Hijab Row: ಮೂಗುತಿ ಧಾರ್ಮಿಕ ಆಚರಣೆಯಲ್ಲ, ಮಂಗಳಸೂತ್ರ ಧಾರ್ಮಿಕ: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ

By Santosh NaikFirst Published Sep 7, 2022, 3:38 PM IST
Highlights

ಸುಪ್ರೀಂ ಕೋರ್ಟ್‌ನಲ್ಲಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ಗೆ ನಿಷೇಧ ಹೇರಿದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ವಿಚಾರಣೆ ನಡೆಯುತ್ತಿದೆ. ಈ ವೇಳೆ ಹಿಜಾಬ್‌ ಪರ ವಕೀಲರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಗುಪ್ತಾ ಹೇಳಿರುವ ಮಾತು ಗಮನಸೆಳೆದಿದೆ. ಹಿಜಾಬ್‌ ವಿಚಾರದಲ್ಲಿ ಹುಡುಗಿಯರು ಮೂಗುತಿ ಧರಿಸುವ ವಿಚಾರವನ್ನು ಅವರು ಪ್ರಸ್ತಾಪಿಸಿದರು. ಮೂಗುತಿ ಧಾರ್ಮಿಕ ಭಾವನೆಯ ಸಂಕೇತವಲ್ಲ ಎಂದು ಹೇಳಿದ್ದಾರೆ.

ನವದೆಹಲಿ (ಸೆ.7): ಹಿಜಾಬ್‌ ವಿಚಾರವಾಗಿ ಸುಪ್ರೀಂ ಕೋರ್ಟ್‌ನ ನ್ಯಾಯಪೀಠದಲ್ಲಿ ಭಾರಿ ಪ್ರಮಾಣದ ವಾದಗಳು ನಡೆದಿವೆ. ಹಿಜಾಬ್‌ ಪರವಾಗಿ ವಾದ ಮಂಡನೆ ಮಾಡುತ್ತಿರುವ ಕರ್ನಾಟಕ ಮೂಲದ ಹಿರಿಯ ವಕೀಲ ದೇವದತ್‌ ಕಾಮತ್‌, ಪ್ರಕರಣದಲ್ಲಿ ಮೂಗುತಿ ಹಾಗೂ ಹಣೆಗೆ ಧರಿಸುವ ಬಿಂದಿ ವಿಚಾರವನ್ನೂ ಪ್ರಸ್ತಾಪಿಸಿ ಮಾತನಾಡಿದರು. ಈ ವೇಳೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹೇಮಂತ್‌ ಗುಪ್ತಾ ಅವರು ಹೇಳಿರುವ ಮಾತುಗಳು ಗಮನಸೆಳೆದಿವೆ. ವಕೀಲರೇ, ಮೂಗುತಿ ಎಂದಿಗೂ ಧಾರ್ಮಿಕವಲ್ಲ. ಹಿಂದು ಹುಡುಗಿಯರು ಧರಿಸುವ ಮಂಗಳಸೂತ್ರ ಧಾರ್ಮಿಕ ಎಂದು ಹೇಳಿದ್ದಾರೆ. ಬುಧವಾರ ಹಿಜಾಬ್‌ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಂಡಿತು.  ವೇಳೆ ದೇವದತ್‌ ಕಾಮತ್‌ ಸಾಕಷ್ಟು ದೇಶಗಳ ಸಂವಿಧಾನ ಅಲ್ಲಿ ನೀಡಿರುವ ವಿಶೇಷ ಸವಲತ್ತುಗಳ ಬಗ್ಗೆ ಮಾತನಾಡಿದರು. ಹೀಗೆ ಮಾತನಾಡುತ್ತಾ ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಕೋರ್ಟ್‌ ನೀಡಿರುವ ಒಂದು ತೀರ್ಪನ್ನು ಪ್ರಸ್ತಾಪ ಮಾಡಿದರು. ತನ್ನ ಸಾಂಸ್ಕೃತಿಕ ನಂಬಿಕೆಯ ಭಾಗವಾಗಿ  ದಕ್ಷಿಣ ಆಫ್ರಿಕಾದ ಕೋರ್ಟ್‌ ಹಿಂದೂ ಹುಡುಗಿಗೆ ಶಾಲೆಗೆ ಮೂಗುತಿಯನ್ನು ಧರಿಸಿ ಬರಲು ಇತ್ತೀಚೆಗೆ ಅನುಮತಿ ನೀಡಿ ತೀರ್ಪು ಪ್ರಕಟಿಸಿದೆ. ಭಾರತದಲ್ಲಿ ತನ್ನ ನಂಬಿಕೆಯನ್ನು ಶಾಲೆಗಳಲ್ಲಿ ತೋರಿಸಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನೆ ಮಾಡಿದರು.

ಈ ವಾದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಹೇಮಂತ್‌ ಗುಪ್ತಾ, ಮೂಗುತಿ ಎನ್ನುವುದು ಎಂದಿಗೂ ಧಾರ್ಮಿಕ ನಂಬಿಕೆಯಲ್ಲ. ಮಂಗಳಸೂತ್ರ ಎನ್ನುವುದು ಧಾರ್ಮಿಕ ನಂಬಿಕೆ ಎಂದು ಹೇಳಿದರು. ಇದಕ್ಕೆ ಕಾಮತ್‌, ಮೂಗುತಿ ಧಾರ್ಮಿಕ ನಂಬಿಕೆ ಎನ್ನುವುದಕ್ಕೆ ನನ್ನಲ್ಲಿ ಹಲವು ಸಾಕ್ಷಿಗಳಿವೆ ಎಂದು ಹೇಳಿದರು. ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ, ಜಗತ್ತಿನಲ್ಲಿ ಸಾಮಾನ್ಯವಾಗಿ ಎಲ್ಲಾ ಮಹಿಳೆಯರು ಮೂಗುತಿಯನ್ನು ಧರಿಸುತ್ತಾರೆ. ಭಾರತದಲ್ಲಿ ಮಾತ್ರ ಈ ಸಂಪ್ರದಾಯವಿಲ್ಲ. ಇದು ಎಂದಿಗೂ ಧಾರ್ಮಿಕ ಆಚರಣೆಯಲ್ಲ ಎಂದು ಹೇಳಿದರು.

Hijab Row: ಮುಸ್ಲಿಂ ಮಹಿಳೆಯರಿಗೆ ಹಿಜಾಬ್ ಬಂದಿದ್ದಾರೂ ಎಲ್ಲಿಂದ?

ಇದಕ್ಕೆ ಮತ್ತೆ ಮಾತನಾಡಿದ ಕಾಮತ್‌, ನಾನು ಹಿಂದು ಧರ್ಮವನ್ನು (Hindu) ಪಾಲಿಸುವ ವ್ಯಕ್ತಿ. ಕೆಲವೊಂದು ಧಾರ್ಮಿಕ (religious ) ಆಚರಣೆಗಳನ್ನು ಮಾಡುವಾಗ ಬಿಂದಿ (Bindi) ಹಾಗೂ ಮೂಗುತಿ (Nose Pin) ಧರಿಸುವ ಸಂಪ್ರದಾಯವಿದೆ. ಇದಕ್ಕೆ ಧಾರ್ಮಿಕ ಮೌಲ್ಯವೂ ಇದೆ ಎಂದು ತಿಳಿಸಿದರು.ಮಹಿಳೆಯರು ಉತ್ತಮ ಗುಣವನ್ನು ಬೆಳೆಸಲು ಮೂಗುತಿಯನ್ನು ಧರಿಸುತ್ತಾರೆ ಮತ್ತು ಇದು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಇದು ತುಂಬಾ ಧಾರ್ಮಿಕವಾಗಿದೆ ಎಂದು ಹೇಳಿದರು. ತಮಿಳು ಹಿಂದೂ (Tamil Hindu) ವಿದ್ಯಾರ್ಥಿಗೆ ಶಾಲೆಯಲ್ಲಿ ಮೂಗುತಿ ಧರಿಸಲು ಅವಕಾಶ ನೀಡಿದ ದಕ್ಷಿಣ ಆಫ್ರಿಕಾದ ತೀರ್ಪನ್ನು ಕಾಮತ್ ಉಲ್ಲೇಖಿಸಿದ್ದಾರೆ. ಶಾಲೆಯ ಹೊರಗೆ ಮೂಗುತಿ ಧರಿಸುವುದರಿಂದ ವಿದ್ಯಾರ್ಥಿಯ ಹಕ್ಕಿನ ಯಾವುದೇ ಉಲ್ಲಂಘನೆ ಇಲ್ಲ ಎಂದು ಶಾಲೆ ವಾದಿಸಿದೆ ಎಂದು ಕಾಮತ್‌ ಹೇಳಿದ್ದನ್ನು ಕೋರ್ಟ್‌ ತಿರಸ್ಕರಿಸಿತು. ಇದು ಕ್ಲಾಸ್ ಹೊರಗೆ ಹಿಜಾಬ್ ಧರಿಸುವ ವಾದವನ್ನು ಹೋಲುತ್ತದೆ ಎಂದು ಕಾಮತ್ ಹೇಳಿದ್ದಾರೆ.

ಹಿಜಾಬ್‌ಗೆ ಸಿಗದ ಅನುಮತಿ ಕರಾವಳಿಯಲ್ಲಿ ಟೀಸಿ ಪಡೆದ ನೂರಾರು ಮುಸ್ಲಿಂ ವಿದ್ಯಾರ್ಥಿನಿಯರು!

ಮೂಗುತಿ ತಮಿಳು ಹಿಂದೂ ಸಂಸ್ಕೃತಿಯ ಅಭಿವ್ಯಕ್ತಿಯಾಗಿದೆ ಎಂದು ಹೇಳುವ ತೀರ್ಪಿನ ಭಾಗಗಳನ್ನು ಈ ವೇಳೆ ಉಲ್ಲೇಖ ಮಾಡಿದರು. ಸಮಂಜಸವಾದ ಮಾಹಿತಿಗಾಗಿ ನೀವು ಮೂರು ತೀರ್ಪುಗಳನ್ನು ಉಲ್ಲೇಖಿಸಿರುವಿರಿ. ಆದರೆ, ಈ ಪ್ರಕರಣದಲ್ಲಿ ನಾವು ಇವುಗಳನ್ನು ಪರಿಶೀಲಿಸುವ ಅಗತ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ. ಇದೇ ವೇಳೆ ದೇವದತ್‌ ಕಾಮತ್‌ ದಕ್ಷಿಣ ಆಫ್ರಿಕಾದ ತೀರ್ಪು ಹಾಗೂ ಅಲ್ಲಿನ ಸಂವಿಧಾನದ ಬಗ್ಗೆ ಉಲ್ಲೇಖ ಮಾಡುತ್ತಿರುವ ನಡುವೆಯೇ ಮಾತನಾಡಿದ ನ್ಯಾಯಮೂರ್ತಿ, ಕಾಮತ್‌ ಅವರೇ, ದಕ್ಷಿಣ ಆಫ್ರಿಕಾದ ವಿಚಾರವನ್ನು ಅಲ್ಲಿಯೇ ಬಿಡಿ. ಭಾರತದ ವಿಚಾರಕ್ಕೆ ಬನ್ನಿ. ಜಗತ್ತಿನ ಎಲ್ಲಾ ದೇಶಗಳು ತನ್ನ ನಾಗರೀಕರಿಗೆ ಸಮಾನವಾದ ಕಾನೂನುಗಳನ್ನು ಹೊಂದಿದೆ. ನೀವು ದಕ್ಷಿಣ ಆಫ್ರಿಕಾದ ಸಂವಿಧಾನವನ್ನು ಓದಿದ್ದೀರಾ? ಎಂದು ಪ್ರಶ್ನೆ ಮಾಡಿದರು. ನನಗೆ ಇದ್ದಿರುವ ತಿಳುವಳಿಕೆಯಲ್ಲಿ ಭಾರತದಷ್ಟು ವೈವಿಧ್ಯಮಯವಾದ ದೇಶ ಇನ್ನೊಂದಿಲ್ಲ ಎಂದು ಹೇಳಿದರು.

click me!