
ಬೆಂಗಳೂರು (ಜ.28): ತೀವ್ರ ಹೃದಯಘಾತಕ್ಕೆ ಒಳಗಾಗಿದ್ದ ತೆಲುಗು ಚಿತ್ರನಟ ನಂದಮೂರಿ ತಾರಕ ರತ್ನ ಅವರನ್ನು ಆನೇಕಲ್ನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಈ ವೇಳೆ ಆಸ್ಪತ್ರೆಗೆ ದಾಖಲಿಸಿಕೊಂಡು ಸ್ಟಂಟ್ ಅಳವಡಿಕೆ ಮಾಡಲಾಗಿತ್ತು. ಆದರೆ, ಸಂಜೆಯಾದರೂ ರಕ್ತನಾಳದಲ್ಲಿ ಉಂಟಾಗುತ್ತಿರುವ ರಕ್ತಸ್ರಾವ ನಿಲ್ಲದೇ ಅವರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದೆ.
ನಿನ್ನೆ ತಡರಾತ್ರಿ ಆಂಧ್ರದ ಕುಪ್ಪಂನ ಪಿಇಎಸ್ ವೈದ್ಯಕೀಯ ಕಾಲೇಜಿನಿಂದ ತಾರಕ ರತ್ನ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರ ಯುವ ಗಲಮ್ ಪಾದಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಕುಪ್ಪಂಗೆ ತೆರಳಿದ್ದ ವೇಳೆ ನಂದಮುರಿ ತಾರಕ ರತ್ನ ಅವರು ಎಡವಿ ಬಿದ್ದು ತೀವ್ರ ಹೃದಯಾಘಾತವಾಗಿತ್ತು. ಈ ಹಿನ್ನೆಲೆ ತಡ ರಾತ್ರಿ ಆಂಬ್ಯುಲೆನ್ಸ್ ಮೂಲಕ ನಾರಾಯಣ ಹೃದಯಾಲಯಕ್ಕೆ ತೆಲುಗು ಚಿತ್ರನಟ ನಂದಮೂರಿ ತಾರಕರತ್ನ ಅವರನ್ನು ಕರೆತರಲಾಗಿದ್ದು, ಐಸಿಯುಗೆ ಶಿಫ್ಟ್ ಮಾಡಲಾಗಿದೆ.
ತೆಲುಗು ಚಿತ್ರನಟ ನಂದಮೂರಿ ತಾರಕ ರತ್ನಗೆ ತೀವ್ರ ಹೃದಯಾಘಾತ: ಹಾರ್ಟ್ ಬ್ಲಾಕ್ ಹಿನ್ನೆಲೆ ಹೃದಯಕ್ಕೆ ಸ್ಟೆಂಟ್
ಆಂಜಿಯೋಪ್ಲ್ಯಾಸ್ಟಿ ಮೂಲಕ ಸ್ಟಂಟ್ ಅಳವಡಿಕೆ: ನಂತರ, ನಟ ನಂದಮೂರಿ ತಾರಕ ರತ್ನಗೆ ನಾರಾಯಣ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ತೀವ್ರ ಹೃದಯಾಘಾತ ಹಿನ್ನೆಲೆ ಹೃದಯದ ರಕ್ತ ನಾಳಗಳು ಬ್ಲಾಕ್ ಆಗಿವೆ. ಬ್ಲಾಕ್ ಆಗಿರುವ ರಕ್ತನಾಳಗಳ ಸರಿಪಡಿಸಲು ವೈದ್ಯರ ಪ್ರಯತ್ನ ಮೂಮದುವರೆಸಿದ್ದಾರೆ. ಇಂಟ್ರಾ-ಅಯೋರ್ಟಿಕ್ ಪಂಪ್ (ABP) ಮತ್ತು ವ್ಯಾಸೋಆಕ್ಟಿವ್ ನೆರವಿನಿಂದ ಹೃದಯ ಚಿಕಿತ್ಸೆ ಮಾಡಲಾಗುತ್ತಿದೆ. ಆಂಜಿಯೋಪ್ಲ್ಯಾಸ್ಟಿ ಮೂಲಕ ಹಾನಿಗಳಗಾದ ರಕ್ತನಾಳಗಳಿಗೆ ಸ್ಟಂಟ್ ಅಳವಡಿಕೆ ಮಾಡಲಾಗಿದೆ. ಆದರೆ, ಸ್ಟಂಟ್ ಅಳವಡಿಕೆ ನಡುವೆಯು ರಕ್ತಸ್ರಾವ ನಿಲ್ಲುತ್ತಿಲ್ಲ.
24 ಗಂಟೆಗಳ ಚಿಕಿತ್ಸೆ ನಿರ್ಣಾಯಕ: ಹೃದ್ರೋಗ ತಜ್ಞರು, ನುರಿತ ವೈದ್ಯರ ತಂಡದಿಂದ ಚಿಕಿತ್ಸೆ ಮುಂದುವರೆದಿದ್ದು, ಮುಂದಿನ 24 ಗಂಟೆಗಳ ಚಿಕಿತ್ಸೆ ನಿರ್ಣಾಯಕ ಆಗಲಿದೆ ಎಂದು ನಾರಾಯಣ ಹೆಲ್ತ್ ಸಿಟಿ ವೈದ್ಯಕೀಯ ತಂಡದಿಂದ ಹೆಲ್ತ ಬುಲೆಟಿನ್ ಬಿಡುಗಡೆ ಮಾಡಿದೆ. ನಾರಾಯಣ ಹೃದಯಾಲಯ ನುರಿತ ವೈದ್ಯರ ತಂಡದಿಂದ ಮುಂದುವರಿದ ಚಿಕಿತ್ಸೆ ಮಾಡಲಾಗುತ್ತಿದೆ. ಸದ್ಯ ಎಕ್ಮೊ ನೆರವಿನಿಂದ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.
ಆಸ್ಪತ್ರೆ ಬಳಿ ಜಮಾಯಿಸಿದ ಅಭಿಮಾನಿಗಳು: ತಾರಕ ರತ್ನ ದಾಖಲಾಗಿರುವ ಆಸ್ಪತ್ರೆ ಬಳಿ ಅಭಿಮಾನಿಗಳು ದೌಡಾಯಿಸಿದ್ದಾರೆ. ಆನೇಕಲ್ ಬಳಿಯ ನಾರಾಯಣ ಹೆಲ್ತ್ ಸಿಟಿ ಬಳಿ ಜಮಾವಣೆ ಆಗಿದ್ದು, ಅಭಿಮಾನಿಗಳನ್ನು ಚದುರಿಸಲು ಪೊಲೀಸರ ಹರಸಾಹಸ ಮಾಡುತ್ತಿದ್ದಾರೆ. ಈಗಾಗಲೇ ನಟ ಬಾಲಕೃಷ್ಣ, ಸೋದರತ್ತೇ ಪುರಂದೇಶ್ವರಿ ಆಸ್ಪತ್ರೆಯಲ್ಲಿ ಠಿಕಾಣಿ ಹೂಡಿದ್ದಾರೆ. ಇದೀಗ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆನೇಕಲ್ನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಆಗಮಿಸಿ ವೈದ್ಯರೊಂದಿಗೆ ತಾರಕರತ್ನ ಅವರ ಆರೋಗ್ಯ ಬಗ್ಗೆ ವಿಚಾರಿಸಿದರು.
Nandamuri Taraka Ratna; ಕುಸಿದು ಬಿದ್ದ ನಟ ತಾರಕ ರತ್ನ ತೀವ್ರ ಅಸ್ವಸ್ಥ; ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ
ಚೇತರಿಸಿಕೊಳ್ಳಲು ಸಮಯ ಬೇಕಿದೆ
ಪಾದಯಾತ್ರೆ ವೇಳೆ ತಾರಕರತ್ನನಿಗೆ ಹೃದಯಾಘಾತವಾಗಿತ್ತು. ಕುಂಪಂನಲ್ಲಿ ಚಿಕಿತ್ಸೆ ಪಡೆದು ಉತ್ತಮ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆ ತರಲಾಗಿದೆ. ವೈದ್ಯರು ತಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದಾರೆ. ವೈದ್ಯರು ತಾರಕನನ್ನು ವೀಕ್ಷಣೆಯಲ್ಲಿ ಇರಿಸಿದ್ದಾರೆ. ನಾನು ವೈದ್ಯರೊಂದಿಗೆ ಮಾತನಾಡಿದ್ದೇನೆ. ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ತಾರಕರತ್ನ ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ವೈದ್ಯರು ಎಲ್ಲ ರೀತಿಯಲ್ಲಿ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
- ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ