ದೇಶದ್ರೋಹ ಕಾಯ್ದೆ ರದ್ದಾದರೆ ಭದ್ರತೆಗೆ ಕುತ್ತು: ಲಾ ಕಮೀಷನ್ ವರದಿ

By Kannadaprabha NewsFirst Published Jun 3, 2023, 8:49 AM IST
Highlights

ದೇಶದ್ರೋಹ ಕಾಯ್ದೆ ದುರ್ಬಳಕೆ ಕುರಿತು ಸಾಕಷ್ಟುಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ 2022ರ ಮೇ 11ರಂದು ಸುಪ್ರೀಂಕೋರ್ಟ್ ತಡೆ ನೀಡಿರುವ ದೇಶದ್ರೋಹ ಕಾಯ್ದೆಯ ಪರವಾಗಿ ಇದೀಗ ಕಾನೂನು ಆಯೋಗ ವರದಿ ಸಲ್ಲಿಸಿದೆ.

ನವದೆಹಲಿ: ದೇಶದ್ರೋಹ ಕಾಯ್ದೆ ದುರ್ಬಳಕೆ ಕುರಿತು ಸಾಕಷ್ಟುಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ 2022ರ ಮೇ 11ರಂದು ಸುಪ್ರೀಂಕೋರ್ಟ್ ತಡೆ ನೀಡಿರುವ ದೇಶದ್ರೋಹ ಕಾಯ್ದೆಯ ಪರವಾಗಿ ಇದೀಗ ಕಾನೂನು ಆಯೋಗ ವರದಿ ಸಲ್ಲಿಸಿದೆ. ದೇಶದ್ರೋಹ ಕಾಯ್ದೆಯನ್ನು ರದ್ದುಗೊಳಿಸಿದರೆ ದೇಶದ ಭದ್ರತೆ ಹಾಗೂ ಸಾರ್ವಭೌಮತೆ ಮೇಲೆ ಗಂಭೀರ ಪರಿಣಾಮಗಳು ಎದುರಾಗುತ್ತವೆ ಎಂದು ಕಳವಳ ವ್ಯಕ್ತಪಡಿಸಿದೆ. ಇದೇ ವೇಳೆ, ದೇಶದ್ರೋಹ ಕೇಸಿನಲ್ಲಿನ ಕನಿಷ್ಠ ಶಿಕ್ಷೆಯನ್ನು 3 ರಿಂದ 7 ವರ್ಷಕ್ಕೆ ಹೆಚ್ಚಿಸಬೇಕು ಎಂದೂ ಅದು ಶಿಫಾರಸು ಮಾಡಿದೆ.

ದೇಶದ್ರೋಹ ಕಾಯ್ದೆಯ ದುರ್ಬಳಕೆಯನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ (Union Law Minister Arjun Ram Meghwal) ಅವರಿಗೆ ನಿವೃತ್ತ ನ್ಯಾ. ರಿತು ರಾಜ್‌ ಅವಸ್ಥಿ (Ritu Raj Awasthi) ಅವರ ನೇತೃತ್ವದ ಕಾನೂನು ಆಯೋಗ ಇತ್ತೀಚೆಗೆ ವರದಿಯನ್ನು ಸಲ್ಲಿಕೆ ಮಾಡಿದೆ. ವರದಿ ಬಗ್ಗೆ ಕಾಂಗ್ರೆಸ್‌ ಪ್ರತಿಕ್ರಿಯಿಸಿದ್ದು, ವರದಿಯನ್ನು ಸರ್ಕಾರ ಒಪ್ಪಿಕೊಳ್ಳಲೇಬೇಕು ಎಂದೇನಿಲ್ಲ. ದೇಶದ್ರೋಹ ಕಾಯ್ದೆ ಬ್ರಿಟಿಷ್ರ ಕಾಲದ್ದು. ಚುನಾವಣೆಗೂ ಮುನ್ನ ಸರ್ಕಾರ ಇದನ್ನು ವಿಪಕ್ಷಗಳ ವಿರುದ್ಧ ಪ್ರಯೋಗಿಸಬಹುದು ಎಂದು ಆತಂಕ ವ್ಯಕ್ತಪಡಿಸಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 124ಎ ಅನ್ನು ದೇಶದ್ರೋಹ ಕಾಯ್ದೆ ಎಂದು ಕರೆಯಲಾಗುತ್ತದೆ. ಈ ಕಾಯ್ದೆ ದುರ್ಬಳಕೆ ಕುರಿತು ಸುಪ್ರೀಂಕೋರ್ಟ್‌ಗೆ ಅರ್ಜಿಗಳು ಸಲ್ಲಿಕೆಯಾಗಿದ್ದವು. ಹೀಗಾಗಿ ಕಾಯ್ದೆ ಕುರಿತು ಮರುಪರಿಶೀಲನೆ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಹೀಗಾಗಿ ಅಲ್ಲಿವರೆಗೂ ದೇಶದ್ರೋಹ ಕಾಯ್ದೆಯಡಿ ಕೇಸ್‌ ದಾಖಲಾತಿ, ತನಿಖೆ, ವಿಚಾರಣೆ ಎಲ್ಲದಕ್ಕೂ ಸುಪ್ರೀಂಕೋರ್ಟ್ ತಡೆ ನೀಡಿತ್ತು.

ಕಾನೂನು ಆಯೋಗ ಅಧ್ಯಕ್ಷರಾಗಿ ನ್ಯಾ ಅವಸ್ಥಿ ಅಧಿಕಾರ ಸ್ವೀಕಾರ

ಆಯೋಗದ ವರದಿಯಲ್ಲಿ ಏನಿದೆ?:

ಕೆಲವೊಂದು ದೇಶಗಳು ಇಂತಹ ಕಾಯ್ದೆಯನ್ನು ರದ್ದು ಮಾಡಿವೆ ಎಂಬ ಕಾರಣಕ್ಕೆ ದೇಶದ್ರೋಹ ಕಾಯ್ದೆಯನ್ನು ರದ್ದುಗೊಳಿಸಿದರೆ, ಭಾರತದಲ್ಲಿನ ಎದ್ದು ಕಾಣುವ ವಾಸ್ತವ ಸಂಗತಿಗಳ ವಿಚಾರದಲ್ಲಿ ಕುರುಡಾದಂತೆ ಆಗುತ್ತದೆ. ದುರ್ಬಳಕೆ ತಡೆಯುವುದಕ್ಕೆ ಕ್ರಮ ಕೈಗೊಂಡು ಆ ಕಾಯ್ದೆಯನ್ನು ಉಳಿಸಿಕೊಳ್ಳಬೇಕು. ದೇಶದ್ರೋಹ ಕಾಯ್ದೆ ಎಂಬುದು ವಸಾಹತು ಬಳುವಳಿ ಎಂಬುದು ಅದರ ರದ್ದತಿಗೆ ಆಧಾರವಾಗಲಾರದು. ಆ ವಾದವನ್ನೇ ಇಟ್ಟುಕೊಳ್ಳುವುದಾದರೆ, ಇಡೀ ಭಾರತೀಯ ಕಾನೂನು ವ್ಯವಸ್ಥೆಯೇ ವಸಾಹತು ಬಳುವಳಿಯಾಗಿದೆ. ಪೊಲೀಸ್‌ ಪಡೆ ಹಾಗೂ ಅಖಿಲ ಭಾರತ ಆಡಳಿತ ಸೇವೆ ಕೂಡ ಬ್ರಿಟಿಷರ ಕಾಲದ್ದಾಗಿವೆ ಎಂದು ಹೇಳಿದೆ.

ಹೀಗಾಗಿ ದುರ್ಬಳಕೆ ತಡೆಗೆ ಕ್ರಮಗಳನ್ನು ಕೈಗೊಂಡು ದೇಶದ್ರೋಹ ಕಾಯ್ದೆ ಮುಂದುವರಿಸಬೇಕು. ರದ್ದಾದರೆ ದೇಶದ ಭದ್ರತೆ ಹಾಗೂ ಸಾರ್ವಭೌಮತೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಭಾರತದಲ್ಲಿ 10 ಲಕ್ಷ ಜನರಿಗೆ 19 ಜಡ್ಜ್‌ಗಳು

ವರದಿಯಲ್ಲಿ ಏನಿದೆ?

  • ದೇಶದ್ರೋಹ ಕಾಯ್ದೆ ರದ್ದುಪಡಿಸಿದರೆ ದೇಶದ ಭದ್ರತೆ, ಸಾರ್ವಭೌಮತೆಗೆ ಧಕ್ಕೆ
  • ಕೆಲ ದೇಶಗಳಲ್ಲಿ ರದ್ದು ಮಾಡಲಾಗಿದೆ ಎಂದು ನಮ್ಮಲ್ಲೂ ರದ್ದುಪಡಿಸಿದರೆ ಸಮಸ್ಯೆ
  • ಈ ಕಾಯ್ದೆ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು
  • ಬ್ರಿಟಿಷ್‌ ಕಾಲದ ಕಾಯ್ದೆ ಎಂಬ ಕಾರಣಕ್ಕೆ ರದ್ದು ಬೇಡ: ಕೇಂದ್ರ ಸರ್ಕಾರಕ್ಕೆ ಸಲಹೆ
click me!