ಮುಂದಿನ ಸೂಚನೆವರೆಗೂ, ಈ ರೈಲ್ವೇ ಸ್ಟೇಷನ್‌ಗಳಲ್ಲಿ ಫ್ಲಾಟ್‌ಫಾರ್ಮ್‌ ಟಿಕೆಟ್‌ ಮಾರಾಟವಿಲ್ಲ!

By Santosh NaikFirst Published Oct 28, 2024, 6:51 PM IST
Highlights

ಅಕ್ಟೋಬರ್‌ 27 ರಂದು ದೀಪಾವಳಿ ಹಾಗೂ ಛತ್‌ ಪೂಜೆ ಹಬ್ಬದ ಸಲುವಾಗಿ ತಮ್ಮ ತಮ್ಮ ಊರುಗಳಿಗೆ ಹೋಗಲು ಬಾಂದ್ರಾ ರೈಲು ನಿಲ್ದಾಣದಲ್ಲಿ ಗೋರಖ್‌ಪುರಕ್ಕೆ ಹೋಗುವ ರೈಲು ಹತ್ತಲು ನಿಂತಿದ್ದರು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 10 ಮಂದಿ ಗಾಯಗೊಂಡಿದ್ದರು.

ನವದೆಹಲಿ (ಅ.28): ಮುಂಬೈ ವಿಭಾಗದ ಆಯ್ದ ಪ್ರಮುಖ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಮಾರಾಟಕ್ಕೆ ಪಶ್ಚಿಮ ರೈಲ್ವೆ ತಾತ್ಕಾಲಿಕ ನಿರ್ಬಂಧಗಳನ್ನು ವಿಧಿಸಿದೆ. ಈ ಕ್ರಮವು ಪ್ಲಾಟ್‌ಫಾರ್ಮ್‌ಗಳಲ್ಲಿ ಜನಸಂದಣಿಯನ್ನು ನಿರ್ವಹಿಸುವ ಮತ್ತು ನಿಲ್ದಾಣದ ಆವರಣದಲ್ಲಿ ಪ್ರಯಾಣಿಕರ ಚಲನೆ ಸುಗಮವಾಗಿರುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಮಾರಾಟದ ಮೇಲಿನ ನಿರ್ಬಂಧವು ದೀಪಾವಳಿ ಹಬ್ಬ ಮತ್ತು ಛತ್ ಪೂಜೆಯ ಸಮಯದಲ್ಲಿ ಬಂದಿದೆ. ತಕ್ಷಣದಿಂದಲೇ ಇದು ಜಾರಿಯಾಗಿದ್ದು, ನವೆಂಬರ್‌ 8ರವರೆಗೆ ಜಾರಿಯಲ್ಲಿದೆ ಎಂದು ಪಶ್ಚಿಮ ರೈಲ್ವೆಯ ಸಿಪಿಆರ್‌ಒ ತಿಳಿಸಿದ್ದಾರೆ. ಮುಂಬೈ ಸೆಂಟ್ರಲ್, ದಾದರ್, ಬಾಂದ್ರಾ ಟರ್ಮಿನಸ್, ಬೊರಿವಲಿ, ವಸೈ ರೋಡ್, ವಾಪಿ, ವಲ್ಸಾದ್, ಉಧ್ನಾ ಮತ್ತು ಸೂರತ್ - ಈ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ಮಾರಾಟವನ್ನು ನಿರ್ಬಂಧಿಸಲಾಗಿದೆ.

ಈಶಾನ್ಯ ಕರ್ನಾಟಕ ಕೂಡ ವ್ಯಾಪ್ತಿಗೆ ಬರುವ ಕೇಂದ್ರ ರೈಲ್ವೆಯ, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ದಾದರ್, ಕುರ್ಲಾ ಎಲ್‌ಟಿಟಿ, ಥಾಣೆ, ಕಲ್ಯಾಣ್, ಪುಣೆ ಮತ್ತು ನಾಗ್ಪುರ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಮಾರಾಟವನ್ನು ತಕ್ಷಣವೇ ಜಾರಿಗೆ ಬರುವಂತೆ ನಿರ್ಬಂಧಿಸಿದೆ. ಉತ್ತರ ರೈಲ್ವೆ ಮತ್ತು ಉತ್ತರ ರೈಲ್ವೆಯ ದೆಹಲಿ ವಿಭಾಗವು ರೈಲ್ವೆ ನಿಲ್ದಾಣಗಳಲ್ಲಿ ಹಬ್ಬದ ಋತುವಿನಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಘೋಷಿಸಿದೆ.

ಅಕ್ಟೋಬರ್‌ 27 ರಂದು ದೀಪಾವಳಿ ಹಾಗೂ ಛತ್‌ ಪೂಜೆ ಹಬ್ಬದ ಸಲುವಾಗಿ ತಮ್ಮ ತಮ್ಮ ಊರುಗಳಿಗೆ ಹೋಗಲು ಬಾಂದ್ರಾ ರೈಲು ನಿಲ್ದಾಣದಲ್ಲಿ ಗೋರಖ್‌ಪುರಕ್ಕೆ ಹೋಗುವ ರೈಲು ಹತ್ತಲು ನಿಂತಿದ್ದರು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 10 ಮಂದಿ ಗಾಯಗೊಂಡಿದ್ದರು. ಕಾಯ್ದಿರಿಸದ ಬಾಂದ್ರಾ-ಗೋರಖ್‌ಪುರ ಅಂತ್ಯೋದಯ ಎಕ್ಸ್‌ಪ್ರೆಸ್ BDTS (ಬಾಂದ್ರಾ ಟರ್ಮಿನಸ್) ಯಾರ್ಡ್‌ನಿಂದ 5:10 ಕ್ಕೆ ನಿಗದಿತ ನಿರ್ಗಮನದ ಮೊದಲು ಪ್ಲಾಟ್‌ಫಾರ್ಮ್ ಕಡೆಗೆ "ನಿಧಾನವಾಗಿ ಚಲಿಸುತ್ತಿದ್ದಾಗ" 2:45 AM ಸುಮಾರಿಗೆ ಪ್ಲಾಟ್‌ಫಾರ್ಮ್ ಸಂಖ್ಯೆ 1 ರಲ್ಲಿ ಘಟನೆ ಸಂಭವಿಸಿದೆ.

ರೈಲಿನಲ್ಲಿ ಕಾರ್, ಬೈಕ್ ಕಳುಹಿಸಲು ಎಷ್ಟು ಚಾರ್ಜ್ ಮಾಡಲಾಗುತ್ತೆ?

ಹಲವಾರು ಪ್ರಯಾಣಿಕರು ಹತ್ತಲು ಪ್ರಯತ್ನಿಸಿದಾಗ ರೈಲು  ಪ್ಲಾಟ್‌ಫಾರ್ಮ್ ಕಡೆಗೆ ನಿಧಾನವಾಗಿ ಚಲಿಸುತ್ತಿತ್ತುಎಂದು ಪಶ್ಚಿಮ ರೈಲ್ವೆ (ಡಬ್ಲ್ಯುಆರ್) ಹೇಳಿಕೆಯಲ್ಲಿ ತಿಳಿಸಿದೆ. ರೈಲನ್ನು ಹತ್ತಲು ಪ್ರಯತ್ನಿಸುವಾಗ ಜನರು ಬಿದ್ದಿದ್ದರಿಂದ ಗಾಯಗಳಾಗಿವೆ ಎಂದು ತಿಳಿಸಿದೆ. ಸಾಮಾನ್ಯವಾಗಿ, ರೈಲು ಪ್ಲಾಟ್‌ಫಾರ್ಮ್‌ನಲ್ಲಿ ಸಂಪೂರ್ಣ ನಿಲುಗಡೆಗೆ ಬಂದ ನಂತರವೇ ಕೋಚ್‌ಗಳ ಬಾಗಿಲು ತೆರೆಯಲಾಗುತ್ತದೆ, ಪ್ರಯಾಣಿಕರನ್ನು ಕ್ರಮಬದ್ಧವಾದ ಸರದಿಯಲ್ಲಿ ಹತ್ತಲು ಅನುವು ಮಾಡಿಕೊಡುತ್ತದೆ" ಎಂದು ಡಬ್ಲ್ಯುಆರ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಹೆಚ್ಚಿನವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ, ಇಬ್ಬರು ವ್ಯಕ್ತಿಗಳ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

Latest Videos

ರೈಲಿನಲ್ಲಿ ತುಪ್ಪ ತೆಗೆದುಕೊಂಡು ಹೋಗಬಹುದಾ? ನಿಯಮಗಳೇನು?

ನೂರ್ ಮೊಹಮ್ಮದ್ ಶೇಖ್ (18) ಅನೇಕ ಗಾಯಗಳಿಂದ ಬಳಲುತ್ತಿದ್ದು, ಆಕ್ಸಿಜನ್‌ ಸಪೋರ್ಟ್‌ನಲ್ಲಿ ಇದ್ದಾರೆ. ಮುಂಬರುವ ದೀಪಾವಳಿ ಮತ್ತು ಛತ್‌ ಹಬ್ಬಗಳ ಕಾರಣದಿಂದಾಗಿ ಡಬ್ಲ್ಯುಆರ್ ವಿವಿಧ ಸ್ಥಳಗಳಿಗೆ ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ 130 ಕ್ಕೂ ಹೆಚ್ಚು ಹಬ್ಬದ ವಿಶೇಷ ರೈಲುಗಳನ್ನು ನಿರ್ವಹಿಸುತ್ತಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

click me!