Ukraine Crisis: ವಿದ್ಯಾಭ್ಯಾಸದ ಕಥೆ ಮುಂದೇನು? ತವರಿಗೆ ಬಂದ ವಿದ್ಯಾರ್ಥಿಗಳ ಹೊಸ ಸಮಸ್ಯೆ!

By Suvarna NewsFirst Published Mar 2, 2022, 9:53 AM IST
Highlights

* ಉಕ್ರೇನ್‌ನಿಂದ ತವರಿಗೆ ಬಂದ ವಿದ್ಯಾರ್ಥಿಗಳ ಹೊಸ ಸಮಸ್ಯೆ

* ಸರ್ಕಾರ ಇಲ್ಲಿನ ಕಾಲೇಜಿಗೆ ಪ್ರವೇಶ ಕಲ್ಪಿಸಲಿ ಎಂದು ಆಗ್ರಹ

* ವಿದ್ಯಾಭ್ಯಾಸದ ಕಥೆ ಮುಂದೇನು?

ನವದೆಹಲಿ(ಮಾ.02): ಯುದ್ಧಪೀಡಿತ ಉಕ್ರೇನ್‌ನಿಂದ ತವರಿಗೆ ಮರಳಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಇದೀಗ ಮುಂದೇನು ಎಂಬ ಸಮಸ್ಯೆ ಕಾಡತೊಡಗಿದೆ. ಮರಳಿ ಉಕ್ರೇನ್‌ಗೆ ಹೋಗಲು ಸಾಧ್ಯವಾಗುವುದೇ? ಅಲ್ಲಿ ಮುಂದೆಯೂ ಇಂಥ ಪರಿಸ್ಥಿತಿ ಬರಲಾರದು ಎಂಬ ಗ್ಯಾರಂಟಿ ಏನು? ಪೋಷಕರು ಹೋಗಲು ಬಿಡುತ್ತಾರೆಯೇ? ಎಂಬಿತ್ಯಾದಿ ಪ್ರಶ್ನೆಗಳು ತವರಿಗೆ ಬಂದ ಹಲವು ವಿದ್ಯಾರ್ಥಿಗಳನ್ನು ಕಾಡುತ್ತಿದೆ.

‘ನಾನು ವೈದ್ಯಕೀಯ ಪದವಿ ಪಡೆದುಕೊಳ್ಳಲು 4 ವರ್ಷಗಳ ವಿದ್ಯಾಭ್ಯಾಸ ಪೂರೈಸಬೇಕಾಗಿದೆ. ಆದರೆ ಸ್ಥಳಾಂತರ ಸಮಯದಲ್ಲಿ ನನ್ನ ವೈದ್ಯಕೀಯ ಪದವಿ ಪೂರ್ಣವಾಗಿಲ್ಲ. ಮುಂದೇನು ಎಂಬುದೇ ಗೊತ್ತಾಗುತ್ತಿಲ್ಲ. ನಮ್ಮನ್ನು ಭಾರತದ ಯಾವುದಾದರೂ ಕಾಲೇಜಿಗೆ ಸೇರಿಸಿಕೊಳ್ಳಲು ಸರ್ಕಾರ ಹೊಸ ನಿಯಮ ಜಾರಿ ಮಾಡುತ್ತದೆ ಎಂಬ ವಿಶ್ವಾಸವಿದೆ’ ಎಂದು ವಿದ್ಯಾರ್ಥಿನಿ ರಬ್ಬಾನಿ ಹೇಳಿದ್ದಾರೆ. ‘ನಾನು ಮಗನನ್ನು ಉಕ್ರೇನ್‌ಗೆ ಕಳುಹಿಸಲು ಸಾಲ ಮಾಡಿದ್ದೆ, ಈಗ ಯುದ್ಧದ ಕಾರಣದಿಂದಾಗಿ ಆತ ವಿದ್ಯಾಭ್ಯಾಸವನ್ನು ಅರ್ಧಕ್ಕೆ ತೊರೆದು ಮರಳುವಂತಾಗಿದೆ. ಆತನ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಚಿಂತೆಯಾಗಿದೆ’ ಎಂದು ವಿದ್ಯಾರ್ಥಿಯೊಬ್ಬರ ತಂದೆ ಹೇಳಿದ್ದಾರೆ.

Latest Videos

ವಿದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಅರ್ಧದಲ್ಲಿ ವಿದ್ಯಾಭ್ಯಾಸ ತೊರೆದು ಬಂದರೆ ಅವರನ್ನು ಭಾರತದ ಕಾಲೇಜುಗಳಿಗೆ ಸೇರಿಸಿಕೊಳ್ಳುವ ಕುರಿತು ಯಾವುದೇ ನಿಯಮಗಳನ್ನು ಸಧ್ಯಕ್ಕೆ ರೂಪಿಸಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ನೆರೆ ದೇಶಗಳ ಜನರಿಗೂ ಭಾರತದಿಂದ ಏರ್‌ಲಿಫ್ಟ್‌

 ರಷ್ಯಾ-ಉಕ್ರೇನ್‌ ಯುದ್ಧ ಇನ್ನಷ್ಟುತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಯುದ್ಧ ಪೀಡಿತ ದೇಶದಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ನಾಲ್ವರು ಸಚಿವರನ್ನು ಉಕ್ರೇನ್‌ ಸುತ್ತಲಿನ 5 ದೇಶಗಳಿಗೆ ವಿಶೇಷ ದೂತರಾಗಿ ರವಾನಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಈ ನಡುವೆ, ಸಂಜೆ ಕೂಡ ಇನ್ನೊಂದು ಮಹತ್ವದ ಸಭೆ ನಡೆಸಿದ ಮೋದಿ, ಉಕ್ರೇನ್‌ನಲ್ಲಿನ ಪರಿಸ್ಥಿತಿ ಅವಲೋಕಿಸಿದ್ದಾರೆ. ಈ ಸಭೆಯಲ್ಲಿ ಭಾರತೀಯರ ತೆರವು ಕಾರಾರ‍ಯಚರಣೆಗೆ ನಿಯೋಜಿಸಲ್ಪಟ್ಟನಾಲ್ವರೂ ಸಚಿವರನ್ನು ಕರೆಸಿಕೊಂಡು, ಮಾಡಬೇಕಾದ ಕೆಲಸಗಳ ಬಗ್ಗೆ ಸಲಹೆ-ಸೂಚನೆ ನೀಡಿದರು. ಬಳಿಕ ರೊಮೇನಿಯಾ ಹಾಗೂ ಸ್ಲೊವಾಕಿಯಾ ದೇಶಗಳ ಪ್ರಧಾನಿಗಳ ಜತೆ ಫೋನ್‌ನಲ್ಲಿ ಮಾತನಾಡಿದ ಮೋದಿ, ಭಾರತೀಯರ ರಕ್ಷಣೆಗೆ ಸಹಕಾರ ಕೋರಿ, ಧನ್ಯವಾದ ತಿಳಿಸಿದರು ಹಾಗೂ ಉಕ್ರೇನ್‌ ಪರಿಸ್ಥಿತಿ ಬಗ್ಗೆ ದುಃಖ ವ್ಯಕ್ತಪಡಿಸಿ, ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

4 ಸಚಿವರ ರವಾನೆ:

ಉಕ್ರೇನ್‌ನಲ್ಲಿನ ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ಕೇಂದ್ರ ಸಚಿವರಾದ ಹರ್‌ದೀಪ್‌ ಪುರಿ ಹಂಗೇರಿಗೆ, ಜ್ಯೋತಿರಾದಿತ್ಯ ಸಿಂಧಿಯಾ ರೊಮೇನಿಯಾ ಮತ್ತು ಮಾಲ್ಡೋವಾಕ್ಕೆ, ಕಿರಣ್‌ ರಿಜಿಜು ಸ್ಲೊವಾಕಿಯಾಕ್ಕೆ ಮತ್ತು ವಿ.ಕೆ.ಸಿಂಗ್‌ ಅವರು ಪೋಲೆಂಡ್‌ಗೆ ತೆರಳಲಿದ್ದಾರೆ. ಈ ನಾಲ್ವರೂ ಸಚಿವರು ಉಕ್ರೇನ್‌ನೊಂದಿಗೆ ಗಡಿ ಹಂಚಿಕೊಂಡಿರುವ ದೇಶಗಳಲ್ಲಿ ಬೀಡುಬಿಟ್ಟು, ಉಕ್ರೇನ್‌ನಿಂದ ತಾವಿರುವ ದೇಶಕ್ಕೆ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಮತ್ತು ಅಲ್ಲಿಂದ ಅವರನ್ನು ಭಾರತಕ್ಕೆ ಕಳುಹಿಸಿಕೊಡುವ ಕೆಲಸದಲ್ಲಿ ಸಮನ್ವಯತೆ ಕೆಲಸ ಮಾಡಲಿದ್ದಾರೆ.

ಉಕ್ರೇನ್‌ನ ವಾಯುಸೀಮೆಯನ್ನು ವಿಮಾನ ಹಾರಾಟಕ್ಕೆ ನಿಷೇಧಿಸುವ ಹಿನ್ನೆಲೆಯಲ್ಲಿ, ಭಾರತ ಸರ್ಕಾರ ತನ್ನ ನಾಗರಿಕರನ್ನು ಪೋಲೆಂಡ್‌, ರೊಮೇನಿಯಾ, ಸ್ಲೊವಾಕಿಯಾ, ಹಂಗೇರಿ, ಮಾಲ್ಡೋವಾಕ್ಕೆ ಕರೆತಂದು ಅಲ್ಲಿಂದ ವಿಶೇಷ ವಿಮಾನಗಳ ಮೂಲಕ ಭಾರತಕ್ಕೆ ರವಾನಿಸುತ್ತಿದೆ. ಉಕ್ರೇನ್‌ನಲ್ಲಿ ಇನ್ನೂ 14500 ಭಾರತೀಯರನ್ನು ತೆರವುಗೊಳಿಸಬೇಕಾಗಿದೆ. ಹೀಗಾಗಿ ಇವರನ್ನು ಭಾರತಕ್ಕೆ ಕರೆತರಲು ಸರ್ಕಾರ ಸಚಿವರ ನಿಯೋಜನೆಗೆ ನಿರ್ಧರಿಸಿದೆ.

click me!