನ್ನು ಅವರು ಶ್ಲಾಘಿಸಿದ್ದಾರೆ. ಗ್ರೀನ್ ಸಿಗ್ನಲ್ ಕೇವಲ ಹುಲಿಗಾಗಿ, ಸುಂದರವಾದ ಜನ, ಆದರೆ ಸ್ಥಳ ಯಾವುದು ಎಂದು ತಿಳಿದಿಲ್ಲ ಎಂದು ಬರೆದುಕೊಂಡಿದ್ದಾರೆ. ಆದರೆ ಇದು ಮಹಾರಾಷ್ಟ್ರದ ಚಂದ್ರಾಪುರ ಎಂದು ನೋಡುಗರು ಕಾಮೆಂಟ್ ಮಾಡಿದ್ದಾರೆ.
ಹುಲಿ ರಸ್ತೆ ದಾಟುವುದನ್ನು ನೋಡಿದ ಟ್ರಾಫಿಕ್ ಪೊಲೀಸ್ ರಸ್ತೆಯ ಎರಡು ಬದಿಗಳ ವಾಹನ ಸವಾರರಿಗೂ ಸಾವಧಾನದಿಂದ ಕೆಲಹೊತ್ತು ಕಾಯುವಂತೆ ಕೇಳಿದ್ದಾರೆ. ಕೂಡಲೇ ವಾಹನ ಸವಾರರು ವಾಹನಗಳನ್ನು ನಿಲ್ಲಿಸಿ, ರಸ್ತೆ ದಾಟುತ್ತಿದ್ದ ಹುಲಿಯ ವಿಡಿಯೋಗಳನ್ನು ಸೆರೆ ಹಿಡಿದಿದ್ದಾರೆ. ಈ ವೇಳೆ ಟ್ರಾಫಿಕ್ ಪೊಲೀಸ್ ಶಾಂತತೆಯಿಂದ ವರ್ತಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಇನ್ನು ಹುಲಿ ರಾಜ ಗಾಂಭೀರ್ಯದಿಂದ ಶಾಂತವಾಗಿ ರಸ್ತೆ ದಾಟಿ ಕಾಡಿನತ್ತ ಹೊರಟು ಹೋಗಿದೆ.
ಈ ವಿಡಿಯೋವನ್ನು 1,83,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, 8 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಇದೊಂದು ಅಪರೂಪದ ಕ್ಷಣ, ಮಾನವನ ಇರುವಿಕೆಯನ್ನು ಹುಲಿ ಅರ್ಥ ಮಾಡಿಕೊಂಡಿದೆ. ಅಥವಾ ಅದು ಹಸಿದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಾವು ಅವುಗಳು ಸುಲಭವಾಗಿ ಸಾಗಲು ಹಸಿರು ಮಾರ್ಗಗಳನ್ನು ನಿರ್ಮಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ