ಅದಾನಿ ಬಗ್ಗೆ ತನಿಖೆಗೆ ಸುಪ್ರೀಂ ಆದೇಶ: ನ್ಯಾ. ಸಪ್ರೆ ನೇತೃತ್ವದಲ್ಲಿ 6 ಜನರ ಸಮಿತಿ ರಚನೆ

Published : Mar 03, 2023, 06:38 AM IST
ಅದಾನಿ ಬಗ್ಗೆ ತನಿಖೆಗೆ ಸುಪ್ರೀಂ ಆದೇಶ:  ನ್ಯಾ. ಸಪ್ರೆ ನೇತೃತ್ವದಲ್ಲಿ 6 ಜನರ ಸಮಿತಿ ರಚನೆ

ಸಾರಾಂಶ

ಅದಾನಿ ಸಮೂಹ ಭಾರಿ ಅಕ್ರಮ ನಡೆಸಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್‌ ಸಂಸ್ಥೆ ಹೇಳಿದೆ. ಇದರ ಬೆನ್ನಲ್ಲೇ ಷೇರುಗಳು ದಿಢೀರ್‌ ಕುಸಿದಿವೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಕೋರಿ ಪಿಐಎಲ್‌ಗಳು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ತನಿಖೆಗೆ ಕೋರ್ಟ್ ಆದೇಶ.  

ತನಿಖೆ ಏಕೆ?

ಅದಾನಿ ಸಮೂಹ ಭಾರಿ ಅಕ್ರಮ ನಡೆಸಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್‌ ಸಂಸ್ಥೆ ಹೇಳಿದೆ. ಇದರ ಬೆನ್ನಲ್ಲೇ ಷೇರುಗಳು ದಿಢೀರ್‌ ಕುಸಿದಿವೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಕೋರಿ ಪಿಐಎಲ್‌ಗಳು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ತನಿಖೆಗೆ ಕೋರ್ಟ್ ಆದೇಶ.

ತನಿಖೆ ಏನೇನು?

  • - ಅದಾನಿ ಸಮೂಹ ನಿಯಮಗಳನ್ನು ಉಲ್ಲಂಘಿಸಿದೆಯೇ?
  • - ಷೇರು ಮಾರುಕಟ್ಟೆಯಲ್ಲಿ ಅಕ್ರಮಗಳನ್ನು ಎಸಗಿದೆಯೇ?
  • - ಷೇರುಗಳ ಬೆಲೆ ತಿರುಚಿದೆಯೇ? ಸೆಬಿ ವಿಫಲವಾಗಿದೆಯೇ?

ನವದೆಹಲಿ: ಅದಾನಿ ಸಮೂಹದ ಕಂಪನಿಗಳು ಭಾರೀ ಅವ್ಯವಹಾರ ನಡೆಸಿವೆ ಎಂಬ ಅಮೆರಿಕದ ಹಿಂಡನ್‌ಬರ್ಗ್‌ ಎಂಬ ಹೂಡಿಕೆ ಸಂಸ್ಥೆಯ ಆರೋಪಗಳ ಬೆನ್ನಲ್ಲೇ ಈ ಕುರಿತು ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಎ.ಎಂ.ಸಪ್ರೆ ನೇತೃತ್ವದ 6 ಸದಸ್ಯರ ಸಮಿತಿಯೊಂದನ್ನು ಸುಪ್ರೀಂಕೋರ್ಟ್‌ ರಚಿಸಿದೆ. ಅದಾನಿ ಸಮೂಹವು ನಿಯಮಗಳನ್ನು ಉಲ್ಲಂಘಿಸಿದೆಯೇ? ಷೇರು ಮಾರುಕಟ್ಟೆಯಲ್ಲಿ ಅಕ್ರಮಗಳನ್ನು ಎಸಗಿದೆಯೇ? ಶಾರ್ಟ್‌ ಸೆಲ್ಲಿಂಗ್‌ ನಿಯಮಗಳನ್ನು ಗಾಳಿಗೆ ತೂರಿದೆಯೇ? ಹಾಗೂ ಷೇರುಗಳ ಬೆಲೆ ತಿರುಚಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಿ 2 ತಿಂಗಳಲ್ಲಿ ವರದಿ ಸಲ್ಲಿಸಲು ಸಮಿತಿಗೆ ಕೋರ್ಟ್ ಸೂಚಿಸಿದೆ.

ಜೊತೆಗೆ ಇದೇ ಪ್ರಕರಣದ ಬಗ್ಗೆ ಈಗಾಗಲೇ ತನಿಖೆ ನಡೆಸುತ್ತಿರುವ ಷೇರು ಮಾರುಕಟ್ಟೆ ನಿಯಂತ್ರಣಾ ಸಂಸ್ಥೆಯಾದ ‘ಸೆಬಿ’ ಕೂಡಾ ಈ ಬಗ್ಗೆ 2 ತಿಂಗಳೊಳಗೆ ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ. ಅದಾನಿ ಸಮೂಹದ ಮೇಲಿನ ಆರೋಪ ಮತ್ತು ಅದಾನಿ ಸಮೂಹದ ಷೇರುಗಳ ದಿಢೀರ್‌ ಪತನದ ಬಗ್ಗೆ ಸುಪ್ರೀಂಕೋರ್ಟ್ ತನಿಖೆ ನಡೆಸಬೇಕೆಂದು ಕೆಲ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪೀಠ ತನಿಖೆಗೆ ತಜ್ಞರ ಸಮಿತಿ ರಚಿಸಿ ಆದೇಶ ನೀಡಿದೆ.

ಸಮಿತಿ ರಚನೆ:

ಅದಾನಿ ಕಂಪನಿ (Adani Company) ವಿರುದ್ಧ ಕೇಳಿಬಂದ ಆರೋಪಗಳ ಕುರಿತು ತನಿಖೆ ನಡೆಸಲು ನ್ಯಾಯಾಲಯ 6 ಜನರ ತಜ್ಞರನ್ನೊಳಗೊಂಡ ಸಮಿತಿ ರಚಿಸಿದೆ. ಈ ಸಮಿತಿಗೆ, ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣ, ಅದಾನಿ ಸಮೂಹದ ಕಂಪನಿಗಳು ಷೇರು ಮಾರುಕಟ್ಟೆಗೆ ಸಂಬಂಧಿಸಿದಂತೆ ಮಾಡಿದೆ ಎನ್ನಲಾದ ಕಾನೂನು ಉಲ್ಲಂಘನೆ, ಈ ವಿಷಯದಲ್ಲಿ ನಿಗಾ ವಹಿಸಲು ಸೆಬಿ ವಿಫಲವಾಗಿದೆಯೇ, ಹೂಡಿಕೆದಾರರ ಜಾಗೃತಿ ಬಲಪಡಿಸಲು ಏನೇನು ಕ್ರಮ ಕೈಗೊಳ್ಳಬಹುದು, ಈಗಾಗಲೇ ಹೂಡಿಕೆದಾರರ ರಕ್ಷಣೆಗೆ ಇರುವ ನಿಯಮಗಳನ್ನು ಇನ್ನಷ್ಟು ಸುರಕ್ಷಿತವಾಗಿ ಹೇಗೆ ಪಾಲನೆ ಮಾಡಬಹುದು ಎಂಬುದರ ಬಗ್ಗೆ ತನಿಖೆ ನಡೆಸಿ 2 ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ.

ಅದಾನಿ ವ್ಯವಹಾರ: ಭಾರತೀಯ ವಿಮಾನ ನಿಲ್ದಾಣ ದೈತ್ಯನ ಸುತ್ತ ವಿವಾದದ ಹುತ್ತ

ಕೇಂದ್ರ ಸರ್ಕಾರದ ಎಲ್ಲಾ ತನಿಖಾ ಸಂಸ್ಥೆಗಳು ಹಾಗೂ ಸಂಬಂಧಪಟ್ಟಇಲಾಖೆಗಳು ಈ ಸಮಿತಿಗೆ ಸಹಕಾರ ನೀಡಬೇಕು. ಸಮಿತಿಯು ಅಗತ್ಯಬಿದ್ದರೆ ಬಾಹ್ಯ ತಜ್ಞರ ನೆರವು ಪಡೆಯಬಹುದು ಎಂದು ನ್ಯಾಯಪೀಠ ಹೇಳಿದೆ.

ಸೆಬಿಗೆ ಸೂಚನೆ:

ಇದೇ ವೇಳೆ ಅದಾನಿ ಹಗರಣದ (Adani scam)ಬಗ್ಗೆ ಈಗಾಗಲೇ ತನಿಖೆ ನಡೆಸುತ್ತಿರುವ ಸೆಬಿ, ತನ್ನ ತನಿಖೆಯ ಭಾಗವಾಗಿ ಕನಿಷ್ಠ ಷೇರುದಾರರ ನಿರ್ವಹಣೆಗೆ ಸಂಬಂಧಿಸಿದಂತೆ ಷೇರು ನಿಯಂತ್ರಣ ನಿಯಮಾವಳಿ 19ಎಯ ಉಲ್ಲಂಘನೆಯಾಗಿದೆಯೇ? ವಹಿವಾಟು ಮಾಹಿತಿ ಬಹಿರಂಗಕ್ಕೆ ಕಂಪನಿ ವಿಫಲವಾಗಿದೆಯೇ? ಷೇರುಬೆಲೆಗಳನ್ನು ತಿರುಚಲಾಗಿದೆಯೇ? ಎಂಬುದರ ಬಗ್ಗೆ ತನಿಖೆ ನಡೆಸಿ 2 ತಿಂಗಳಲ್ಲಿ ತನಗೆ ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಎಂದೂ ನ್ಯಾಯಪೀಠ ಸೂಚಿಸಿತು.

Hindenburg report on Adani: ಮಾಧ್ಯಮಗಳಿಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್‌!

ಸಮಿತಿಯಲ್ಲಿ ಯಾರಿದ್ದಾರೆ?

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಎಂ.ಸಪ್ರೆ (M.M.Sapre)ತನಿಖಾ ಸಮಿತಿಯ ಮುಖ್ಯಸ್ಥರಾಗಿದ್ದು, ಅವರ ಅಧೀನದಲ್ಲಿ ಎಸ್‌ಬಿಐನ (SBI)ಮಾಜಿ ಚೇರ್ಮನ್‌ ಒ.ಪಿ.ಭಟ್‌, ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜೆ.ಪಿ.ದೇವಧರ್‌, ಕನ್ನಡಿಗ ಉದ್ಯಮಿಗಳಾದ ಕೆ.ವಿ.ಕಾಮತ್‌ ಮತ್ತು ನಂದನ್‌ ನಿಲೇಕಣಿ (Nandan Nilkani) ಹಾಗೂ ಇನ್ನೊಬ್ಬ ಉದ್ಯಮಿ ಸೋಮಶೇಖರನ್‌ ಸುಂದರೇಶನ್‌ ಕಾರ್ಯನಿರ್ವಹಿಸಲಿದ್ದಾರೆ.

ತನಿಖೆಗೆ ಅದಾನಿ ಸ್ವಾಗತ:

ಸುಪ್ರೀಂಕೋರ್ಟ್‌ನ (Supreme Court)ಆದೇಶವನ್ನು ಅದಾನಿ ಸಮೂಹದ ಮುಖ್ಯಸ್ಥ ಗೌತಮ್‌ ಅದಾನಿ (Gowtham Adani) ಸ್ವಾಗತಿಸಿದ್ದು, ತನಿಖೆಯಿಂದ ಕೊನೆಗೂ ಸತ್ಯ ಹೊರಬರಲಿದೆ ಎಂದು ಹೇಳಿದ್ದಾರೆ. ಆಮ್‌ ಆದ್ಮಿ ಪಕ್ಷವು (AAP) ಈ ತೀರ್ಪು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೀಡಿದ ತಪರಾಕಿ ಎಂದು ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು