
ನವದೆಹಲಿ (ಫೆ.22): ಏಕನಾಥ್ ಶಿಂಧೆ ಬಣವನ್ನೇ ನಿಜವಾದ ಶಿವಸೇನೆ ಎಂದು ಗುರುತಿಸಿ ಹೆಸರು ಹಾಗೂ ಲಾಂಛನವನ್ನು ಬಳಸಲು ಕೇಂದ್ರ ಚುನಾವಣಾ ಆಯೋಗ ಇತ್ತೀಚೆಗೆ ಅನುಮತಿ ನೀಡಿತ್ತು. ಇದಕ್ಕೆ ತಡೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಉದ್ದವ್ ಠಾಕ್ರೆ ಬಣಕ್ಕೆ ನಿರಾಸೆಯಾಗಿದೆ. ಬುಧವಾರ ಉದ್ದವ್ ಠಾಕ್ರೆ ಬಣದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗದ ತೀರ್ಮಾನಕ್ಕೆ ತಡೆಯಾಜ್ಞೆ ನೀಡೋದು ಸಾಧ್ಯವಿಲ್ಲ ಎಂದು ಹೇಳಿದೆ. ಅದರೊಂದಿಗೆ ಮುಂದಿನ ಉಪಚುನಾವಣೆಯಲ್ಲಿ ಏಕ್ನಾಥ್ ಶಿಂಧೆ ನೇತೃತ್ವದ ಬಣ, ಶಿವಸೇನೆಯ ಹೆಸರು ಹಾಗೂ ಬಿಲ್ಲ ಹಾಗೂ ಬಾಣದ ಗುರುತಿನ ಲಾಂಛನದೊಂದಿಗೆ ಸ್ಪರ್ಧೆ ಮಾಡಲಿದ್ದರೆ, ಉದ್ಧವ್ ಠಾಕ್ರೆ ನೇತೃತ್ವದ ಬಣ ಉರಿಯುವ ಜ್ವಾಲೆಯ ಲಾಂಛನದೊಂದಿಗೆ ಸ್ಪರ್ಧೆ ಮಾಡಲಿದ್ದಾರೆ. ಆದರೆ, ಚಿಂಚಿವಾಡ್ ಮತ್ತು ಕಸ್ಬಾ ಪೇಠ್ ಉಪಚುನಾವಣೆಗಳಲ್ಲಿ ಉದ್ದವ್ ಠಾಕ್ರೆ ನೇತೃತ್ವದ ಬಣ 'ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ)' ಹೆಸರನ್ನು ಇರಿಸಿಕೊಂಡು ಸ್ಪರ್ಧೆ ಮಾಡಲು ಅವಕಾಶ ನೀಡಿದೆ. ಆದರೆ, ಲಾಂಛನವಾಗಿ ಉರಿಯುವ ಜ್ವಾಲೆ ಬಳಸಬೇಕು ಎಂದಿದೆ. ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಹಾಗೂ ಜೆಬಿ ಪರ್ದಿವಾಲಾ ಇದ್ದ ತ್ರಿಸದಸ್ಯ ಪೀಠ ಈ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡಿದರು.
ಆದರೆ, ಶಿವಸೇನೆ ವಿಚಾರವಾಗಿ ಉದ್ಧವ್ ಠಾಕ್ರೆ ಬಣ ಹಾಗೂ ಶಿಂಧೆ ಬಣದಿಂದ ಎರಡು ವಾರಗಳ ಒಳಗಾಗಿ ಉತ್ತರ ನೀಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಈ ಹಂತದಲ್ಲಿ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ಸಿಜೆಐ ಡಿವೈ ಚಂದ್ರಚೂಡ್ ಹೇಳಿದ್ದಾರೆ. ಚುನಾವಣಾ ಆಯೋಗದ ಮುಂದೆ ಶಿಂಧೆ ಬಣ ತನ್ನನ್ನು ತಾನು ಸಾಬೀತುಪಡಿಸಿದೆ. ಉದ್ಧವ್ ಬಣದ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದರು. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯವನ್ನು ಕೋರಿದರು. ಆದರೆ, ನ್ಯಾಯಾಲಯ ಅಂತಹ ಯಾವುದೇ ಆದೇಶ ನೀಡುವ ಮನಸ್ಸು ಮಾಡಿಲ್ಲ ಉದ್ಧವ್ ಅವರ ಅರ್ಜಿಗೆ ಮುನ್ನ ಶಿಂಧೆ ಬಣ ಸುಪ್ರೀಂ ಕೋರ್ಟ್ನಲ್ಲಿ ಕೇವಿಯಟ್ ಕೂಡ ಸಲ್ಲಿಸಿತ್ತು. ಯಾವುದೇ ನಿರ್ಧಾರವನ್ನು ನೀಡುವ ಮೊದಲು ಸುಪ್ರೀಂ ಕೋರ್ಟ್ ತನ್ನ ವಾದ ಕೇಳಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
ಸೇನೆಯ ಹೆಸರು, ಚಿಹ್ನೆ ಖರೀದಿಸಲು 2,000 ಕೋಟಿ ರೂ. ಡೀಲ್: ಸಂಜಯ್ ರಾವತ್ ಸ್ಫೋಟಕ ಆರೋಪ
ಚುನಾವಣಾ ಆಯೋಗದಿಂದ ಶಿವಸೇನೆಯ ಹೆಸರು ಮತ್ತು ಚಿಹ್ನೆಯನ್ನು ಕಸಿದುಕೊಳ್ಳುವ ನಿರ್ಧಾರದ ಕುರಿತು ಮಾತನಾಡಿದ್ದ ಉದ್ಧವ್ ಬಣದ ನಾಯಕ ಸಂಜಯ್ ರಾವತ್ ಈ ದೇಶದ ಎಲ್ಲಾ ಸಂಸ್ಥೆಗಳ ಮೇಲಿನ ವಿಶ್ವಾಸ ಇಂದು ಕೊನೆಯಾಗಿದೆ. ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಗಿದೆ, ಆದ್ದರಿಂದ ಈಗ ಒಂದೇ ಒಂದು ಭರವಸೆ ಉಳಿದಿದೆ. ಸುಪ್ರೀಂ ಕೋರ್ಟ್, ಅಲ್ಲಿಗೆ ತೆರಳಿ ನ್ಯಾಯ ಕೇಳುತ್ತೇವೆ.
ಶಿವಸೇನೆಯ ಚಿಹ್ನೆ ಕದ್ದ ಕಳ್ಳನಿಗೆ ತಕ್ಕ ಪಾಠ ಕಲಿಸಿ; ಚುನಾವಣಾ ಆಯೋಗ ಮೋದಿ ಗುಲಾಮ: ಉದ್ಧವ್ ಠಾಕ್ರೆ ಕಿಡಿ
ಶಿವಸೇನೆ (Shiv Sena) ಚಿಹ್ನೆಯ ಕುರಿತಾಗಿ ಚುನಾವಣಾ ಆಯೋಗ ಆದೇಶ ನೀಡಿದೆ. ಈ ಹಂತದಲ್ಲಿ ಚುನಾವಣಾ ಆಯೋಗದ (Election Commision Of India) ಆದೇಶದ ವಿರುದ್ಧವಾಗಿ ನಾವು ತೀರ್ಪು ನೀಡೋದಿಲ್ಲ. ಒಂದೇ ದಿನದ ವಿಚಾರಣೆಯ ಬಳಿಕ ತಡೆ ನೀಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದ ಪೀಠ, ಎರಡೂ ಪಾರ್ಟಿಗಳಿಗೆ ನೋಟಿಸ್ ನೀಡಿ ಎರಡು ವಾರಗಳ ಒಳಗಾಗಿ ಉತ್ತರಿಸುವಂತೆ ಸೂಚಿಸಿದೆ. 'ಎರಡೂ ಪಾರ್ಟಿಗಳಿಗೆ ನೋಟಿಸ್ ಜಾರಿ ಮಾಡಿ. ಠಾಕ್ರೆ ಬಣಕ್ಕೆ ಉರಿಯುವ ಜ್ವಾಲೆಯ ಚಿಹ್ನೆ ಬಳಸಿಕೊಳ್ಳಲು ಹೇಳಿ. ಈ ವಿಚಾರವನ್ನು 2 ವಾರಗಳ ಬಳಿಕ ವಿಚಾರಣೆಗೆ ಕೈಗೆತ್ತಿಕೊಳ್ಳಲಿದ್ದೇವೆ' ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ