ತಮಿಳುನಾಡಲ್ಲಿ ಭಾರಿ ಮಳೆ: ಹಲವು ರೈಲುಗಳು ಸ್ಥಗಿತ; ರೈಲ್ವೆ ನಿಲ್ದಾಣದಲ್ಲೇ ಸಿಲುಕಿದ ನೂರಾರು ಪ್ರಯಾಣಿಕರು

By BK AshwinFirst Published Dec 19, 2023, 11:49 AM IST
Highlights

ಭಾರಿ ಮಳೆ ಮತ್ತು ಹಳಿಗಳ ಮೇಲೂ ಹೆಚ್ಚು ನೀರು ಇದ್ದ ಹಿನ್ನೆಲೆ ರೈಲನ್ನು ತಿರುಚೆಂಡೂರಿನಿಂದ ಸುಮಾರು 32 ಕಿ.ಮೀ. ದೂರದಲ್ಲಿರುವ ಶ್ರೀವೈಕುಂಟಂ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಚೆನ್ನೈ (ಡಿಸೆಂಬರ್ 19, 2023): ತಮಿಳುನಾಡಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಇದರಿಂದ ಜನರು ತತ್ತರಿಸುತ್ತಿದ್ದಾರೆ. ಈ ಪೈಕಿ ತೂತುಕುಡಿ ಜಿಲ್ಲೆಯ ಶ್ರೀವೈಕುಂಟಂನಲ್ಲಿ ಪ್ರವಾಹದಿಂದಾಗಿ ಸುಮಾರು 800 ರೈಲು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ದೇವಾಲಯದ ಪಟ್ಟಣವಾದ ತಿರುಚೆಂಡೂರ್‌ನಿಂದ ಚೆನ್ನೈಗೆ ಹೋಗ್ತಿದ್ದ ಎಕ್ಸ್‌ಪ್ರೆಸ್‌ ರೈಲಿನಲ್ಲಿದ್ದ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ. ಈ ಹಿನ್ನೆಲೆ ಅಧಿಕಾರಿಗಳು ರಕ್ಷಣಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: ಬೆಂಗಳೂರಲ್ಲಿ ಮಳೆಗಾಲ ಮುಗಿಯುತ್ತಿದ್ದಂತೆ ಘರ್ಜಿಸಲಿವೆ ಜೆಸಿಬಿ: ಇಂಥವರು ಕೂಡಲೇ ಎಚ್ಚೆತ್ತುಕೊಳ್ಳಿ!

ತಿರುಚೆಂಡೂರ್‌ - ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20606) ಡಿಸೆಂಬರ್ 17 ರಂದು ರಾತ್ರಿ 8.25ಕ್ಕೆ ತಿರುಚೆಂಡೂರ್‌ನಿಂದ ಚೆನ್ನೈಗೆ ಹೊರಟಿತ್ತು. ಆದರೆ ಭಾರಿ ಮಳೆ ಮತ್ತು ಹಳಿಗಳ ಮೇಲೂ ಪ್ರವಾಹ ಪರಿಸ್ಥಿತಿಯಿಂದಾಗಿ ರೈಲನ್ನು ತಿರುಚೆಂಡೂರಿನಿಂದ ಸುಮಾರು 32 ಕಿ.ಮೀ. ದೂರದಲ್ಲಿರುವ ಶ್ರೀವೈಕುಂಟಂ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಒಟ್ಟಾರೆಯಾಗಿ, ರೈಲಿನಲ್ಲಿದ್ದ 800 ಪ್ರಯಾಣಿಕರು ಸಿಕ್ಕಿಹಾಕಿಕೊಂಡಿದ್ದಾರೆ ಮತ್ತು ಅವರಲ್ಲಿ ಸರಿಸುಮಾರು 500 ಮಂದಿ ಶ್ರೀವೈಕುಂಟಂ ರೈಲ್ವೆ ನಿಲ್ದಾಣದಲ್ಲಿದ್ದಾರೆ ಮತ್ತು ಸುಮಾರು 300 ಮಂದಿ ಹತ್ತಿರದ ಶಾಲೆಯಲ್ಲಿದ್ದಾರೆ ಎಂದು ಅವರು ಹೇಳಿದರು. ಆದರೂ, ಇಡೀ ಪ್ರದೇಶವು ಭಾರಿ ಪ್ರಮಾಣದಲ್ಲಿ ಜಲಾವೃತಗೊಂಡಿದ್ದರಿಂದ ಪ್ರಯಾಣಿಕರು ಹೊರಗೆ ಹೋಗಲು ಸಾಧ್ಯವಾಗಿಲ್ಲ.

ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಏಕಾಏಕಿ ಡೆಂಘೀ ಕೇಸ್‌ ಹೆಚ್ಚಳ!

ಶ್ರೀವೈಕುಂಟಂ ಮತ್ತು ಸೇಡುಂಗನಲ್ಲೂರು ನಡುವಿನ ತಿರುನೆಲ್ವೇಲಿ - ತಿರುಚೆಂಡೂರ್ ಸೆಕ್ಷನ್‌ನಲ್ಲಿ ಬ್ಯಾಲೆಸ್ಟ್ ಕೊಚ್ಚಿಹೋಗಿದ್ದು, ಹಳಿ ನೇತಾಡುತ್ತಿದೆ. ಅಲ್ಲದೆ, ರೈಲು ಹಳಿಗಳ ಮೇಲೆ ಹೆಚ್ಚು ನೀರು ಹರಿಯುತ್ತಿರುವುದರಿಂದ ದಕ್ಷಿಣ ರೈಲ್ವೆ ಸಂಚಾರ ಸ್ಥಗಿತಗೊಳಿಸಿದೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಿಸಿದ್ದು, ರಾಜ್ಯದ ದಕ್ಷಿಣ ಭಾಗದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಡಿಸೆಂಬರ್ 18 ರಂದು ದಕ್ಷಿಣ ತಮಿಳುನಾಡಿನಲ್ಲಿ ಭಾರಿ ಮಳೆಯಿಂದ ಅತ್ಯಂತ ಭಾರಿ ಮಳೆ (204.4 ಮಿಮೀಗಿಂತ ಹೆಚ್ಚು) ಮುಂದುವರಿಯುವ ಸಾಧ್ಯತೆಯಿದೆ ಎಂದು IMD ಹೇಳಿದೆ.

ಇದರ ಪರಿಣಾಮವಾಗಿ, ದಕ್ಷಿಣ ರೈಲ್ವೆಯು ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಹಲವಾರು ರೈಲುಗಳನ್ನು ರದ್ದುಗೊಳಿಸಿದೆ. ಕೆಲವು ಟ್ರೈನ್‌ ಅನ್ನು ಭಾಗಶಃ ರದ್ದುಗೊಳಿಸಲಾಗಿದ್ದರೆ, ಹಲವು ರೈಲುಗಳನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ತಿರುನೆಲ್ವೇಲಿ ಯಾರ್ಡ್ ಜಲಾವೃತಗೊಂಡಿದ್ದರಿಂದ ಪರಿಸ್ಥಿತಿ ಹದಗೆಟ್ಟಿದೆ. ಅದೇ ರೀತಿ ಕೆಲವು ವಿಮಾನಗಳ ಹಾರಾಟವನ್ನೂ ರದ್ದುಗೊಳಿಸಲಾಗಿದೆ. 
 

click me!