ಹೇಳಿಕೆ ಜತೆಗೆ ಲಿಖಿತವಾಗಿಯೂ ಹೈಕಮಾಂಡ್‌ಗೆ ಮನವರಿಕೆ ಮಾಡಿದ್ದೆ, ಪಕ್ಷದಿಂದ ಟಿಕೆಟ್ ಸಿಗದ್ದಕ್ಕೆ ಅಣ್ಣಾಮಲೈ ಸ್ಪಷ್ಟನೆ

Published : Apr 04, 2026, 02:28 PM IST
Annamalai

ಸಾರಾಂಶ

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರುವುದು ತಮ್ಮದೇ ಸ್ವಯಂ ತೀರ್ಮಾನ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ. ತಮ್ಮ ಟಿಕೆಟ್ ಕಟ್ ಆಗಿದೆ ಎಂಬ ವದಂತಿಗಳನ್ನು ತಳ್ಳಿಹಾಕಿದ ಅವರು, ಪಕ್ಷದ ನಾಯಕತ್ವಕ್ಕೆ ಈ ಮೊದಲೇ ಲಿಖಿತವಾಗಿ ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾರೆ. ಇದೀಗ ತಾವು ರಾಜ್ಯಾದ್ಯಂತ ಬಿಜೆಪಿ ಮತ್ತು ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಾಗಿ ಅವರು ಹೇಳಿದ್ದಾರೆ.

ಚೆನ್ನೈ: ತಮಿಳುನಾಡು ರಾಜಕೀಯ ವಲಯದಲ್ಲಿ ಕಳೆದ ಕೆಲ ದಿನಗಳಿಂದ ಚರ್ಚೆಯಾಗುತ್ತಿದ್ದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸದಿರುವ ವಿಷಯಕ್ಕೆ ಇದೀಗ ಸ್ವತಃ ಅವರು ಸ್ಪಷ್ಟನೆ ನೀಡಿದ್ದಾರೆ. ತಮ್ಮ ವಿರುದ್ಧ ಹರಿದಾಡುತ್ತಿದ್ದ ಟಿಕೆಟ್ ಕಟ್ ಆರೋಪಗಳನ್ನು ತಳ್ಳಿಹಾಕಿದ ಅವರು, ಚುನಾವಣೆಗೆ ನಿಲ್ಲದಿರುವುದು ತಮ್ಮದೇ ಸ್ವಯಂ ತೀರ್ಮಾನ ಎಂದು ಹೇಳಿದ್ದಾರೆ.

ಇಂದು ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ನಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂದು ಬಹಳ ಹಿಂದೆಯೇ ನಿರ್ಧರಿಸಿದ್ದೆ. ಈ ತೀರ್ಮಾನವನ್ನು ಪಕ್ಷದ ಕೋರ್  ಕಮಿಟಿಯ ಸಭೆಯಲ್ಲಿ ತಿಳಿಸಿದ್ದಲ್ಲದೆ, ಲಿಖಿತವಾಗಿಯೂ ಯಾವುದೇ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ನಾಯಕತ್ವಕ್ಕೆ ಮಾಹಿತಿ ನೀಡಿದ್ದೆ ಎಂದು ಸ್ಪಷ್ಟಪಡಿಸಿದರು.

ಟಿಕೆಟ್ ಕಟ್ ಆಗಿಲ್ಲ, ನನ್ನದೇ ನಿರ್ಧಾರ

ಇತ್ತೀಚೆಗೆ ಬಿಜೆಪಿ ಪ್ರಕಟಿಸಿದ 27 ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಕಾಣಿಸದ ಹಿನ್ನೆಲೆಯಲ್ಲಿ ವಿವಿಧ ರೀತಿಯ ಊಹಾಪೋಹಗಳು ಹರಿದಾಡುತ್ತಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ ಅಣ್ಣಾಮಲೈ, ನನ್ನ ಟಿಕೆಟ್ ಕಟ್ ಮಾಡಲಾಗಿದೆ ಎಂಬ ಮಾತು ಸತ್ಯವಲ್ಲ. ನಾನು ಸ್ಪರ್ಧಿಸದಿರುವ ಬಗ್ಗೆ ಈಗಾಗಲೇ ಕೇಂದ್ರ ನಾಯಕತ್ವಕ್ಕೆ ತಿಳಿಸಿದ್ದೆ. ಪಿಯೂಷ್ ಗೋಯಲ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಸಂತೋಷ್ ಜಿ ಅವರಿಗೆ ಸಹ ಈ ವಿಚಾರ ತಿಳಿಸಿದ್ದೆ ಎಂದು ಹೇಳಿದರು. ನನ್ನ ತೀರ್ಮಾನವನ್ನು ಗೌರವಿಸಿದ ಬಿಜೆಪಿ ಹೈಕಮಾಂಡ್‌ಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅವರು ನನಗೆ ಚುನಾವಣಾ ಪ್ರಚಾರದ ಹೊಣೆಗಾರಿಕೆಯನ್ನು ನೀಡಿದ್ದಾರೆ. ಇದರಿಂದ ನನಗೆ ಸಂತೋಷವಾಗಿದೆ ಎಂದು ಅವರು ಹೇಳಿದರು.

ರಾಜ್ಯಾದ್ಯಂತ ಪ್ರಚಾರ: ಅಣ್ಣಾಮಲೈ ಗುರಿ

ತಾವು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸದೇ, ರಾಜ್ಯಾದ್ಯಂತ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುವುದಾಗಿ ಅಣ್ಣಾಮಲೈ ತಿಳಿಸಿದರು. ಈ ಬಾರಿ ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಜೊತೆಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಭಾಗವಾಗಿರುವ ಎಐಎಡಿಎಂಕೆ, ಪಿಎಂಕೆ ಹಾಗೂ ತಮಿಳು ಮಾನಿಲ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿಯೂ ನಾನು ಪ್ರಚಾರ ನಡೆಸುತ್ತೇನೆ. ಏಪ್ರಿಲ್ 23ರವರೆಗೆ ಪ್ರಚಾರವೇ ನನ್ನ ಮುಖ್ಯ ಕೆಲಸ ಎಂದು ಅವರು ಹೇಳಿದರು. ತಮ್ಮ ಪ್ರವಾಸ ಯೋಜನೆ ಕುರಿತು ಮಾತನಾಡಿದ ಅವರು,  ನಿನ್ನೆ ನಾನು ಕೇರಳದಲ್ಲಿದ್ದೆ, ಇಂದು ತಮಿಳುನಾಡಿನಲ್ಲಿ ಇದ್ದೇನೆ. ಇಂದು ಸಂಜೆ ಪುದುಚೇರಿಗೆ ತೆರಳುತ್ತೇನೆ. ನಾಳೆ ಮತ್ತೆ ಕೇರಳದ ಕಣ್ಣೂರಿನಲ್ಲಿ ಪ್ರಚಾರ ನಡೆಸುತ್ತೇನೆ” ಎಂದು ವಿವರಿಸಿದರು.

ಯಾವ ಕ್ಷೇತ್ರವನ್ನೂ ಕೇಳಿಲ್ಲ

ತಾವು ಯಾವುದೇ ಕ್ಷೇತ್ರವನ್ನು ಕೇಳಿಲ್ಲವೆಂದು ಅಣ್ಣಾಮಲೈ ಸ್ಪಷ್ಟಪಡಿಸಿದರು. “ನಾನು ಯಾವ ಕ್ಷೇತ್ರದಲ್ಲೂ ಸ್ಪರ್ಧಿಸುತ್ತಿಲ್ಲ. ನಾನು ಬಯಸಿದರೆ ಎಲ್ಲಿಯೂ ಸ್ಪರ್ಧಿಸಬಹುದು. ಆದರೆ ಅದು ನನ್ನ ಅಭ್ಯಾಸವಲ್ಲ. ಎಲ್ಲ ಕ್ಷೇತ್ರಗಳಲ್ಲೂ ಪಕ್ಷಕ್ಕಾಗಿ ಕೆಲಸ ಮಾಡಿದ ಕಾರ್ಯಕರ್ತರಿಗೆ ಅವಕಾಶ ನೀಡಲಾಗಿದೆ” ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಮತ್ತು ರಾಜಕೀಯ ಚರ್ಚೆಗಳು

ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ 27 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಅಣ್ಣಾಮಲೈ ಹೆಸರು ಇರದಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಈ ಕುರಿತು ತಮಿಳುನಾಡು ಚುನಾವಣಾ ಉಸ್ತುವಾರಿ ಪಿಯೂಷ್ ಗೋಯಲ್ ಕೂಡ ಪ್ರತಿಕ್ರಿಯಿಸಿ, “ಅಣ್ಣಾಮಲೈ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ತೋರಿಲ್ಲ. ಅವರು ರಾಜ್ಯಾದ್ಯಂತ ಪ್ರಚಾರ ಮಾಡಲು ಬಯಸಿದ್ದಾರೆ” ಎಂದು ಹೇಳಿದ್ದರು.

ಹಿಂದಿನ ಊಹಾಪೋಹಗಳು ಮತ್ತು ಕ್ಷೇತ್ರ ಚರ್ಚೆಗಳು

ಬಿಜೆಪಿ ಮೂಲಗಳ ಪ್ರಕಾರ, ಅಣ್ಣಾಮಲೈ ಅವರನ್ನು ಈ ಬಾರಿ ಒಂದು ನಿರ್ದಿಷ್ಟ ಕ್ಷೇತ್ರದಿಂದ ಸ್ಪರ್ಧಿಸಲು ಹೈಕಮಾಂಡ್ ಆಸಕ್ತಿ ತೋರಿಸಿತ್ತು ಎನ್ನಲಾಗಿದೆ. ಕೊಯಮತ್ತೂರು ಜಿಲ್ಲೆಯ ಕೌಂಡಂಪಾಳಯಂ ಮತ್ತು ಕಿನಾಥುಕಡವು ಕ್ಷೇತ್ರಗಳಿಂದ ಸ್ಪರ್ಧಿಸುವ ಬಗ್ಗೆ ಚರ್ಚೆಗಳು ನಡೆದಿದ್ದವು.

ಆದರೆ ಮೈತ್ರಿ ಒಪ್ಪಂದದ ಭಾಗವಾಗಿ ಎಐಎಡಿಎಂಕೆ ಪಕ್ಷವು ಬಿಜೆಪಿ ಬಯಸಿದ ಕ್ಷೇತ್ರಗಳನ್ನು ನೀಡದಿರುವುದು ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂಬ ಮಾತುಗಳೂ ಕೇಳಿಬಂದಿದ್ದವು. ವಿಶೇಷವಾಗಿ ಕೌಂಡಂಪಾಳಯಂ ಕ್ಷೇತ್ರ ನೀಡದಿರುವುದು ಪ್ರಮುಖ ವಿಚಾರವಾಗಿ ಪರಿಣಮಿಸಿತ್ತು.

ಎನ್‌ಡಿಎ ಮೈತ್ರಿ ಮತ್ತು ಚುನಾವಣಾ ಸಮೀಕರಣ

ಈ ಬಾರಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಎಐಎಡಿಎಂಕೆ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಭಾಗವಾಗಿದೆ. ಬಿಜೆಪಿ ಒಟ್ಟು 27 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಮೈತ್ರಿ ಪಕ್ಷಗಳೊಂದಿಗೆ ಸಮನ್ವಯ ಸಾಧಿಸಿ ಚುನಾವಣಾ ಕಣಕ್ಕಿಳಿದಿದೆ. 2021ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 7 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಹೆಚ್ಚು ಸಾಧನೆ ಮಾಡುವ ಗುರಿಯನ್ನು ಪಕ್ಷ ಹೊಂದಿದೆ.

ಅಣ್ಣಾಮಲೈಯವರ ಸಂದೇಶ

ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬಳಿಕ ಅಣ್ಣಾಮಲೈ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ಬಿಜೆಪಿ ಅಭ್ಯರ್ಥಿಗಳಿಗೆ ಶುಭಾಶಯ ಕೋರಿದ್ದಾರೆ. ಒಬ್ಬ ಸ್ವಯಂಸೇವಕರಾಗಿ ನಾನು ಬಿಜೆಪಿ ಮತ್ತು ಎನ್‌ಡಿಎ ಅಭ್ಯರ್ಥಿಗಳ ಪರವಾಗಿ ಹೆಗಲಿಗೆ ಹೆಗಲು ಸೇರಿಸಿ ಪ್ರಚಾರ ನಡೆಸುತ್ತೇನೆ. ಈ ಬಾರಿ ಎನ್‌ಡಿಎಗೆ 210 ಸ್ಥಾನಗಳನ್ನು ಗೆಲ್ಲಿಸುವ ಗುರಿಯಿದೆ” ಎಂದು ಅವರು ಹೇಳಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ನಡೆಯಲಿದೆ. ಮೇ 4ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳ ಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್ ಮಾಜಿ ಸಂಸದ ಅಧೀರ್ ರಂಜನ್ ಮೇಲೆ ಶಸ್ತ್ರ ಹೊಂದಿದ್ದವರಿಂದ ಅಟ್ಯಾಕ್!
CBSE Curriculum: ಹಿಂದಿ ಹೇರಿಕೆ ವ್ಯವಸ್ಥಿತ ತಂತ್ರ, CBSE ಪಠ್ಯಕ್ರಮಕ್ಕೆ ಸ್ಟಾಲಿನ್ ಗರಂ