ಚೆನ್ನೈ: ತಮಿಳುನಾಡಿನ ದೇಗುಲವೊಂದರ ಆನೆಗೆ ಮಾವುತರು ಹೊಡೆದು ಬಡಿದು ಚಿತ್ರಹಿಂಸೆ ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆನೆಯ ಬಿಡುಗಡೆಗೆ ಪ್ರಾಣಿಗಳ ಹಕ್ಕುಗಳಿಗಾಗಿ ಹೋರಡುವ ಸಂರಕ್ಷಣಾ ತಂಡ ಪೇಟಾ ಆಗ್ರಹಿಸಿದೆ. ಇದು ತಮಿಳುನಾಡಿನ ನಾಗರಕೊಯಿಲ್ ಜಿಲ್ಲೆಯಲ್ಲಿ ಕಂಡು ಬಂದ ದೃಶ್ಯವಾಗಿದೆ. ಆನೆಯ ಪಾಲಕ ಎಂದು ಗುರುತಿಸಲಾದ ವ್ಯಕ್ತಿ ಆನೆಯ ಕಾಲುಗಳಿಗೆ ಹೊಡೆದು ಬಡಿದು ಹಿಂಸಿಸುತ್ತಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮಾವುತನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಆನೆಯ ಹೆಸರು ಜೊಯ್ಮಾಲ ಅಥವಾ ಜೆಯಮಾಲಾ ಎಂಬುದಾಗಿದ್ದು, ವರದಿಗಳ ಪ್ರಕಾರ ಅಸ್ಸಾಂನಿಂದ ಈ ಆನೆಯನ್ನು ಕರೆತಂದು ಅಕ್ರಮವಾಗಿ ಸೆರೆಯಲ್ಲಿ ಇರಿಸಲಾಗಿತ್ತು.
ಇತ್ತ ಆನೆ ಜೆಯಮಾಲಾಗೆ ಹಿಂಸೆ ನೀಡುತ್ತಿರುವ ವಿಡಿಯೋ ಪ್ರಾಣಿಗಳ ಸಂರಕ್ಷಣಾ ಸಂಸ್ಥೆ ಪೇಟಾ ಇಂಡಿಯಾದ ಗಮನಕಕ್ಕೂ ಬಂದಿದ್ದು, ಈ ಆನೆಯ ಬಿಡುಗಡೆಗೆ ಆಗ್ರಹಿಸಿದೆ. ವಿಡಿಯೋದಲ್ಲಿ ಕಾಣಿಸುವಂತೆ ಆನೆಗೆ ಹಿಂಸೆ ನೀಡಲು ಕೋಲು, ದೊಣ್ಣೆ, ಕಬ್ಬಿಣದ ಸರಳು, ಕಬ್ಬಿಣದ ಸರಪಣಿಯಿಂದ ಹಿಂಸೆ ನೀಡಲಾಗುತ್ತಿದ್ದು, ತೀವ್ರ ನೋವಿನಿಂದ ಕೂಡಿದ ಈ ಹಿಂಸೆಗೆ ಆನೆ ಕಿರುಚುವುದು ಕೇಳಿಸುತ್ತಿದೆ. ಇದು ಜೆಯಮಾಲಳ ಎರಡನೇ ವಿಡಿಯೋ ಆಗಿದೆ. ಕಳೆದ ವರ್ಷ ದಕ್ಷಿಣದ ರಾಜ್ಯವೊಂದರ ಪುನರ್ವಸತಿ ಶಿಬಿರದಲ್ಲಿ ಜೆಯಮಾಲಾಗೆ ಥಳಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಪ್ರಾಣಿಗಳ ಹಕ್ಕುಗಳ ಸಮಿತಿ ಈ ವಿಡಿಯೋಗಳ ಜೊತೆ ಪಶುವೈದ್ಯಕೀಯ ತಪಾಸಣೆ ವರದಿಯನ್ನು ತಮಿಳುನಾಡು ಹಾಗೂ ಅಸ್ಸಾಂನ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ಪೇಟಾ ಹೇಳುವಂತೆ ಈ ಆನೆಯನ್ನು ತಮಿಳುನಾಡಿನ ಶ್ರೀವಿಲಿಪುತೂರು ನಾಚಿಯರ್ ತಿರುಕೊವಿಲ್ ದೇಗುಲದಲ್ಲಿ ದಶಕಕ್ಕೂ ಅಧಿಕ ಕಾಲದಿಂದ ಸೆರೆಯಲ್ಲಿ ಇಡಲಾಗಿದೆ. ಅಲ್ಲದೇ ಸಮೀಪದ ಕೃಷ್ಣ ಕೋವಿಲ್ ದೇಗುಲದಲ್ಲಿಯೂ ಇದನ್ನು ಇಡಲಾಗಿತ್ತು. ಜೆಯಮಾಲಾಳಿಗೆ ನೋವು ವಾಡಿಕೆ ಆಗಿದೆ. ಆಕೆಯ ಮಾವುತ ಇಕ್ಕಳವನ್ನು ಬಳಸಿ ಆಕೆಯ ಚರ್ಮವನ್ನುಇನ್ಸ್ಪೆಕ್ಟರ್ಗಳ ಮುಂದೆಯೇ ತಿರುಚಿ ಆಕೆಯನ್ನು ನಿಯಂತ್ರಿಸುತ್ತಾನೆ. ಆನೆಯನ್ನು ನಿಯಂತ್ರಿಸಲು ಹಲವು ಉಪಕರಣಗಳು ಆನೆ ಶೆಡ್ನಲ್ಲಿ ಕಂಡು ಬಂದಿವೆ. ಅಲ್ಲದೇ ದಿನಕ್ಕೆ 16 ಗಂಟೆಗಳ ಕಾಲ ಈ ಆನೆಯ ಎರಡು ಕಾಲುಗಳನ್ನು ಬಂಧಿಸಿಟ್ಟಿರುತ್ತಾರೆ ಎಂದು PETA ಹೇಳಿದೆ.
ಚಿಕ್ಕಮಗಳೂರು: ಮೋಹಿನಿ ಬಲೆಗೆ ಬಿದ್ದ ಮದಗಜ, ನಿಟ್ಟುಸಿರು ಬಿಟ್ಟ ಜನತೆ..!
ತಮಿಳುನಾಡು ಸೇರಿದಂತೆ ದೇಶದ ಇತರ ಭಾಗದಲ್ಲಿ ಮಾವುತರ ಹಿಂಸೆ ತಡೆಯಲಾಗದೇ ಸಿಟ್ಟಿಗೆದ್ದ ಆನೆಗಳು ದಾಳಿ ಮಾಡಿದ ಹಾಗೂ ಮಾವುತನನ್ನು ಕೊಂದ ನಿದರ್ಶನಗಳಿವೆ. ಇತ್ತೀಚೆಗೆ ಅಸ್ಸಾಂನಲ್ಲಿ ಆನೆ ದೈವನೈ ತನ್ನ ಮಾವುತನನ್ನು ಕೊಂದು ಹಾಕಿತ್ತು. ಹಾಗೆಯೇ ತಿರುಚಿಯಲ್ಲಿ ಮನ್ಸಿ ಎಂಬ ಆನೆಯೂ ಮಾವುತನನ್ನು ಕೊಂದಿತ್ತು ಎಂದು ಪೇಟಾ ಹೇಳಿದೆ.
ಕೆಳಗೆ ಬಿದ್ದ ಮಕ್ಕಳ ಚಪ್ಪಲಿಯನ್ನು ಎತ್ತಿಕೊಟ್ಟ ಆನೆ: ವಿಡಿಯೋ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ