
ಚೆನ್ನೆ: ದೇಶದ ಹಸಿರು ಕ್ರಾಂತಿಯ ಜನಕ ಎಂದೇ ಖ್ಯಾತಿ ಗಳಿಸಿದ್ದ ಕೃಷಿತಜ್ಞ ಎಂ.ಎಸ್. ಸ್ವಾಮಿನಾಥನ್ ಅವರು ನಿಧನರಾಗಿದ್ದಾರೆ. 98 ವರ್ಷಷ ಪ್ರಾಯದ ಅವರು ತಮಿಳುನಾಡಿನ ಚೆನ್ನೈನಲ್ಲಿರುವ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ಇಂದು ಮುಂಜಾನೆ 11.15ಕ್ಕೆ ಅವು ನಿಧನರಾಗಿದ್ದಾರೆ ಎಂಬ ವಿಚಾರವನ್ನು ಅವರ ಕುಟುಂಬ ಖಚಿತಪಡಿಸಿದೆ. ಎಂ.ಎಸ್ ಸ್ವಾಮಿನಾಥನ್ ಅವರು 1925 ಆಗಸ್ಟ್ 7 ರಂದು ತಮಿಳುನಾಡಿನ ಕುಂಬಕೋಣಂನಲ್ಲಿ ಜನಿಸಿದರು. ಇವರ ಪತ್ನಿ ಮೀನಾ ಸ್ವಾಮಿನಾಥನ್ ಕಳೆದ ವರ್ಷವಷ್ಟೇ ಸಾವನ್ನಪ್ಪಿದ್ದರು.
ಸ್ವಾಮಿನಾಥನ್ ಅವರು ನಾರ್ಮನ್ ಬೋರ್ಲಾಗ್ ಮತ್ತು ಇತರ ವಿಜ್ಞಾನಿಗಳೊಂದಿಗೆ ಸೇರಿಕೊಂಡು 1960 ರ ದಶಕದಲ್ಲಿ ಬರಗಾಲದಂತಹ ಸಂದರ್ಭಗಳಲ್ಲಿ ರೈತರ ಜೀವನ ಸುಧಾರಿಸಲು ಸರ್ಕಾರದ ನೀತಿಗಳೊಂದಿಗೆ ಸಾಮಾಜಿಕ ಕ್ರಾಂತಿಯನ್ನು ತರಲು ಕೆಲಸ ಮಾಡಿದರು. ಈ ಮೂಲಕ ರೈತಾಪಿ ಜನರ ಬದುಕನ್ನು ಸುಧಾರಿಸಿದರು. ಈ ಕಾರಣಕ್ಕಾಗಿ, ಎಂಎಸ್ ಸ್ವಾಮಿನಾಥನ್ ಅವರನ್ನು ಹಸಿರು ಕ್ರಾಂತಿಯ ಪಿತಾಮಹ ಎಂದು ಕರೆಯಲಾಗುತ್ತದೆ.
ಫಿಲಿಪೈನ್ಸ್ನ ಇಂಟರ್ನ್ಯಾಶನಲ್ ರೈಸ್ ರಿಸರ್ಚ್ ಇನ್ಸ್ಟಿಟ್ಯೂಟ್ನ (ಐಆರ್ಆರ್ಐ) ಡೈರೆಕ್ಟರ್ ಜನರಲ್ ಆಗಿ ಕೆಲಸ ಮಾಡಿದ್ದ ಸ್ವಾಮಿನಾಥನ್ ಅವರಿಗೆ 1987 ರಲ್ಲಿ ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಮೊದಲ ಜಾಗತಿಕ ಆಹಾರ ಪ್ರಶಸ್ತಿಯ ಅತ್ಯುತ್ತಮ ಗೌರವವನ್ನು ನೀಡಲಾಯ್ತು. ಸ್ವಾಮಿನಾಥನ್ ಅವರನ್ನು ಭಾರತದ ಕೃಷಿಯ ಪಿತಾಮಹ ಎಂದು ಕೂಡ ಕರೆಯಲಾಗುತ್ತದೆ. ಇವರು ಹೆಚ್ಚು ಇಳುವರಿ ನೀಡುವ ಭತ್ತದ ತಳಿ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದು ಭಾರತದ ಕಡಿಮೆ ಆದಾಯದ, ಕಡಿಮೆ ಭೂಮಿ ಹೊಂದಿರುವ ರೈತರು ಹೆಚ್ಚಿನ ಇಳುವರಿಯನ್ನು ಉತ್ಪಾದಿಸಲು ಸಹಾಯ ಮಾಡಿತು.
ಪ್ರಧಾನಿ ಮೋದಿ ಸಂತಾಪ
ಕೃಷಿತಜ್ಞ ಎಂ.ಎಸ್ ಸ್ವಾಮಿನಾಥನ್ ನಿಧನಕ್ಕೆ ಅನೇಕ ಗಣ್ಯರು ಶೋಕ ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಡಾ. ಎಂ.ಎಸ್. ಸ್ವಾಮಿನಾಥನ್ ನಿಧನದಿಂದ ತೀವ್ರ ಬೇಸರವಾಗಿದೆ. ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಅತ್ಯಂತ ನಿರ್ಣಾಯಕ ಅವಧಿಯಲ್ಲಿ, ಕೃಷಿಯಲ್ಲಿ ಅವರ ಅದ್ಭುತ ಕೆಲಸವು ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸಿತು ಮತ್ತು ನಮ್ಮ ರಾಷ್ಟ್ರಕ್ಕೆ ಆಹಾರ ಭದ್ರತೆಯನ್ನು ಖಾತ್ರಿಪಡಿಸಿತು ಎಂದು ಪ್ರಧಾನಿ ಟ್ವಿಟ್ ಮಾಡಿದ್ದು, ಅವರೊಂದಿಗೆ ಕಳೆದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ