ನವದೆಹಲಿ(ಮಾ.01): ಉಕ್ರೇನ್ ಮೇಲಿನ ರಷ್ಯಾ ದಾಳಿ ಮುಂದುವರಿದಿದೆ. ಉಕ್ರೇನ್ ಪರಿಸ್ಥಿತಿ ಗಂಭೀರವಾಗಿದೆ. ನಾಗರೀಕರು, ಪುಟ್ಟ ಮಕ್ಕಳು ಬಲಿಯಾಗುತ್ತಿದ್ದಾರೆ. ಕರ್ನಾಟಕದ ವಿದ್ಯಾರ್ಥಿ ನವೀನ್ ಶೇಕರಪ್ಪ ಜ್ಞಾನಗೌಡರ್ ಕೂಡ ಬಲಿಯಾಗಿದ್ದಾನೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಭಾರತೀಯರ ರಕ್ಷಣಾ ಕಾರ್ಯ ಚುರುಗೊಳಿಸಿದೆ. ಆಪರೇಶನ್ ಗಂಗಾ ಮಿಷನ್ ಮೂಲಕ ಭಾರತೀಯರನ್ನು ಹೊತ್ತ 8 ವಿಮಾನಗಳು ನಾಳೆ(ಫೆ.02) ದೆಹಲಿಯಲ್ಲಿ ಲ್ಯಾಂಡ್ ಆಗಲಿದೆ.
ಆಪರೇಶನ್ ಗಂಗಾ ಮಿಷನ್ ಮೂಲಕ ಭಾರತೀಯರನ್ನು ಏರ್ಲಿಫ್ಟ್ ಮಾಡಿರುವ 8 ವಿಮಾನ ಈಗಾಗಲೇ ಬುಡಾಪೆಸ್ಟ್ ಹಾಗೂ ಬುಕಾರೆಸ್ಟ್ ವಿಮಾನ ನಿಲ್ದಾಣದಿಂದ ಹೊರಟಿದ್ದು, ಬುಧವಾರ ಬೆಳಗ್ಗೆ 5 ಗಂಟೆಗೆ ದೆಹಲಿ ತಲುಪಲಿದೆ. ಇನ್ನು ಇದೇ ಮೊದಲ ಬರಿಗೆ ಭಾರತೀಯ ವಾಯುಸೇನಾ ವಿಮಾನಗಳನ್ನು ಬಳಸಲಾಗಿದೆ. ಭಾರತೀಯರನ್ನು ರಕ್ಷಣೆ ಮಾಡಿದ ವಾಯುಸೇನಾ ವಿಮಾನ ಬುಧವಾರ ರಾತ್ರಿ 11.30ಕ್ಕೆ ದೆಹಲಿಗೆ ತಲುಪಲಿದೆ.
Russia Ukraine War ರಷ್ಯಾ ಉಕ್ರೇನ್ ಎರಡನೇ ಸುತ್ತಿನ ಮಾತುಕತೆಗೆ ಒಪ್ಪಿಗೆ, ಮಾ.2ಕ್ಕೆ ಸಂಧಾನ ಸಭೆ!
ಆಪರೇಷನ್ ಗಂಗಾ ಮಿಷನ್ ನಲ್ಲಿ ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ಪ್ರೆಸ್, ಇಂಡಿಗೋ, ಸ್ಪೈಸ್ ಜೆಟ್ ಹಾಗೂ ಭಾರತೀಯ ವಾಯುಸೇನಾ ವಿಮಾನಗಳು ಬಳಕೆ ಮಾಡಲಾಗಿದೆ. ಮಾರ್ಚ್ 8ರ ವರೆಗೆ ಒಟ್ಟು 46 ವಿಮಾನಗಳ ಮೂಲಕ ಭಾರತೀಯರ ಏರ್ ಲಿಫ್ಟ್ ಕಾರ್ಯ ನಡೆಯಲಿದೆ.
ಭಾರತೀಯ ಏರ್ಲಿಫ್ಟ್ ಕಾರ್ಯಾಚರಣೆ:
ಯುದ್ಧಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ‘ಆಪರೇಷನ್ ಗಂಗಾ’ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿರುವ ಕೇಂದ್ರ ಸರ್ಕಾರ, ಭಾನುವಾರ ಒಂದೇ ದಿನ ಮೂರು ವಿಶೇಷ ವಿಮಾನಗಳಲ್ಲಿ 688 ಮಂದಿಯನ್ನು ತವರಿಗೆ ಕರೆತಂದಿದೆ. ಇದರೊಂದಿಗೆ ಎರಡು ದಿನಗಳಲ್ಲಿ ಉಕ್ರೇನ್ನಿಂದ ಭಾರತಕ್ಕೆ ಮರಳಿದವರ ಸಂಖ್ಯೆ 907ಕ್ಕೇರಿಕೆಯಾಗಿದೆ.
Ukraine Crisis ನಮ್ಮ ಮೇಲೆ ರಷ್ಯಾ ದಾಳಿ ಮೊಘಲರು ರಜಪೂತರ ಮೇಲೆ ನಡೆಸಿದ ಹತ್ಯಾಕಾಂಡಕ್ಕೆ ಸಮ, ಉಕ್ರೇನ್ ರಾಯಭಾರಿ!
ಉಕ್ರೇನ್ನಲ್ಲಿ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆ ದೇಶದ ಪಕ್ಕದಲ್ಲಿರುವ ರೊಮೇನಿಯಾ ಹಾಗೂ ಹಂಗೇರಿಗೆ ಭಾರತೀಯರನ್ನು ಸ್ಥಳಾಂತರಿಸಿ ಅಲ್ಲಿಂದ ಏರ್ಲಿಫ್ಟ್ ಮಾಡಲಾಗುತ್ತಿದೆ. ಅದರಂತೆ, ಶನಿವಾರ ಸಂಜೆ 219 ಮಂದಿಯನ್ನು ಹೊತ್ತ ಏರ್ ಇಂಡಿಯಾ ವಿಮಾನ ರೊಮೇನಿಯಾದ ರಾಜಧಾನಿ ಬುಕರೆಸ್ಟ್ನಿಂದ ಮುಂಬೈಗೆ ಬಂದಿಳಿದಿತ್ತು. 250 ಮಂದಿ ಇದ್ದ ಎರಡನೇ ವಿಮಾನ ಬುಕರೆಸ್ಟ್ನಿಂದ ನವದೆಹಲಿ ವಿಮಾನ ನಿಲ್ದಾಣಕ್ಕೆ ಭಾನುವಾರ ನಸುಕಿನ 2.45ಕ್ಕೆ ಆಗಮಿಸಿತು. ಮೂರನೇ ವಿಮಾನ ಹಂಗೇರಿ ರಾಜಧಾನಿ ಬುಡಾಪೆಸ್ಟ್ನಿಂದ 240 ಭಾರತೀಯರನ್ನು ಹೊತ್ತು ಭಾನುವಾರ ಬೆಳಗ್ಗೆ 9.20ಕ್ಕೆ ದೆಹಲಿಯಲ್ಲಿ ಲ್ಯಾಂಡ್ ಆಯಿತು. 198 ಭಾರತೀಯರಿದ್ದ 4ನೇ ವಿಮಾನ ಬುಕರೆಸ್ಟ್ನಿಂದ ಭಾನುವಾರ ಸಂಜೆ ದೆಹಲಿಗೆ ಆಗಮಿಸಿತು.
ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ವಿದ್ಯಾರ್ಥಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಧನ್ಯವಾದ ಹೇಳಿ ಕೃತಜ್ಞತೆ ಸಲ್ಲಿಸಿದರು.
ಭಾನುವಾರ ತಡರಾತ್ರಿವರೆಗೂ 31 ವಿದ್ಯಾರ್ಥಿಗಳು ರಾಜ್ಯಕ್ಕೆ ಆಗಮಿಸಿದ್ದರು. ಸೋಮವಾರ ಬೆಳಿಗ್ಗೆ ಉಕ್ರೇನ್ ಗಡಿಯಿಂದ ದೆಹಲಿಗೆ ಬಂದ ಐದನೇ ವಿಮಾನದಲ್ಲಿ 6 ಮಂದಿ, ಮಧ್ಯಾಹ್ನ ಬಂದ ಆರನೇ ವಿಮಾನದಲ್ಲಿ ಏಳು ಮಂದಿ ಕನ್ನಡಿಗ ವಿದ್ಯಾರ್ಥಿಗಳಿದ್ದರು. ಈ ಪೈಕಿ ಬೆಳಿಗ್ಗೆ ಬಂದ ಐದು ವಿದ್ಯಾರ್ಥಿಗಳು ಸಂಜೆ 6.30ಕ್ಕೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದು ತಮ್ಮ ಊರುಗಳನ್ನು ಸೇರಿದ್ದಾರೆ. ಒಬ್ಬ ವಿದ್ಯಾರ್ಥಿ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದು ರಾಯಚೂರಿಗೆ ತೆರಳಿದ್ದಾನೆ. ಮಧ್ಯಾಹ್ನ ದೆಹಲಿಗೆ ಬಂದಿರುವ ವಿದ್ಯಾರ್ಥಿಗಳನ್ನು ಶೀಘ್ರವೇ ರಾಜ್ಯಕ್ಕೆ ಕರೆತರಲಾಗುವುದು ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
407 ಮಂದಿ ಬಾಕಿ:
ಉಕ್ರೇನ್ನಲ್ಲಿ ಸಿಲುಕಿರುವುದಾಗಿ 451 ಕನ್ನಡಿಗರು ಸೋಮವಾರದ ಅಂತ್ಯಕ್ಕೆ ನೋಂದಣಿ ಮಾಡಿಸಿದ್ದು, ಈ ಪೈಕಿ 44 ಮಂದಿ ಮಾತ್ರ ತವರು ಸೇರಿದಂತಾಗಿದೆ. ಉಳಿದ 407 ಮಂದಿ ಉಕ್ರೇನ್ನಲ್ಲಿ ಉಳಿದಿದ್ದಾರೆ.