
ಚೆನ್ನೈ: ಹಿಂದೂ ಧರ್ಮದ ಕುರಿತು ತಮಿಳುನಾಡಿನ ಡಿಎಂಕೆ ಪಕ್ಷದ ಸಚಿವರ ಹೇಳಿಕೆ ನಿಲ್ಲುವಂತೆ ಕಾಣುತ್ತಿಲ್ಲ. ತಮಿಳುನಾಡಿನ ಅರಣ್ಯ ಸಚಿವ ಕೆ. ಪೊನ್ಮುಡಿ ಇದೀಗ, ಶೈವ ಮತ್ತು ವೈಷ್ಣವ ಪಂಥದ ಭಿನ್ನತೆಯನ್ನು ಲೈಂಗಿಕ ಭಂಗಿಗೆ ಹೋಲಿಸಿ ಹೊಸ ವಿವಾದ ಸೃಷ್ಟಿಸಿದ್ದಾರೆ. ಸಚಿವರ ಈ ಹೇಳಿಕೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಿಜೆಪಿ ಮಾತ್ರವಲ್ಲದೆ ಸ್ವತಃ ಡಿಎಂಕೆ ಮುಖಂಡರಿಂದಲೇ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಜತೆಗೆ ಅವರನ್ನು ಡಿಎಂಕೆ ಉಪಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಲಾಗಿದೆ.
ಹೇಳಿದ್ದೇನು?:
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ‘ವ್ಯಕ್ತಿಯೊಬ್ಬ ವೇಶ್ಯೆ ಬಳಿ ಹೋಗುತ್ತಾನೆ. ಆಗ ವೇಶ್ಯೆಯು ನಿನ್ನದು ಶೈವಪಂಥವೋ, ವೈಷ್ಣವ ಪಂಥವೋ ಎಂದು ಕೇಳುತ್ತಾಳೆ. ಆಕೆಯ ಪ್ರಶ್ನೆಯಿಂದ ವ್ಯಕ್ತಿ ಗೊಂದಲಕ್ಕೀಡಾಗುತ್ತಾನೆ. ಆಗ ವೇಶ್ಯೆಯು, ‘ಒಂದು ವೇಳೆ ನೀನು ಶೈವ (ಅಡ್ಡನಾಮ) ಪಂಥದವನಾಗಿದ್ದರೆ ಮಲಗಿಕೊಂಡ ಲೈಂಗಿಕ ಭಂಗಿಯಲ್ಲಿ ರತಿಕ್ರೀಡೆ ಆಡುತ್ತೀಯಾ ಮತ್ತು ವೈಷ್ಣವಪಂಥದ (ಉದ್ದನಾಮ) ವ್ಯಕ್ತಿ ಆಗಿದ್ದರೆ ನಿಂತಭಂಗಿಯಲ್ಲಿ ರತಿಕ್ರೀಡೆ ಆಡುತ್ತೀಯಾ’ ಎಂದು ಆಕೆ ಹೇಳುತ್ತಾಳೆ'''' ಎಂದು ಹೇಳಿದ್ದರು.
ಸಚಿವರ ಈ ಹೇಳಿಕೆಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಂಥ ಕೀಳು ಹೇಳಿಕೆ ಖಂಡನಾರ್ಹ ಎಂದು ಡಿಎಂಕೆ ಸಂಸದೆ ಕನಿಮೋಳಿ ಅವರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮತ್ತೆ ಬಿಜೆಪಿ, ಅಣ್ಣಾಡಿಎಂಕೆ ಮೈತ್ರಿ
ರೀಕ್ಷೆಯಂತೆ ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯನ್ನು ಒಟ್ಟಾಗಿ ಎದುರಿಸಲಿವೆ. ಚೆನ್ನೈಗೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದನ್ನು ಘೋಷಿಸಿದ್ದಾರೆ.ಮಾಜಿ ಸಿಎಂ, ಅಣ್ಣಾ ಡಿಎಂಕೆಯ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಬಿಜೆಪಿಯ ನಿರ್ಗಮಿತ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರೊಂದಿಗೆ ವೇದಿಕೆ ಹಂಚಿಕೊಂಡು, ಶಾ ಮಾತನಾಡಿದರು. ‘ಈ ಬಾರಿಯ ಚುನಾವಣೆಯನ್ನು ರಾಷ್ಟ್ರಮಟ್ಟದಲ್ಲಿ ನರೇಂದ್ರ ಮೋದಿ ಹಾಗೂ ತಮಿಳುನಾಡಿನಲ್ಲಿ ಪಳನಿಸ್ವಾಮಿಯವರ ನೇತೃತ್ವದಲ್ಲಿ ಎದುರಿಸಲಾಗಿವುದು’ ಎಂದು ಅವರು ಹೇಳಿದರು.
ಇದೇ ವೇಳೆ, 1998ರಲ್ಲಿ ಮಾಜಿ ಸಿಎಂ ಜಯಲಲಿತಾ ಅವರ ಮುಂದಾಳತ್ವದಲ್ಲಿ ಡಿಎಂಕೆ ಮತ್ತು ಬಿಜೆಪಿ ಒಟ್ಟಾಗಿ ಚುನಾವಣೆ ಎದುರಿಸಿ, 39ರಲ್ಲಿ 30 ಲೋಕಸಭಾ ಸೀಟುಗಳನ್ನು ಗೆದ್ದದ್ದನ್ನು ಸ್ಮರಿಸಿದ ಶಾ, ‘ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜಯಲಲಿತಾ ಅವರು ಒಟ್ಟಾಗಿ ಕೆಲಸ ಮಾಡಿದ್ದರು.ಆಗ ಪಕ್ಷ ಎನ್ಡಿಎ ಕೂಟದ ಭಾಗವಾಗಿತ್ತು, ಅಂತೆಯೇ, ಎನ್ಡಿಎ ಒಕ್ಕೂಟವು ತಮಿಳುನಾಡು ಚುನಾವಣೆಯನ್ನು ಖಂಡಿತವಾಗಿ ಗೆಲ್ಲಲಿದೆ ಎಂಬ ವಿಶ್ವಾಸವನ್ನೂ ಶಾ ವ್ಯಕ್ತಪಡಿಸಿದರು’ ಎಂದರು.
ಆದರೆ, ಅಣ್ಣಾಡಿಎಂಕೆ ಪಕ್ಷದ ಆಂತರಿಕ ವಿಷಯದಲ್ಲಿ ಬಿಜೆಪಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕೆಲವು ವರ್ಷಗಳ ಹಿಂದೆ ಅಣ್ಣಾಡಿಎಂಕೆ-ಬಿಜೆಪಿ ಮೈತ್ರಿಯು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಹಾಗೂ ಪಳನಿಸ್ವಾಮಿ ಸಂಘರ್ಷದ ಕಾರಣ ಮುರಿದಬಿದ್ದಿತ್ತು. ಹೀಗಾಗಿಯೇ ಈ ಬಾರಿ ಅಣ್ಣಾಮಲೈರನ್ನು ಬದಲಿಸಿ ನೈನಾರ್ ನಾಗೇಂದ್ರನ್ ಅವರನ್ನು ಬಿಜೆಪಿ ರಾಜ್ಯ ಅಧ್ಯಕ್ಷರನ್ನಾಗಿ ಮಾಡಿದೆ.
ಇದನ್ನೂ ಓದಿ: ತಮಿಳ್ನಾಡು ಗೌರ್ನರ್ ರವಿಗೆ ಸುಪ್ರೀಂಕೋರ್ಟ್ ಪ್ರಹಾರ: ಪೊನ್ಮುಡಿಗೆ ಸಚಿವ ಸ್ಥಾನ ನೀಡದ್ದಕ್ಕೆ ಆಕ್ರೋಶ!
ತ.ನಾಡು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನೈನಾರ್ ಆಯ್ಕೆ ಖಚಿತ
ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನೈನಾರ್ ನಾಗೇಂದ್ರನ್ ಅವರು ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ.ರಾಜ್ಯದಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಾಗೇಂದ್ರನ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಅವರ ಹೆಸರನ್ನು ನಿರ್ಗಮಿತ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ, ಕೇಂದ್ರ ಸಚಿವ ಎಲ್. ಮುರುಗನ್, ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್, ಮಹಿಳಾ ಮೋರ್ಚಾ ಅಧ್ಯಕ್ಷರೂ ಆದ ಶಾಸಕಿ ವನತಿ ಶ್ರೀನಿವಾಸನ್ ಅವರು ಸೂಚಿಸಿದ್ದರು.
ಗುರುಮೂರ್ತಿ ಜತೆ ಶಾ ಭೇಟಿ:
ಈ ನಡುವೆ, ಚೆನ್ನೈನಲ್ಲಿ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಆರ್ಎಸ್ಎಸ್ ನಂಟಿನ ತುಘಲಕ್ ಪತ್ರಿಕೆಯ ಸಂಪಾದಕ ಎಸ್. ಗುರುಮೂರ್ತಿ ಅವರನ್ನು ಭೇಟಿ ಮಾಡಿದರು ಹಲವು ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ಕೇಂದ್ರ ಸಚಿವ ಎಲ್. ಮುರುಗನ್ ಹಾಗೂ ಕೆ. ಅಣ್ಣಾಮಲೈ ಶಾ ಅವರ ಜೊತೆಗಿದ್ದರು.
ಇದನ್ನೂ ಓದಿ: ಆದಾಯ ಮೀರಿ ಆಸ್ತಿ ಗಳಿಕೆ, ತಮಿಳುನಾಡು ಸಚಿವ ಪೊನ್ಮುಡಿಗೆ 3 ವರ್ಷ ಜೈಲು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ