
ತಿರುವನಂತಪುರ (ಆ.15): ತಾಯಿಯ ಎದೆಹಾಲು ಮಗುವಿನ ಗಂಟಲಿನಲ್ಲಿಯೇ ಉಳಿದುಕೊಂಡ ಪರಿಣಾಮ ಮೂರು ತಿಂಗಳ ಮಗು ದಾರುಣವಾಗಿ ಸಾವು ಕಂಡಿರುವ ಘಟನೆ ಕೇರಳ ತಿರುನವಂತಪುರದ ಪಲ್ಲಿಚಾಲ್ನಲ್ಲಿ ಮಂಗಳವಾರ ನಡೆದಿದೆ. ಜಯಕೃಷ್ಣನ್ ಹಾಗೂ ಜಾನಿಮೋಳ್ ದಂಪತಿಯ ಪುತ್ರನಾಗಿದ್ದ ಜಿತೇಶ್ ಸಾವು ಕಂಡ ಪುಟ್ಟ ಶಿಶು. ಕೆಲ ವರ್ಷದ ಹಿಂದೆ ಮದುವೆಯಾಗಿದ್ದ ಜಯಕೃಷ್ಣನ್ ಹಾಗೂ ಜಾನಿಮೋಳ್ ದಂಪತಿಗೆ ಜಿತೇಶ್ ಮೊದಲ ಮಗುವಾಗಿತ್ತು. ಭಾನುವಾರ ಸಂಜೆ ಜಾನಿಮೋಳ್ ಮಗುವಿಗೆ ಎದೆಹಾಲು ಕುಡಿಸಿ ಆತನನ್ನು ಮಲಗಿಸಿದ್ದರು. ಸೋಮವಾರ ಬೆಳಗ್ಗೆಯಾದರೂ ಮಗು ಏನೂ ಗದ್ದಲ ಮಾಡದೇ, ಇದ್ದ ಸ್ಥಳದಿಂದ ಒಂಚೂರು ಕದಲದೇ ಇದ್ದಾಗ ದಂಪತಿಗಳಿಗೆ ಅನುಮಾನ ಶುರುವಾಗಿತ್ತು. ತಕ್ಷಣವೇ ದಂಪತಿಗಳು ಮಗುವನ್ನು ಬಲರಾಮಪುರದ ಖಾಸಗಿ ಆಸ್ಪತ್ರೆಗೆ ಮಗುವನ್ನು ದಾಖಲು ಮಾಡಿದ್ದರು. ಈ ಹಂತದಲ್ಲಿ ಮಗುವಿನ ಪಲ್ಸ್ ಬಹಳ ಕಡಿಮೆ ಇತ್ತು ಎಂದು ವೈದ್ಯರು ತಿಳಿಸಿದ ಕಾರಣ, ಮಗುವನ್ನು ಎಸ್ಐಟಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಮಗುವಿಗೆ ತೀವ್ರ ಚಿಕಿತ್ಸೆ ನೀಡುತ್ತಿದ್ದ ನಡುವೆಯೂ ಸೋಮವಾರ ಸಂಜೆ 6 ಗಂಟೆಯ ವೇಳೆ ಮಗು ಸಾವು ಕಂಡಿದೆ ಎಂದು ವೈದ್ಯರು ಘೋಷಿಸಿದ್ದಾರೆ.
ತಾಯಿಯ ಎದೆಹಾಲು ಗಂಟಲಿನಲ್ಲಿ ಮಾತ್ರವಲ್ಲದೆ, ಶ್ವಾಸಕೋಶದಲ್ಲಿಯೂ ತುಂಬಿಕೊಂಡ ಕಾರಣದಿಂದಾಘಿ ಮಗು ಸಾವು ಕಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತಾಯಿಯ ಎದೆಹಾಲು ಅಮೃತಕ್ಕೆ ಸಮಾನ: ಅಶೋಕ್
ಕಳೆದ ಮಾರ್ಚ್ನಲ್ಲಿಯೂ ಕೇರಳದಲ್ಲಿ ಇಂಥದ್ದೇ ಘಟನೆ ನಡೆದಿತ್ತು. ಬರೀ ಒಂದು ತಿಂಗಳ ಮಗು ಎದೆಹಾಲು ಕುಡಿಯುವಾಗಲೇ ತಲೆಗೆ ಏರಿದ್ದರಿಂದ ಸಾವು ಕಂಡಿತ್ತು. ಈ ಸಾವಿನಿಂದ ನೊಂದ ಮಹಿಳೆ ತನ್ನ ಹಿರಿಯ ಪುತ್ರನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. 38 ವರ್ಷದ ಲಿಜಾ ಹಾಗೂ ಆಕೆಯ 7 ವರ್ಷದ ಪುತ್ರ ಇಬ್ಬರ ಶವ ಬಾವಿಯಲ್ಲಿ ಪತ್ತೆಯಾಗಿತ್ತು. 28 ದಿನದ ಮಗು ತನ್ನ ಕೈಯಾರೆ ಸಾವು ಕಂಡಿದ್ದರಿಂದ ನೊಂದಿದ್ದ ಆಕೆ, ಮಗುವಿನ ಅಂತ್ಯಸಂಸ್ಕಾರದಲ್ಲಿಯೂ ಭಾಗಿಯಾಗಿದ್ದಳು. ಮರುದಿನ ಇಡೀ ಕುಟುಂಬ ಚರ್ಚ್ಗೆ ಹೋಗಿದ್ದಾಗ ಆಕೆ ತನ್ನ ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಳು.
Sana Khan: ಹಿಜಾಬ್ನಿಂದ ಸುದ್ದಿಯಾಗಿದ್ದ ನಟಿ, ಎದೆಹಾಲುಣಿಸಿ ತಿಂಗಳಲ್ಲಿ 15 ಕೆ.ಜಿ ತೂಕ ಕಳೆದುಕೊಂಡ್ರಂತೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ