
ಮೀರತ್(ಮೇ.18):ಗ್ರೆಗರಿ ರೇಮಂಡ್ ರಾಫೆಲ್ಗೆ 1997ರ ಏಪ್ರಿಲ್ 23 ಚೆನ್ನಾಗಿ ನೆನಪಿದೆ. ಅಂದು ಅವರ ಪತ್ನಿ ಸೋಜಾ ಆಸ್ಪತ್ರೆಯಲ್ಲಿದ್ದರು. ವೈದ್ಯರು ಬಂದು ಶುಭ ಸಮಾಚಾರ ನೀಡಲಿ ಎಂಬ ತವಕದಲ್ಲಿ ರೇಮಂಡ್ ಇದ್ದರು. ಹೀಗಿರುವಾಗಲೇ ಬಂದ ಡಾಕ್ಟರ್ ನಿಮಗೆ ಅವಳಿ ಗಂಡು ಮಕ್ಕಳಾಗಿದ್ದಾರೆಂದು ಡಬಲ್ ಖುಷಿ ನೀಡಿದ್ದರು. ಸಂಭ್ರಮದಿಂದಲೇ ಹೆಂಡತಿ ಹಾಗೂ ಅವಳಿ ಮಕ್ಕಳನ್ನು ಜೋಪಾನವಾಗಿ ಮನೆಗೆ ಕರೆದೊಯ್ದಿದ್ದರು. ಹೀಗಾಗಿ ಏಪ್ರಿಲ್ 23 ತನ್ನ ಜೀವನದ ಅತೀ ಸಂತಸದ ದಿನ ಎಂದೇ ಪರಿಗಣಿಸುತ್ತಿದ್ದರು. ಆದರೆ ಇದೇ ದಿನ ಜೀವನದ ಅತ್ಯಂತ ಕೆಟ್ಟ ಘಳಿಗೆಗೆ ಸಾಕ್ಷಿಯಾಗಲಿದೆ ಎಂದು ಅವರು ಊಹಿಸಿಯೂ ಇರಲಿಲ್ಲ. ಹೌದು ಬರೋಬ್ಬರಿ 24 ವರ್ಷದ ಬಳಿಕ ಏಪ್ರಿಲ್ 23ರಂದು ಈ ಅವಳಿ ಮಕ್ಕಳು ಅನಾರೋಗ್ಯಕ್ಕೀಡಾಗಿದ್ದಾರೆ. ಹಾಗೂ ಮೇ 13, 14ರಂದು ಕೊನೆಯುಸಿರೆಳೆದಿದ್ದಾರೆ.
ಘಟನೆ ವಿವರಿಸಿದ ತಂದೆ ರೇಮಂಡ್ ತನ್ನ ಅವಳಿ ಮಕ್ಕಳಾದ ಜೋಫ್ರೆಡ್ ವರ್ಗೀಸ್ ಗ್ರೆಗರಿ ಹಾಗೂ ರಾಲ್ಫ್ರೆಡ್ ಜಾರ್ಜ್ ಗ್ರೆಗರಿ ಇಬ್ಬರೂ ತಮ್ಮ 24ನೇ ಹುಟ್ಟುಹಬ್ಬ ಆಚರಿಸಿದ್ದರು. ಒಟ್ಟಿಗೆ ಜನಿಸಿದ ಇವರು ಎಲ್ಲಾ ವಿಚಾರಗಳಲ್ಲೂ ಒಟ್ಟಾಗೇ ಇದ್ದರು. ಪ್ರತಿಯೊಂದು ಕೆಲಸವನ್ನೂ ಒಟ್ಟಾಗೇ ಮಾಡುತ್ತಿದ್ದರು. ಒಟ್ಟಿಗೆ ಊಟ, ಆಟ, ಓದು. ಸಾಲದೆಂಬಂತೆ ಇಬ್ಬರೂ ಕಂಪ್ಯೂಟರ್ ಇಂಜಿನಿಯರಿಂಗ್ ಕೂಡಾ ಒಟ್ಟಾಗಿ ಪೂರೈಸಿದರು. ಬಳಿಕ ಹೈದರಾಬಾದ್ನಲ್ಲಿ ಒಟ್ಟಾಗಿ ಉದ್ಯೋಗ ಮಾಡುತ್ತಿದ್ದರು. ಆದರೆ ಇಬ್ಬರೂ ಒಂದೇ ದಿನ ಅನಾರೋಗ್ಯಕ್ಕೀಡಾಗಿ ಒಟ್ಟಿಗೇ ಈ ಜಗತ್ತಿಗೆ ಗುಡ್ ಬೈ ಹೇಳುತ್ತಾರೆಂದು ಭಾವಿಸಿರಲಿಲ್ಲ ಎಂದಿದ್ದಾರೆ.
"
ಏಪ್ರಿಲ್ 23ರಂದು ಹುಟ್ಟುಹಬ್ಬ ಆಚರಣೆ, ಅನಾರೋಗ್ಯ
ಇನ್ನು ತನ್ನಿಬ್ಬರೂ ಮಕ್ಕಳ ಆರೋಗ್ಯ ಏಪ್ರಿಲ್ 23ರಂದು ಹದಗೆಟ್ಟಿತ್ತು. ಇಬ್ಬರಿಗೂ ಕೊರೋನಾ ಸೋಂಕು ತಗುಲಿತ್ತು. ಈ ವೇಳೆ ಇವರಲ್ಲಿ ಒಬ್ಬನಿಗೇನಾದರೂ ಆದರೆ ಮತ್ತೊಬ್ಬನಿಗೆ ಏನು ಹೇಳುವುದು ಎಂಬ ಭಯ ಈ ವೇಳೆ ರೇಮಂಡ್ ಅವರನ್ನು ಕಾಡಿತ್ತು. ಯಾಕೆಂದರೆ ಜನಿಸಿದಾಗಿನಿಂದ ಇಬ್ಬರೂ ಪ್ರತಿಯೊಂದು ವಿಚಾರದಲ್ಲೂ ಒಟ್ಟಾಗಿರುತ್ತಿದ್ದರು. ಹೀಗಾಗಿ ಒಂದೋ ಇಬ್ಬರೂ ಗುಣಮುಖರಾಗಿ ಮನೆಗೆ ಬರುತ್ತಾರೆ, ಇಲ್ಲವೇ ಒಬ್ಬನಿಗೆ ಏನಾದರೂ ಆದರೆ ಮತ್ತೊಬ್ಬನೂ ಬದುಕುಳಿಯುವುದಿಲ್ಲ ಎಂಬ ಅನುಮಾನವೂ ಅವರಿಗಿತ್ತು.
ಈ ಆಸ್ಪತ್ರೆಯಲ್ಲಿ ಈವರೆಗೆ ಒಂದೂ ಕೋವಿಡ್ ಸಾವಿಲ್ಲ, ಎಲ್ಲರೂ ಗುಣಮುಖ!
ಇನ್ನು ರಾಲ್ಫ್ರೆಡ್ ಕೂಡಾ ಉಳಿಯುವುದಿಲ್ಲ
ಈ ಬಗ್ಗೆ ಮತ್ತಷ್ಟು ಮಾತನಾಡಿರುವ ರಾಫೆಲ್, ಮೊದಲು ಜೋಫ್ರೆಡ್ ಮೃತಪಟ್ಟ. ಈ ವಿಚಾರ ತಿಳಿದ ಕೂಡಲೇ ಹೆಂಡತಿ ಸೋಜಾ ಇನ್ನು ರಾಲ್ಫ್ರೆಡ್ ಕೂಡಾ ಬದುಕುಳಿಯುವುದಿಲ್ಲ ಎಂಬ ಮಾತಷ್ಟೇ ಹೊರಬಂತು. ಹೀಗೇ ಆಯ್ತು. ಕೆಲ ಸಮಯದಲ್ಲೇ ರಾಲ್ಫ್ರೆಡ್ ನಿಧನದ ಸುದ್ದಿಯೂ ಬಂತು. ಅವರಿಬ್ಬರೂ ನಮಗೆ ಒಳ್ಳೆಯ ಜೀವನ ನೀಡ ಬಯಸಿದ್ದರು. ನಾವಿಬ್ಬರೂ ಶಿಕ್ಷಕರಾಗಿ ಸೇವೆ ಸಲ್ಲಿಸಿ ಅವರನ್ನು ಬೆಳೆಸಿದ್ದೆವು. ಇಬ್ಬರೂ ಹೈದರಾಬಾದ್ನಿಂದ ಕೊರಿಯಾ ಬಳಿಕ ಜರ್ಮನಿಗೆ ಹೋಗುವ ಯೋಜನೆ ರೂಪಿಸಿದ್ದರು. ಆದರೆ ದೇವರು ನಮಗೆ ಯಾಕೆ ಇಂತಹ ಶಿಕ್ಷೆ ಕೊಟ್ಟರೆಂದು ನನಗೆ ತಿಳಿಯುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಸುಳ್ಳು ಹೇಳುತ್ತಿದ್ದೀಯಲ್ವಾ ಎಂದಿದ್ದ ರಾಲ್ಫ್ರೆಡ್
ರಾಲ್ಫ್ರೆಡ್ ಕೊನೆಯ ಕರೆ ಮಾಡಿದ್ದು ತನ್ನ ತಾಯಿಗೆ ತಾನು ಗುಣಮುಖನಾಗುತ್ತಿದ್ದೇನೆ ಎಂದಿದ್ದ ರಾಲ್ಫ್ರೆಡ್ ತನ್ನ ಸಹೋದರ ಜೋಫ್ರೆಡ್ ಹೇಗಿದ್ದಾನೆಂದು ಕೇಳಿದ್ದ. ಆದರೆ ಅಷ್ಟರಲ್ಲಿ ಜೋಫ್ರೆಡ್ ಸಾವನ್ನಪ್ಪಿದ್ದ. ಆದರೆ ಈ ವಿಚಾರವನ್ನು ಮನೆಯವರು ತಿಳಿಸಲಿಲ್ಲ. ಆತನನ್ನು ದೆಹಲಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆಂದಷ್ಟೇ ತಿಳಿಸಿದ್ದರು. ಆದರೆ ಅಷ್ಟರಲ್ಲೇ ರಾಲ್ಫ್ರೆಡ್ ನೀನು ಸುಳ್ಳು ಹೇಳುತ್ತಿದ್ದೀಯಲ್ವಾ ಅಮ್ಮಾ? ಎಂದು ಹೇಳಿ ಕರೆ ಕಟ್ ಮಾಡಿದ್ದ.
RTPCR ಬಂದಿತ್ತು ನೆಗೆಟಿವ್
ಮೀರತ್ನ ಛಾವನಿಯ ನಿವಾಸಿಗರಾಗಿದ್ದ ರೇಮಂಡ್ ಆರಂಭದಲ್ಲಿ ಜ್ವರ ಕಡಿಮೆಯಾಗಬಹುದೆಂದು ತಮ್ಮ ಮಕ್ಕಳಿಗೆ ಮನೆಯಲ್ಲೇ ಚಿಕಿತ್ಸೆ ಆರಂಭಿಸಿದ್ದರು. ಆದರೆ ಹೀಗಾಗಲಿಲ್ಲ. ಹೀಗಾಗಿ ಇಬ್ಬರನ್ನೂ ಮೇ ರಂದು ಆಸ್ಪತ್ರೆಗೆ ದಾಖಲಿಸಲಾಯ್ತು. ಇಬ್ಬರ ಮೊದಲ ವರದಿಯಲ್ಲೇ ಕೊರೋನಾ ವೈರಸ್ ಇರುವುದು ದೃಢಪಟ್ಟಿತ್ತು. ಆದರೆ ಕೆಲ ದಿನಗಳ ಬಳಿಕ ತೆಗೆದಿದ್ದ ಎರಡನೇ ಆರ್ಟಿಇಪಿಸಿಆರ್ ಟೆಸ್ಟ್ನಲ್ಲಿ ವರದಿ ನೆಗೆಟಿವ್ ಬಂದಿತ್ತು. ಹೀಗಿದ್ದರೂ ವೈದ್ಯರು ಅವರನ್ನು ಕೋವಿಡ್ ವಾರ್ಡ್ನಿಂದ ಐಸಿಯುಗೆ ಕರೆದೊಯ್ದಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ