
ಚೆನ್ನೈ(ಜು.18): ಪ್ರಧಾನಿ ನರೇಂದ್ರ ಮೋದಿ ಎರಡು ವಾರಗಳ ಹಿಂದಷ್ಟೇ ತನ್ನ ಕ್ಯಾಬಿನೆಟ್ ವಿಸ್ತರಿಸಿದ್ದಾರೆ. ಈ ವೇಳೆ 43 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್. ಮುರುಗನ್ ಕೂಡಾ ರಾಜ್ಯ ಮಂತ್ರಿಯಾಗಿದ್ದಾರೆ. 44 ವರ್ಷದ ಮುರುಗನ್ ದೀರ್ಘ ಸಂಘರ್ಷದ ಬಳಿಕ ದೆಹಲಿವರೆಗಿನ ಹಾದಿಯನ್ನು ಕಂಡುಕೊಂಡಿದ್ದಾರೆ. ಆದರೀಗ ಸದ್ಯ ಎಲ್ಲೆಲ್ಲೂ ಅವರ ತಂದೆ ತಾಯಿ ವಿಚಾರವೇ ಚರ್ಚೆ ಹುಟ್ಟಿಸಿದೆ. ರಾಜಕೀಯದಿಂದ ಬಹಳ ದೂರವಿರುವ ಇವರ ತಂದೆ, ತಾಯಿ ತಮ್ಮ ಹಳ್ಳಿಯಲ್ಲಿ ಹೊಲದ ಕೆಲಸ ಮಾಡಿಕೊಂಡಿದ್ದಾರೆ. ಮಗನ ಈ ಸಾಧನೆಗೆ ಬಹಳ ಹೆಮ್ಮೆ ಇದೆ ಎಂದಿರುವ ಮುರುಗನ್ ತಂದೆ ತಾಯಿ, ತಮ್ಮ ಜೀವನ ತಾವೇ ನಡೆಸಿಕೊಂಡು ಹೋಗುತ್ತೇವೆ ಎಂದಿದ್ದಾರೆ.
ರೈಲ್ವೇ ಸಿಬ್ಬಂದಿ ಮನಗೆದ್ದ ರೈಲ್ವೇ ಮಂತ್ರಿ: ಸರ್ ಅಲ್ಲ, ಬಾಸ್ ಎನ್ನುತ್ತಾ ಇಂಜಿನಿಯರ್ ಅಪ್ಪಿಕೊಂಡ್ರು!
ಇನ್ನು ಮಾಧ್ಯಮ ಪ್ರತಿನಿಧಿಗಳು ಅವರ ಮನೆಗೆ ತಲುಪಿದಾಗ ಮುರುಗನ್ ತಂದೆ ತಾಯಿ ದೆಹಲಿಯಿಂದ ಸುಮಾರು ಎರಡೂವರೆ ಸಾವಿರ ಕಿಲೋ ಮೀಟರ್ ದೂರದಲ್ಲಿರುವ ನಮಾಕ್ಕಲ್ ಜಿಲ್ಲೆಯ ಕೊನ್ನೂರ್ ಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದರು. 59 ವರ್ಷದ ತಾಯಿ ಎ. ವರುದಾಮ್ಮಲ್ ಹಾಗೂ 68 ವರ್ಷದ ತಂದೆ ಎಲ್ ಲಾಗಾನಾಥನ್ ಬೇರೊಬ್ಬರ ಹೊಲದಲ್ಲಿ ಕೆಲಸ ಮಾಡಿಕೊಂಡಿದ್ದರು. ಮಾಧ್ಯಮಗಳು ಅವರೊಂದಿಗೆ ಮಾತನಾಡಲು ಹೊಲದ ಮಾಲೀಕನ ಅನುಮತಿ ಪಡೆಯಬೇಕಾಯ್ತು.
ಯಶಸ್ಸಿನ ಶ್ರೇಯಸ್ಸು ತೆಗೆದುಕೊಳ್ಳಲಿಲ್ಲ
ಆಂಗ್ಲ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾ ಅನ್ವಯ, ಮುರುಗನ್ ಅವರ ಪೋಷಕರೊಂದಿಗೆ ಮಾತನಾಡಿದಾಗ, ಅವರು ತಮ್ಮ ಮಗನ ಯಶಸ್ಸಿಗೆ ಮನ್ನಣೆ ಪಡೆಯಲು ನಿರಾಕರಿಸಿದರು. ಅವರು, 'ನಮ್ಮ ಮಗ ಕೇಂದ್ರ ಸಚಿವರಾದರೆ ನಾವು ಏನು ಮಾಡಬಹುದು. ಅವರ ವೃತ್ತಿಜೀವನದ ಪ್ರಗತಿಗೆ ನಾವು ಏನನ್ನೂ ಮಾಡಲಿಲ್ಲ ಎಂದು ಬಹಳ ಸರಳವಾಗಿ ಉತ್ತರಿಸಿದ್ದಾರೆ.
ಪೋಷಕರು ಕೆಲಸ ಮಾಡುತ್ತಿದ್ದಾರೆ
ಎಲ್ ಮುರುಗನ್ ಓರ್ವ ದಲಿತ ಮತ್ತು ಅವರು ಅರುಂತತಿಯಾರ್ ಸಮುದಾಯದಿಂದ ಬಂದವರು. ಅವರಿಗೆ ನಮಕ್ಕಲ್ ಜಿಲ್ಲೆಯಲ್ಲಿ ಒಂದು ಸಣ್ಣ ಮನೆ ಇದೆ. ಪೋಷಕರು ಸಿಕ್ಕ ಕೆಲಸ ಮಾಡಿಕೊಂಡಿರುತ್ತಾರೆ. ಕೆಲವೊಮ್ಮೆ ಹೊಲಗಳಲ್ಲಿ ಕಾರ್ಮಿಕನಾಗಿ ಮತ್ತು ಕೆಲವೊಮ್ಮೆ ಕೂಲಿಯಾಳುಗಳಾಗಿ ದುಡಿಯುತ್ತಾರೆ. ನೆರೆಹೊರೆಯವರಿಂದ ತಮ್ಮ ಮಗ ಮಂತ್ರಿಯಾಗುತ್ತಾನೆ ಎಂಬ ಸುದ್ದಿ ತಿಳಿದಾಗ, ಇಬ್ಬರೂ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು. ವಿಶೇಷವೆಂದರೆ ಮಗನ ಯಶಸ್ಸಿನ ಬಗ್ಗೆ ತಿಳಿದ ಬಳಿಕವೂ ಅವರು ತಮ್ಮ ಕೆಲಸವನ್ನು ಬಿಡದೆ ಮುಂದುವರೆಸಿದ್ದಾರೆ.
2 ವರ್ಷದ ಹಿಂದೆ ರಾಜಕೀಯ ಪ್ರವೇಶ, ಮಾಜಿ IAS ಅಧಿಕಾರಿಗೆ ಮಹತ್ವದ ಖಾತೆ ಸಿಕ್ಕಿದ್ದು ಹೀಗೆ!
ಸಾಲ ಮಾಡಿ ಮಗನನ್ನು ಓದಿಸಿದ್ರು
ಮುರುಗನ್ ಅವರ ತಂದೆ ತಮ್ಮ ಮಗ ಅಧ್ಯಯನದಲ್ಲಿ ಬಹಳ ಬುದ್ಧಿವಂತ ಎಂದಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದಿದ ಮುರುಗನ್, ಬಳಿಕ ಚೆನ್ನೈನ ಅಂಬೇಡ್ಕರ್ ಕಾನೂನು ಕಾಲೇಜಿನಿಂದ ಕಾನೂನು ಅಧ್ಯಯನ ಮಾಡಿದರು. ಮಗನ ಶಿಕ್ಷಣಕ್ಕಾಗಿ ತಂದೆ ಸ್ನೇಹಿತರಿಂದ ಹಣವನ್ನು ಸಾಲ ಪಡೆಯಬೇಕಾಗಿತ್ತು. ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷರಾದ ನಂತರ ತನ್ನೊಂದಿಗೆ ಚೆನ್ನೈನಲ್ಲಿ ವಾಸಿಸುವಂತೆ ಮುರುಗನ್ ತನ್ನ ಹೆತ್ತವರನ್ನು ಕರೆದಿದ್ದರೂ ಅವರು ಕೆಲವು ದಿನಗಳ ನಂತರ ಮರಳಿದರು. ಮುರುಗನ್ ಅವರ ತಾಯಿ, 'ನಾವು ಕೆಲವೊಮ್ಮೆ ಮೂರು-ನಾಲ್ಕು ದಿನಗಳಿಗೆ ಚೆನ್ನೈಗೆ ಹೋಗುತ್ತಿದ್ದೆವು, ಆದರೆ ಮಗನ ಕಾರ್ಯನಿರತ ಜೀವನಶೈಲಿಗೆ ನಾವು ಹೊಂದಿಕೊಳ್ಳಲಾಗಲಿಲ್ಲ. ಆದ್ದರಿಂದ ನಾವು ಮತ್ತೆ ನಮ್ಮ ಗ್ರಾಮ ಕೊನ್ನೂರಿಗೆ ಮರಳಿದೆವು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ