ಅಭಿವೃದ್ಧಿಯ ಪ್ರತೀಕ: ಭಾರತ ಪ್ರಕಾಶಿಸುತ್ತಿದೆ: ಇಸ್ರೋ ವರದಿ ಬಿಡುಗಡೆ

By Kannadaprabha NewsFirst Published Jan 31, 2023, 7:28 AM IST
Highlights

ತ್ರಿ ವೇಳೆ ಭಾರತದ ಭೂಭಾಗವನ್ನು ಸೆರೆಹಿಡಿಯುವ ಇಸ್ರೋದ ಉಪಗ್ರಹಗಳು, ಹಿಂದಿನ ದಶಕಕ್ಕೆ ಹೋಲಿಸಿದರೆ ಇದೀಗ ಭಾರತ ಹೆಚ್ಚು ಪ್ರಕಾಶಮಾನವಾಗಿದೆ ಎಂಬ ಸಿಹಿ ಸುದ್ದಿ ನೀಡಿವೆ.

ನವದೆಹಲಿ: ರಾತ್ರಿ ವೇಳೆ ಭಾರತದ ಭೂಭಾಗವನ್ನು ಸೆರೆಹಿಡಿಯುವ ಇಸ್ರೋದ ಉಪಗ್ರಹಗಳು, ಹಿಂದಿನ ದಶಕಕ್ಕೆ ಹೋಲಿಸಿದರೆ ಇದೀಗ ಭಾರತ ಹೆಚ್ಚು ಪ್ರಕಾಶಮಾನವಾಗಿದೆ ಎಂಬ ಸಿಹಿ ಸುದ್ದಿ ನೀಡಿವೆ. ಹೈದರಾಬಾದ್‌ನ ನ್ಯಾಷನಲ್‌ ರಿಮೋಟ್‌ ಸೆನ್ಸಿಂಗ್‌ ಸೆಂಟರ್‌(NRSC) 2012-2021 ಅವಧಿಯಲ್ಲಿ ಉಪಗ್ರಹಗಳು ಸೆರೆಹಿಡಿದ ಭಾರತದ ಭೂಭಾಗದ ಫೋಟೋಗಳನ್ನು ಆಧರಿಸಿ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಅದರನ್ವಯ ಕಳೆದ 9 ವರ್ಷದಲ್ಲಿ ರಾತ್ರಿ ವೇಳೆಯ ಪ್ರಕಾಶಮಾನದಲ್ಲಿ ಶೇ.43ರಷ್ಟು ಭಾರೀ ಏರಿಕೆ ಕಂಡುಬಂದಿದೆ.

ವರದಿಯು, ದೇಶವ್ಯಾಪಿ, ರಾಜ್ಯವಾರು ಮತ್ತು ಜಿಲ್ಲಾವಾರು ಚಿತ್ರಣವನ್ನು ನೀಡಿದ್ದು, ಈ ವರದಿಯ ಯಾವ ರಾಜ್ಯಗಳು, ಯಾವ ಜಿಲ್ಲೆಗಳಲ್ಲಿ ಅಭಿವೃದ್ಧಿ ಚಟುವಟಿಕೆ ನಡೆದಿದೆ ಎಂಬುದರ ಚಿತ್ರಣ ನೀಡಿದೆ.

ಭಾರಿ ಏರಿಕೆ:

ರಾಜ್ಯವಾರು ಪ್ರಕಾಶಮಾನ ಏರಿಕೆ ಪ್ರಮಾಣ ಗಮನಿಸಿದಾಗ ಕೆಲ ರಾಜ್ಯಗಳು ಉತ್ತಮ ಸಾಧನೆ ಮಾಡಿವೆ. ಅವುಗಳೆಂದರೆ ಬಿಹಾರ (Bihar) (ಶೇ.8.36ರಿಂದ ಶೇ.47.97ಕ್ಕೆ), ಉತ್ತರಪ್ರದೇಶ (ಶೇ.26.96ರಿಂದ ಶೇ.43.5ಕ್ಕೆ), ಮಧ್ಯಪ್ರದೇಶ (ಶೇ.8.99ರಿಂದ ಶೆ.14.95ಕ್ಕೆ)ಕ್ಕೆ ಹೆಚ್ಚಳವಾಗಿದೆ. 6 ರಾಜ್ಯಗಳಲ್ಲಿನ ಬದಲಾವಣೆಯ ಗಮನಾರ್ಹವಲ್ಲ ಎಂದು ಪರಿಗಣಿಸಲ್ಪಟ್ಟಿದ್ದರೆ, 21 ರಾಜ್ಯಗಳಲ್ಲಿ ಶೇ.6ರಿಂದ ಶೇ.40ರವರೆಗೂ ಬದಲಾವಣೆ ದಾಖಲಾಗಿದೆ. ಒಟ್ಟಾರೆ ಭಾರತದ ಪ್ರಕಾಶಮಾನತೆ ಸರಾಸರಿ ಶೇ.17.53ರಿಂದ ಶೇ.22.96ಕ್ಕೆ ತಲುಪಿದೆ ಎಂದು ವರದಿ ತಿಳಿಸಿದೆ.

Joshimath Sinking: 12 ದಿನಗಳಲ್ಲಿ 5.4 ಸೆಂಟಿಮೀಟರ್‌ ಕುಸಿದ ಜೋಶಿಮಠ, ಇಸ್ರೋ ಸ್ಯಾಟಲೈಟ್‌ ಇಮೇಜ್‌!

ಕರ್ನಾಟಕದಲ್ಲಿ ಪ್ರಕಾಶಮಾನತೆ ಪ್ರಮಾಣ ಶೇ.33ಕ್ಕೆ ಹೆಚ್ಚಳ

ಕರ್ನಾಟಕ:

ಕರ್ನಾಟಕದಲ್ಲಿ 2012ರಲ್ಲಿ ಶೇ.25.25ರಷ್ಟಿದ್ದ ಪ್ರಕಾಶಮಾನತೆ ಪ್ರಮಾಣವು 2021ರಲ್ಲಿ ಶೇ.32.99ಕ್ಕೆ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ. ಇನ್ನು ಕರ್ನಾಟಕದ ಜಿಲ್ಲೆಗಳ ಪೈಕಿ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ (Bangalore Rural District), ಕೋಲಾರ ಮತ್ತು ಧಾರವಾಡ ಜಿಲ್ಲೆಗಳಲ್ಲಿ (Dharwad Districts) ಪ್ರಮುಖವಾದ ಬದಲಾವಣೆ ಉಪಗ್ರಹ ಚಿತ್ರಗಳಲ್ಲಿ ಕಂಡುಬಂದಿದೆ.

ಇತರೆಡೆ ಏರಿಕೆ ಏಕಿಲ್ಲ:

ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಹಲವು ಅಭಿವೃದ್ಧಿ ಹೊಂದಿದ ರಾಜ್ಯಗಳ ಮೂಲ ಅಂಕಿಅಂಶ 2012ರಲ್ಲೇ ಸಾಕಷ್ಟು ಹೆಚ್ಚಿದ್ದ ಕಾರಣ, ಕಳೆದ 10 ವರ್ಷಗಳಲ್ಲಿ ಭಾರೀ ಬೆಳವಣಿಗೆ ಕಂಡುಬಂದಿಲ್ಲ ಎಂದು ವರದಿ ವಿಶ್ಲೇಷಿಸಿದೆ.


ಮೋದಿ ಸರ್ಕಾರ ಕಾರಣ?

ಭಾರತ ಹೆಚ್ಚು ಪ್ರಕಾಶಮಾನವಾಗಲು ಮೋದಿ ಸರ್ಕಾರ ಜಾರಿಗೆ ತಂದ ವಿವಿಧ ಯೋಜನೆಗಳು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. 2017ರಿಂದ ಸೌಭಾಗ್ಯ ಯೋಜನೆಯಡಿ ಜಾರಿಗೆ ತರಲಾದ ಮನೆಮನೆಗೂ ವಿದ್ಯುತ್‌, 50000 ಕಿ.ಮೀನಷ್ಟುಹೆಚ್ಚುವರಿ ಹೆದ್ದಾರಿಗಳ ನಿರ್ಮಾಣ ಅಲ್ಲಿ ಲೈಟ್‌ಗಳನ್ನು ಹಾಕಿರುವುದು, ಅದರಲ್ಲೂ ವಿಶೇಷವಾಗಿ ಉಜಾಲ ಯೋಜನೆಯಡಿ ಎಲ್‌ಇಡಿ ಬಲ್ಬ್‌ಗಳ ಬಳಕೆ, ಟೋಲ್‌ ಪ್ಲಾಜಾಗಳಲ್ಲಿನ ಬೆಳಕು, ತಂಗುದಾಣಗಳು, ಟ್ರಕ್‌ ಬೇ, ಬಸ್‌ ತಂಗುದಾಣ, ಮೇಲುಸೇತುವೆಗಳು, ಅಂಡರ್‌ಪಾಸ್‌ಗಳ ನಿರ್ಮಾಣ ಕೂಡಾ ರಾತ್ರಿ ಹೊತ್ತು ಭಾರತದಲ್ಲಿ ಬೆಳಕು ಹೆಚ್ಚಾಗಿ ಕಾಣಲು ಕಾರಣ ಎಂದು ಹೇಳಲಾಗಿದೆ.

ISRO Launch: ಎಂಟು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಇಸ್ರೋ!

click me!